Monday, January 23, 2012

16 ಜನವರಿ 2012 ಅನಾವರಣ ಅಂಕಣದ ಬಗ್ಗೆ ಪ್ರತಿಕ್ರಿಯೆ -2

ಸ್ವಾಮಿ ವಿವೇಕಾನಂದರು ಭಾರತ ಕಂಡ ಅಪ್ರತಿಮ ಸನ್ಯಾಸಿಗಳಲ್ಲಿ ಒಬ್ಬರು. ತಮ್ಮ ಅಪಾರವಾದ ಪಾಂಡಿತ್ಯ ಹಾಗೂ ವಿಚಾರಲಹರಿಯಿಂದ ಪ್ರಪಂಚದ ಗಮನವನ್ನೇ ತಮ್ಮಡೆಗೆ ಸೆಳೆದುಕೊಂಡವರು. ದಾಸ್ಯದ ಸಂಕೋಲೆಯಲ್ಲಿ ಮುಳಗಿದ್ದ ಭಾರತೀಯರನ್ನು ತಮ್ಮ ಛಾಟಿ ಏಟಿನಂತಹ ಮಾತುಗಳಿಂದ ಬಡಿದೆಬ್ಬಿಸಿದ ರಾಷ್ಟ್ರ ಪುರುಷ.
 
ಹಿಂದೂ ಧರ್ಮವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿ ಕಾಲಕ್ರಮೇಣ ಸೇರಿಹೋಗಿದ್ದ ಮೌಢ್ಯತೆ ಹಾಗೂ ಜಾಡ್ಯತೆ ಎಂಬ ರೋಗಗಳಿಗೆ ಕಠಿಣ ಔಷಧಿಯನ್ನು ಕೊಟ್ಟು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ವೈದ್ಯರು. ಹಿಂದು, ಮುಸ್ಲಿಂ, ಕ್ರಿಸ್ಚಿಯನ್ ಎಲ್ಲರನ್ನು ಒಟ್ಟಾಗಿ-ಸಮನಾಗಿ ಕಂಡ ರಾಷ್ಟ್ಟ್ರಪುರುಷರಿವರು
.
 
ಇಂತಹ ಮಹಾನ್ಸಂತನ 150ನೇ ವರ್ಷದ ಜಯಂತೋತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಬುದ್ಧ ಅಂಕಣಕಾರರಾದ ಶ್ರೀಯುತ ದಿನೇಶ್ ಅಮಿನ್ಮಟ್ಟು ಅವರ ವಿವೇಕಾನಂದರನ್ನು ನಕಾರಾತ್ಮಕವಾಗಿ ಬಿಂಬಿಸುವ ಲೇಖನ ಸಮಯೋಚಿತವಲ್ಲ. ಈ ಲೇಖನದಲ್ಲಿ facts ಗಳೆಂದು ಉಲ್ಲೇಖಿಸಿದ ಸಂಗತಿಗಳ ಬಗ್ಗೆ ಎಷ್ಟು ಆಕ್ಷೇಪವಿದೆಯೋ ಅಷ್ಟೇ ಆಕ್ಷೇಪ ಲೇಖನದ ಧ್ವನಿ ಮತ್ತು ಧಾಟಿಯ ಮೇಲೂ ಇದೆ.

ಸ್ವಾಮಿ ವಿವೇಕಾನಂದರ ವಿಚಾರಗಳ ಮೇಲೆ ಗಂಭೀರವಾಗಿ ಚರ್ಚಿಸುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಇಲ್ಲಿ ಹಗುರವಾಗಿ ಮಾತನಾಡಲಾಗಿದೆ. ವಿವೇಕಾನಂದರ ಸಾವಿನ 110 ವರ್ಷಗಳ ನಂತರ ಈ ರೀತಿಯ ಅವರ ವೈಯಕ್ತಿಕ ಜೀವನದ ಬಗೆಗಿನ ಈ ರೀತಿಯ ವಿಶ್ಲೇಷಣೆ ಸರಿಯಾದುದಲ್ಲ. 110 ವರ್ಪಗಳ ದೂರದಿಂದ ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನವನ್ನು ಟೀಕಿಸುವುದು ಯುಕ್ತವಲ್ಲ.
ಈ ಲೇಖನದಲ್ಲಿ ವಿವೇಕಾನಂದರನ್ನು ಒಬ್ಬ ದಡ್ಡನಂತೆ, ಸದಾ ಹಾಸಿಗೆ ಹಿಡಿದಿರುವ ರೋಗಿಯಂತೆ ಹಾಗೂ ಹಿಂದೂ ಧರ್ಮವನ್ನು ಕಟುವಾಗಿ ವಿರೋಧಿಸುತ್ತಿದ್ದ ವ್ಯಕ್ತಿಯಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಇದು ವಾಸ್ತವಿಕತೆಯಿಂದ ಬಹು ದೂರವಾದಂತಹ ಮಾತುಗಳು. Swami Vivekananda on himself ಎಂಬ ಪುಸ್ತಕದಲ್ಲಿ ವಿವೇಕಾನಂದರೇ ಅವರ ವೈಯಕ್ತಿಕ ಜೀವನದ ಬಗ್ಗೆ ಹಾಗು ಅವರ ಅನಿಸಿಕೆಗಳ ಬಗ್ಗೆ ಬರೆದಿದ್ದಾರೆ. ಸ್ವಾಮಿ ವಿವೇಕಾನಂದರ ವೈಯಕ್ತಿಕ ಜೀವನವನ್ನು ಅಥರ್ೈಸಿಕೊಳ್ಳಲು ಬೇರೆ ಯಾರೋ ಬರೆದ ಪುಸ್ತಕಕ್ಕಿಂತ ವಿವೇಕಾನಂದರು ಸ್ವತಃ ಬರೆದಿರುವ ಪುಸ್ತಕಗಳನ್ನು ಓದುವುದು ಒಳ್ಳೆಯದು.
ಸ್ವಾಮಿ ವಿವೇಕಾನಂದರು ಶಿಕಾಗೋ ಧರ್ಮ ಸಮ್ಮೇಳನಕ್ಕೆ ಹಿಂದೂ ಧರ್ಮದ ಬ್ರಾಂಡ್ ಅಂಬಾಸಿಡರ್ ಆಗಿಯೇ ಹೋಗಿದ್ದರು ಎಂಬ ವಿಷಯವನ್ನು ಲೇಖಕರು ಅರ್ಥೈಸಿಕೊಳ್ಳಬೇಕು. ಹಿಂದೂ ಧರ್ಮದಲ್ಲಿನ ತಪ್ಪುಗಳನ್ನು ಎತ್ತಿತೋರಿಸಿದ ಮಾತ್ರಕ್ಕೆ ಅವರನ್ನು ಇಡೀ ಹಿಂದೂ ಧರ್ಮದ ವಿರೋಧಿ ಎಂದು ಹೇಳುವುದು ಎಷ್ಟು ಸರಿ? ಹಾಗಿದ್ದಲ್ಲಿ ಧರ್ಮದಲ್ಲಿ ಸೇರಿದ್ದ ಮೌಢ್ಯತೆಗಳನ್ನು ತಿದ್ದಿದ ರಾಜಾರಾಮಮೋಹನರಾಯ್, ಸ್ವಾಮಿ ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಶ್ರೀ ಅರವಿಂದರು, ಜ್ಯೋತಿಬಾ ಫೂಲೇ ಎಲ್ಲರನ್ನು ಹಿಂದೂ ಧರ್ಮದ ವಿರೋಧಿಗಳು ಎನ್ನಲು ಸಾಧ್ಯವೇ? ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದರೇ ಹೊರತು ಹಿಂದೂ ಧರ್ಮದ ವಿರೋಧಿಯಾಗಿರಲಿಲ್ಲ. ಸ್ವಾಮಿ ವಿವೇಕಾನಂದರ ಜೀವನದ ಕೊಡುಗೆಯ ಬಗ್ಗೆ ಜವಹರ್ಲಾಲ್ ನೆಹರು ತಮ್ಮ ಪುಸ್ತಕ The Discovery of India ದಲ್ಲಿ ಹೀಗೆ ಬರೆದಿದ್ದಾರೆ He came as a tonic to the depressed and demoralized Hindu mind and gave it self-reliance and some roots in the past..
ಅಪ್ರತಿಮ ಗಾಂಧೀವಾದಿ, ರಾಷ್ಟ್ರ ಚಿಂತಕ ಚಕ್ರವರ್ತಿ ರಾಜಗೋಪಾಲಚಾರಿಯವರು ವಿವೇಕಾನಂದರ ಕೊಡುಗೆಯನ್ನು ಹೀಗೆ ವರ್ಣಿಸುತ್ತಾರೆ Swami Vivekananda saved Hinduism and saved India. But for him, we would have lost our religion ad would not have gained our freedom..
ಅಷ್ಟೇ ಅಲ್ಲ, ಭಾರತ ಕಂಡ ಅಪ್ರತಿಮ ವಿಚಾರವಾದಿ ಲೇಖಕ ರಾಮ್ಧಾರಿಸಿಂಗ್ ದಿನಕರ್ ಹಿಂದುಗಳಿಗೆ ಈ ರೀತಿಯಾಗಿ ಕಿವಿ ಮಾತನ್ನು ಹೇಳುತ್ತಾರೆ It is a solemn duty of the Hindu race that as long as it survives, it must keep the memory of Vivekananda with the same regard, as with which it remembers Vyasa and Valmiki..
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದ ಭಾಗಗಳನಷ್ಟೇ ಲೇಖನದಲ್ಲಿ ಉದ್ದರಿಸಿ, ಅವರು ಸನಾತನ ಹಿಂದೂ ಧರ್ಮಕ್ಕೇ ವಿರೋಧಿಗಳಾಗಿದ್ದರೆಂಬ ತಪ್ಪು ಕಲ್ಪನೆ ಮೂಡುವಂತೆ ಹಾಗೂ ಇವತ್ತಿನ ಸೆಕ್ಯೂಲರ್ ವಾದಿಗಳ ಸಾಲಿನಲ್ಲೇ ವಿವೇಕಾನಂದರನ್ನು ತರಲು ಪ್ರಯತ್ನಿಸಿರುವುದು ಆಕ್ಷೇಪಣೀಯ.
ವಿವೇಕಾನಂದರು ಎಷ್ಟರ ಮಟ್ಟಿಗೆ ಸಾಮಾಜಿಕ ಸುಧಾರಕರೋ, ಅಷ್ಟೇ ಮಟ್ಟಿಗೆ ಧಾರ್ಮಕ ಸುಧಾರಕರೂ ಹೌದು. ಆದ್ದರಿಂದಲೇ ಅವರು ತಾವು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಸಂಸ್ಥೆಯ ಧ್ಯೇಯವಾಕ್ಯವಾಗಿ ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯಚ ಎಂಬುದಾಗಿ ಪ್ರತಿಪಾದಿಸಿದ್ದು.
 
ಸಮಾಜ ಸುಧಾರಣೆ ಕೆಲಸದಲ್ಲಿ ಎಷ್ಟು ನಂಬಿಕೆಯಿತ್ತೋ ಅಷ್ಟೇ ನಂಬಿಕೆ ಸನಾತನ ಧರ್ಮದ ಆಧ್ಯಾತ್ಮಿಕ ಸಾಧನೆಗಳಾದ ಪೂಜೆ, ಪುನಸ್ಕಾರ ಭಜನೆಗಳ ಮೇಲೂ ಅವರಿಗೆ ಇತ್ತು. ಒಂದು ವೇಳೆ ವಿವೇಕಾನಂದರಿಗೆ ಇದರಲೆಲ್ಲಾ ನಂಬಿಕೆ ಇಲ್ಲದಿದ್ದರೆ ರಾಮಕೃಷ್ಟ ಪರಮಹಂಸರಂತಹ ಕರ್ಮಠ ಬ್ರಾಹ್ಮಣನನ್ನು ಅವರು ತಮ್ಮ ಗುರುವಾಗಿ ಒಪ್ಪುತ್ತಿರಲೇ ಇಲ್ಲ. ಜಾತಿ ಪದ್ದತಿಯನ್ನು ವಿರೋಧಿಸಿ ಎಲ್ಲರೊಡನೆ ಬೆರೆಯುತ್ತಿದ್ದ ಸ್ವಾಮಿ ವಿವೇಕಾನಂದರನ್ನು ಆಗಿನ ಕಾಲದಲ್ಲೂ ಕೆಲ ಜನ ಟೀಕಿಸಿದ್ದು ನಿಜ. ಇದು ಟೀಕಿಸಿದವರ ಸಂಕುಚಿತ ಭಾವನೆಯನ್ನು ತೋರಿಸುತ್ತದೆಯೇ ವಿನಃ ಸ್ವಾಮಿ ವಿವೇಕಾನಂದರ ವಿಶಾಲ ಹೃದಯವನ್ನು ಪ್ರತಿಬಿಂಬಿಸುವುದಿಲ್ಲ.
150ನೇ ವರ್ಷದ ಜಯಂತ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ವಿವೇಕಾನಂದರ ಮನುಷ್ಯ ಮುಖವನ್ನು ತೋರಿಸುವ ನೆಪದಲ್ಲಿ ಲೇಖಕರು ವಿವೇಕಾನಂದರ ಮಹಾನ್ ವ್ಯಕ್ತಿತ್ವವನ್ನು ಕುಬ್ಜಗೊಳಿಸಿರುವುದು ಖೇದನೀಯ.
 
ವಿವೇಕಾನಂದರು ನಮ್ಮಂತಯೇ ಹುಟ್ಟಿ, ನಮ್ಮಂತೆಯೇ ನರಳಿ ತೀರಿಹೋಗಿದ್ದರೂ, ಅವರ ಸಾಧನೆ ಮಾತ್ರ ಅಸಾಮಾನ್ಯ. ಇಂತಹ ಅಸಾಮಾನ್ಯ ವ್ಯಕ್ತಿಯನ್ನು ದೇವರಂತೆ ಕಂಡು ಪೂಜಿಸಿ ಅದರಿಂದ ಪ್ರೇರಣೆಯನ್ನು ಪಡೆಯುವುದರಲ್ಲಿ ತಪ್ಪೇನಿದೆ? ಕೇವಲ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಎಲ್ಲ ವಸ್ತುಗಳಲ್ಲೂ ದೇವರನ್ನು ಕಾಣುವುದು ಈ ನೆಲದ ಸಂಸ್ಕೃತಿ. ಇದನ್ನು ಲೇಖಕರು ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ.
ವಿವೇಕಾನಂದರ ವಿವೇಕವನ್ನು ಪರೀಕ್ಷೆಯ ಅಂಕಗಳಲ್ಲಿ ಅಳೆಯುವುದು ಒಂದು ಬಾಲಿಶ ಪ್ರಯತ್ನ. ವಿವೇಕಾನಂದರ ಬಗ್ಗೆ ಅವರ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ: ಹೇಷ್ಟಿ ಹೀಗೆ ಹೇಳುತ್ತಾರೆ : Narendra is a real genius. I have traveled far and wide, but have not yet come across a lad of his talents and possibilities even among the philosophical students in the German universities. He is bound to make his mark in life”. ಇದಕ್ಕಿಂತ Authentic Certification ಬೇಕಿದೆಯೇ?
ಈಶ್ವರ ಚಂದ್ರ ವಿದ್ಯಾಸಾಗರರಿಗೆ ವಿವೇಕಾನಂದರ ಬಗ್ಗೆ ಅಪಾರ ಗೌರವವಿತ್ತು. ಇದನ್ನು ಸ್ವತಃ ವಿವೇಕಾನಂದರೇ ಸಹೋದರಿ ನಿವೇದಿತಾರಿಗೆ ಹಲವು ಬಾರಿ ಪ್ರಸ್ತಾಪಿಸಿದ್ದನ್ನು ನಿವೇದಿತಾರೇ ಅವರ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ವಿವೇಕಾನಂದರು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸದೇ ಜಾರಿಕೊಳ್ಳಲಿಲ್ಲ. ಸನ್ಯಾಸದ ಸೆಳೆತದಿಂದಾಗಿ ಹಾಗೂ ಯಾವುದೇ ಸಾಂಸಾರಿಕ ಬಂಧನದ ಅಪೇಕ್ಷೆಯಿಲ್ಲದೇ ಅವರು ಸಂಸಾರದಿಂದ ಹೊರ ನಡೆದರೇ ವಿನಃ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದಲ್ಲ. ತಾನೇಕೇ ಸನ್ಯಾಸಿಯಾದೇ ಎಂಬುದನ್ನು ವಿವೇಕಾನಂದರೇ ಸ್ವತಃ ಹೀಗೆ ಬರೆದುಕೊಂಡಿದ್ದಾರೆ I remember one of the lessons : “For the good of a village, a man ought to give up his family; for the good of a country, he ought to give up his village; for the good of the humanity, he may give up his country; for the good of the world, everything”.
ವಿವೇಕಾನಂದರ ಯಾವುದೇ ಛಾಯಾ ಚಿತ್ರವನ್ನು ನೋಡಿದರೂ ಅದರಲ್ಲಿ ಅವರು ಲೇಖಕರು ಭಾವಿಸಿರುವಂತೆ ಹಾಸಿಗೆ ಹಿಡಿದ ರೋಗಿಯಂತೆ ಕಾಣುವುದಿಲ್ಲ.
ದೃಷ್ಟಿದೋಷವಿಲ್ಲದೇ ನೋಡಿದವರಿಗೆಲ್ಲಾ ಅವರ ವಿಷಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತವಾದ ಕಣ್ಣುಗಳೇಕಾಣುತ್ತವೆ. ವಿವೇಕಾನಂದರಿಗೆ ಸಾಮಾನ್ಯ ಮನುಷ್ಯರಿಗೆ ಬರುವಂತಹ ಕೆಲವು ಕಾಯಿಲೆಗಳು ಬಂದಿದ್ದು ನಿಜ. ನಿರಂತರ ಪ್ರವಾಸ-ಪ್ರವಚನ ಹಾಗೂ ಅವಿಶ್ರಾಂತ ಚಟುವಟಿಕೆಗಳಿಗೆ ತಮ್ಮ ಶಕ್ತಿಯನ್ನು ವಿನಿಯೋಗಿಸಿದ್ದುದು ತಮ್ಮ ಶರೀರದ ಮೇಲೆ ಪರಿಣಾಮ ಬೀರಿದ್ದು ನಿಜ ಎಂದು ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ.
ವಿವೇಕಾನಂದರು ಬಳಲುತ್ತಿದ್ದರೆಂದು ಲೇಖಕರು ರೋಗಗಳ ಒಂದು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಕಾಯಂ ಚೂರ್ಣದ ಜಾಹೀರಾತಿನಂತಿರುವ ಈ ಪಟ್ಟಿಯನ್ನು ತಯಾರು ಮಾಡುವ ಬದಲು ವಿವೇಕಾನಂದರ ಮಹಾನ್ ಸಾಧನೆಯನ್ನು ಪಟ್ಟಿ ಮಾಡಿದ್ದರೆ ಇದೊಂದು ಆರೋಗ್ಯಪೂರ್ಣ ಲೇಖನವಾಗುತ್ತಿತ್ತು ಮತ್ತು ಓದುಗರಿಗೆ ಎಷ್ಟೋ ಪ್ರೇರಣೆ ದೊರಕುತ್ತಿತ್ತು.
ಮಂಡಿ ಊತದ ವಿವೇಕಾನಂದ, ತಿಂಡಿ ಪೋತ ವಿವೇಕಾನಂದ ಎಂದು ಬರೆಯುವ ಬದಲು ವಿವೇಕಾನಂದರ ಪಾಂಡಿತ್ಯದ ಬಗ್ಗೆ ವೈಚಾರಿಕತೆಯ ಬಗ್ಗೆ ವಿರ್ಮಶಿಸಿದ್ದರೆ ಒಂದು ಸಂಗ್ರಹ ಯೋಗ್ಯ ಲೇಖನವಾಗುತ್ತಿತ್ತು.
ಲೇಖಕರು ತಮ್ಮ ಲೇಖನಕೋಸ್ಕರ ಆಧಾರ ಗ್ರಂಥವಾಗಿ ಬಳಸಿರುವ The Monk as Man ಎಂಬ ಪುಸ್ತಕ ಪ್ರಕಟವಾಗುವಂತಹ ಬಹು ಹಿಂದೆಯೇ ನರಸಿಂಗ ಪ್ರಸಾದ ಸಿಲ್ ಎಂಬುವರು ಬರೆದ Swami Vivekananda – A Reassessment ಎಂಬ ಪುಸ್ತಕ ಬಂದಿತ್ತು. ಆ ಪುಸ್ತಕದಲ್ಲಿಯೂ ಸಹ ವಿವೇಕಾನಂದರನ್ನು ಇದೇ ಧ್ವನಿ ಹಾಗೂ ಧಾಟಿಯಲ್ಲಿ ಚಿತ್ರಿಸಲಾಗಿತ್ತು. ಆ ಪುಸ್ತಕವನ್ನು ಜನರು ಮರೆತು ಬಿಟ್ಟಿದ್ದಾರೆ. ಅದೇ ಪರಿಸ್ಥಿತಿ The Monk as Man ಪುಸ್ತಕಕ್ಕೂ ಅದನ್ನು ಆಧಾರಿಸಿದ ಈ ಲೇಖನಕ್ಕೂ ಬಂದರೆ ಸಂಶಯವಿಲ್ಲ.
ವಿವೇಕಾನಂದರನ್ನು ಟೀಕಿಸುವ ಜನ ಅಂದೂ ಇದ್ದರು ಈಗಲೂ ಇದ್ದಾರೆ. ಅಂದಿನ ಟೀಕಾಕಾರರ ಬಾಯನ್ನು ವಿವೇಕಾನಂದರೇ ತಮ್ಮ ಬರವಣಿಗೆಯ ಮೂಲಕ ಮುಚ್ಚಿಸಿದ್ದರು. ಅದರೆ ಇವತ್ತು ವಿವೇಕಾನಂದರು ನಮ್ಮ ಮಧ್ಯೆ ಇಲ್ಲ. ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನವನ್ನು ಟೀಕಿಸುವುದು ಸಮಂಜಸವೂ, ಸಮಯೋಚಿತವೂ ಅಲ್ಲ.
ವಿವೇಕಾನಂದರೇ ಬರೆದಿರುವ ಸನ್ಯಾಸಿ ಗೀತೆಯ ಕೆಳಗಿನ ಸಾಲುಗಳು ಅವರ ಟೀಕಾಕಾರರಿಗೆ ಎಂದೆಂದಿಗೂ ಉತ್ತರ ನೀಡುತ್ತದೆ.
ನಿಜವನರಿತವರೆಲ್ಲೊ ಕೆಲವರು ನಗುವರುಳಿದವರೆಲ್ಲರು ;
ನಿನ್ನಕಂಡರೆ ಹೇ ಮಹಾತ್ಮನೇ, ಕುರುಡರೇನನು ಬಲ್ಲರು
ವಂದನೆಗಳು,
  • ಎಲ್.ಎಸ್.ತೇಜಸ್ವಿ ಸೂರ್ಯ
ಪ್ರಿಯ ಶ್ರೀ ದಿನೇಶ್ ಅಮಿನ್ ಮಟ್ಟು ಅವರಿಗೆ,ಸಸ್ನೇಹ ವಂದನೆಗಳು. ವಿವೇಕಾನಂದರ ಬಗ್ಗೆ ನಿಮ್ಮ ‘ಅನಾವರಣ’ ಲೇಖನ ತುಂಬ ಚೆನ್ನಾಗಿದೆ.
ನನ್ನಂಥ ಅನೇಕರಿಗೆ ಗೊತ್ತಿಲ್ಲದ ಸಂಗತಿಗಳನ್ನು ತಿಳಿಸಿ ನೀವು ಉಪಕಾರ ಮಾಡಿದ್ದೀರಿ. ಹಾರ್ದಿಕ
ಧನ್ಯವಾದಗಳು.
  • ಬಿ.ಆರ್.ಲಕ್ಷ್ಮಣರಾವ್
    ವಿವೇಕಾನಂದರ ಕುರಿತ ಮಾಹಿತಿ ತುಂಬಾನೇ ಚೆನ್ನಾಗಿತ್ತು... ಪುಸ್ತಕಗಳಲ್ಲಿ ಸಾಕಷ್ಟು ಓದಿದ್ದರೂ, ಈ ರೀತಿಯ ಸಂಗತಿಗಳು ತಿಳಿದಿರಲಿಲ್ಲ... ಅಂಕಣವನ್ನ ತುಂಬಾ ಜನ ವಿರೋಧಿಸಬಹುದು.. ಆದ್ರೆ, ಸತ್ಯ ಯಾವತ್ತು ಕಹಿಯಾಗಿಯೇ ಇರುತ್ತೆ.. ಅದರಲ್ಲೂ ಸೋ ಕಾಲ್ಡ್ ಹಿಂದೂಗಳ ಪ್ರತಿಕ್ರಿಯೆ ಉಗ್ರವಾಗಿಯೇ ಇರುತ್ತೆ... ಆದೇನೇ ಆಗ್ಲಿ, ಥ್ಯಾಂಕ್ಸ್ ಟು ದಿನೇಶ್ ಅಮೀನ್ಮಟ್ಟು ಅಂಡ್ ಪ್ರಜಾವಾಣಿ..
  • ಸತೀಶ ಎ.
    ಸ್ವಾಮಿ ವಿವೇಕಾನಂದರ ಬದುಕಿನ ಒಳ ಹೊರಗಿನ ಚಿತ್ರಣ ಓದಿ ಮೂಕವಿಸ್ಮಿತನಾದೆ. ಅತೀ ಅಲ್ಪ ಅವಧಿಯಲ್ಲಿ ಅತೀವ ಸಾಧನೆಗೈದ ವಿವೇಕಾನಂದರು ಆಂತರಿಕವಾಗಿ ರೋಗರುಜಿನಗಳಿಂದ ಬಳಲುತಿದ್ದುದನ್ನು ಓದುತ್ತಿದ್ದಂತೆ ಕಣ್ಣಲ್ಲಿ ಹನಿಗೂಡಿತು. ಇದುವರೆಗೆ ತಿಳಿಯದ ಅವರ ಬದುಕಿನ ಮಾಹಿತಿಗಳು ತಮ್ಮ ಲೇಖನದಿಂದ ತಿಳಿದು ಬಂತು ಧನ್ಯವಾದ. - ಉದಯ್ ಪಡುಬಿದ್ರಿ, ಮುಂಬೈ.
ಗೆಲುವಿನ ನಡುಗೆ
ದಿನೇಶ್ ಅಮಿನಮಟ್ಟು ಅವರ ಲೇಖನ ಓದುತ್ತಾ ಹೋದಂತೆ, ಮೈ ಬೆವರಿಳಿದಿತ್ತು. ವಿವೇಕಾನಂದರ ಬಗ್ಗೆ ಕಂಡು ಕೇಳರಿಯದ ವಿಚಾರಗಳನ್ನು ತಿಳಿದಾಗ, ಅಬ್ಬಾ... ಎಂದು ಅರೆ ಕ್ಷಣ ದಿಗ್ಭ್ರಾಂತನಾದೆ. ಚಿಕ್ಕಂದಿನಿಂದ ಕೇಳುತ್ತಿದ್ದ, ನಂಬಿಕೊಂಡಿದ್ದ ಕಲ್ಪನೆಗಳಿಗೆ ಹೊಸ ಹೊಳಹು ಸಿಕ್ಕಿತು. ಲೇಖನ ಓದಿದ ನಂತರ ನನಗನಿಸಿದಿಷ್ಟು, ವ್ಯಕ್ತಿ, ಸ್ವಭಾವ, ಪ್ರವೃತ್ತಿ, ವೃತ್ತಿ ಏನಾದರೂ ಆಗಿರಬಹುದು, ಮೇಲ್ನೋಟಕ್ಕೆ ಅದು ತೀರಾ ಕ್ಷುಲ್ಲಕವೆನಿಸಬಹುದು ಆದರೆ... ಸಾಧನೆಗೆ ನೂರಾರು ವರ್ಷ ಬದುಕಬೇಕಿಲ್ಲ, ಇರುವ ಸಮಯದಲ್ಲೇ ಮಾಡಲು ಸಾಧ್ಯ. ಅದಕ್ಕೆ ರೋಗ, ರುಜಿನ, ಜಿಹ್ವಾ ಚಾಪಲ್ಯ, ವೇಷ-ಭೂಷಣ, ಪಾಂಡಿತ್ಯ ಮುಖ್ಯವಾಗದು. ಸಿಕ್ಕ ಅವಕಾಶವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಲು ಸಾಧ್ಯ ಎಂಬುದೇ ಮುಖ್ಯ. ಈ ನಿಟ್ಟಿನಲ್ಲಿ, ವಿವೇಕಾನಂದರು ಗೆದ್ದರು ಎಂದೇ ನನ್ನ ಭಾವನೆ.
  • ಗೌರಿಪುರಚಂದ್ರು, ಬೆಂಗಳೂರು
ದಿ.16 ರ ಪ್ರಜಾವಾಣಿ ದಿನಪತ್ರಿಕೆಯ ಅನಾವರಣ ಅಂಕಣದಲ್ಲಿ ಶ್ರೀ ದಿನೇಶ್ ಅಮಿನ್ಮಟ್ಟು ಅವರು ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು..... ಎಂಬ ಲೇಖನದ ಮೂಲಕ ಹಲವಾರು ಸ್ಪೋಟಕ ಮಾಹಿತಿಗಳನ್ನು ಜನರಿಗೆ ನೀಡಿದ್ದಾರೆ. ಇದುವರೆಗೆ ಕೇವಲ ಕೆಲವೇ ಜನಗಳ ಕಪಿಮುಷ್ಠಿಯಲ್ಲಿ ಕೊಳೆತು ಹೋಗುತ್ತಿದ್ದ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು , ಅವರ ನಿಜವಾದ ವ್ಯಕ್ತಿತ್ವವನ್ನು ಅಮಿನಮಟ್ಟು ನಮಗೆ ಈ ಲೇಖನ ಉದ್ದಕ್ಕೂ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮೊದಲು ಅಭಿನಂದನೆಗಳು. ಆದರೆ ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಕೆಲವು ಡೊಂಗಿ ಹಿಂದೂವಾದಿಗಳು ತಾವು ಹೇಳಿದಷ್ಟೇ ಸತ್ಯ ಎಂದು ಅರಚುತ್ತಿರುವುದು ಸಹಜ ಕ್ರಿಯೆಯಾಗಿದೆ.
ವಿವೇಕಾನಂದರು ನಮ್ಮಿಂದ ಅಗಲಿ ಬಹಳಷ್ಟು ವರ್ಷಗಳು ಸವೆದು ಹೋಗಿದ್ದರೂ ಈ ದೇಶದ ಬೂಜ್ರ್ವ ಮನಸ್ಸುಗಳು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರವನ್ನು ವಿವೇಕಾನಂದ ವಿಚಾರಗಳೆಂದು ಪ್ರಚಾರ ಮಾಡಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದಾರೆ. ಇದುವರೆಗೆ ವಿವೇಕಾನಂದರನ್ನು ಯಾವುದೋ ದೇವರ ಒಂದು ಅವತಾರ ಎಂದು ಹೇಳಿ ಆತನಂತೆ ನಮಗೆ ಬದುಕಲು ಸಾಧ್ಯವಿಲ್ಲ ಎಂಬಂತೆ ಹೇಳಿಕೊಂಡು ಬರುತ್ತಿದ್ದರು.
ಆದರೆ ಅಮಿನಮಟ್ಟು ಅವರು ವಿವೇಕಾನಂದರು ಆಕಾಶದಿಂದ ಉದುರಿ ಬಿದ್ದವರಲ್ಲ. ನಮ್ಮ ನಿಮ್ಮಂತೆ(ಶ್ರೀಸಾಮಾನ್ಯನಂತೆ) ಈ ನೆಲದಲ್ಲಿ ಹುಟ್ಟಿ , ಬಡತನ, ನೋವು, ಅವಮಾನ,ಕಷ್ಟಗಳನ್ನು ಎದುರಿಸಿ ಮಹತ್ತರವಾದುದನ್ನು ಸಾಧಿಸಿದ ಒಬ್ಬ ಛಲಗಾರ ಎಂಬಂತೆ ಚಿತ್ರಿಸಿದ್ದಾರೆ. ವಿವೇಕಾನಂದರು ದೌರ್ಬಲ್ಯಗಳೇ ಇಲ್ಲದೆ , ಆರೋಗ್ಯಪೂರ್ಣ ವ್ಯಕ್ತಿಯಾಗಿದ್ದರು ಎಂದು ಹೇಳುತ್ತ ಬರುತ್ತಿದ್ದರು.
ಗೋಬೆಲ್ಸ್ ಸಿದ್ದಾಂತವನ್ನು ಚೆನ್ನಾಗಿ ಮನಗಂಡಿರುವ ಈ ದೇಶದ ಪುರೋಹಿತಶಾಹಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಹೀಗಾಗಿ ಈ ದೇಶದಲ್ಲಿ ಸುಳ್ಳೇ ಸತ್ಯದ ಸ್ಥಾನವನ್ನು ಆಕ್ರಮಿಸಿಕೊಂಡು ಕುಳಿತಿದೆ. ಈ ದೇಶದ ಜನ ಸಾಮಾನ್ಯ ಕೂಡ ಸುಳ್ಳನ್ನೇ ಸತ್ಯವೆಂದು ನಂಬಿಮೋಸ ಹೋಗುತ್ತಿದ್ದಾನೆ.
ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು,ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು.
ನೀಚರು ಕುತಂತ್ರಿಗಳೂ ಆದ ಪುರೋಹಿರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಗವನ್ನೂ ನೋಡಿಲ್ಲ. ಮೂಡಾಚರಗಳನ್ನು ಅನುಸರಿಸಿ ಹೀನಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಶದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.
ನಿಮ್ಮ ಸುತ್ತಲಿರುವ ವಿರಾಟ್ ಸ್ವರೂಪದ ಜನತಾ ಜನರ್ಧನನೆಂಬ ದೇವರನ್ನು ಅರಿತುಕೊಳ್ಳದೆ, ನೀವು ಅದಾವ ನಿಷ್ಪ್ರಯೋಜಕ ದೇವರನ್ನು ಹುಡುಕುತ್ತಿದ್ದೀರಿ ?
ಜೀವರಲ್ಲಿ ದೇವರನ್ನು ಕಾಣು.
ನಾನೊಬ್ಬ ಶೂದ್ರ, ಒಬ್ಬ ಮ್ಲೇಚರ, ಆ ತಾಪತ್ರಯ ತಂಟೆಯೇ ನನಗಿಲ್ಲ. ನನಗೆ ಮ್ಲೇಚರ ಆಹಾರವಾದರೇನು ? ಪರಯನ ಆಹಾರವಾದರೇನು ? ಪುರೋಹಿತರು ಬರೆದ ಪುಸ್ತಕಗಳಲ್ಲಿ ಮಾತ್ರ ಜಾತಿ ಎಂಬ ಹುಟ್ಟು ಸಿಕ್ಕುವುದು, ಹೃದಯ ಪುಸ್ತಕದಲ್ಲಿ ಅಲ್ಲ. ತಮ್ಮ ಪುರಾತನರು ಅಜರ್ಿಸಿದ ಫಲವನ್ನು ಪುರೋಹಿತರು ಅನುಭವಿಸಲಿ. ನಾನು ಯಶಸ್ಸಿರುವ ನನ್ನ ಅಂತಸ್ಸಾಕ್ಷಿಯನ್ನು ಹಿಡಿದು ನಡೆಯುತ್ತೇನೆ.
ಎಂಬ ಮುಂತಾದ ಮಾತುಗಳು ಈ ಸಂದರ್ಭದಲ್ಲಿ ನೆನಪಿಗೆ ಬಂದವು. ವಿವೇಕಾನಂದರ ನಿಜವಾದ ಮುಖವನ್ನು ಅತ್ಯಂತ ಸಮರ್ಥವಾಗಿ, ಸರಳವಾಗಿ ಬರೆದ ತಮಗೆ, ಪ್ರಕಟಿಸಿದ ಪತ್ರಿಕೆಗೆ ಧನ್ಯವಾದಗಳು.
  • ವಿಶ್ವಾರಾಧ್ಯ ಸತ್ಯಂಪೇಟೆ ಶಹಾಪುರ
ದಿನೇಶ ಅಮೀನ ಮಟ್ಟುರವರು ಬರೆದ ವಿವೇಕಾನಂದ-ಪರಮಹಂಸರ ವಿವರಗಳು ಹೊಸದಾದ ಆಯಾಮವನ್ನೇನೋ ತೋರಿಸುತ್ತಿವೆ. ಆದರೆ ಈ ಎಲ್ಲ ವಿವರಗಳನ್ನು ದಾಖಲಿಸಿರುವ ವ್ಯಕ್ತಿ/ಸಂಸ್ಥೆ/ಪುಸ್ತಕದ ಮೂಲವನ್ನೂ ಒದಗಿಸಿದ್ದರೆ ಅವರ ಲೇಖನಕ್ಕೊಂದು ಪೂರ್ಣತೆ ಬರುತ್ತಿತ್ತು. ಕೇವಲ ಅವರ ಆರೋಗ್ಯ ಆಹಾರ ಪದ್ಧತಿ ಇತ್ಯಾದಿ ಅಂಶಗಳನ್ನಷ್ಟೇ ಉಲ್ಲೇಖಿಸುವ ಮೂಲಕ ಈ ಲೇಖನ ಏನನ್ನು ಹೇಳಲು ಬಯಸುತ್ತಿದೆ?
ಶಿಕಾಗೋ ಭಾಷಣದ ಸಂದರ್ಭದಲ್ಲಿ , ಮೊದಲಿಗೆ ಅಪರಿಚತರಾಗಿಯೇ , ಬಹಳ ಕಷ್ಟದಿಂದ ಪ್ರವೇಶ ಪಡೆದ ವಿವೇಕಾನಂದರು , ತದನಂತರದಲ್ಲಿ ವಿಖ್ಯಾತರಾಗಿದ್ದು ಇತಿಹಾಸ. ಆದರೆ ಆ ಸಂದರ್ಭದಲ್ಲಿ ಅವರ ಈ ಪ್ರಗತಿಯನ್ನು ಸಹಿಸದ ಕೆಲವು ವ್ಯಕ್ತಿಗಳು/ಸಂಸ್ಥೆಗಳು/ಧರ್ಮಗಳು ಅವರ ಮೇಲೆ ಕೆಸರೆರಚಲು ಪ್ರಯತ್ನಿಸಿದ್ದುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ ಇಲ್ಲಿಯವರೆಗೂ ಲಭ್ಯವಿಲ್ಲದ ಈ ಸಂಗತಿಗಳ ಮೇಲೆ ಈಗ ಒಮ್ಮೆಲೆ ಬೆಳಕು ಚೆಲ್ಲುತ್ತಿರುವದರಿಂದ , ಅಮೀನ ಮಟ್ಟುರವರು ತಮಗೆ ದೊರೆತ ದಾಖಲೆಗಳ ವಿವರಗಳನ್ನು ಹೇಳಿದರೆ , ಉಳಿದವರಿಗೂ ಈ ಚಚರ್ೆಯನ್ನು ಮುಂದುವರೆಸಲು ಅನುಕೂಲವಾದೀತು,
  • ಪುಟ್ಟು ಕುಲಕರ್ಣಿ ಹೆಗಡೆ-581 330 ಕುಮಟಾ-ಉತ್ತರ ಕನ್ನಡ
ಜನಮಾನಸವನ್ನು ರಾಷ್ಟ್ರ ನಿರ್ಮಾಣಕ್ಕೆ ಒಗ್ಗೂಡಿಸುವ ಉತ್ತಮ ಬರವಣಿಗೆಯ ಮಾದರಿ ಒದಗಿಸಿದ ದಿನೇಶ ಅಮಿನಮಟ್ಟು ಅವರ ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು..... ಶೀರ್ಷಿಕೆಯ ಅಂಕಣ ಲೇಖನ ಹಿಂದು ಧರ್ಮದ ನಿರಂತರ ಗುತ್ತಿಗೆದಾರರಿಗೆ ಅಪಥ್ಯವೆನಿಸಿದ್ದಲ್ಲಿ ಸೋಜಿಗವೆನಿಲ್ಲ. ಯುವಕರ ಚಿಂತನಾ ಕ್ರಮಕ್ಕೆ ಹೊಸ ದಿಶೆಯನ್ನೇ ಈ ಲೇಖನ ಒದಗಿಸಿ ಉಪಕರಿಸಿದೆ. ಭಾರತೀಯತೆಯ ಸಾಕಾರಕ್ಕೆ ಯಾವ ವಿದ್ವಂಸಕ ಪ್ರವೃತ್ತಿಗಳು ಅಡಚಣೆಯಾಗಿವೆಯೋ,

No comments:

Post a Comment