Monday, July 18, 2011

ಭಗವದ್ಗೀತೆಯನ್ನು ಹೀಗೂ ಓದಬಹುದಲ್ಲವೇ?

`ಭಗವದ್ಗೀತೆ ಅಭಿಯಾನ ವಿರೋಧಿಸುವವರು ದೇಶ ಬಿಟ್ಟು ಹೋಗಲಿ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ಪಣೆ ಕೊಡಿಸಿದ್ದಾರೆ.ಭಗವದ್ಗೀತೆ ಅಭಿಯಾನದಿಂದ ಕೆಟ್ಟದ್ದೇನಾಗಿದೆ ಎಂದು ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ಉತ್ತರದಂತಿದೆ ಸಚಿವ ಕಾಗೇರಿ ಅವರ ಮಾತುಗಳು.

ಸಜ್ಜನ  ಮತ್ತು ಪ್ರಜ್ಞಾವಂತರೆನಿಸಿಕೊಂಡ ಕಾಗೇರಿ ಅವರನ್ನೇ ಈ ರೀತಿ  ಮನುಷ್ಯವಿರೋಧಿಯಂತೆ ಮಾತನಾಡಲು ಪ್ರೇರೇಪಿಸಿದ `ಭಗವದ್ಗೀತಾ ಅಭಿಯಾನ~ ಎಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆಯೋ ಗೊತ್ತಿಲ್ಲ.

ಧರ್ಮ ಅಫೀಮು ಇದ್ದಂತೆ ಎಂದು ಹೇಳಿರುವುದು ಇದಕ್ಕೇ ಇರಬೇಕು, ಯಾಕೆಂದರೆ ಒಮ್ಮಮ್ಮೆ ಪ್ರಜ್ಞಾವಂತರೆನಿಸಿಕೊಂಡವರು ಕೂಡಾ ಧಾರ್ಮಿಕ ಉನ್ಮಾದದ ಸುಳಿಗೆ ಸಿಕ್ಕಿ ಹಾದಿ ತಪ್ಪಿಬಿಡುತ್ತಾರೆ.

ಈ ದೇಶದ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣ ಮಾಡಿ ಸಚಿವರಾದ ಕಾಗೇರಿ ಅವರಿಗೆ ತಾನಾಡಿದ ಮಾತುಗಳು ಅದಕ್ಕೆ ವಿರುದ್ಧವಾಗಿದೆ ಎಂದು ತಿಳಿಯದಷ್ಟು ಧರ್ಮದ ಮಂಪರು ಆವರಿಸಿಕೊಂಡು ಬಿಟ್ಟಿದೆ.

ಸದ್ಯ ತಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿ ಮಾತ್ರ ಆಡಳಿತ ನಡೆಸಲು ಜನಾದೇಶ ಇದೆ ಎನ್ನುವುದನ್ನೂ ಅವರು ಮರೆತಂತಿದೆ. ಅದು ನೆನೆಪಿದ್ದರೆ ರಾಜ್ಯ ಬಿಟ್ಟು ತೊಲಗಿ ಎಂದಾದರೂ ಅವರು ಹೇಳುತ್ತಿದ್ದರೇನೋ?
ಈಗಿನ ವಿವಾದ ಭಗವದ್ಗೀತೆಯ ಧಾರ್ಮಿಕ ಪಾವಿತ್ರ್ಯ, ಜನರ ನಂಬಿಕೆ ಇಲ್ಲವೇ ಕೃತಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದಲ್ಲ, ಅದು ಈ ಕಾರ‌್ಯಕ್ರಮದ ಹಿಂದಿನ ಉದ್ದೇಶ ಮತ್ತು ಪರಿಣಾಮಕ್ಕೆ ಸಂಬಂಧಿಸಿದ್ದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಬೇಕೆನ್ನುವುದನ್ನು ಮುಖ್ಯಮಂತ್ರಿಗಳೋ, ಶಿಕ್ಷಣ ಸಚಿವರೋ ತಮ್ಮ ಮನೆಗಳಲ್ಲಿ ಕೂತು ನಿರ್ಧರಿಸಲಾಗುವುದಿಲ್ಲ.

ಅದಕ್ಕಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇದೆ. ಅದರಲ್ಲಿನ ತಜ್ಞರು ಚರ್ಚಿಸಿ ನೀಡುವ ವರದಿಯನ್ನು ಆಧರಿಸಿ ಶಾಲೆಗಳಲ್ಲಿ ಬೋಧಿಸುವ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ನಿರ್ಧರಿಸಲಾಗುತ್ತದೆ.
ನಾಳೆ ಯಾವನೋ ಒಬ್ಬ `ಪವಾಡ ಮಾಡುವುದನ್ನು ಕಲಿಸುತ್ತೇನೆ~ ಎಂದೋ, `ಸರ್ಕಸ್ ಮಾಡುವುದಕ್ಕೆ ತರಬೇತಿ ನೀಡುತ್ತೇನೆ~ ಎಂದೋ ಬಂದರೆ ಅಂತಹವರಿಗೆ ಶಾಲೆಗಳಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಆಗಿನ ಮಾನವಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಮುರಳಿ ಮನೋಹರ ಜೋಷಿ ಅವರು ಇಂತಹದ್ದೇ ದುಸ್ಸಾಹಸ ಮಾಡಿದ್ದರು. ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿಯನ್ನು ಪುನರ್‌ರಚಿಸಲು ಹೋಗದೆ ಎನ್‌ಸಿಇಆರ್‌ಟಿ ಮೂಲಕ ಪಠ್ಯಪುಸ್ತಕಗಳನ್ನು ತಿದ್ದುವ (ತಿರುಚುವ) ಪ್ರಯತ್ನ ನಡೆಸಿದ್ದರು.
ರಾಜ್ಯದಲ್ಲಿ ಮೂರುವರ್ಷಗಳ ಅಧಿಕಾರದ ನಂತರ ಇಲ್ಲಿನ ಶಿಕ್ಷಣ ಸಚಿವರು ಈ ಕೆಲಸ ಪ್ರಾರಂಭಿಸಿದ್ದಾರೆ. ತನ್ನೂರಿನ ಮಠದ ಸ್ವಾಮಿಯೊಬ್ಬರು `ಭಗವದ್ಗೀತೆ ಅಭಿಯಾನ ಮಾಡುತ್ತೇನೆ~ ಎಂದು ಹೇಳಿದಾಗ ಅದಕ್ಕೆ ಕಣ್ಣುಮುಚ್ಚಿ ಆದೇಶ ಹೊರಡಿಸಿ ಜನರ ತೆರಿಗೆ ಹಣವನ್ನು ಸಮರ್ಪಿಸಿದ್ದಾರೆ. ಆ ಕಾರ‌್ಯಕ್ರಮದ ಹಿಂದಿನ ನಿಜವಾದ ಉದ್ದೇಶವೇನು?
ಅದರ ಸ್ವರೂಪವೇನು? ಅದರಿಂದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮಗಳೇನು? ಉದ್ಭವಿಸಬಹುದಾದ ಹೊಸ ಸಮಸ್ಯೆಗಳೇನು? ಇವೆಲ್ಲವನ್ನು ಒಬ್ಬ ಜವಾಬ್ದಾರಿಯತ ಸಚಿವನಾಗಿ ತಿಳಿದುಕೊಳ್ಳುವ ಕಷ್ಟವನ್ನು ಅವರು ತೆಗೆದುಕೊಂಡಿಲ್ಲ. ತಾನು ನಂಬಿರುವ ತತ್ವಗಳಿಗೆ ನಿಷ್ಠನಾಗಿರುವ ಸ್ವಯಂಸೇವಕನಂತೆ ವರ್ತಿಸಿದ್ದಾರೆ.

ಕಾರ‌್ಯಕ್ರಮಕ್ಕೆ ಅನುಮತಿ ನೀಡಿರುವುದು ಮಾತ್ರವಲ್ಲ, ಅದರ ರಕ್ಷಣೆಗೆ  ಲಾಠಿ ಹಿಡಿದು ನಿಂತಿದ್ದಾರೆ. ಧರ್ಮ ಪ್ರೇರಿತ ಅಭಿಯಾನಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿಯುವುದಿಲ್ಲ. ನಾಳೆ ಮುಸ್ಲಿಂ ಇಲ್ಲವೇ ಕ್ರೈಸ್ತ ಧರ್ಮಗುರುಗಳು ಬಂದು ಕುರಾನ್ ಇಲ್ಲವೇ ಬೈಬಲ್ `ಕಂಠ ಪಾಠ ಮಾಡಿಸುತ್ತೇವೆ~ ಎಂದು ಬಂದರೆ ನಿರಾಕರಿಸುವುದು ಹೇಗೆ?
ಭಗವದ್ಗೀತೆಯೂ ಸೇರಿದಂತೆ ಪುರಾಣಗಳನ್ನು ವಿದ್ಯಾರ್ಥಿಗಳಿಗೆ ಓದಿಸಿದರೆ ತಪ್ಪೇನು ಎಂಬ ಪ್ರಶ್ನೆ ಸಹಜವಾದುದು. `ಪುರಾಣ ಕಥೆಗಳೆಂದರೆ ಜನರ ಕನಸು ಮತ್ತು ದುಃಖಗಳು. ಅವರು ಅತ್ಯಂತ ಆಳದಲ್ಲಿ ಆನಂದಿಸಿದ ಮತ್ತು ಅತ್ಯಮೂಲ್ಯ ಎಂದು ತಿಳಿದುಕೊಂಡ ಆಸೆ-ಆಕಾಂಕ್ಷೆಗಳು, ಬದುಕಿನ ಭಾಗವಾಗಿರುವ ಕೊನೆಯೇ ಇಲ್ಲದ ವಿಷಾದಗಳು, ಸ್ಥಳೀಯ ಮತ್ತು ಲೌಕಿಕ ಇತಿಹಾಸ-ಎಲ್ಲವೂ ಪುರಾಣಗಳಲ್ಲಿ ಅಳಿಸಲಾಗದಂತಹ ದಾಖಲೆಗಳಾಗಿರುತ್ತವೆ~ ಎಂದು ದೇಶ ಕಂಡ ಅಪರೂಪದ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು.

ರಾಮ, ಕೃಷ್ಣ ಮತ್ತು ಶಿವನ ಬಗ್ಗೆ ಲೋಹಿಯಾ ಬರೆದಿರುವ ಪ್ರಬಂಧ ಈ ದೇಶದ ಆಸ್ತಿಕ-ನಾಸ್ತಿಕ ಮಹಾಶಯರೆಲ್ಲರೂ ಕಡ್ಡಾಯವಾಗಿ ಓದಲೇಬೇಕಾದುದು. ಈ ತ್ರಿಮೂರ್ತಿಗಳನ್ನು `ಭಾರತದ ಮಹಾ ಕನಸು ಮತ್ತು ದುಃಖದ ಪ್ರತೀಕ~ ಎನ್ನುತ್ತಾರೆ ಅವರು.

`ಆದ್ದರಿಂದಲೇ ಇವರ ಕಥೆಗಳನ್ನು ಏಕಸೂತ್ರಕ್ಕೆ ಹೊಂದಿಸಿಕೊಳ್ಳುವುದು ಇಲ್ಲವೇ ಅವರ ಜೀವನದ ಜತೆ ವೈಫಲ್ಯವನ್ನೇ ಕಾಣದ ನೈತಿಕತೆಯನ್ನು ಹೆಣೆಯುವುದು ಮತ್ತು ಸುಳ್ಳು ಇಲ್ಲವೇ ಅಸಂಭವವೆಂದು ಕಾಣುವುದೆಲ್ಲವನ್ನೂ ಕಿತ್ತು ಬಿಸಾಡಲು ಹೊರಟರೆ ಜೀವನದಲ್ಲಿ ತರ್ಕವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ದೋಚಿದಂತಾಗುತ್ತದೆ~ ಎಂದು ಹೇಳಿದ್ದರು ರಾಮ ಮನೋಹರ ಲೋಹಿಯಾ.
ಭಗವದ್ಗೀತೆ ಮಾತ್ರವಲ್ಲ, ಮಹಾಭಾರತ, ರಾಮಾಯಣ, ಕುರಾನ್, ಬೈಬಲ್ ಎಲ್ಲವನ್ನೂ ಎಲ್ಲರೂ ಓದಲೇ ಬೇಕು. ಆದರೆ ಅದನ್ನು ಹೇಗೆ ಓದಬೇಕೆಂಬುದೇ ನಮ್ಮ ಮುಂದಿರುವ ಮುಖ್ಯ ಪ್ರಶ್ನೆ.
ಆಸ್ತಿಕರು ಪುರಾಣವೆಂದು ನಂಬುವ ಮಹಾಭಾರತ ಎಂಬ ಮಹಾಕಾವ್ಯದ ಒಂದು ಭಾಗ ಭಗವದ್ಗೀತೆ. ಇದು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಕೃಷ್ಣ ಬೋಧಿಸಿದ ಗೀತೆ. ಪುರಾಣವೇ ಹಾಗೆ, ಅದಕ್ಕೆ ಇತಿಹಾಸಕ್ಕೆ ಅಗತ್ಯವಾದ ಅಧ್ಯಯನದ ಚೌಕಟ್ಟು ಇಲ್ಲವೇ ಪುರಾವೆಗಳ ನೆಲೆಗಟ್ಟು ಬೇಕಾಗುವುದಿಲ್ಲ.
ಅದನ್ನು ತಮ್ಮ  ಆಲೋಚನೆಗೆ ತಕ್ಕಂತೆ ಕಟ್ಟುತ್ತಾ, ಬಿಚ್ಚುತ್ತಾ, ವ್ಯಾಖ್ಯಾನಿಸುತ್ತಾ, ಮರುವ್ಯಾಖ್ಯಾನಿಸುತ್ತಾ ಹೋಗಬಹುದು. ಪುರಾಣಗಳ ವ್ಯಾಖ್ಯಾನ ಅದನ್ನು ವ್ಯಾಖ್ಯಾನಿಸುವವರ ನಿಲುವುಗಳನ್ನು ಅವಲಂಬಿಸಿರುವುದರಿಂದ ನಮ್ಮ ನಡುವೆ ಇರುವುದು ಒಂದು ರಾಮಾಯಣ, ಒಂದು ಮಹಾಭಾರತ ಅಲ್ಲ. ಪರಸ್ಪರ ಭಿನ್ನವಾದ ಈ ಕೃತಿಯ ಹಲವು ರೂಪಗಳು ಜನಪ್ರಿಯವಾಗಿವೆ.
ಭಗವದ್ಗೀತೆಯನ್ನು ಪವಿತ್ರಗ್ರಂಥವೆಂದು ಕುರುಡಾಗಿ ನಂಬುವವರು ಇದ್ದ ಹಾಗೆ, ಹಿಂಸೆಯನ್ನು ಸಮರ್ಥಿಸುವ, ಚಾತುರ್ವರ್ಣ ಪದ್ಧತಿಯನ್ನು ಒಪ್ಪಿಕೊಂಡಿರುವ, ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿಪಾದಿಸುವ, ಮನುಷ್ಯ ಸಂಬಂಧಗಳನ್ನು ನಿರಾಕರಿಸುವ, ಶ್ರಮಕ್ಕೆ ಪ್ರತಿಫಲ ನಿರೀಕ್ಷಿಸಬಾರದೆಂದು ಹೇಳುವ ಭಗವದ್ಗೀತೆ  ಜನವಿರೋಧಿಯಾದುದು ಎಂದು ಹೇಳುವವರೂ ಇದ್ದಾರೆ.

ಮಹಾಭಾರತ ಎನ್ನುವುದು ಶ್ರಿಕೃಷ್ಣನೆಂಬ ಅನಾರ್ಯ ಏಕಾಂಗಿಯಾಗಿ ಕೇವಲ ಬುದ್ಧಿಬಲದಿಂದ ಆರ್ಯ ಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ಎನ್ನುವವರೂ ಇದ್ದಾರೆ. ಆ ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಿಗೆ ಇದನ್ನೆಲ್ಲ ತಿಳಿದುಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ.
ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನದೆಂದು ಊಹಿಸಲಾಗಿದೆ.
ಸುಮಾರು ಮೂರು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಭಾರತದಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಇನ್ನೂ ನಡೆಯುತ್ತಿದ್ದರೂ ರಾಮಾಯಣದಲ್ಲಿ ಚಿತ್ರಿತರಾಗಿದ್ದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು.

ಅಷ್ಟರಲ್ಲಿ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ಆರ್ಯರು ರೂಪಿಸಿದ್ದರು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು, ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ಮಹಾಭಾರತದಲ್ಲಿ ಕ್ರೂರಿಗಳಾದ ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.
ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಆಜಾನುಬಾಹು ಅಲ್ಲ, ಅವನೊಬ್ಬ ಕುಳ್ಳ. ಗೊಲ್ಲರ ಕುಲದಲ್ಲಿ ಹುಟ್ಟಿ ಈ ಕರಿಯ, ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವದ ಬುಡವನ್ನೇ ಅಲುಗಾಡಿಸಿದ್ದ.

ಆರ್ಯ ಮೂಲವಾದ ಕುರುಕುಲದಲ್ಲಿ ಕೃಷ್ಣ ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಒಂದು ಅಪರೂಪದ ರಾಜಕೀಯ ತಂತ್ರವೆನ್ನಬಹುದು. ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ, ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ದ್ವೇಷವಾಗಿ ಬೆಳೆಯುವಂತೆ ಮಾಡಿದ. ಆ ಮೂಲಕ ಈ ಕ್ಷತ್ರಿಯರ ನಡುವೆ ನಡೆದ ಮಹಾಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗಬಹುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು.

ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಆತನಿಗಿತ್ತೋ ಏನೋ? ಕೌರವ ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣ ದ್ರಾವಿಡ ಶಕ್ತಿಯ ಪ್ರಭಾವವಲಯವೊಂದನ್ನು ಸೃಷ್ಟಿಸಿದ್ದ. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು.

ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದ್ದರು. ಮಹಾಭಾರತದಲ್ಲಿ ನಮಗೆ ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆರ್ಯಕ್ಷತ್ರಿಯರು ಮತ್ತು ದ್ರಾವಿಡ ರಾಜ ವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ.

ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣ ನೋಡಿಕೊಂಡಿದ್ದ. ಗೋಪಾಲಕರ ರಾಜನಾದ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ.

ಕೌರವರು-ಪಾಂಡವರ ನಡುವಿನ ಪ್ರತಿಷ್ಠೆಯ ಮಹಾಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲರೂ ದ್ರಾವಿಡ ರಾಜರು. ಹೀಗೆ ದ್ರಾವಿಡ ರಾಜರನ್ನು ತಟಸ್ಥರಾಗಿ ಉಳಿಸಿ ಕುರುಕ್ಷೇತ್ರವನ್ನು ಆರ್ಯ-ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ್ದ. ಆ ಕಾಲದಲ್ಲಿ ಆರ್ಯ ಪ್ರಭುತ್ವ ಸೃಷ್ಟಿಸಿದ್ದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡಿಕೊಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು. 
ಈ ದೃಷ್ಟಿಯಿಂದ ಕೃಷ್ಣ ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕನಂತೆ ಕಾಣುತ್ತಾನೆ. ಈ ವಿಚಾರಗಳ ಬೆಳಕಲ್ಲಿ ಕೃಷ್ಣನನ್ನು ನೋಡಿದರೆ ಆತ ಬೋಧಿಸಿದ ಭಗವದ್ಗೀತೆಯ ಶ್ಲೋಕಗಳು ಬೇರೆಯೇ ಅರ್ಥಗಳನ್ನು ಹೊರಡಿಸುತ್ತವೆ.
ಭಗವದ್ಗೀತೆ ಅಭಿಯಾನಕ್ಕೆ ಹೊರಟಿರುವ ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಖಂಡಿತ ಭಗವದ್ಗೀತೆಯ ಶ್ಲೋಕಗಳನ್ನು ಈ ರೀತಿ ವೈಚಾರಿಕ ಹಿನ್ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಸಾಹಸ ಮಾಡಲಾರರು. ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುವ ಧಾರ್ಮಿಕ ನಾಯಕರಿಂದ ಇದನ್ನು ನಿರೀಕ್ಷಿಸಲೂ ಸಾಧ್ಯ ಇಲ್ಲ.

ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿಸುವ ಮೂಲಕ ಹಿಂದೂ ಧರ್ಮದ ಅಂಧಾಭಿಮಾನಿಗಳನ್ನು ಬೆಳೆಸುವುದಷ್ಟೇ ಅವರ ಉದ್ದೇಶವಾಗಿರಬಹುದು.
ಕುರುಕ್ಷೇತ್ರದಲ್ಲಿ ಅರ್ಜುನ `ಯುದ್ಧ ಮಾಡಲಾರೆ~ ಎಂದಾಗ `ಯುದ್ಧವೇ ನಿನ್ನ ಕರ್ತವ್ಯ, ಅದರಿಂದ ವಿಮುಖನಾಗದಿರು~ ಎಂದು ಅವನನ್ನು ಹುರಿದುಂಬಿಸಿ ಭಗವದ್ಗೀತೆಯನ್ನು ಬೋಧಿಸಿದ್ದ ಕೃಷ್ಣ ಕೊನೆಗೆ `ನಾನು ಹೇಳಿದ್ದನ್ನು ವಿಮರ್ಶಿಸಿ ನೋಡು, ಬಳಿಕ ನಿನ್ನ ಇಷ್ಟವಿದ್ದಂತೆ ಮಾಡು~ (ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು) ಎಂದು ಹೇಳಿದ್ದ.

ಕನಿಷ್ಠ, ಭಗವದ್ಗೀತೆಯಲ್ಲಿನ ಈ ಸಾಲುಗಳನ್ನಾದರೂ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಓದಿದ್ದರೆ ಭಗವದ್ಗೀತೆ ಅಭಿಯಾನದ ಹೆಸರಲ್ಲಿ ತಮ್ಮ ಪರಿವಾರದ ಅಜೆಂಡಾವನ್ನು ಅಮಾಯಕ ವಿದ್ಯಾರ್ಥಿಗಳ ಮೇಲೆ ಹೇರಲು ಹೋಗುತ್ತಿರಲಿಲ್ಲ.