Monday, May 16, 2011

ದಿನೇಶ್ ಅಮೀನ್ ಮಟ್ಟು: ಕನ್ನಡ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಅಪೂರ್ವ ಪತ್ರಕರ್ತ


ದಿನೇಶ್ ಅಮೀನ್ ಮಟ್ಟು
ಪ್ರಜಾವಾಣಿಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅವರು ೨೦೧೧ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಬರೆದಿರುವ ಲೇಖನ ಇಲ್ಲಿದೆ. ಪಿ.ಲಂಕೇಶರ ನಂತರ ಸಮಕಾಲೀನ ಜಗತ್ತನ್ನು ದಿನೇಶ್ ಅಮೀನ್ ಮಟ್ಟು ಅವರಷ್ಟು ಸೂಕ್ಷ್ಮಜ್ಞತೆಯಿಂದ ದಾಖಲಿಸಿದವರು ವಿರಳ. ಹೊಸ ತಲೆಮಾರಿನ ಪತ್ರಕರ್ತರಿಗೆ ದಿನೇಶ್ ಅವರ ಬರೆಹಗಳು ಪ್ರೇರಣೆಯನ್ನು ನೀಡಬಲ್ಲವು. ಆತ್ಮರತಿಯ, ಸ್ಟಾರ್‌ಗಿರಿಯ ಹಂಗಿಲ್ಲದಂತೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ಕಟ್ಟಿಕೊಡಬಲ್ಲ, ಆ ಮೂಲಕವೇ ಜನಪರವಾದ ಸಂವೇದನೆಗಳನ್ನು ಓದುಗರಲ್ಲಿ ಉದ್ದೀಪಸಬಲ್ಲ ದಿನೇಶ್ ಕನ್ನಡ ಪತ್ರಿಕಾರಂಗದ ಆಸ್ತಿ. ಬಿಳಿಮಲೆಯವರು ಬರೆದಿರುವ ಈ ಲೇಖನ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿರುವ ದಿನೇಶ್ ಅವರು ಅದಕ್ಕೆ ಎಷ್ಟು ಅರ್ಹರು ಎಂಬುದನ್ನು ಸಾಬೀತುಪಡಿಸುತ್ತದೆ. ಸಂಪಾದಕೀಯ ಬಳಗದ ಪರವಾಗಿ ದಿನೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಲೇಖನವನ್ನು ಒದಗಿಸಿದಕ್ಕಾಗಿ ಬಿಳಿಮಲೆ ಅವರಿಗೆ ಥ್ಯಾಂಕ್ಸ್.
-ಸಂಪಾದಕೀಯ

ಪತ್ರಕರ್ತರ ನಡವಳಿಕೆಗಳು ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರೆಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ  ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಉದೀಯಮಾನರಾಗುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: ೧೯೫೯ )  ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್ ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳ, ನೇರ, ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.

ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ಜನ ಶಕ್ತಿ ಬೆಳೆತೆಗೆವ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು ೧೯೮೯ ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ , ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು. ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. ೨೦೦೨ ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು, ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು  ದಿನೇಶ್ ಬರೆದ ಕಣ್ಣೆದುರಿನ ತಳಮಳ (೧೯೯೯), ದೆಹಲಿ ನೋ೧ ( ೨೦೦೮) ಮತ್ತು ನಾರಾಯಣ ಗುರು ( ೨೦೦೯)  ಕೃತಿಗಳನ್ನು ಓದಬೇಕು.

ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ, ದಿನೇಶ್ ಅಮೀನ್ ಅವರು ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, ೨೦೦೫ ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ,  ೨೦೦೬ ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. ೨೦೦೮ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಡಾ.ಪುರುಷೋತ್ತಮ ಬಿಳಿಮಲೆ
ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ಆಳವಾದ ನೆನಪುಗಳನ್ನು ದಿನೇಶ್ ಬಿಟ್ಟು ಹೋಗಿರುವುದಕ್ಕೆ ಕಾರಣ, ಅವರು ತಾವು ನೆಲೆಊರಿದ ಊರಿನ ಪ್ರಾದೇಶಿಕ ಗುಣಗಳನ್ನು ಮತ್ತು ಜನಗಳನ್ನು ಅರ್ಥಮಾಡಿಕೊಂಡ ಬಗೆ. ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ, ಬದಲು ತಾವು ಕೆಲಸ ಮಾಡುತ್ತಿರುವ ಊರಿನ ಸಂವೇದನೆಗಳನ್ನು ಮತ್ತು ಅವುಗ ಸ್ವಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಅನನ್ಯತೆಯನ್ನು ಮರೆಯದೆ ಬರೆಯುತ್ತಾರೆ. ಹೀಗಾಗಿ ಅವರು ಮಂಗಳೂರಿನ  ಬಗ್ಗೆಯೂ, ಹುಬ್ಬಳ್ಳಿಯ ಬಗೆಯೂ ಒಂದೇ ರೀತಿಯಲ್ಲಿ ಬರೆಯುತ್ತಾರೆಂದು ನಮಗೆ ಅನಿಸುವುದಿಲ್ಲ.  ಮಂಗಳೂರಿನ ಬಗ್ಗೆ ಬರೆಯವಾಗ ದಿನೇಶ್‌ಗೆ ಶಿವರಾಮ ಕಾರಂತರು ಆದರ್ಶವಾದರೆ, ಹುಬ್ಬಳ್ಳಿ ಬಗ್ಗೆ ಬರೆಯುವಾಗ ಬೇಂದ್ರೆ ಆದರ್ಶ. ಇದೇ ಅವರ ಲೇಖನಗಳ ಸೃಜನಶೀಲತೆಯ ಗುಟ್ಟು. ಇದು ಇನ್ನೂ ಖಚಿತವಾಗಬೇಕಾದರೆ ನಾವು ಅವರ ದೆಹಲಿ ನೋಟ( ೨೦೦೮) ಕೃತಿಯನ್ನು ಓದಬೇಕು. ದೆಹಲಿ ರಾಷ್ಟ್ರದ ರಾಜಧಾನಿ, ಅಲ್ಲಿಂದ ಕರ್ನಾಟಕದ ಬಗ್ಗೆ ಬರೆಯುವಾಗ ಆ ಬರೆಹಕ್ಕೆ ರಾಷ್ಟ್ರೀಯ ಚೌಕಟ್ಟು ಇರಲೇಬೇಕು. ದೆಹಲಿ ನೋಟದ ಯಾವ ಲೇಖನವೂ ಈ ಚೌಕಟ್ಟನ್ನು ಮೀರಲೇ ಇಲ್ಲವಾದ್ದರಿಂದ ಅವುಗಳಿಗೆ ವಿಶೇಷವಾದ ಶಕ್ತಿ ಪ್ರಾಪ್ತಿಸಿದೆ. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಎಂದು ಕರ್ನಾಟಕದ ಜನರಿಗೆ ಮೊದಲ ಬಾರಿಗೆ ಸವಿಸ್ತಾರವಾಗಿ ತಿಳಿದದ್ದು ದಿನೇಶ್ ಅಂಕಣಗಳನ್ನು ಓದಲಾರಂಭಿಸಿದ ಮೇಲೆಯೇ. ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣವನ್ನು ಅವರು ಪ್ರಖರ ಭಾಷೆಯಲ್ಲಿ ಅಷ್ಟೇ ಸೃಜನಶೀಲವಾಗಿ  ಪ್ರತೀತಗೊಳಿಸಿದರು. ಎಷ್ಟೋ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ದಿನೇಶ ಲೇಖನದಿಂದ ಪ್ರೇರಣೆ ಪಡೆದು ತಮ್ಮ ಹೋರಾಟದ ಹಾದಿಗಳನ್ನು ಹರಿತಗೊಳಿಸಿಕೊಂಡಿದ್ದಾರೆ. ಅವರ ಈಚಿನ ಅಂಕಣ ಅನಾವರಣ ವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯ ಮತ್ತು ತಾಖತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿರಿಸುತ್ತಿದೆ.

ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ. ಅದಕ್ಕಾಗಿ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.