Monday, October 17, 2011

ಯಡಿಯೂರಪ್ಪನವರೆ, ಹೀಗೇಕೆ ಮಾಡಿಕೊಂಡಿರಿ?

ಊಟ, ನಿದ್ದೆ, ಆರೋಗ್ಯವನ್ನು ಮರೆತು ಮಳೆ, ಬಿಸಿಲು, ಗಾಳಿಯೆನ್ನದೆ ಊರೂರು ಸುತ್ತಾಡಿ ಚಳವಳಿ, ಪ್ರತಿಭಟನೆ, ಪಾದಯಾತ್ರೆಗಳ ಮೂಲಕ ದಶಕಗಳ ಕಾಲ ರಾಜಕೀಯ ಹೋರಾಟ ನಡೆಸುತ್ತಾ ಬಂದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದೊಡನೆ ಭ್ರಷ್ಟಾಚಾರದಲ್ಲಿ ಮುಳುಗಿ `ರಾಜಕೀಯ ಹರಾಕಿರಿ~ ಮಾಡಿಕೊಳ್ಳುವುದು ಯಾಕೆ?

ಕೇವಲ ದುಡ್ಡಿನಿಂದ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಹೋರಾಟದ ಮಾರ್ಗ ಹಿಡಿದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ನಂತರ ದುಡ್ಡಿಲ್ಲದೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದುಕೊಳ್ಳುವಷ್ಟು ಮೂರ್ಖನಾಗುವುದು ಹೇಗೆ?
ಮುಕ್ಕಾಲು ಪಾಲು ಆಯುಷ್ಯವನ್ನು ಐಷಾರಾಮಿ ಬದುಕು, ಅಧಿಕಾರ ಯಾವುದೂ ಇಲ್ಲದೆ ಕಳೆದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ಮರುಕ್ಷಣವೇ ಇವುಗಳಿಲ್ಲದೆ ಬದುಕಲಾರೆ ಎಂದು ತಿಳಿದುಕೊಂಡು ಉಳಿದ ಆಯುಷ್ಯವನ್ನು ನರಕ ಮಾಡಿಕೊಳ್ಳುವುದು ಯಾಕೆ?
ಹೋರಾಟದ ದಿನಗಳಲ್ಲಿ ಜಾತಿವಾದಿಯಾಗದೆ ಗಳಿಸಿದ ಜನಪ್ರಿಯತೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾತಿವಾದಿಯಾಗಿ ಕಳೆದುಕೊಳ್ಳುವುದು ಯಾಕೆ?
ಅನಿಶ್ಚಿತತೆಗೆ ಮತ್ತೊಂದು ಹೆಸರಾಗಿರುವ ರಾಜಕಾರಣದ ಜತೆ 25-30ವರ್ಷ ಸಂಸಾರ ಮಾಡಿದ ಅನುಭವದ ನಂತರವೂ. ತನ್ನ ಆಯುಷ್ಯದಲ್ಲಿ ಅನುಭವಿಸಲಾಗದಷ್ಟು ಸಂಪತ್ತನ್ನು ಗಳಿಸಲು ಹೊರಟು ಜೈಲು ಸೇರುವ ಮೂರ್ಖತನ ಯಾಕೆ?
ಜೈಲಿಗೆ ಹೋಗಿ ಕೂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ  ಸುಮಾರು 36 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ.
ಆ ದಿನಗಳಲ್ಲಿ ಒಂದು ಕ್ಷಣ ಅವರು ಸುಮ್ಮನೆ ಕೂತವರಲ್ಲ. ಪ್ರತಿಭಟನೆ, ಚಳವಳಿ,  ಜಾಥಾ, ಭಾಷಣ, ಘೋಷಣೆ ಎಂದು ಮೂರುಹೊತ್ತು ಆಡಳಿತ ಪಕ್ಷದ ಜತೆ ನಿತ್ಯ ಗುದ್ದಾಡಿದವರು. ರಾಜಕಾರಣಿಗಳ ವಿರುದ್ಧ ಕೇಳಿಬರುವ ಸಾಮಾನ್ಯವಾದ ಸಣ್ಣಪುಟ್ಟ ಆರೋಪಗಳನ್ನು ಬಿಟ್ಟರೆ ಅವರೊಬ್ಬ ಭ್ರಷ್ಟ ಎನ್ನುವ ಕಳಂಕ ಆಗ ಅವರಿಗೆ ಅಂಟಿರಲಿಲ್ಲ.

ಆದರೆ ಇಷ್ಟೆಲ್ಲ ಕಷ್ಟಪಟ್ಟು ಮುಖ್ಯಮಂತ್ರಿಯಾದ ಅವರು ಮೂರೇ ವರ್ಷಗಳ ಅವಧಿಯಲ್ಲಿ ಕರ್ನಾಟಕ ಕಂಡ ಅತ್ಯಂತ ಭ್ರಷ್ಟಮುಖ್ಯಮಂತ್ರಿ ಎಂಬ ಆರೋಪ ಹೊತ್ತುಕೊಂಡರು. ಈಗ ಜೈಲು ಸೇರಿದ್ದಾರೆ. ಯಡಿಯೂರಪ್ಪನವರು ಯಾಕೆ ಹೀಗೆ ಮಾಡಿಕೊಂಡರು?
ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರ ಮುಖ್ಯಮಂತ್ರಿಯೋ, ಸಚಿವನೋ ಜೈಲು ಸೇರಿದರೆ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗದು. ಯಾಕೆಂದರೆ ಹಿಂದಿನ ಕಾಲದ `ಹೋರಾಟದ ರಾಜಕಾರಣ~ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಅಲ್ಲ.
ಈ ಯುವರಾಜಕಾರಣಿಗಳಲ್ಲಿ ಹೆಚ್ಚಿನವರು ರಾಜಕೀಯದ ಹೆದ್ದಾರಿ ಸೇರಲು ಆಗಲೇ ಸುಲಭದ ಅಡ್ಡದಾರಿಗಳನ್ನು ಹಿಡಿದಿದ್ದಾರೆ, ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ಅವರ ಜೀವನದ 36 ವರ್ಷಗಳ ನಂತರ ಕೇಳಿಬಂದ ಆರೋಪಗಳೆಲ್ಲ ಅಧಿಕಾರ ಹಿಡಿಯವ ಮೊದಲೇ ಈ ಯುವ ರಾಜಕಾರಣಿಗಳ ಬಗ್ಗೆ ಕೇಳಿಬರುತ್ತಿವೆ. ಬೇರೆ ಉದಾಹರಣೆಗಳು ಯಾಕೆ ಬೇಕು?
ಯಡಿಯೂರಪ್ಪನವರ ಮಕ್ಕಳೇ ಇದ್ದಾರಲ್ಲ, ಬೇಕಿದ್ದರೆ ದೇವೇಗೌಡರ ಮಕ್ಕಳನ್ನೂ ಸೇರಿಸಿಕೊಳ್ಳಬಹುದು.ಹೋರಾಟದ ರಾಜಕಾರಣದ ಮೂಲಕವೇ ನಾಯಕರಾಗಿ ಬೆಳೆದು ಈಗಲೂ ನಮ್ಮ ನಡುವೆ ಉಳಿದಿರುವವರು ಮೂವರು ರಾಜಕಾರಣಿಗಳು ಮಾತ್ರ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ.
ಈ ಮೂವರು ನಾಯಕರಿಗೆ ಅನೇಕ ಸಾಮ್ಯತೆಗಳಿವೆ. ದೀರ್ಘಕಾಲದ ರಾಜಕೀಯ ಹೋರಾಟದ ನಂತರ ಈ ಮೂವರೂ ಅಧಿಕಾರಕ್ಕೆ ಬಂದರೂ ಅದನ್ನು ಅನುಭವಿಸಿದ್ದು ಮಾತ್ರ ಅಲ್ಪ ಕಾಲ. ಮೂವರೂ ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.
ಇವರ ಅಪ್ಪ, ಅಜ್ಜ, ಮುತ್ತಾತ-ಯಾರಿಗೂ ರಾಜಕಾರಣದ ಜತೆ ದೂರದ ಸಂಬಂಧವೂ ಇರಲಿಲ್ಲ. ಈ ಮೂವರ ರಾಜಕೀಯ ಯಶಸ್ಸಿನಲ್ಲಿ ಜಾತಿಯ ಪಾತ್ರ ಇದೆ ಎನ್ನುವುದು ನಿಜ.
ಆದರೆ ಇದೇ ಕಾರಣಕ್ಕೆ ಇವರು ನಡೆಸಿಕೊಂಡು ಬಂದ ರಾಜಕೀಯ ಹೋರಾಟವನ್ನು ತಳ್ಳಿಹಾಕಲಾಗದು. ಒಕ್ಕಲಿಗರು, ಲಿಂಗಾಯತರು, ಈಡಿಗರು ತಮ್ಮ ತಮ್ಮ ಜಾತಿ ನಾಯಕರಾಗಿ ಇವರನ್ನೇ ಯಾಕೆ ಆರಿಸಿದರು ಎನ್ನುವುದನ್ನು ಕೂಡಾ ನೋಡಬೇಕಾಗುತ್ತದೆ.
ಆ ಜಾತಿಗಳಲ್ಲಿ ಬೇರೆ ನಾಯಕರಿರಲಿಲ್ಲವೇ? ಜಾತಿ ರಾಜಕಾರಣದ ಒಳಿತು-ಕೆಡುಕಗಳ ವಿಶ್ಲೇಷಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಬಹಳ ಸೂಕ್ಷ್ಮವಾಗಿ ರಾಜಕಾರಣ ಗಮನಿಸುವ ಸಮುದಾಯ ಒಬ್ಬ ವ್ಯಕ್ತಿಯಲ್ಲಿರುವ ನಾಯಕತ್ವದ ಲಕ್ಷಣಗಳ ಆಧಾರದಲ್ಲಿಯೇ ಆತನನ್ನು ತನ್ನ ನಾಯಕನಾಗಿ ಆರಿಸಿಕೊಳ್ಳುತ್ತದೆ.
ಇದರಿಂದಾಗಿಯೇ ಜಾತಿಯವರು ಗುರುತಿಸುವ ಮಟ್ಟಕ್ಕೆ ಬರುವವರೆಗೆ ಆತ ಸ್ವಂತ ಶಕ್ತಿಯಿಂದಲೇ ಬೆಳೆಯಬೇಕಾಗುತ್ತದೆ. ಯಡಿಯೂರಪ್ಪನವರನ್ನು ಲಿಂಗಾಯತ ಸಮುದಾಯ ಬೆಂಬಲಿಸುತ್ತಿರುವುದು ನಿಜ.
ಆದರೆ ಲಿಂಗಾಯತ ನಾಯಕರಾಗಿಯೇ ಅವರು ರಾಜಕೀಯ ಪ್ರಾರಂಭಿಸಿದ್ದಲ್ಲ ಎನ್ನುವುದು ಗಮನಾರ್ಹ. ಅವರಿಗೆ ಲಿಂಗಾಯತ ಬೆಂಬಲ ಇಷ್ಟೊಂದು ಆಕ್ರಮಣಕಾರಿ ರೂಪದಲ್ಲಿ ವ್ಯಕ್ತವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿಯವರ `ವಚನ ಭ್ರಷ್ಟತೆ~ಯ ಪ್ರಕರಣದ ನಂತರ.
ಇನ್ನು ಸ್ವಲ್ಪ ಹಿಂದಕ್ಕೆ ಹೋಗುವುದಾದರೆ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಬೇಕೆಂಬ ಕಾರ‌್ಯತಂತ್ರವನ್ನು ಬಿಜೆಪಿ ಹೂಡಿದ ನಂತರ. ತನ್ನ ರಾಜಕೀಯ ಜೀವನವನ್ನು ರೈತರು,ಕೂಲಿಕಾರ್ಮಿಕರು, ಜೀತದಾಳುಗಳ ಪರ ಹೋರಾಟದ ಮೂಲಕ ಪ್ರಾರಂಭಿಸಿದ್ದ ಯಡಿಯೂರಪ್ಪ ಹೊಸ ಬೆಳವಣಿಗೆಯಿಂದಾಗಿ ಕ್ರಮೇಣ ಜಾತಿಯ ಸುಳಿಗೆ ಸಿಕ್ಕಿ ಅದಕ್ಕೆ ಶರಣಾಗಿಬಿಟ್ಟರು.
ಮಠಗಳ ಅಸ್ತಿತ್ವದಿಂದಾಗಿ ಉಳಿದ ಜಾತಿಗಳಿಗಿಂತ ಹೆಚ್ಚು ಸಂಘಟಿತ ಮತ್ತು ವ್ಯಾಪಕವಾದ ಸಾಂಸ್ಥಿಕ ರೂಪ ಲಿಂಗಾಯತ ಜಾತಿಗೆ ಇರುವುದರಿಂದ ಬೇಗ ಆ ಜಾತಿಯ ರಾಜಕೀಯ ನಾಯಕರು ಅದರ ಹಿಡಿತಕ್ಕೆ ಬಂದುಬಿಡುತ್ತಾರೆ. ಯಾಕೆಂದರೆ ಅದರಿಂದ ಇಬ್ಬರಿಗೂ ಲಾಭ ಇದೆ. 
ಬೀದಿಗೊಬ್ಬ ಲೋಕಪಾಲರನ್ನು ನೇಮಿಸಿದರೂ, ಮನೆಗೊಬ್ಬರಂತೆ ಸಮಾಜ ಸುಧಾರಕರು ಹುಟ್ಟಿದರೂ ಸದ್ಯದ ರಾಜಕಾರಣ ಹಣ ಮತ್ತು ಜಾತಿಯ ನಿಯಂತ್ರಣದಿಂದ ಸಂಪೂರ್ಣ ಬಿಡುಗಡೆ ಪಡೆಯುತ್ತದೆ ಎಂದು ನಿರೀಕ್ಷಿಸಲಾಗದು.
ಯಡಿಯೂರಪ್ಪನವರ ಸಮಸ್ಯೆ ಏನೆಂದರೆ ಅನಾಯಾಸವಾಗಿ ಒದಗಿಬಂದ ಜಾತಿ ಬೆಂಬಲವೂ ಅವರಲ್ಲಿ ಸುರಕ್ಷತೆಯ ಭಾವ ಮೂಡಿಸದಿರುವುದು. ಹೆಚ್ಚು ದುಡ್ಡಿಲ್ಲದೆ ಮಾಡಿದ ಹಳೆಯ ರಾಜಕೀಯ ಜೀವನದ ಅನುಭವವನ್ನು ಅವರು ಮರೆತೇ ಬಿಟ್ಟರು.
ಒಂದು ಸಾಮಾನ್ಯ ಅಕ್ಕಿಗಿರಣಿಯಲ್ಲಿ ಕಾರಕೂನನಾಗಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ರಾಜಕೀಯದಲ್ಲಿ ಬೆಳೆದದ್ದು ಕೇವಲ ಹಣದ ಬಲದಿಂದ ಖಂಡಿತ ಅಲ್ಲ. ಆದರೆ ಮುಖ್ಯಮಂತ್ರಿಯಾದ ತಕ್ಷಣ ದುಡ್ಡಿಲ್ಲದೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಲಾರೆ ಎಂದು ಅವರು ವಿಲವಿಲನೆ ಒದ್ದಾಡಿಬಿಟ್ಟರು.
ಆಗ ಅವರಿಗೆ ಜತೆಯಾದವರು ಬಳ್ಳಾರಿಯ ಗಣಿಲೂಟಿಕೋರರು. ಪ್ರಾರಂಭದ ಹಂತದಲ್ಲಿ ತಂದುಕೊಟ್ಟ ಗೆಲುವಿನಿಂದಾಗಿ (ಆಪರೇಷನ್ ಕಮಲ) ಈ ಸಂಬಂಧ ಬಲಗೊಳ್ಳುತ್ತಾ ಹೋಯಿತು. ಸ್ನೇಹಿತರಂತೆ ಸಮೀಪ ಬಂದ ಗಣಿ ಉದ್ಯಮಿಗಳು ಯಡಿಯೂರಪ್ಪನವರಿಗೆ  ಕ್ರಮೇಣ ತಮಗೆ ಪೈಪೋಟಿ ನೀಡುವವರಂತೆ, ಕೊನೆಗೆ ರಾಜಕೀಯ ಶತ್ರುಗಳಂತೆ ಕಾಣಿಸತೊಡಗಿದರು.
ಅವರಿಗೆ ಕಂಡ ಕೊನೆಯ ರೂಪವೇ ನಿಜವಾದುದು. ಇದಾದ ನಂತರವೂ ಯಡಿಯೂರಪ್ಪನವರು ಹಣಬಲದ ರಾಜಕೀಯಕ್ಕೆ ವಿರುದ್ಧ ವಾಗಿ ಜನಬಲದ ರಾಜಕಾರಣ ಮಾಡಲು ಹೋಗದೆ ಗಣಿಲೂಟಿಕೋರರನ್ನೇ ಮಾದರಿಯಾಗಿ ಸ್ವೀಕರಿಸಿದರು.
ಕಾನೂನು, ನೀತಿ-ನಿಯಮಾವಳಿಗಳನ್ನು ಉಲ್ಲಂಘಿಸಿ ಯಡಿಯೂರಪ್ಪ ಮತ್ತು ಕುಟುಂಬ ನಡೆಸಿದ್ದಾರೆನ್ನಲಾದ ಎಲ್ಲ ಹಗರಣಗಳ ವಿನ್ಯಾಸ ಅದೇ ಬಳ್ಳಾರಿ ಮಾದರಿಯದ್ದು.
ತರಕಾರಿ ಮಾರುವವರಿಂದ ಹಿಡಿದು ವಿಮಾನ ಮಾರುವವನವರೆಗೆ ಎಲ್ಲರೂ ನಡೆಸುವುದು ವ್ಯಾಪಾರ, ಸಮಾಜ ಸೇವೆ ಅಲ್ಲ. ರಾಜಕಾರಣ ಕೂಡಾ ಅವರಿಗೆ ವ್ಯಾಪಾರವೃದ್ಧಿಯ ಇನ್ನೊಂದು ಮಾರ್ಗ ಮಾತ್ರ. ಈ ಸರಳ ಸತ್ಯವನ್ನು ಅರಿಯದ ಯಡಿಯೂರಪ್ಪ ಆಗಲೇ ಹುಲಿ ಮೇಲೆ ಸವಾರಿ ಹೊರಟಾಗಿತ್ತು, ಕೆಳಗಿಳಿಯುವಂತಿರಲಿಲ್ಲ.

ಅದು ಹೊತ್ತುಕೊಂಡು ಹೋದಲ್ಲಿಗೆ ಹೋದರು. ಕೊನೆಗೆ ಅವರಂತೆ ಇವರೂ ಜೈಲು ಸೇರಿದ್ದಾರೆ. ಯಡಿಯೂರಪ್ಪನವರೊಬ್ಬರೇ ರಾಜ್ಯ ಕಂಡ ಜಾತಿವಾದಿ ಮತ್ತು ಭ್ರಷ್ಟ ಮುಖ್ಯಮಂತ್ರಿಯೆಂದು ಈಗಲೇ ಅಂತಿಮ ನಿರ್ಧಾರಕ್ಕೆ ಬರಲಾಗದು.

ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಈವರೆಗೆ ಕೂತವರಲ್ಲಿ ಯಾರೂ ಇಂತಹ ಆರೋಪಗಳಿಂದ ಮುಕ್ತರಾಗಿಲ್ಲ. ಉಳಿದವರ ಭ್ರಷ್ಟಾಚಾರಕ್ಕೆ ಪುರಾವೆಗಳು ಸಿಕ್ಕಿಲ್ಲ ಅಷ್ಟೆ, ಅದಕ್ಕೆ ಅವರು ನಿರಪರಾಧಿಗಳು.
ಆದರೆ ಯಡಿಯೂರಪ್ಪನವರಷ್ಟು ದಡ್ಡತನದಿಂದ ಬಹಿರಂಗವಾಗಿ ಜಾತಿವಾದ ಮಾಡಿದವರು ಮತ್ತು ಮೇಲ್ನೋಟದಲ್ಲಿಯೇ ಸಾಬೀತಾಗುವಂತೆ ಕಾಣುತ್ತಿರುವ ಭ್ರಷ್ಟಾಚಾರದಲ್ಲಿ ತೊಡಗಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ.
ವ್ಯತ್ಯಾಸ ಇಷ್ಟೆ: ಒಬ್ಬ ಜಾಣ ರಾಜಕಾರಣಿ ಹಣ ಮತ್ತು ದುಡ್ಡನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾನೆ, ದಡ್ಡ ರಾಜಕಾರಣಿಯನ್ನು ಇವೆರಡೂ ಬಳಸಿಕೊಳ್ಳುತ್ತವೆ.
ಬಿ.ಎಸ್.ಯಡಿಯೂರಪ್ಪನವರ ಕಳೆದ ಮೂರುವರ್ಷಗಳ ಆಡಳಿತವನ್ನು ನೋಡಿದರೆ ಅವರನ್ನು ಜಾಣ ರಾಜಕಾರಣಿ ಎಂದು ಹೇಳಲಾಗುವುದಿಲ್ಲ. ಅವರು ಜಾಣರಾಗಿದ್ದರೆ `ಆಪರೇಷನ್ ಕಮಲ~ದಂತಹ ಅನೈತಿಕ ಮತ್ತು ದುರಹಂಕಾರಿ ರಾಜಕಾರಣವನ್ನು ಮಾಡಲು ಹೋಗುತ್ತಿರಲಿಲ್ಲ.

ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ತಮ್ಮ ಸರ್ಕಾರವನ್ನು ಉರುಳಿಸಲು ಹೊರಟರೂ ಅದನ್ನು ರಾಜಕೀಯ ಹೋರಾಟದ ಮೂಲಕವೇ ಎದುರಿಸುತ್ತಿದ್ದರು. ನೈತಿಕವಾದ ಅಂತಹ ಹೋರಾಟವನ್ನು ರಾಜ್ಯದ ಜನ ಕೂಡಾ ಬೆಂಬಲಿಸುತ್ತಿದ್ದರು.
ಇದೇ ಬಿಜೆಪಿಯ ಕಾಟ ತಾಳಲಾಗದೆ 1985ರಲ್ಲಿ ಮಧ್ಯಂತರ ಚುನಾವಣೆ ಘೋಷಿಸಿದ್ದ ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯ ಜನ ಬೆಂಬಲಿಸಲಿಲ್ಲವೇ, ಹಾಗೆ. ಆದರೆ ಯಡಿಯೂರಪ್ಪನವರು ಗಣಿಲೂಟಿಕೋರರು ಹಾಕಿದ ಬೋನಿಗೆ ಬಿದ್ದು ಬಿಟ್ಟರು.
ಅವರು ಜಾಣರಾಗಿದ್ದರೆ ತನಗಿರುವ ಅಧಿಕಾರದ ಬಲದಿಂದ (ಬೇಕಿದ್ದರೆ ಜಾತಿಬಲವನ್ನೂ ಸೇರಿಸಿ) ಯಾವಾಗಲೋ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಬಹುದಿತ್ತು. ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಕೇವಲ ರಾಜಕೀಯ ಗೂಂಡಾಗಿರಿಯಿಂದ ಕಟ್ಟಿದ ಗಣಿ ಸಾಮ್ರಾಜ್ಯದ ಬುನಾದಿ ಎಷ್ಟೊಂದು ದುರ್ಬಲ ಎನ್ನುವುದು ಈಗ  ಬಯಲಿಗೆ ಬರುತ್ತಿದೆ.
ಆರ್.ಗುಂಡೂರಾವ್ ಅವರಿಂದ ಹಿಡಿದು ಎಚ್.ಡಿ.ಕುಮಾರಸ್ವಾಮಿವರೆಗೆ ಕನಿಷ್ಠ ಹತ್ತು ಮುಖ್ಯಮಂತ್ರಿಗಳ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿದ್ದ ಯಡಿಯೂರಪ್ಪ  ಭ್ರಷ್ಟ ಗಣಿ ಉದ್ಯಮಿಗಳನ್ನು ಎದುರಿಸಲಾಗದೆ ಅವರ ಎದುರು ಶರಣಾಗಿ ಬಿಟ್ಟರು.
ಅಷ್ಟು ಮಾತ್ರವಲ್ಲ ಅವರಂತೆಯೇ ಆಗಲು ಹೋಗಿ ಗಣಿಧಣಿಗಳ ಕೆಟ್ಟತನ-ದುರಾಸೆಗಳನ್ನೆಲ್ಲ ಮೈಗೂಡಿಸಿಕೊಂಡರು. ಯಡಿಯೂರಪ್ಪನವರು ಇನ್ನಷ್ಟು ಜಾಣರಾಗಿದ್ದರೆ ತನ್ನ ಲಾಲಸಿ ಮಕ್ಕಳಿಗೆ ಬುದ್ಧಿ ಹೇಳಿ ಅಧಿಕಾರದ ಪ್ರಭಾವಳಿಯಿಂದ ದೂರ ಇಡುತ್ತಿದ್ದರು.
ಹಾಗೆ ಮಾಡಿದ್ದರೆ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಈಗಿನಂತೆ ಕತ್ತಲು ಕವಿಯುತ್ತಿರಲಿಲ್ಲ. ಕನಿಷ್ಠ ತಾನು ದ್ವೇಷಿಸುವ ದೇವೇಗೌಡರ ಮಕ್ಕಳು ಹಿಡಿದ ದಾರಿಯನ್ನಾದರೂ ನೋಡಿ ಎಚ್ಚೆತ್ತುಕೊಳ್ಳಬಹುದಿತ್ತು.
ಯಡಿಯೂರಪ್ಪನವರು ಅನುಭವದಿಂದ ಪಾಠ ಕಲಿಯುವ ಕಾಲ ಮೀರಿ ಹೋಗಿದೆ. ಅವರ ಅನುಭವದಿಂದ ಉಳಿದ ರಾಜಕಾರಣಿಗಳಾದರೂ ಪಾಠ ಕಲಿತರೆ ಜೈಲು ಪಾಲಾಗುವ ಅವಮಾನದಿಂದ  ತಪ್ಪಿಸಿಕೊಳ್ಳಬಹುದು.

ದುಡ್ಡು ಮತ್ತು ಜಾತಿ ಮುಂದೆಯೂ ರಾಜಕಾರಣದ ಅನಿವಾರ‌್ಯ ಸಂಕಟಗಳಾಗಿಯೇ ಮುಂದುವರಿಯಲಿರುವ ಕಾರಣ ಇಂತಹ ಪ್ರಕರಣಗಳು ಪುನರಾವರ್ತನೆಗೊಂಡರೆ ಅಚ್ಚರಿ ಇಲ್ಲ. ಈ ಸಂಕಟಗಳನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಈ ಸಮಯದಲ್ಲಿ ನೆನೆಪಾಗುತ್ತಾರೆ.

ತನಗಿಲ್ಲದ ಜಾತಿ ಬಲವನ್ನು ಜಾತಿ ರಾಜಕಾರಣದ ಮೂಲಕ ಮತ್ತು ತನ್ನಲ್ಲಿಲ್ಲದ ಹಣವನ್ನು ಶ್ರಿಮಂತರ ಸ್ನೇಹದ ಮೂಲಕ ಪಡೆದುಕೊಂಡು ರಾಜಕಾರಣ ಮಾಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು.
ಇವೆರಡೂ ತಮ್ಮನ್ನು ಬಳಸಿಕೊಳ್ಳಲು ಅವರು ಬಿಡಲಿಲ್ಲ, ಅವುಗಳನ್ನು ಬಳಸಿಕೊಂಡು ರಾಜಕಾರಣ ಮಾಡಿದರು. ಹೋಗ್ಲಿ ಬಿಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಅರಸು ವಿಷಯ ಯಾಕೆ?