Monday, September 4, 2023

ಬಿಲ್ಲವರ ವೃತ್ತಿಯನ್ನು ನೆನಪಿಸಲು ಕೋಟಿ-ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ ಯಾಗಬೇಕಾಗಿದೆ - ದಿನೇಶ್ ಅಮೀನ್ ಮಟ್ಟು..

 Dinesh Amin Mattu | ಬಿಲ್ಲವರ ವೃತ್ತಿಯನ್ನು ನೆನಪಿಸಲು ಕೋಟಿ-ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ ಯಾಗಬೇಕಾಗಿದೆ  - ದಿನೇಶ್ ಅಮೀನ್ ಮಟ್ಟು...


https://fb.watch/mR5RndNYFc/?mibextid=Nif5oz

Sunday, September 24, 2017

ಮಂಗಳೂರು: ಗೌರಿ ಲಂಕೇಶ್‍ಗೆ ಬಿದ್ದ ಗುಂಡು ನನಗೂ ಬೀಳಬಹುದು: ಅಮೀನ್ ಮಟ್ಟು



ಮಂಗಳೂರಿನಲ್ಲಿ ನಾನು ಇಂದು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವ್ಯಾಖ್ಯಾನಗಳು ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗುತ್ತಿವೆ.
ಆ ಭಾಷಣದ ಬಹುಚರ್ಚಿತ ಭಾಗದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ, ಕೇಳಿ. 'ಮಟ್ಟುವನ್ನು ಮಟ್ಟ ಹಾಕಿ' ಎನ್ನುವ ಕೂಗು ಕೇಳಿಬಂದದ್ದು ಇದೇ ಮೊದಲೇನಲ್ಲ. ಸಂಸದ ಪ್ರಹ್ಲಾದ ಜೋಷಿ ಸೇರಿದಂತೆ ಸಂಘ ಪರಿವಾರದ ಹಲವಾರು ನಾಯಕರು ನೀಡಿದ್ದ ಇಂತಹ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. (ಗೂಗ್ಲ್ ಸರ್ಚ್ ಮಾಡಿದರೆ ಸಿಗುತ್ತೆ)
'ಗುಂಡು ನನಗೂ ಬೀಳಬಹುದು' ಎಂಬ ಹೇಳಿಕೆ ಈಗಿನ ಕೆಟ್ಟ ಕಾಲವನ್ನು ವಿವರಿಸುತ್ತಾ ಹೇಳಿದ್ದು. ನಾನು ಸಭೆಯಲ್ಲಿದ್ದವರನ್ನು ಉದ್ದೇಶಿಸಿ ಹೇಳಿದ್ದು 'ಗುಂಡು ನನಗೂ ಬೀಳಬಹುದು ನಿಮಗೂ ಬೀಳಬಹುದು' ಎಂದು. (ವಿಡಿಯೋ ನೋಡಿ)
ಇನ್ನು ಇಂಟಲಿಜೆನ್ಸ್ ವಿಚಾರ. ನಾನೆಲ್ಲಿಯೂ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಎಂದು ಹೇಳಿಲ್ಲ. ಸಂಘ ಪರಿವಾರದೊಳಗೆ ನನ್ನಂತಹವರಿಗೆ ಹಿತೈಷಿಗಳು ಇದ್ದೇ ಇರುತ್ತಾರೆ.
ಅಂತಹವರು ಇಂತಹ ಬಹಳಷ್ಟು ಸಂಗತಿಗಳನ್ನು ಆಗಾಗ ನನ್ನ ಗಮನಕ್ಕೆ ತರುತ್ತಿರುತ್ತಾರೆ. ಇದು ನನ್ನಂತಹವರು ಇಟ್ಟುಕೊಂಡಿರುವ ಇಂಟಲಿಜೆನ್ಸ್. ಕಾರ್ಕಳದ ಆರ್ ಎಸ್ ಎಸ್ ಸಭೆಯ ಬಗ್ಗೆ ಹೇಳಿದ್ದು ಕೂಡಾ ಇದೇ ಇಂಟಲಿಜೆನ್ಸ್. ( ಇದೇ ರೀತಿ ನಮ್ಮ ನಡುವೆ ನಡೆಯುತ್ತಿರುವುದನ್ನು ಅಲ್ಲಿ ಹೋಗಿ ಹೇಳುವವರೂ ಇದ್ದಾರೆ)
ಮಟ್ಟಹಾಕುವುದೆಂದರೆ ಗುಂಡು ಹಾರಿಸುವುದೆಂದಲ್ಲ, ಸುಳ್ಳು ಸುದ್ದಿಗಳನ್ನು ಬಿತ್ತಿ ಚಾರಿತ್ರ್ಯಹನನ, ಮಾನಸಿಕ ಕಿರುಕುಳ, ಅಪಪ್ರಚಾರ ಮೊದಲಾದವುಗಳ ಮೂಲಕ ನೈತಿಕಸ್ತೈರ್ಯ ಕುಸಿಯುವಂತೆ ಮಾಡುವುದು ಕೂಡಾ ಅವರ ಪ್ರಕಾರ ಮಟ್ಟ ಹಾಕುವ ಕ್ರಮ. ಇದನ್ನು ಕೂಡಾ ನನ್ನ ಹಿತೈಷಿಗಳಾದ ಆರ್ ಎಸ್ ಎಸ್ ಗೆಳೆಯರೊಬ್ಬರು ಹೇಳಿದ್ದು.
ಪ್ರಾಣ ಬೆದರಿಕೆಗಳೇನು ಹೊಸತೇನಲ್ಲ. ಫೇಸ್ ಬುಕ್ ನ ನನ್ನ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ಸಾಕು. ಸ್ವಾಮಿ ವಿವೇಕಾನಂದರ ಬಗ್ಗೆ ಹಿಂದೆ ನನ್ನ ಅಂಕಣದಲ್ಲಿ ಬರೆದಿದ್ದಾಗ ಅದನ್ನು ಅನಗತ್ಯವಾಗಿ ವಿವಾದವನ್ನಾಗಿಸಿದ 'ಸುಳ್ಳು ಬೆಲೆ' ಯೊಬ್ಬ ತನ್ನ ಕಿಡಿಗೇಡಿ ಗೆಳೆಯರ ಜತೆ ಕಳುಹಿಸಿದ್ದ 'count your days' ಸಂದೇಶಗಳ ದಾಖಲೆ ಈಗಲೂ ನನ್ನಲ್ಲಿವೆ.

Saturday, September 23, 2017

ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ

ನಾನು ಪಾಲ್ಗೊಳ್ಳುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಮಾನ್ಯವಾಗಿ ಇಲ್ಲಿ ಶೇರ್ ಮಾಡುವುದಿಲ್ಲ. ಆದರೆ ಇದೊಂದು ವಿಶೇಷ ಕಾರ್ಯಕ್ರಮ.
ಮಂಗಳೂರಿನ ಜಾಗೃತ ಬಿಲ್ಲವ ಯುವಕರ ತಂಡ ಸಮಾನ ಚಿಂತಕರೆಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದನ್ನು ನಡೆಸುತ್ತಿರುವ ಸಂಸ್ಥೆ ಹೊಸದಾಗಿ ಸ್ಥಾಪನೆಯಾಗಿರುವ 'ನಾರಾಯಣಗುರು ವಿಚಾರ ಕಮ್ಮಟ (ನಾವಿಕ). ಇಂತಹದ್ದೊಂದು ಹೆಸರಿನ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕೆಂದು ಸುಮಾರು ೩೦ ವರ್ಷಗಳ ಹಿಂದೆ ಯೋಚಿಸಿದ್ದೆ. ನಮ್ಮ ಯುವಮಿತ್ರರು ಇದನ್ನು ಸಾಕಾರಗೊಳಿಸಿದ್ದಾರೆ.
"ತರ್ಕ ನಡೆಸಲು ಅಲ್ಲ, ಗೆಲ್ಲುವುದಕ್ಕೂ ಅಲ್ಲ. ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು"- ನಾರಾಯಣ ಗುರುಗಳು ೧೯೨೪ರಲ್ಲಿ ತಾವೇ ಆಲ್ವಾಯಿಯಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಮ್ಮೇಳನದ ಉದ್ದೇಶದ ಬಗ್ಗೆ ಹೇಳಿದ್ದು.
ಆಯೋಜಕರ ಉದ್ದೇಶವೂ ಇದೇ ಆಗಿದೆ ಎಂಬ ನಂಬಿಕೆ ನನಗಿದೆ.
ಪುರುಸೊತ್ತುಮಾಡಿಕೊಂಡು ಬನ್ನಿ, ಮಾತನಾಡೋಣ.

"ಮನುಷ್ಯನ ಧರ್ಮ, ಆಚಾರ,ಭಾಷೆ ಯಾವುದೇ ಇರಲಿ ಮನುಷ್ಯ ಸಂತತಿ ಒಂದೇ ಆಗಿರುವ ಕಾರಣ ಅಂತರ್ಜಾತಿ ಮದುವೆ ಮತ್ತು ಸಹಭೋಜನ ತಪ್ಪಲ್ಲ"
-ನಾರಾಯಣಗುರುಗಳು ೧೯೨೧ರಲ್ಲಿ ನಡೆದಿದ್ದ 'ಅಖಿಲ ಕೇರಳ ಸಹೋದರ ಸಂಗಮ' ಸಮ್ಮೇಳನದಲ್ಲಿ ಹೇಳಿದ್ದು.

'ಈಳವ ಎನ್ನುವ ಹೆಸರು ಒಂದು ಜಾತಿಯಾಗಿಯೋ, ಮತವಾಗಿಯೋ ಸೂಚಿಸಲ್ಪಟ್ಟಿಲ್ಲ. ಆದ್ದರಿಂದ ನಾರಾಯಣಗುರು ಧರ್ಮ ಪರಿಪಾಲನಾ ಯೋಗ' (ಎಸ್ ಎನ್ ಡಿಪಿ) ದಲ್ಲಿ ಜಾತಿಮತಭೇದ ಮಾಡದೆ ಸದಸ್ಯರನ್ನು ಸೇರಿಸಿಕೊಳ್ಳ ಬೇಕೆಂದು ನಾನು ಅಪೇಕ್ಷಿಸುತ್ತೇನೆ.'
-ಸಾವಿನ ಎರಡು ವರ್ಷ ಮೊದಲು ನಾರಾಯಣ ಗುರುಗಳು ಎಸ್ ಎನ್ ಡಿ ಪಿ ಗೆ ಬರೆದಿದ್ದ ಪತ್ರದ ಸಾಲುಗಳು.

Thursday, September 21, 2017

ಮಾಡಿದುಣ್ಣೋ ಮಹರಾಯ

ಸಾಮಾಜಿಕ ಜಾಲತಾಣಗಳಲ್ಲಿ ತಮಗಾದವರನ್ನು ನಿಂದಿಸಿ, ಹಂಗಿಸಿ,ಸುದ್ದಿಗಳನ್ನು ತಿರುಚುತ್ತಾ, ಸುಳ್ಳುಗಳು ಮೂಲಕ ಚಾರಿತ್ರ್ಯ ಹನನಮಾಡುತ್ತಿದ್ದವರ ವಿರುದ್ಧ ಪೋಲೀಸರಿಗೆ ದೂರು ನೀಡಿದರೆ ' ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಎಂದು ಬೊಬ್ಬಿಟ್ಟವರು.....
ಇಂದು ತಮ್ಮ ನಾಯಕರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಓಡೋಡಿ ಹೋಗಿ ಪೋಲೀಸರಿಗೆ ದೂರು ನೀಡಿ ಕ್ರಮಕ್ಕೆ ಮೊರೆಇಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ.
#heightofhippocracy
#ಮಾಡಿದುಣ್ಣೋಮಹರಾಯ

Sunday, September 17, 2017

ನಾನು ಗೌರಿ ನಾವೆಲ್ಲರೂ ಗೌರಿ

ಗೌರಿ ಜತೆಗಿನ ನನ್ನ ಪೋಟೊ ನನ್ನಲಿಲ್ಲ ಎಂದಾಕ್ಷಣ ಸ್ನೇಹಿತರಾದ ವಿಕಾಸ್ ಸೊಪ್ಪಿನ್ ಇದನ್ನು ಕಳಿಸಿದ್ದಾರೆ. (ಪೋಟೊ ತೆಗೆದದ್ದು ಅಜ್ಜಂಪುರ ವೆಂಕಟೇಶ್) ಗೌರಿ ಹೇಗೆ ನನ್ನ ತೋಳು ಹಿಡಿದುಕೊಂಡಿದ್ದಾಳೆ ನೋಡಿ, 
ನನ್ನನ್ನೂ ತನ್ನ ಜತೆ ಕರೆದುಕೊಂಡು ಹೋಗುವ ಹಾಗೆ, 
ಅಲ್ಲ, ನನ್ನನ್ನು ಬಿಟ್ಟು ಹೋಗಬೇಡ ಎನ್ನುವ ಹಾಗೆ,
ಅಲ್ಲ,ನಾವೆಲ್ಲ ಜತೆಯಲ್ಲಿರುವ ಎನ್ನುವ ಹಾಗೆ.
ಮೂರನೆಯದೇ ನಿಜ ಇದ್ದಿರಬಹುದು.
ಈ ಪ್ರೀತಿಗಾಗಿಯೇ ನಾವು ಹೇಳುತ್ತಿರುವುದು #ನಾನುಗೌರಿನಾವೆಲ್ಲರೂಗೌರಿ

Saturday, September 16, 2017

ಪತ್ರಕರ್ತ ನಟೇಶ್ ಬಾಬು ಗೌರಿ ನಿಂದಕರನ್ನು ಉದ್ದೇಶಿಸಿ ಬರೆದದ್ದು

ಮನಸ್ಸು ಮಾಡಿದ್ದರೆ ಸಾಮಾನ್ಯ ಗೃಹಿಣಿಯಂತೆ ಮನೆಯ ನಾಲ್ಕುಗೋಡೆಗಳ ನಡುವೆ ಉಳಿದುಬಿಡಬಹುದಿತ್ತು. ಟಿ.ವಿ ಸೀರಿಯಲ್ ನಾಳೆ ಏನಾಗುತ್ತೋ ಎಂದು ಚರ್ಚಿಸುತ್ತಾ, ಬೆಳಗಿನ ತಿಂಡಿಗೆ ಪದಾರ್ಥಗಳನ್ನು ಹೊಂದಿಸುತ್ತಾ ಕಳೆದು ಹೋಗಬಹುದಿತ್ತು. ಇಲ್ಲವೇ, ಯಾವುದೋ ಪತ್ರಿಕೆ ಅಥವಾ ಟಿ.ವಿ ಚಾನೆಲ್ ನಲ್ಲಿ ಲಕ್ಷಗಟ್ಟಲೇ ಸಂಬಳ, ಹೆಸರು ಗಳಿಸುತ್ತಾ, ತಮಗೆ ಆಗದವರನ್ನು ದೂಷಿಸುತ್ತಾ ಜೀವನ ಕಳೆಯಬಹುದಿತ್ತು. ಹೀಗೆ ಬದುಕಿದ್ದ ಪಕ್ಷದಲ್ಲಿ ಆಕೆಗೆ ಅಕಾಲಿಕ ಸಾವು ತಪ್ಪುತ್ತಿತ್ತು. ಆದರೆ, ಇಂಥ ಬದುಕನ್ನು ಗೌರಿಯಂಥ ದಿಟ್ಟೆ ಹೇಗೆ ಒಪ್ಪುತ್ತಾಳೆ? ಗೌರಿ ಆಯ್ಕೆ ಮಾಡಿಕೊಂಡದ್ದು ಮುಳ್ಳಿನ ಹಾದಿ. ತನ್ನ ಅಪ್ಪ ನಂಬಿದ್ದ ವಿಚಾರ, ಹೋರಾಟಗಳನ್ನು ಮುಂದುವರಿಸಲು ಬದುಕನ್ನು ಮೀಸಲಿಟ್ಟಳು. ಪತ್ರಿಕೆಯನ್ನು ಕೋಮುವಿರೋಧಿಗಳು, ಜಾತಿವಾದಿಗಳು, ದುಷ್ಟರನ್ನು ಹಣಿಯಲು ಅಸ್ತ್ರ ಮಾಡಿಕೊಂಡರು. ಯಾರೋ ಒಬ್ಬ ದಲಿತ, ಅಲ್ಪಸಂಖ್ಯಾತ, ದುರ್ಬಲನ ನೋವುಗಳಿಗೆ ದನಿಯಾದರು. ಶೋಷಿತರಿಗೆ ಶಕ್ತಿ ತುಂಬಿದಳು. ಸುತ್ತಾಟಗಳಿಗಂತೂ ಕೊನೆಯೇ ಇಲ್ಲ. ಅಲ್ಲೊಂದು ಪ್ರತಿಭಟನೆ, ಇಲ್ಲೊಂದು ಶಾಂತಿ ಸಭೆ, ಮತ್ತೆಲ್ಲೊ ಜಾಗೃತಿ ಜಾಥಾ ಹೀಗೆ ನೂರೊಂದು ಕೆಲಸಗಳು. ಕೋಮುವಾದ ಮತ್ತು ಮೌಢ್ಯದ ವಿರುದ್ಧ ಸಿಡಿದೆದ್ದಾಗ ಸಾವಿರಾರು ಶತ್ರುಗಳು ಎದ್ದು ನಿಂತರು. 

ಸೈದ್ಧಾಂತಿಕವಾಗಿ ಉತ್ತರ ನೀಡಲಾಗದ ಹೇಡಿಗಳು ಗೌರಿಯ ಸಿಗರೇಟು ಸೇವನೆಯನ್ನು ಗೇಲಿ ಮಾಡಿದರು. ಬದುಕಿರುವ ತನಕ ಕತ್ತಿ ಮಸೆಯುತ್ತಿದ್ದ ಕೋಮುವಾದಿಗಳಿಗೆ ಆಕೆಯ ಸಾವು ಒಳಗೊಳಗೆ ಖುಷಿ ತಂದಿದೆ. ಆದರೆ, ಸಭ್ಯರಂತೆ ಈಗ ನೀತಿ ಪಾಠ ಹೇಳಲು ನಿಂತಿದ್ದಾರೆ. ಸಾವನ್ನು ಯಾರೂ ಸಂಭ್ರಮಿಸಬಾರದು. ಆದರೆ, ಆ ವಿವೇಕ ಹೊಂದಿದವರು ಹೇಗೆ ದಾರಿ ತಪ್ಪುವರು? ಅನಂತಮೂರ್ತಿ ಸತ್ತಾಗ ಸಂಭ್ರಮಿಸಿದ್ದ ಮನಸ್ಸುಗಳೇ ಗೌರಿ ಹತ್ಯೆಯಲ್ಲೂ ಸಂಭ್ರಮಿಸಿವೆ. ಪೊಲೀಸರು ಮತ್ತು ಕಾನೂನಿನ ಭಯದಿಂದ ಕೆಲವರು ತಮ್ಮ ವಾಂತಿಯನ್ನು ಹೊಟ್ಟೆಯೊಳಗೇ ಹಿಡಿದಿಟ್ಟುಕೊಂಡಿದ್ದಾರೆ! ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸೊಂಟದ ಕೆಳಗಿನ ಭಾಷೆ ಬಳಸುವ "ಸಂಸ್ಕೃತಿ' ರಕ್ಷಕರು, ಅವಕಾಶ ಸಿಕ್ಕಿದರೆ ಯಾವುದೇ ಸಾಹಸಕ್ಕೂ ಸೈ. ಆಕೆ ಇಂದು ನಮ್ಮ ನಡುವೆ ಇಲ್ಲ. ಆದರೆ, ಆಕೆ ಹೊತ್ತಿಸಿದ ದೀಪದ ಬೆಳಕು ಇನ್ನೂ ಇದೆ. ನಾಳೆಯೂ ಇರುತ್ತದೆ. ಗೌರಿ ಎನ್ನುವುದು ಒಬ್ಬ ವ್ಯಕ್ತಿಯಾಗಿ ಅಲ್ಲ, ಒಂದು ರೂಪಕವಾಗಿ ನಮ್ಮೊಂದಿಗೆ ಮುಂದುವರಿಯುತ್ತದೆ. ಮತ್ತು ಮುಂದುವರಿಯಬೇಕು.

ನಾನು ಕಂಡ ಗೌರಿ ಇಲ್ಲಿದ್ದಾಳೆ. ನಿಮಗೆ ಬೇರೆ ರೀತಿ ಕಂಡರೆ ನಾನು ಏನು ಮಾಡಲು ಸಾಧ್ಯ?

Thursday, September 14, 2017

ಶಾಸಕ ಸುರೇಶ್ ಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ

ಗೌರಿ ಲಂಕೇಶ್ ಹತ್ಯಾ ವಿರೋಧಿ ಸಮಾವೇಶವನ್ನು ಕಾಂಗ್ರೆಸ್ ಪ್ರಾಯೋಜಿತ ಮತ್ತು ಇದಕ್ಕೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರೇ ಮಾರ್ಗದರ್ಶಕರು ಎಂದು ಆರೋಪಿಸಿರುವ ಶಾಸಕ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಮರುಕ ಇದೆ.
ಗೌರಿ ನಾನು ಪ್ರತಿನಿಧಿಸುವ ಪತ್ರಕರ್ತರ ಕುಟುಂಬಕ್ಕೆ ಸೇರಿದವರು. ಅವರ ಮೇಲಿನ ಪ್ರೀತಿ ಮತ್ತು ಹತ್ಯೆಯಿಂದಾಗಿರುವ ಆಘಾತ ಸಮಾವೇಶದಲ್ಲಿ ಒಬ್ಬ ಕಾರ್ಯಕರ್ತನಾಗಿ ನನ್ನನ್ನು ಪಾಲ್ಗೊಳ್ಳುವಂತೆ ಮಾಡಿದೆ. ಆ ದಿನ ಅಲ್ಲಿ ಪ್ರವಾಹದೋಪಾದಿಯಲ್ಲಿ ಸೇರಿದ್ದ ಜನ ಇದೇ ಭಾವನೆಯಿಂದ ಪಾಲ್ಗೊಂಡವರು. ಇದನ್ನು ರಾಜಕೀಯ ಪಕ್ಷವೊಂದರ ಪ್ರಾಯೋಜಿತ ಎಂದು ಹಂಗಿಸಿ ಆ ಜನರ ಭಾವನೆಯನ್ನು ಅವಮಾನಿಸಬೇಡಿ ಎಂದಷ್ಟೇ ಸುರೇಶ್ ಕುಮಾರ್ ಅವರನ್ನು ನಾನು ಕೇಳಿಕೊಳ್ಳುತ್ತೇನೆ.
ಆ ಸಮಾವೇಶ ನಿಜಕ್ಕೂ ಕಾಂಗ್ರೆಸ್ ಪ್ರಾಯೋಜಿಸಿದ್ದು ಎಂದು ಸುರೇಶ್ ಕುಮಾರ್ ನಂಬಿದ್ದರೆ, ಇನ್ನೈದು ವರ್ಷಗಳ ಕಾಲ ಅವರ ಪಕ್ಷದ ರಾಜಕೀಯ ವನವಾಸದ ಜನಾಧೇಶಕ್ಕಾಗಿ ಚುನಾವಣಾ ಫಲಿತಾಂಶದ ವರೆಗೆ ಕಾಯಬೇಕಾಗಿಲ್ಲ.
ಸುರೇಶ್ ಕುಮಾರ್ ಅವರ ಪತ್ನಿ ಪತ್ರಕರ್ತೆಯಾಗಿರುವುದರಿಂದ ಅವರು ಕೂಡಾ ನಮ್ಮ ಕುಟುಂಬದ ಸದಸ್ಯರು ಎಂದು ನಾನು ತಿಳಿದುಕೊಂಡಿದ್ದೇನೆ. ಹೀಗಿದ್ದೂ ಪತ್ರಕರ್ತೆಯೊಬ್ಬರ ಸಾವಿನ ಸಂತಾಪ ಸಭೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗೇಲಿಮಾಡುತ್ತಿರುವುದು ಸುರೇಶ್ ಕುಮಾರ್ ಸಾಗುತ್ತಿರುವ ದಾರಿಯನ್ನು ಸೂಚಿಸುತ್ತದೆ.
ರಾಜಕೀಯ ಪಕ್ಷದ ನಿಷ್ಠಾವಂತ ಸದಸ್ಯನೆನಿಸಿಕೊಳ್ಳಲು ಈ ರೀತಿ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವುದು ಅನಿವಾರ್ಯವೇ ಸುರೇಶ್ ಕುಮಾರ್?
ಈ ಸಮಾವೇಶವನ್ನು ಕೇವಲ ನಾಲ್ಕು ದಿನಗಳ ಕಿರು ಅವಧಿಯಲ್ಲಿ ಯೋಜಿಸಿ ಯಶಸ್ಸುಗೊಳಿಸಲು ಹಿರಿಯರು-ಕಿರಿಯರನ್ನೊಳಗೊಂಡ ತಂಡ ರಾತ್ರಿ ಹಗಲೆನ್ನದೆ, ಊಟ-ನಿದ್ದೆ ಬಿಟ್ಟು ಶ್ರಮಿಸಿದೆ. ಆದ್ದರಿಂದ ಸುರೇಶ್ ಕುಮಾರ್ ಅವರ ಆರೋಪದಿಂದ ನನಗೆ ಆಗಿರುವ ನೋವಿಗಿಂತಲೂ ಹೆಚ್ಚಾಗಿ, ಸಮಾವೇಶದ ಯಶಸ್ಸಿನ ಹೊಣೆಯನ್ನು ನನ್ನ ಮೇಲೆ ಹೊರಿಸಿರುವುದು ನನ್ನನ್ನು ಅಪರಾಧಿ ಪ್ರಜ್ಞೆಯಿಂದ ನರಳುವಂತೆ ಮಾಡಿದೆ.
ಸಾಧ್ಯವಾದರೆ ಸುರೇಶ್ ಕುಮಾರ್ ಅವರು ತಮ್ಮ ಆತ್ಮಸಾಕ್ಷಿ ಯನ್ನು ಒಮ್ಮೆ ಕೇಳಿಕೊಂಡು ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂದಕ್ಕೆ ಪಡೆದು ಸಜ್ಜನಿಕೆಯನ್ನು ಮೆರೆಯಬೇಕೆಂದು ಕೇಳಿಕೊಳ್ಳುತ್ತೇನೆ.

Tuesday, September 12, 2017

ಇಂದಿರಾ ಲಂಕೇಶ್ ಬಿಡುಗಡೆಗೊಳಿಸಿದ ಗೌರಿ ಲಂಕೇಶ್ ಪತ್ರಿಕೆಯ ವಿಶೇಷಾಂಕದಲ್ಲಿರುವ ಗೌರಿಯ ನನ್ನದೊಂದು ಸಣ್ಣ ನೆನಪು

ನಾವೆಲ್ಲ ಲಂಕೇಶ್ ಪತ್ರಿಕೆ ಎಂಬ ಏಕೋಪಾಧ್ಯಾಯ ಪಾಠಶಾಲೆಯ ವಿದ್ಯಾರ್ಥಿಗಳು. ನನಗೆ ಲಂಕೇಶ್ ತರಗತಿಯಲ್ಲಿ ಕಲಿಸಿದ ಗುರುವಲ್ಲ. ನನ್ನಂತಹ ಸಾವಿರಾರು ಏಕಲವ್ಯರಿಗೆ ಅವರು ಮಾನಸಗುರುಗಳು. ‘ಲಂಕೇಶ್ ಅವರ ವಾರಸುದಾರರು ನೀವು ಮೂವರು ಮಕ್ಕಳು ಮಾತ್ರ ಎಂದು ತಿಳಿಯಬೇಡಿ, ಅವರಿಂದ ಕಲಿತು ಬೆಳೆದ ನಮ್ಮಂತಹ ಲಕ್ಷಾಂತರ ಮಂದಿ ಇದ್ದಾರೆ’ ಎಂದು ಗೌರಿ ‘ಅಪ್ಪ’ ‘ಅಪ್ಪ’ ಎಂದಾಗ ನಾನು ಕಿಚಾಯಿಸಿದ್ದುಂಟು.

ಲಂಕೇಶ್ ಅವರ ಶಿಷ್ಯರು, ಅಭಿಮಾನಿಗಳು, ವಾರಸುದಾರರು ಎಂದು ತಿಳಿದುಕೊಂಡ ಒಂದು ದೊಡ್ಡ ಗುಂಪು ಇಂದಿನ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿದೆ. ಆದರೆ ಗೌರಿ ಅಪ್ಪನನ್ನು ಮೀರಿಸಿದ್ದಾಳೆ. ಎಷ್ಟೊಂದು ಮಂದಿಗೆ ಈಕೆ ಅಮ್ಮ… ಎಷ್ಟೊಂದು ಮಕ್ಕಳು...
ಕಳೆದ ಕೆಲವು ದಿನಗಳಲ್ಲಿ ರಾಜ್ಯ ಮಾತ್ರ ಯಾಕೆ ದೇಶ-ವಿದೇಶಗಳಿಂದಲೂ ‘ನಾನು ಗೌರಿ’ ಎನ್ನುವ ಘೋಷಣೆ ಅನುರಣಿಸತೊಡಗಿದೆ. ಲಕ್ಷಾಂತರ ಯುವಕರು-ಯುವತಿಯರು, ವಿದ್ಯಾರ್ಥಿಗಳು ಸ್ವಂತ ಅಮ್ಮನನ್ನು, ಅಕ್ಕನನ್ನು ಕಳೆದುಕೊಂಡವರಂತೆ ರೋದಿಸತೊಡಗಿದ್ದಾರೆ. ಈ ಪ್ರೀತಿಗೆ ಗೌರಿ ಖಂಡಿತ ಅರ್ಹಳಾಗಿದ್ದಳು. ತನಗಿಂತ ಕಿರಿಯರನ್ನು ಆಕೆ ಅತ್ಯಂತ ಪ್ರೀತಿಯಿಂದ ಸಂಬೋಧಿಸುತ್ತಿದ್ದುದೇ ‘ಮರಿ’ ಮತ್ತು ‘ಕೂಸು’ ಎಂದು.

ಮಕ್ಕಳನ್ನು ಹೆತ್ತು ಅಮ್ಮನೆನಿಸಿಕೊಳ್ಳದೆ ಲಕ್ಷಾಂತರ ಮಕ್ಕಳಿಗೆ ಪ್ರೀತಿ ಕೊಟ್ಟು ಅಮ್ಮನಾದವಳು ಗೌರಿ. ಆಕೆಯ ಗುಬ್ಬಚ್ಚಿಯಂತ ಸಣ್ಣ ದೇಹದೊಳಗಿದ್ದ ದೊಡ್ಡ ಹೃದಯದಲ್ಲಿ ಪ್ರೀತಿಯೊಂದನ್ನು ಬಿಟ್ಟು ಇತರರಿಗೆ ಕೊಡಲು ಬೇರೆ ಏನೂ ಇರಲಿಲ್ಲ.

ಲಂಕೇಶ್ ನಿಧನಾನಂತರ ಮಕ್ಕಳು ಪತ್ರಿಕೆಯನ್ನು ಕೈಗೆ ತೆಗೆದುಕೊಂಡಾಗ ನನಗೆ ಬೇಸರವಾಗಿತ್ತು. ಮಕ್ಕಳಿಗೆ ಅಪ್ಪನ ಮೇಲೆ ಹಕ್ಕು ಇರಬಹುದು, ಆದರೆ ಆ ಅಪ್ಪ ಪ್ರಾರಂಭಿಸಿದ್ದ ಪತ್ರಿಕೆ ರಾಜ್ಯದ ಲಕ್ಷಾಂತರ ಓದುಗರ ಆಸ್ತಿಯಾಗಿತ್ತು. ಮಕ್ಕಳು ಅದನ್ನು ವಶಕ್ಕೆ ತೆಗೆದುಕೊಂಡದ್ದು ನನ್ನಂತಹವರಿಗೆ ಇಷ್ಟವಾಗಿರಲಿಲ್ಲ. ಅದಕ್ಕೆ ತಕ್ಕ ಹಾಗೆ ಲಂಕೇಶ್ ಅವರ ಹಳೆಯ ಬರಹಗಳನ್ನೇ ಹೆಚ್ಚು ಮುದ್ರಿಸುತ್ತಾ, ಅಪ್ಪನ ಹೆಸರನ್ನೇ ಬಳಸಿಕೊಂಡು ಪತ್ರಿಕೆ ಹೊರಬರುತ್ತಿರುವುದು ಕಂಡು ನಿರಾಶೆಯಾಗಿತ್ತು.

ಆಗಿನ ಗೌರಿಯ ಒಳಗಿನ ಕಷ್ಟಗಳು ಏನಿತ್ತೋ ಗೊತ್ತಿಲ್ಲ. ಕೊನೆಗೆ ಅದರಿಂದ ಹೊರಬಂದು ‘ಗೌರಿ ಲಂಕೇಶ್’ ಎಂಬ ಹೆಸರಿನ ಸ್ವಂತ ಪತ್ರಿಕೆ ಪ್ರಾರಂಭಿಸಿದ ನಂತರವೇ ಗೌರಿ ಮತ್ತು ಪತ್ರಿಕೆಯ ಕಡೆ ನಾನು ಕುತೂಹಲದಿಂದ ನೋಡಲಾರಂಭಿಸಿದ್ದು.

ಗೌರಿ ಸಂಪಾದಕತ್ವದಲ್ಲಿ ನಿಧಾನವಾಗಿ ಬದಲಾಗುತ್ತಿದ್ದ ಪತ್ರಿಕೆ ಅನೇಕ ಟೀಕೆ-ಟಿಪ್ಪಣಿಗಳನ್ನು ಎದುರಿಸುತ್ತಾ ಬಂದಿದೆ. ಅದರಲ್ಲಿ ಮುಖ್ಯವಾದುದು ಗೌರಿ Journalism ಮತ್ತು Activisam ನಡುವಿನ ಗೆರೆಯನ್ನು ಅಳಿಸಿ ಹಾಕಿದಳೆಂಬುದು. ಕಳೆದ ಬುಧವಾರ ವಿಕ್ಟೋರಿಯಾ ಶವಾಗಾರದಲ್ಲಿ ಭೇಟಿಯಾಗಿದ್ದ ಇಂದ್ರಜಿತ್ ಕೂಡಾ ಇದನ್ನೇ ಪರೋಕ್ಷವಾಗಿ ನನ್ನೊಡನೆ ಹೇಳಿದ್ದರು. ನಾನು ವೃತ್ತಿಯಲ್ಲಿ ಸಕ್ರಿಯನಾಗಿದ್ದಾಗ ಒಮ್ಮೊಮ್ಮೆ ನನಗೂ ಹಾಗೆ ಅನಿಸುತ್ತಿತ್ತು.

ಹಾಗಿದ್ದರೆ ಲಂಕೇಶ್ Activist ಆಗಿರಲಿಲ್ಲವೇ?ಲಂಕೇಶ್ ಒಬ್ಬ ಪಕ್ಕಾ ಕಸುಬುದಾರ ಪತ್ರಕರ್ತರಾಗಿದ್ದರೆಂಬುದು ನಿಜ. ಅವರು Journalism ಮತ್ತು Actvisam ನಡುವೆ ಗೆರೆ ಹಾಕಿಕೊಂಡಿದ್ದರೂ ಆಗಾಗ ತಾನೆ ಎಳೆದ ಗೆರೆಯನ್ನು ದಾಟುವ ಪ್ರಯತ್ನ ಮಾಡಿದ್ದರು ಎನ್ನುವುದು ಕೂಡ ನಿಜ. ಗುಂಡೂರಾವ್ ಸರ್ಕಾರದ ಪದಚ್ಯುತಿ, ಕ್ರಾಂತಿರಂಗದ ರಚನೆಯಲ್ಲಿ ಸಂಪಾದಕನಂತೆ ಮಾತ್ರವಲ್ಲ, ಅದರ ಹೊರಗೆ ನಿಂತು ರಾಜಕೀಯ ಕಾರ್ಯಕರ್ತನಂತೆ ಕೂಡಾ ಕಾರ್ಯನಿರ್ವಹಿಸಿದ್ದರು. 

ನಂತರದ ದಿನಗಳಲ್ಲಿ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಿದ್ದರು, ತೃತೀಯ ರಂಗ ಹುಟ್ಟುಹಾಕಲು ಪ್ರಯತ್ನಿಸಿದ್ದರು. . ಚುನಾವಣೆಯ ಕಾಲದಲ್ಲಿ ‘ಇಂತಹವರನ್ನು ಸೋಲಿಸಿ, ಗೆಲ್ಲಿಸಿ’ ಎಂದು ಫರ್ಮಾನು ಹೊರಡಿಸುತ್ತಿದ್ದರು. ಇವೆಲ್ಲವೂ ಕನ್ನಡದ ಪತ್ರಿಕಾ ಲೋಕಕ್ಕೆ ಹೊಸಪ್ರಯೋಗವಾಗಿತ್ತು. ಸಾಂಪ್ರದಾಯಿಕ ಸಂಪಾದಕನೊಬ್ಬ ಯೋಚನೆಯನ್ನೂ ಮಾಡದಿದ್ದ ನಿರ್ಧಾರಗಳು. ಆ ಅರ್ಥದಲ್ಲಿ ಅವರೂ ಒಬ್ಬ Activist Journalist ಆಗಿದ್ದರು

ಎಂಬತ್ತರ ದಶಕದಲ್ಲಿನ ದಲಿತ, ರೈತ ಮತ್ತು ಭಾಷಾ ಚಳುವಳಿಗಳಿಂದಾಗಿ ಇಡೀ ರಾಜ್ಯದಲ್ಲಿ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ಎಚ್ಚರದ ವಾತಾವರಣ ನಿರ್ಮಾಣವಾಗಿತ್ತು. ಆ ಕಾಲದ ಕರೆಯನ್ನು ಸರಿಯಾಗಿ ಗ್ರಹಿಸಿದ್ದ ಲಂಕೇಶ್ ಪತ್ರಿಕೆಯನ್ನು ಜಾಣಜಾಣೆಯರಿಗಾಗಿ ರೂಪಿಸುತ್ತಾ ಹೋದರು. ಲಂಕೇಶ್ ರೀತಿ ಯೋಚನೆ ಮಾಡುವುದೇ ಹೆಮ್ಮೆ ಎಂದು ಅನಿಸುತ್ತಿದ್ದ ಕಾಲ.ಅದು.

ಗೌರಿ ಬದುಕಿದ್ದು ಚಳುವಳಿಗಳೆಲ್ಲ ಸೊರಗಿ ಹೋಗಿರುವ, ಸಾರ್ವಜನಿಕ ಆತ್ಮ ಸಾಕ್ಷಿಯೇ ಸತ್ತುಹೋಗಿದೆಯೇನೋ ಎಂಬ ಆತಂಕ ಹುಟ್ಟಿಸಿರುವ, ಸಜ್ಜನರನ್ನು ಮೀರಿ ದುರ್ಜನರ ಸಂತತಿ ಬೆಳೆಯುತ್ತಿದೆಯೇನೋ ಎಂದು ನಮ್ಮಲ್ಲಿಯೇ ಅನುಮಾನ ಹುಟ್ಟಿಸುತ್ತಿರುವ,ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯದಲ್ಲಿರುವ ಕಾಲದಲ್ಲಿ. ಇದು ಲಂಕೇಶ್ ಬದುಕಿದ್ದ ಕಾಲ ಅಲ್ಲ. 

ಆಗಿನ ಕಾಲದ ಕರೆ ಲಂಕೇಶ್ ಅವರನ್ನು ರೂಪಿಸಿದ ಹಾಗೆ, ಈ ಕಾಲದ ಕರೆ ಗೌರಿಯನ್ನು ರೂಪಿಸಿತ್ತು ಎನ್ನುವುದಷ್ಟೇ ಸತ್ಯ.

ಆದ್ದರಿಂದ ಗೌರಿ ಹೊಸ ಆ್ಯಕ್ಟಿವಿಸ್ಟ್ ಜರ್ನಲಿಸ್ಟ್ ಆಗಿರಲಿಲ್ಲ. ತಂದೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಳು. ನನ್ನ ಗುರುಗಳಾದ ವಡ್ಡರ್ಸೆಯವರು ಪಕ್ಷಪಾತಿ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಿದ್ದರು. ಸತ್ಯ,ಧರ್ಮ,ನ್ಯಾಯದ ಪ್ರಶ್ನೆ ಎದುರಾದಾಗ ಪತ್ರಕರ್ತರು ಪಕ್ಷಪಾತಿಗಳಾಗಿ ಇರಬೇಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು.

ಗೌರಿ ಅಂತಹ ಪಕ್ಷಪಾತಿ ಪತ್ರಿಕೋದ್ಯಮದ ಪರವಾಗಿದ್ದರು.ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್, ಆರ್.ಎಸ್.ಎಸ್., ಬಾಬಾಬುಡನ್ ಗಿರಿ ವಿವಾದ, ನಕ್ಸಲಿಸಂ ರಾಘವೇಶ್ವರ ಸ್ವಾಮೀಜಿ ಮೇಲಿನ ಅತ್ಯಾಚಾರದ ಆರೋಪ…ಇಂತಹ ಹಲವಾರು ವಿಷಯಗಳ ಬಗ್ಗೆ ಅವರು ಒಂದು ಕಡೆ ಗಟ್ಟಿಯಾಗಿ ನೆಲಕಚ್ಚಿ ನಿಂತು ಪತ್ರಕರ್ತೆಯ ಕರ್ತವ್ಯ ನಿರ್ವಹಿಸಿದ್ದಳು.

ಮಾಧ್ಯಮ ಕ್ಷೇತ್ರವೇ ಅತ್ಯಂತ ವೇಗವಾಗಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌರಿ ಜನಪರವಾಗಿ ನಿಂತು ತನ್ನ ಪತ್ರಿಕೆಯ ಮೂಲಕವೇ ಸಾಮಾಜಿಕ-ರಾಜಕೀಯ ಹೋರಾಟವನ್ನು ನಡೆಸುತ್ತಿದ್ದರು. ಸಂಪ್ರದಾಯಸ್ಥ ಪತ್ರಕರ್ತರಿಗೆ ಗೌರಿ ವೃತ್ತಿಯಲ್ಲಿ ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಮುಖ್ಯವಾಹಿನಿಯ ಪತ್ರಿಕೆಗಳ ಓದುಗರಿಗೆ ಗೌರಿಯ ಈ ನಿಲುವು ಅತಿರೇಕದ್ದು ಎಂದು ಅನಿಸಿರಲೂಬಹುದು ಆದರೆ ಆಕೆಯ ಉದ್ದೇಶದ ಹಿಂದಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಎಷ್ಟು ಮಂದಿ ಪತ್ರಕರ್ತರು ಉಳಿಸಿಕೊಂಡಿದ್ದಾರೆ?

ಇಡೀ ಮಾಧ್ಯಮ ಕ್ಷೇತ್ರವೇ ಉದ್ಯಮವಾಗಿರುವಾಗ ಅಪ್ಪ ನೆಟ್ಟ ಮರಕ್ಕೆ ಜೋತುಬಿದ್ದ ಗೌರಿ ಜಾಹೀರಾತು ಇಲ್ಲದೆಯೇ ಪತ್ರಿಕೆ ನಡೆಸಬೇಕೆಂದು ತೀರ್ಮಾನಿಸಿದಾಗಲೇ ಅರ್ಧ ಸೋತುಹೋಗಿದ್ದಳು. ಅದರ ಜತೆಗೆ ಸುದ್ದಿಗಾಗಿ, ಅದರಾಚೆಗಿನ ವಿಶ್ಲೇಷಣೆಗಾಗಿ ಟಿವಿ ಚಾನೆಲ್ ಗಳಿಂದ ಹಿಡಿದು ಮೊಬೈಲ್ ವರೆಗೆ ಹಲವಾರು ಮೂಲಗಳು ಹುಟ್ಟಿಕೊಂಡಿರುವಾಗ ಪ್ರತಿ ವಾರ 15 ರೂಪಾಯಿ ಕೊಟ್ಟು ಖರೀದಿಸುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.

ಇಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವಂತಹ ಆರ್ಥಿಕ ನಿಪುಣೆ ಕೂಡಾ ಗೌರಿ ಆಗಿರಲಿಲ್ಲ. ಪಿ.ಲಂಕೇಶ್ ತನ್ನೆಲ್ಲ ಪ್ರತಿಭೆಯ ಜತೆಗೆ ಒಬ್ಬ ಪಕ್ಕಾ ವ್ಯವಹಾರಸ್ಥರಾಗಿದ್ದರು. ಗೌರಿ ಪತ್ರಿಕೆ ನಡೆಸುವ ಕಷ್ಟಗಳನ್ನೆಲ್ಲ ಹೇಳಿಕೊಳ್ಳುವಾಗ ನನಗೆ ಮುಂಗಾರು ದಿನಗಳ ವಡ್ಡರ್ಸೆ ನೆನಪಾಗುತ್ತಿದ್ದರು. ‘ಈ ತಿಂಗಳ ಸಂಬಳ ಕೊಟ್ಟಿದ್ದೇನೆ, ಮುಂದಿನ ತಿಂಗಳು ಏನೆಂದು ಗೊತ್ತಿಲ್ಲ’ ಎಂದೇ ಇತ್ತೀಚಿನ ದಿನಗಳಲ್ಲಿ ಗೌರಿ ಮಾತು ಶುರುವಾಗುತ್ತಿತ್ತು.

ಕಾಂಗ್ರೆಸ್ ಪಕ್ಷದ ಬಗ್ಗೆ ಅನೇಕ ತಕರಾರುಗಳಿದ್ದರೂ ಸಿದ್ದರಾಮಯ್ಯನವರ ಜತೆಗೆ ಮುಖ್ಯಮಂತ್ರಿ ಮತ್ತು ಪತ್ರಕರ್ತರನ್ನು ಮೀರಿದ ಬಾಂಧವ್ಯ ಇತ್ತು. ಆದರೆ ಹಲವಾರು ಬಾರಿ ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದಂತೆ ತನ್ನೆದುರಿಗೆ ಕೂತವರು ಮುಖ್ಯಮಂತ್ರಿ ಎನ್ನುವುದನ್ನೇ ಮರೆತು ತಾರಾಮಾರ ಜಗಳವಾಡುತ್ತಿದ್ದುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ಮುಖ್ಯಮಂತ್ರಿಯವರು ಕೂಡಾ ಮಕ್ಕಳನ್ನು ತಂದೆ ರಮಿಸುವಂತೆ ನಸುನಗುತ್ತಾ ಸಮಾಧಾನ ಮಾಡುತ್ತಿದ್ದರು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರನಾಗಿ ಕೆಲವು ಸಂಪಾದಕರ ಎರಡು ಮುಖಗಳನ್ನು ನೋಡಿ ಕಣ್ಣಾರೆ ಕಂಡು ನಾನು ಅಸಹ್ಯ ಪಟ್ಟದ್ದುಂಟು. ಆದರೆ ಗೌರಿ ತನಗಿರುವ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ತನಗಾಗಿ ಎಂದೂ ಏನನ್ನೂ ಸರ್ಕಾರ ಇಲ್ಲವೆ ಮುಖ್ಯಮಂತ್ರಿಯವರಿಂದ ಕೇಳಿರಲಿಲ್ಲ.

ಕೇಳಲೇ ಇಲ್ಲವೆಂದಲ್ಲ. ಮುಖ್ಯಮಂತ್ರಿಯವರ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಬುದ್ಧನ ಮೂರ್ತಿಗಳು. ಅದರಲ್ಲೊಂದು ಮೂರ್ತಿ ಗೌರಿಯನ್ನು ಸೆಳೆದಿತ್ತು. ಆ ಮೂರ್ತಿ ನನಗೆ ಬೇಕು ಎಂದು ಗೌರಿ ನನ್ನೊಡನೆ ಹೇಳಿದಾಗ ನಾನು ಸಿಎಂ ಕಡೆ ತೋರಿಸಿದ್ದೆ. ತಕ್ಷಣ ನೇರವಾಗಿ ಸಿದ್ದರಾಮಯ್ಯನವರ ಬಳಿ ಹೋದ ಗೌರಿ ‘ ಆ ಬುದ್ದನ ಮೂರ್ತಿ ನನಗೆ ಬೇಕು’ ಎಂದು ಕೇಳಿದ್ದಳು. ಅವರು ಅಷ್ಟೇ ಅಕ್ಕರೆಯಿಂದ ‘ಕೊಂಡ್ಹೋಗಮ್ಮ’’ ಎಂದರು. ಗೌರಿ ಅದನ್ನೆತ್ತಿಕೊಂಡು ಹೋಗಿಯೇ ಬಿಟ್ಟಳು. 

ಆ ಇಡೀ ದೃಶ್ಯ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಅದು ಮಕ್ಕಳು ಯಾವುದೋ ಬೊಂಬೆಯನ್ನು ನೋಡಿ ಬೇಕೆಂದು ತಂದೆ ಬಳಿ ರಚ್ಚೆ ಹಿಡಿದ ಹಾಗೆ, ಅಪ್ಪ ಪ್ರೀತಿಯಿಂದ ಅದನ್ನು ಮಗಳ ಕೈಗೆ ಕೊಟ್ಟ ಹಾಗೆ ಇತ್ತು. ಈ ಸರ್ಕಾರದಿಂದ, ಮುಖ್ಯಮಂತ್ರಿಗಳಿಂದ ಗೌರಿ ಪಡೆದ ಏಕೈಕ ಉಡುಗೊರೆ ಬುದ್ಧನ ಮೂರ್ತಿ ಮಾತ್ರ. ಗೌರಿ ನಮ್ಮೊಡನೆ ಇಲ್ಲ ಎಂದಾಗೆಲ್ಲ ನನಗೆ ನೆನಪಾಗುವುದು ಆ ಬುದ್ಧನ ಶಾಂತ, ನಿರ್ಲಿಪ್ತ ಮುಖಾರವಿಂದ ಮಾತ್ರ. 

ಹೌದು ನಾನು ಗೌರಿ, ನಾವೆಲ್ಲರೂ ಗೌರಿ.

                                                                                                                             - ದಿನೇಶ್ ಅಮಿನ್ ಮಟ್ಟು

Monday, March 20, 2017

ಶಿವಮೊಗ್ಗ: ಸರಳ ವಿವಾಹ (ಮಂತ್ರ ಮಾಂಗಲ್ಯ)

ಜಾತಿಮೀರಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದ ಭಾಸ್ಕರ್ ಮತ್ತು ಚೈತ್ರಾ ಅವರಿಗೆ ಮಂತ್ರಮಾಂಗಲ್ಯದ ವಚನ ಬೋಧನೆ ಮಾಡುವ ಭಾಗ್ಯ ಕಳೆದ ಭಾನುವಾರ ನನಗೆ ಬಂದೊದಗಿತ್ತು.
ವಧುವರರನ್ನು ಹರಸಲು ನನ್ನ ಜತೆ ಬಾನುಮುಸ್ತಾಕ್ ಮತ್ತು ಮಲ್ಲಿಕಾರ್ಜುನ ಮೇಟಿ ಕೂಡಾ ಇದ್ದರು. ಭಾಸ್ಕರ್ ತಂದೆತಾಯಿ ಇನ್ನೂ ಮುನಿಸುಕೊಂಡಿದ್ದಾರೆ. ಅವರ ಕೊರತೆ ಕಾಡದಂತೆ ಭಾಸ್ಕರ್ ಅವರ ಮೇಸ್ಟ್ರು ಕೊಟ್ರಪ್ಪ ಹಿರೇಮಠ್ ಪತ್ನಿ ಜತೆ ಬಂದು ಮದುವೆ ನಡೆಸಿಕೊಟ್ಟರು. ಜತೆಗೆ ಪತ್ರಕರ್ತರಾದ ಟೆಲೆಕ್ಸ್ ರವಿಕುಮಾರ್ ಮತ್ತು ಅನಿತಾ ಹಾಗೂ ನಾಗೇಶ್ ಮೊದಲಾದವರ ಸ್ನೇಹಬಳಗ.
ಕಳೆದೆರಡು ವರ್ಷಗಳ ಅವಧಿಯಲ್ಲಿ ಕುವೆಂಪು ಹುಟ್ಟೂರಾದ ಶಿವಮೊಗ್ಗದಲ್ಲಿ ಅವರೇ ಹೇಳಿಕೊಟ್ಟಿರುವ ಮಂತ್ರಮಾಂಗಲ್ಯದ ಮದುವೆಗೆ ನಾನುಮೂರನೆ ಬಾರಿ ‘ಪುರೋಹಿತ’ನಾದೆ.
ಮೊದಲು ನನ್ನ ಯುವ ಪತ್ರಕರ್ತ ಮಿತ್ರ ಸುಬ್ರಹ್ಮಣ್ಯ ಮತ್ತು ನಂದಿನಿ ನಂತರ ಇನ್ನೊಬ್ಬ ಯುವಪತ್ರಕರ್ತ ಮಿತ್ರ ಪ್ರಶಾಂತ್ ಹುಲ್ಕೋಡ್ ಮತ್ತು ಮಂಜುಳಾ ಮಾಸ್ತಿಕಟ್ಟೆ, ಈಗ ಭಾಸ್ಕರ್ ಮತ್ತು ಚೈತ್ರಾ.
ಕುವೆಂಪು ನಮ್ಮನ್ನಗಲಿ ಹೋಗಿದ್ದಾರೆ ಎಂದು ಹೇಳಿದವರು ಯಾರು? ಕುವೆಂಪು ಹೇಳಿಕೊಟ್ಟಿರುವ ಆದರ್ಶಗಳ ಪಾಲನೆಯ ಮೂಲಕ ಈ ಯುವಕ-ಯುವತಿಯರು ಅವರನ್ನು ಮತ್ತೆಮತ್ತೆ ಜೀವಂತವಾಗಿಸುತ್ತಿದ್ದಾರೆ.
ಯಾವನೋ ಮತಿಗೆಟ್ಟವನು ಕುವೆಂಪು ಕವನವನ್ನು ಗೇಲಿಮಾಡಿದ ಎಂದು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಅಂತಹವರು ಕುವೆಂಪು ಬದುಕಿದ್ದಾಗಲೂ ಅವರನ್ನು ಕಾಡಿದ್ದರು, ಮುಂದೆಯೂ ಆ ಕೆಲಸ ಮಾಡುತ್ತಾರೆ. ಅಂತಹವರನ್ನು ಸಮೀಪದ ಕಸದಬುಟ್ಟಿಗೆ ಎಸೆದು ನಾವು ಕುವೆಂಪು ಎಂಬ ಮಹಾಗುರುವಿನ ಶಿಷ್ಯರಾಗೋಣ.


Friday, March 17, 2017

ದೆಹಲಿ ಜೆ.ಎನ್.ಯು

ಇಂದು ಸಂಜೆ ಜೆಎನ್ ಯುನಲ್ಲಿ ಒಂದು ಸಣ್ಣ ಭಾಷಣ, ಉಮಾಪತಿ ಮತ್ತು ರೇಣುಕಾ ಅವರ ಜತೆ ಸೆಲ್ಪಿ, ದೆಹಲಿಯಲ್ಲಿನ 'ಕನ್ನಡದ ರಾಯಭಾರಿ' ಪ್ರೊ.ಪುರುಷೋತ್ತಮ್ ಬಿಳಿಮಲೆಯವರ ಅಧ್ಯಕ್ಷತೆಯ ಕನ್ನಡ ಭಾಷಾ ಪೀಠಕ್ಕೆ ಭೇಟಿ. ಇಳಿಸಂಜೆ ಒಂದು ದೀರ್ಘ ಹರಟೆ.ದೆಹಲಿಯಲ್ಲಿ ಕಳೆದ ಹಳೆಯ ದಿನಗಳ ನೆನಪುಗಳ ಮೆರವಣಿಗೆ. ವಿಮಾನ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಪ್ರೆಸ್ ಕ್ಲಬ್ ಗೆ ಹೋಗಲಾಗದ ಪರಿತಾಪ.

Sunday, March 5, 2017

ಭಾರತದಲ್ಲಿ ಮುದ್ರಣ ಮಾಧ್ಯಮ

ಮುದ್ರಣ ಮಾಧ್ಯಮವನ್ನು 'ಮುಳುಗುತ್ತಿರುವ ಹಡಗು' ಎಂದೇ ವಿಶ್ವದಾದ್ಯಂತ ಬಣ್ಣಿಸಲಾಗುತ್ತಿದೆ. ಭಾರತದಲ್ಲಿ ಮಾತ್ರ ಮುದ್ರಣ ಮಾಧ್ಯಮ ಶೇಕಡಾ ೮ ದರದಲ್ಲಿ ಬೆಳೆಯುತ್ತಿದೆ.
ಇಲ್ಲಿನ ಭಾಷಾ ಮಾಧ್ಯಮದ ವಿಸ್ತಾರ ಮತ್ತು ನವಸಾಕ್ಷರರ ಮೊದಲ ಓದು ಭಾಷಾಮಾಧ್ಯಮದಿಂದಲೇ ಶುರುವಾಗುವುದು ಇದಕ್ಕೆ ಕಾರಣಗಳು. ಆದರೆ ಭಾರತದಲ್ಲಿ ಕೂಡಾ ಇಂಗ್ಲೀಷ್ ಮುದ್ರಣ ಮಾಧ್ಯಮ ಅದರ ಮೇಲ್ಮಜಲನ್ನು ಮುಟ್ಟಿಬಿಟ್ಟಿರುವಂತೆ ಕಾಣುತ್ತಿದೆ. ಪ್ರಪಂಚದಾದ್ಯಂತ ನಡೆದಿರುವಂತೆ ಇಲ್ಲಿಯೂ ಇಂಗ್ಲೀಷ್ ಪತ್ರಿಕೆಗಳ ಓದುಗರು Online ಆಗುತ್ತಿರುವುದು ಇದಕ್ಕೆ ಕಾರಣ. ಇದರಲ್ಲಿ ಬಹುಸಂಖ್ಯೆಯಲ್ಲಿರುವವರು ಯುವ ಓದುಗರು. ಈ ಓದುಗ ವರ್ಗವನ್ನು ಆಕರ್ಷಿಸಲು ಇಂಗ್ಲೀಷ್ ದಿನಪತ್ರಿಕೆಗಳು ಕೂಡಾ ಜನಪ್ರಿಯ ಸಿನೆಮಾ, ಲೈಫ್ ಸ್ಟೈಲ್, ಸೆಕ್ಸ್, ರಿಲೇಷನ್ಸ್, ಊಟ-ತಿಂಡಿ, ಹೊಟೇಲ್-ಮಾಲ್ ಗಳ ಬಗೆಗಿನ ಸುದ್ದಿಯ ಪ್ರಮಾಣವನ್ನು ಹೆಚ್ಚಿಸುತ್ತಿವೆ.
ಈ ಹಿನ್ನೆಲೆಯಲ್ಲಿ 'ದಿ ಹಿಂದೂ' ಪತ್ರಿಕೆಯನ್ನು ಓದುತ್ತಿದ್ದಾಗಲೆಲ್ಲ ' ಇದು ಮುಳುಗುತ್ತಿರುವ ಹಡಗನ್ನು ಉಳಿಸಲು ಹೋರಾಡುತ್ತಿರುವ ವಯಸ್ಸಾದ ನಾವಿಕ' ಎಂದು ಅನಿಸುತ್ತಲೇ ಇತ್ತು. ಇತ್ತೀಚೆಗೆ ವಿನ್ಯಾಸದ ಆವರಣ ಮಾತ್ರವಲ್ಲ ಮಾಹಿತಿಯ ಹೂರಣವನ್ನೂ ಬದಲಾಯಿಸಿಕೊಂಡು, ವಿಸ್ತರಿಸಿಕೊಂಡು ಬರುತ್ತಿರುವ 'ದಿ ಹಿಂದು' ಕಂಡು ಖುಷಿಯಾಗುತ್ತಿದೆ, ಅದರ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಭರವಸೆಯ ಸಣ್ಣ ಬೆಳಕು ಕಾಣತೊಡಗಿದೆ. ಇಂದಿನ ' ದಿ ಹಿಂದೂ' ಪತ್ರಿಕೆಯ ಪುಟಗಳ ಸಂಖ್ಯೆ ೫೨. ಜಾಹೀರಾತು ಪುಟಗಳ ಸಂಖ್ಯೆ ಅತಿಕಡಿಮೆ. ಪೂರ್ತಿ ಓದಲು ಇಡೀ ಭಾನುವಾರ ಬೇಕು.
ನೀವು ಯಾವ ಪತ್ರಿಕೆ ಓದಬೇಕು, ಓದಬಾರದು ಎನ್ನುವ ಸಲಹೆಯನ್ನು ನೀಡುವ ಅಧಿಕಪ್ರಸಂಗತನ ನಾನು ಮಾಡುವುದಿಲ್ಲ. ಆದರೆ ನೀವು ಓದುತ್ತಿರುವುದನ್ನು ಓದಿ, ಓದುವ ಪತ್ರಿಕೆಗಳಲ್ಲಿ 'ದಿ ಹಿಂದೂ' ಇಲ್ಲದೆ ಇದ್ದರೆ ದಯವಿಟ್ಟು ಅದನ್ನ ಸೇರಿಸಿಕೊಳ್ಳಿ. ಇದು ನಾವು ಬಯಸುವ ಮಾಧ್ಯಮವನ್ನು, ಮಾಧ್ಯಮ ಧರ್ಮವನ್ನು ಉಳಿಸಲು, ಬೆಳೆಸಲು ನಮ್ಮ ಕೊಡುಗೆಯಾಗಬಹುದು.

Saturday, March 4, 2017

ಭಾರತದಲ್ಲಿ ದೇಶದ್ರೋಹ, ದೇಶಪ್ರೇಮ

ಭಾರತದಲ್ಲಿರಲು ಭಯವಾಗುತ್ತಿದೆ ಎಂದು ನಾನು ಹೇಳಿರುವುದು ನಿಜ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೇಶಾದ್ಯಂತ ನಡೆಯುತ್ತಿರುವ ದಾಳಿಯ ಅನುಭವ ವೈಯಕ್ತಿಕವಾಗಿ ನನಗೂ ಆಗುತ್ತಿದೆ. ನಿನ್ನೆ ಅಂಬೇಡ್ಕರ್ ವಾದಿ ಡಾ.ಕೀರ್ವಾಲೆಯವರ ಹತ್ಯೆ ನಡೆದಿದೆ, ಪಿಣರಾಯ್ ತಲೆಕಡಿಯಬೇಕೆಂದು ಇನ್ನೊಬ್ಬ ತಲೆಕೆಟ್ಟವನು ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಗಳು ಹುಚ್ಚುನಾಯಿಗಳಂತೆ ಅಭಿಪ್ರಾಯ ವಿರೋಧಿಗಳ ಮೇಲೆ ಮುಗಿಬೀಳುತ್ತಿದ್ದಾರೆ.
ಪಿಣಾರಾಯ್ ವಿಜಯನ್ ಭೇಟಿಯ ಪರವಾಗಿ ನಾನು ಸ್ಟೇಟಸ್ ಹಾಕಿದರೆ ನನ್ನನು ಗುಂಡಿಕ್ಕಿ ಸಾಯಿಸಬೇಕು ಎಂದು ಒಬ್ಬ ಬೆದರಿಕೆ ಹಾಕುತ್ತಾನೆ, ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಆ್ಯಸಿಡ್ ಹಾಕಿ ಎಂದು ಹೇಳುತ್ತಾನೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೊರಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ.ಹರಣ ಮಾಡಲಾಗುತ್ತಿದೆ ಎಂದು ನನ್ನ ವಿರುದ್ದವೇ ಅಪಪ್ರಚಾರ ಮಾಡಲಾಗುತ್ತದೆ, ವಿಧಾನಸೌಧದಲ್ಲಿ ಕೂತು ಅಧಿಕಾರದ ದುರುಪಯೋಗ ಮಾಡುತ್ತಿದ್ದಾನೆ ಎಂದು ಆರೋಪ ಮಾಡುತ್ತಾರೆ. ನನ್ನ ಪ್ರತಿಯೊಂದು ಮಾತನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ನನ್ನವರನ್ನೇ ಎತ್ತಿ ಕಟ್ಟುವ ಷಡ್ಯಂತ್ರ ಹೆಣೆಯಲಾಗುತ್ತಿದೆ.
ಇವೆಲ್ಲ ಒಂದು ರೀತಿಯಲ್ಲಿ ನನ್ನನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವುದು ನಿಜ. ಈ ಭಯ ವೈಯಕ್ತಿಕ ಸಾವಿನದಲ್ಲ, ಸಾವನ್ನು ಹೊಸ್ತಿಲಲ್ಲಿ ಕೂರಿಸಿ ಬದುಕುತ್ತಿರುವವನು ನಾನು. ಇದು ಭಯಭೀತ ಸಮಾಜವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ. ದುರ್ಜನರ ಆರ್ಭಟವನ್ನು ಮತ್ತು ಸಜ್ಜನರ ಮೌನವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ.
ಈ ಹಿನ್ನೆಲೆಯಲ್ಲಿ ನಾನು ಪಾವಗಡದಲ್ಲಿ ಮಾತನಾಡುತ್ತಾ 'ಇಂತಹ ಭಾರತದಲ್ಲಿರಲು ನನಗೆ ಭಯವಾಗುತ್ತಿದೆ' ಎಂದು ಹೇಳಿದ್ದೆ. ಈ ಮಾತನ್ನು ಮೊನ್ನೆ ಮಂಗಳೂರಿನಲ್ಲಿಯೂ ಹೇಳಿದ್ದೇನೆ. ಇದರ ಜತೆ '' ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಾವು ಮುಂದಾಗಬೇಕು. ಇದು ನಮ್ಮ ದೇಶ, ಇಲ್ಲಿ ಚಾರ್ವಾಕರಿಗೂ ಚಿಂತಕರ ಚಾವಡಿಯಲ್ಲಿ ಜಾಗ ಇತ್ತು, ಅವರ ತಲೆ ಕಡಿಯಬೇಕು ಎಂದು ಯಾರೂ ಹೇಳಿರಲಿಲ್ಲ. ಭಯಮುಕ್ತವಾದ ಮತ್ತು ಅಭಿಪ್ರಾಯಭೇದಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ಇರುವ ಭಾರತವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಯಾಕೆಂದರೆ ನಮಗಿರುವುದು ಒಂದೇ ಭಾರತ'' ಎಂದು ನಾನು ಪಾವಗಡವೂ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಭಾಷಣ ಮಾಡಿದ್ದೆ.
ಇತ್ತೀಚಿನ.ದಿನಗಳಲ್ಲಿ ನನ್ನ ಭಾಷಣ-ಬರವಣಿಗೆಗಳ ಕೆಲವು ಭಾಗಗಳನ್ನಷ್ಟೇ ಆಯ್ದು ವಿವಾದವನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಈ ಮಾತುಗಳನ್ನು ಹೇಳಬೇಕಾಯಿತು.
ನನ್ನ ಪ್ರಕಾರ 'ಭ್ರಷ್ಟಾಚಾರ, ಕೋಮುವಾದ ಮತ್ತು ಜಾತಿವಾದ ಎನ್ನುವುದು ದೇಶದ್ರೋಹ. ಪ್ರಾಮಾಣಿಕತೆ, ಜಾತ್ಯತೀತತೆ ಮತ್ತು ಜಾತಿನಾಶ ಎನ್ನುವುದು ದೇಶಪ್ರೇಮ

Thursday, March 2, 2017

ಉತ್ತರ ಪ್ರದೇಶ ಚುನಾವಣೆ 2017

ಉತ್ತರಪ್ರದೇಶದ ಚುನಾವಣೆ ಕೊನೆಯ ಚರಣದಲ್ಲಿದೆ. 2002ರಿಂದ 2012ರ ವರೆಗೆ (2002,2007 ಮತ್ತು 2012ರ ವಿಧಾನಸಭಾ ಚುನಾವಣೆ, 2004 ಮತ್ತು 2009ರ ಲೋಕಸಭಾ ಚುನಾವಣೆ) ಉತ್ತರಪ್ರದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಗಳ ಪ್ರತ್ಯಕ್ಷದರ್ಶಿ ವರದಿಯನ್ನು ನಾನು ‘ಪ್ರಜಾವಾಣಿ’ಗಾಗಿ ಮಾಡಿದ್ದೆ. 
ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು 25 ದಿನ ಒಂದು ದಿನವೂ ತಪ್ಪಿಸಿಕೊಳ್ಳದೆ ಸಮೀಕ್ಷಾ ವರದಿ ಮಾಡಿದ್ದೆ. ಹದಿನಾಲ್ಕು ವರ್ಷಗಳ ಕಾಲ ನಾನು ಬರೆದ ಅಂಕಣಗಳಲ್ಲಿ ಯಾವುದಾದರೂ ಒಂದು ರಾಜ್ಯದ ಬಗ್ಗೆ ಅತೀಹೆಚ್ಚು ಬರೆದಿದ್ದರೆ ಆ ರಾಜ್ಯ ಉತ್ತರಪ್ರದೇಶ. ಅಂಕಣಗಳು ಮತ್ತು ಸಮೀಕ್ಷಾ ವರದಿಗಳ ಲೆಕ್ಕ ಹಾಕಿದರೆ ಡಬ್ಬಲ್ ಸೆಂಚುರಿಗೆ ಹತ್ತಿರ ಹೋಗಬಹುದು.
ಕಾನ್ಪುರದ ಬೀಗ... ಆಗ್ರಾದ ತಾಜಮಹಲ್... ಮೊರದಾಬಾದ್ ನ 'ಪೀತಲ್ ನಗರಿ'... ಮೇರಠ್ ನ ಕಬ್ಬು-ಬೆಲ್ಲ... ಅಯೋಧ್ಯೆಯ ಡೇರೆಯಲ್ಲಿ ಕೂತಿದ್ದ ರಾಮ... ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಮಮಂದಿರದ ಇಟ್ಟಿಗೆಗಳ ರಾಶಿ... ಗಾಜಿಪುರದ ಬಾಹುಬಲಿಗಳು...ಪಿಲಿಬಿಟ್ ನಲ್ಲಿ ಹರಿಪ್ರಸಾದ್ ಚೌರಾಸಿಯಾ ಊದುವ ಕೊಳಲು ತಯಾರಿಸುತ್ತಿರುವ ಬಡ ಮುಸ್ಲಿಮ್ ಕುಶಲಕರ್ಮಿಗಳು....ಈಟಾವಾದ ಅಂತರರಾಷ್ಟ್ರೀಯ ಮಟ್ಟದ ಹಾಕಿ ಮೈದಾನ... ಗೋರಖ್ ಪುರದ ಸೊಳ್ಳೆಗಳು, ಮಿರ್ಜಾಪುರವನ್ನು ಕಾಡುತ್ತಿರುವ ಪೂಲನ್ ದೇವಿ “ಭೂತ”.. ಕಾಶಿಯ ಮೂಕ ವಿಶ್ವನಾಥ... ನಾರುತ್ತಿರುವ ಗಂಗೆಯಲ್ಲಿ ದೋಣಿ ಓಡಿಸುತ್ತಿದ್ದ ಪಪ್ಪು ಬೋಟ್ ಮೆನ್... ರಾಹುಲ್ ಸಾಂಕೃತಾಯನ ಹುಟ್ಟಿದ ಅಜಮ್ ಘಡ್ ನಲ್ಲಿ ಅಬುಸಲೇಂ ಕಟೌಟ್, ಲಖನೌದಲ್ಲಿ ಸುತ್ತುತ್ತಿದ್ದ ಮುಸ್ಲಿಮರ ‘ಅಟಲ್ ರಥ’
ಸುತ್ತಾಡಿದ ಊರು, ಮಾತನಾಡಿಸಿದ ಜನ, ಊಟ-ತಿಂಡಿ,ಬಸ್, ಕಾರು, ರೈಲು, ಚಾಲಕರು, ರೂಮ್ ಬಾಯ್ ಗಳು, ಅನುಭವಿಸಿದ ಖುಷಿ, ಭಯ, ಒತ್ತಡ ಎಲ್ಲವನ್ನೂ ಇಂದು ಕೂತು ನೆನಪುಮಾಡಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ.
ದೇಶದ ರಾಜಕಾರಣ ಎತ್ತುವ ಮುಖ್ಯ ಪ್ರಶ್ನೆಗಳಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಉತ್ತರ ಇದೆ ಎಂದು ನಾನು ನಂಬಿದವನು. ಈ ಹಿನ್ನೆಲೆಯಲ್ಲಿ ಕನ್ನಡದ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಕಳೆದ ಕೆಲವು ದಿನಗಳಿಂದ ನಾನು ಹುಡುಕುತ್ತಿದ್ದ ಉತ್ತರಪ್ರದೇಶ ಕಾಣದೆ ಇದ್ದಾಗ ಹಳೆಯ ರಿಪೋರ್ಟಿಂಗ್ ಡೈರಿ ತೆರೆದು ಪುಟ ತಿರುಗಿಸಿದೆ. ನೆನಪುಗಳು ನುಗ್ಗಿಬಂತು.

Sunday, February 26, 2017

ಇದ್ಯಾವ ಮಾಧ್ಯಮ ಧರ್ಮ

ನಾನು ಫೇಸ್ ಬುಕ್ ನಲ್ಲಿ ಬರೆದುದನ್ನು ಹೇಗೆ ತಿರುಚಲಾಗುತ್ತಿದೆ ಎನ್ನುವುದಕ್ಕೆ 'ವಿಶ್ವವಾಣಿ' ಯ ಈ ವರದಿ ಸಾಕ್ಷಿ. ನರೇಂದ್ರ ಮೋದಿ ರಾಜೀನಾಮೆ ಕೊಡಬೇಕೆಂದು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ.('ವಿವಾದಾತ್ಮಕ ಸ್ಟೇಟಸ್ 'ಬಾಕ್ಸ್ ಮತ್ತು ನನ್ನ FB ಸ್ಟೇಟಸ್ ನೋಡಿ)
ಇದು ಯಾವ ಮಾಧ್ಯಮಧರ್ಮ ವಿಶ್ವೇಶ್ವರ ಭಟ್ರೆ?