Monday, January 30, 2012

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು? January 30, 2012

`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. 

ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ...`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಆ ಘಟನೆ ನಡೆದ ನಂತರ 1948ರ ಜನವರಿ 21ರಂದು ದೆಹಲಿಯ ಬಿರ್ಲಾ ಭವನದಲ್ಲಿಯೇ ಗಾಂಧೀಜಿ ಹತ್ಯೆಗೆ ಮತ್ತೊಂದು ಪ್ರಯತ್ನ ನಡೆದಿತ್ತು. ಅದರಿಂದಲೂ ಅವರು ಪಾರಾಗಿದ್ದರು. ಕೊನೆಗೆ 1948ರ ಜನವರಿ 30ರಂದು ಅವರು ಸಾವಿಗೆ ಶರಣಾದರು.

ಪ್ರಾಣದ ಆಸೆ ಇಲ್ಲದ ಕೊಲೆಗಡುಕ, ಕೊಲೆ ಮಾಡುವುದನ್ನು ತಡೆಯುವುದು ಎಷ್ಟು ಕಷ್ಟವೋ, ಪ್ರಾಣದ ಆಸೆ ಇಲ್ಲದ ವ್ಯಕ್ತಿಯನ್ನು ಕೊಲೆಗಡುಕನಿಂದ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಗಾಂಧೀಜಿ ಹತ್ಯೆ ನಡೆಯುವ ಹೊತ್ತಿಗೆ  ಕೊಲೆಗಡುಕ ನಾಥುರಾಮ್ ಗೋಡ್ಸೆ ಮಾತ್ರವಲ್ಲ, ಕೊಲೆಯಾಗಿದ್ದ ಗಾಂಧೀಜಿ ಕೂಡಾ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು.
 
ಅವರ ಹತ್ಯೆಯ ದಿನವೇ ತನ್ನೆರಡು `ಊರುಗೋಲು`ಗಳಾದ ಆಭಾ ಮತ್ತು ಮನು ಜತೆ ಮಾತನಾಡುತ್ತಾ ಒಂದಲ್ಲ ಎರಡು ಬಾರಿ ತನ್ನ ಸಾವಿನ ಬಗ್ಗೆ ಗಾಂಧೀಜಿ ಮಾತನಾಡಿದ್ದರು. ತಾನು ನಂಬಿದವರೇ ತನ್ನ ಜತೆ ಇಲ್ಲವೇನೋ ಎಂಬ ಅನಾಥಪ್ರಜ್ಞೆಯೇ ಅವರಿಂದ ಈ ಮಾತುಗಳನ್ನು ಆಡಿಸಿತ್ತೋ ಏನೋ? ಹಿಂದೆ ಏಳು ಬಾರಿ ಅವರ ಹತ್ಯೆಗೆ ಪ್ರಯತ್ನ ನಡೆದಾಗ ಭಾರತೀಯರು ಶತ್ರುಗಳೆಂದು ತಿಳಿದುಕೊಂಡಿದ್ದ ಬ್ರಿಟಿಷರು ಅಧಿಕಾರದಲ್ಲಿದ್ದರು. ಹಾಗಿದ್ದರೂ ಆ ಪ್ರಯತ್ನಗಳು ವಿಫಲವಾಗಿದ್ದವು.
 
ಆದರೆ ಅವರ ಹತ್ಯೆ ನಡೆದಾಗ ಅವರ ಶಿಷ್ಯೋತ್ತಮರೇ ಅಧಿಕಾರದಲ್ಲಿದ್ದರು. ಅವರಿಗೂ ಬಾಪುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶಿಷ್ಯಂದಿರ ವರ್ತನೆಯ ಸುಳಿವು ಸಿಕ್ಕಿಯೇ ಗಾಂಧೀಜಿ ಬದುಕುವ ಆಸೆ ಕಳೆದುಕೊಂಡಿದ್ದರೇ?

ಗಾಂಧೀಜಿ ಹತ್ಯೆ ಮುಗಿದ ಅಧ್ಯಾಯ ಎಂದೇ ಹೆಚ್ಚಿನವರು ನಂಬಿದ್ದಾರೆ. ಕೊಲೆಗಡುಕರು ಯಾರೆಂದು ಗೊತ್ತಾಗಿದೆ, ಅವರಿಗೆ ಶಿಕ್ಷೆಯೂ ಆಗಿದೆ, ಇನ್ನೇನು ಎಂದು ಕೇಳುವವರಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ವಿಚಾರವಷ್ಟೇ ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿತ್ತೇ? ಇಲ್ಲವೇ ಬೇರೆ ಕಾರಣಗಳೂ ಇದ್ದವೇ? ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವುದಿಲ್ಲ. 

ಹತ್ಯೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಗೊತ್ತಿದ್ದರೂ ಗಾಂಧೀಜಿಯವರನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ನ್ಯಾಯಾಲಯದಲ್ಲಿನ ವಿಚಾರಣೆಯ ದಾಖಲೆಗಳು ಹಾಗೂ ಕೊಲೆಗಾರರಿಗೆ ಶಿಕ್ಷೆಯಾದ ನಂತರ ಎದ್ದ ವಿವಾದದಿಂದಾಗಿ ಮಹಾರಾಷ್ಟ್ರ ಸರ್ಕಾರವೇ ನೇಮಿಸಿದ ಕಪೂರ್ ಆಯೋಗದ ವರದಿಗಳ ಪುಟಗಳನ್ನು ತಿರುವಿಹಾಕಿದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ಹೊರತು ಉತ್ತರ ಸಿಗುವುದಿಲ್ಲ.

ಗಾಂಧೀಜಿ ಹತ್ಯೆಗೆ ನಡೆದ ಐದು ಪ್ರಯತ್ನಗಳನ್ನು ದೃಢೀಕರಿಸುವ ದಾಖಲೆಗಳು ಲಭ್ಯ ಇವೆ. ಈ ಐದೂ ಪ್ರಯತ್ನಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿದ್ದ ಉಲ್ಲೇಖಗಳಿವೆ.
 
ಈ ಕಾರಣದಿಂದಾಗಿಯೇ ಪೊಲೀಸರು ಆತನನ್ನು ತಡೆಯುವ ಪ್ರಯತ್ನ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದು 1934ರ ಜೂನ್ 25ರಂದು ಪುಣೆಯಲ್ಲಿ. `ಹರಿಜನ ಯಾತ್ರೆ`ಯಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಅಲ್ಲಿಗೆ ಹೋಗಿದ್ದರು. ಅಲ್ಲಿ ದುಷ್ಕರ್ಮಿಗಳು ಎಸೆದ ಬಾಂಬು ಗಾಂಧಿ ವಿರೋಧಿ ಅಣ್ಣಾಸಾಹೇಬ್ ಬೋಪಟ್ಕರ್ ಕಾರು ಮೇಲೆ ಬಿದ್ದ ಕಾರಣ ಗಾಂಧೀಜಿ ಪಾರಾಗಿದ್ದರು.
 
ಈ ಪ್ರಕರಣದ ಆರೋಪಿಗಳ್ಯಾರು ಎನ್ನುವ ಬಗ್ಗೆ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ. ಅಲ್ಲೆಲ್ಲೂ ಗೋಡ್ಸೆ ಹೆಸರು ಬರುವುದಿಲ್ಲ. ಆದರೆ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಎರಡು ಸಂಪುಟಗಳಲ್ಲಿ ಬರೆದಿರುವ ಪ್ಯಾರೇಲಾಲ್ ಅವರು ಗಾಂಧೀಜಿ ಹತ್ಯೆಯ ಮೊದಲ ಪ್ರಯತ್ನದ ಬಗ್ಗೆ ಬರೆಯುತ್ತಾ `ಈ ಪ್ರಯತ್ನದಲ್ಲಿ ಭಾಗಿಯಾಗಿದ್ದವರೇ 1948ರಲ್ಲಿ ಗಲಭೆಗ್ರಸ್ತ ದೆಹಲಿಯಲ್ಲಿ ಶಾಂತಿಪಾಲನೆಗಾಗಿ ಹೋರಾಡುತ್ತಿದ್ದ ಗಾಂಧೀಜಿಯವರ ಕೊಲೆಗೈದರು` ಎಂದು ಹೇಳಿದ್ದಾರೆ.

`ಗಾಂಧೀಜಿ ಮುಸ್ಲಿಮ್ ಪಕ್ಷಪಾತಿಯಾಗಿದ್ದರು, ಭಾರತದ ವಿಭಜನೆಗೆ ಕಾರಣರಾಗಿದ್ದರು. ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದ್ದರು. ಇದನ್ನು ಕಂಡು ಕ್ರುದ್ಧರಾದ ಹಿಂದೂ ಮಹಾಸಭಾಕ್ಕೆ ಸೇರಿದ್ದ ಗೋಡ್ಸೆ ಮತ್ತು ಆಪ್ಟೆ ಗಾಂಧೀಜಿಯವರ ಹತ್ಯೆಗೆ ಮುಂದಾದರು` ಎನ್ನುವ ಸಾಮಾನ್ಯ ಅಭಿಪ್ರಾಯ ಜನಜನಿತವಾಗಿದೆ. ಅಪರಾಧಿಗಳು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳು ಮತ್ತು ನ್ಯಾಯಾಲಯದ ತೀರ್ಪು ಕೂಡಾ ಇದನ್ನೇ ಹೇಳುತ್ತವೆ.
 
ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ ನಡೆದಿದ್ದಾಗ ಭಾರತದ ವಿಭಜನೆ ಆಗಿರಲಿಲ್ಲ, ಮುಸ್ಲಿಮ್ ಪಕ್ಷಪಾತಿ ಎಂಬ ಆರೋಪ ಕೂಡಾ ಅವರ ಮೇಲೆ ಇರಲಿಲ್ಲ. ಆಗಿನ್ನೂ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜದ ಅನಿಷ್ಟವಾದ ಅಸ್ಪೃಶ್ಯತೆ ಮತ್ತು ಕಂದಾಚಾರಗಳ ವಿರುದ್ಧ ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹರಿಜನರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕೆಂದು ಚಳವಳಿ ಪ್ರಾರಂಭಿಸಿದ್ದರು.
 
ಗಾಂಧೀಜಿಯವರ ಈ ವಿಚಾರಗಳೇ ಅವರ ವಿರೋಧಿಗಳ ಸಿಟ್ಟಿಗೆ ಕಾರಣವಾಗಿತ್ತೇ?
ಗಾಂಧಿ ಹತ್ಯೆಯ ಎರಡನೇ ಪ್ರಯತ್ನ ಮಹಾರಾಷ್ಟ್ರದ ಪಂಚಗಣಿಯಲ್ಲಿ 1944ರ ಜುಲೈ ತಿಂಗಳಲ್ಲಿ ನಡೆದಿತ್ತು.
 
ಮಲೇರಿಯಾ ಪೀಡಿತರಾಗಿದ್ದ ಗಾಂಧೀಜಿ ವಿಶ್ರಾಂತಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿಗೆ ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಹೋಗಿ ಪ್ರತಿಭಟನೆ ನಡೆಸಿದ್ದ. ಆತನನ್ನು ಮಾತುಕತೆಗೆ ಗಾಂಧೀಜಿ ಕರೆದಾಗ ಹೋಗದ ಗೋಡ್ಸೆ ಪ್ರಾರ್ಥನೆಯ ಸಮಯದಲ್ಲಿ ಕೈಯಲ್ಲಿ ಕಠಾರಿ ಝಳಪಿಸುತ್ತಾ ಗಾಂಧೀಜಿ ಕಡೆ ನುಗ್ಗಿದ್ದ.
 
ಆಗ ಗಾಂಧಿ ಅನುಯಾಯಿಗಳು ಆತನನ್ನು ತಡೆದು ಹೊರಗೆ ಒಯ್ದಿದ್ದರು. `ಕೊಲೆ ಮಾಡಲು ಬಂದವನು ನಾಥುರಾಮ್ ಗೋಡ್ಸೆ` ಎಂದು ಆತನ ಯತ್ನವನ್ನು ವಿಫಲಗೊಳಿಸಿದ್ದ ಅಲ್ಲಿನ ವಿಶ್ರಾಂತಿಗೃಹದ ಮಾಲೀಕ ಮಣಿಶಂಕರ್ ಪುರೋಹಿತ್ ಮತ್ತು ಸತಾರದ ಡಿ.ಬಿಲಾರೆ ಗುರೂಜಿ ಅವರು ಕಪೂರ್ ಆಯೋಗದ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ಮೂರನೇ ಪ್ರಯತ್ನ 1944ರ ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಯ ಮೊದಲು, ಸೇವಾಗ್ರಾಮದಲ್ಲಿಯೇ ನಡೆದಿತ್ತು.  ಆ ಮಾತುಕತೆಗೆ ಹೋಗದಂತೆ ತಡೆಯಲು ನಾಥುರಾಮ್ ಗೋಡ್ಸೆ ತನ್ನ ಬೆಂಬಲಿಗರೊಂದಿಗೆ ಗಾಂಧೀಜಿ ಉಳಿದುಕೊಂಡಿದ್ದ ಸೇವಾಗ್ರಾಮಕ್ಕೆ ಹೋಗಿದ್ದ. ಗಾಂಧೀಜಿ ಕಡೆ ನುಗ್ಗಿ ಬರುತ್ತಿದ್ದ ಗೋಡ್ಸೆಯನ್ನು ಆಶ್ರಮವಾಸಿಗಳು ತಡೆದು ನಿಲ್ಲಿಸಿದ್ದರು.
 
ಪೊಲೀಸರು ಬಂದು ತಪಾಸಣೆ ಮಾಡಿದಾಗ ಆತನ ಅಂಗಿಯ ಕಿಸೆಯಲ್ಲಿ ಕಠಾರಿ ಇದ್ದದ್ದು ಗೊತ್ತಾಗಿತ್ತು. ರೈಲು ಅಪಘಾತದ ಮೂಲಕ ಗಾಂಧೀಜಿಯವರನ್ನು ಕೊಲ್ಲುವ ನಾಲ್ಕನೇ ಪ್ರಯತ್ನ ಪುಣೆಯಲ್ಲಿಯೇ 1946ರ ಜೂನ್ 29ರಂದು ನಡೆದಿತ್ತು.ಗಾಂಧೀಜಿಯವರು ಪ್ರಯಾಣಿಸುತ್ತಿದ್ದ `ಗಾಂಧೀ ವಿಶೇಷ` ಎನ್ನುವ ಹೆಸರಿನ ರೈಲು ಪುಣೆಗೆ ಹೋಗುತ್ತಿರುವಾಗ ಹಳಿಗಳ ಮೇಲೆ ಕಲ್ಲುಬಂಡೆಗಳನ್ನು ಇಟ್ಟು ಅಪಘಾತ ನಡೆಸುವ ಪ್ರಯತ್ನ ನಡೆಸಲಾಗಿತ್ತು.
 
ಆದರೆ ರೈಲಿನ ಚಾಲಕ ವಹಿಸಿದ್ದ ಎಚ್ಚರಿಕೆಯಿಂದಾಗಿ ಆ ಅಪಘಾತ ನಡೆಯಲಿಲ್ಲ. ಈ ಘಟನೆ ನಡೆದ ಮರುದಿನವೇ ಗಾಂಧೀಜಿ ಪುಣೆಯಲ್ಲಿ ನಡೆದ ಸಭೆಯಲ್ಲಿ `ನಾನು 125 ವರ್ಷ ಬದುಕುತ್ತೇನೆ...`ಎಂದು ಹೇಳಿದ್ದು. ಅದನ್ನು ಕೇಳಿ ಆ ಸಭೆಯಲ್ಲಿದ್ದ ನಾಥುರಾಮ್ ಗೋಡ್ಸೆ  `ಅಷ್ಟುದಿನ ನಿಮ್ಮನ್ನು ಬದುಕಲು ಯಾರು ಬಿಡುತ್ತಾರೆ` ಎಂದು ಪ್ರತಿಕ್ರಿಯಿಸಿದ್ದನ್ನು ಆತನ ಜತೆಯಲ್ಲಿದ್ದವರು ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆಯ ಕೊನೆಯ ಪ್ರಯತ್ನ ವಿಫಲಗೊಂಡದ್ದು 1948ರ ಜನವರಿ 20ರಂದು. ತಾವು ನಂಬಿದ್ದ `ಗುರುಹಿರಿಯರ` ಆಶೀರ್ವಾದದೊಂದಿಗೆ ಸರ್ವಸನ್ನದ್ಧರಾಗಿ ದೆಹಲಿಗೆ ಬಂದಿದ್ದ ನಾಥೂರಾಮ್ ಗೋಡ್ಸೆ ಮತ್ತು ಸಂಗಾತಿಗಳು, ಸಂಜೆ ಹೊತ್ತಿಗೆ ಬಿರ್ಲಾ ಭವನದೊಳಗೆ ಸೇರಿಕೊಂಡಿದ್ದರು. ಮೊದಲು ಮದನ್‌ಲಾಲ್ ಪಹವಾ ಗಾಂಧೀಜಿ ಪ್ರಾರ್ಥನೆ ಮಾಡುವ ಸ್ಥಳದ ಹಿಂದಿನ ಗೋಡೆಯಲ್ಲಿ ಬಾಂಬು ಇಟ್ಟು ಸ್ಫೋಟಿಸಬೇಕು. 

ಅದಾದ ಕೂಡಲೇ ಗೋಡ್ಸೆ ಮತ್ತು ವಿಷ್ಣು ಕರಕರೆ ಗ್ರೆನೇಡ್ ಎಸೆಯಬೇಕು. ಅಂತಿಮವಾಗಿ ದಿಗಂಬರ ಬಡ್ಗೆ ಗಾಂಧೀಜಿಯವರ ಕಡೆ ರಿವಾಲ್ವರ್‌ನಿಂದ ಗುಂಡುಹಾರಿಸಬೇಕು-ಇದು ಮೂಲ ಯೋಜನೆ. ಆದರೆ ಬಾಂಬು ಸ್ಫೋಟವಾದ ಕೂಡಲೇ ಪೊಲೀಸರು ಮದನ್‌ಲಾಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ನೋಡಿದ ಕೂಡಲೇ ಉಳಿದವರು ಅಲ್ಲಿಂದ ಪಲಾಯನಗೈದರು.

ಮದನ್‌ಲಾಲನನ್ನು ಬಂಧಿಸಿದ್ದ ಪೊಲೀಸರು 24 ಗಂಟೆಗಳ ಅವಧಿಯಲ್ಲಿ ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನೆಲ್ಲ ಸಂಗ್ರಹಿಸಿದ್ದರು. ಪಂಜಾಬಿ ನಿರಾಶ್ರಿತ ಮದನ್‌ಲಾಲ್‌ಗೆ ಆಶ್ರಯ ನೀಡಿ ಸಾಕಿದ್ದವರು ಮಹಾರಾಷ್ಟ್ರದ ಪ್ರೊ.ಜಗದೀಶ್‌ಚಂದ್ರ ಜೈನ್ ಎಂಬ ಪ್ರಾಧ್ಯಾಪಕರು. 

ತಾನು ಗಾಂಧಿ ಹತ್ಯೆಯ ಸಂಚಿನಲ್ಲಿ ಸೇರಿಕೊಂಡದ್ದನ್ನು ಆತ ಪ್ರೊ.ಜೈನ್ ಅವರಿಗೂ ತಿಳಿಸಿದ್ದ. ಮದನ್‌ಲಾಲ್ ಬಂಧನದ ಸುದ್ದಿ ಪತ್ರಿಕೆಯಲ್ಲಿ ಓದಿದ ಕೂಡಲೇ ಜಾಗೃತರಾದ ಪ್ರೊ.ಜೈನ್ ಆಗ ಮಹಾರಾಷ್ಟ್ರದ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಸಂಚಿನ ವಿವರ ತಿಳಿಸಿದ್ದರು. 

ಆ ಮಾತುಕತೆಯಲ್ಲಿ ವಿ.ಡಿ.ಸಾವರ್ಕರ್ ಮತ್ತು `ಕರ್ಕರೆ ಸೇಠ್` ಜತೆ ಮದನ್‌ಲಾಲ್ ಹೊಂದಿದ್ದ ಸಂಪರ್ಕವನ್ನು ಕೂಡಾ ಅವರು ಒತ್ತಿ ಹೇಳಿದ್ದರು. `ದಕ್ಷತೆಗೆ ಹೆಸರಾಗಿದ್ದ ಮತ್ತು ಗಾಂಧಿವಾದಿಯಾಗಿದ್ದ ಮೊರಾರ್ಜಿ ದೇಸಾಯಿ ವರ್ತನೆ ಆಶ್ಚರ್ಯಕರವಾಗಿತ್ತು. ಪ್ರೊ.ಜೈನ್ ಹೇಳಿದ್ದನ್ನು ಅವರು ದಾಖಲಿಸಿರಲಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಚರ್ಚಿಸಿರಲಿಲ್ಲ. ಪ್ರೊ.ಜೈನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲು ಪೊಲೀಸರಿಗೆ ತಿಳಿಸಬಹುದಿತ್ತು. 

ಅದನ್ನೂ ಮಾಡಿರಲಿಲ್ಲ. ಅಹಮದಾಬಾದ್‌ಗೆ ಹೊರಟಿದ್ದ ಅವರು ರೈಲ್ವೆ ನಿಲ್ದಾಣಕ್ಕೆ ಡಿಸಿಪಿ ನಗರ್‌ವಾಲಾ ಅವರನ್ನು ಕರೆಸಿ ವಿಷಯವನ್ನಷ್ಟೇ ತಿಳಿಸಿದ್ದರು` ಎಂದು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ `ಲೆಟ್ ಅಸ್ ಕಿಲ್ ಗಾಂಧಿ` ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಮೊರಾರ್ಜಿ ಅವರಿಂದ ವಿಷಯ ತಿಳಿದುಕೊಂಡ ಡಿಸಿಪಿ ನಗರ್‌ವಾಲ್ ತನ್ನ ಬಳಿ ಎಲ್ಲ ಮಾಹಿತಿ ಇದೆ ಎಂದು ಹೇಳುತ್ತಲೇ ಇದ್ದರೂ ಅದನ್ನು ಕೊನೆಗೂ ಬಹಿರಂಗಪಡಿಸಿದ್ದು ಗಾಂಧಿ ಹತ್ಯೆಯಾದ ಹನ್ನೆರಡು ಗಂಟೆಗಳ ನಂತರ. ಜನವರಿ 20ರಿಂದ 30ರ ವರೆಗಿನ ಹತ್ತು ದಿನಗಳ ಅವಧಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ಸಂಗಾತಿಗಳು ದೆಹಲಿ-ಮುಂಬೈ ನಡುವೆ ನಿರಾತಂಕವಾಗಿ ಓಡಾಡುತ್ತಾ ಗಾಂಧಿ ಹತ್ಯೆಯ ಕೊನೆಯ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದರು.
 
ಆಗ ಕೇಂದ್ರದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳ ಆಡಳಿತ ಗಾಂಧೀಜಿ ಅನುಯಾಯಿಗಳ ಕೈಯಲ್ಲಿಯೇ ಇತ್ತು. ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು `ಉಕ್ಕಿನ ಮನುಷ್ಯ` ಸರ್ದಾರ್ ವಲ್ಲಭಭಾಯಿ ಪಟೇಲ್. ಸಂಚು ರೂಪುಗೊಂಡ ಮಹಾರಾಷ್ಟ್ರದಲ್ಲಿ ಗೃಹಸಚಿವರಾಗಿದ್ದವರು ಮೊರಾರ್ಜಿ ದೇಸಾಯಿ. ಪ್ರಧಾನಿಯಾಗಿದ್ದವರು ಗಾಂಧೀಜಿ ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜವಾಹರಲಾಲ್ ನೆಹರೂ.
ದೆಹಲಿ ಪೊಲೀಸರು ಮದನ್‌ಲಾಲ್ ನೀಡಿದ ಮಾಹಿತಿ ಆಧರಿಸಿ ಸಂಚುಕೋರರು ತಂಗಿದ್ದ ಹೊಟೇಲ್ ಕೋಣೆ ಜಾಲಾಡಿಸಿದ್ದರು.
 
ಅಲ್ಲಿ ಹಿಂದೂ ಮಹಾಸಭಾದ ಲೆಟರ್‌ಹೆಡ್ ಸಿಕ್ಕಿದ್ದರೂ ಆ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ವಿಚಾರಿಸಿರಲಿಲ್ಲ. ಕಪೂರ್ ಆಯೋಗದ ಮುಂದೆ ಮಹಾಸಭಾದ ಪದಾಧಿಕಾರಿ ಅಶೋಕ್ ಲಾಹಿರಿಯವರೇ ಇದನ್ನು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಮದನ್‌ಲಾಲ್ ಪ್ರಮುಖವಾಗಿ `ಅಗ್ರಾಣಿ` ಮತ್ತು `ಹಿಂದೂ ರಾಷ್ಟ್ರ` ಎನ್ನುವ ಎರಡು ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರ ಬಗ್ಗೆ ತಿಳಿಸಿದ್ದ.
 
ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಪೊಲೀಸರು  ಹತ್ತು ದಿನಗಳ ಅವಧಿಯಲ್ಲಿ ಮಾಡಿರಲಿಲ್ಲ. ಕನಿಷ್ಠ ಆ ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಗಾಂಧಿ ಹತ್ಯೆಯ ಸಂಚನ್ನು  ಭಗ್ನಗೊಳಿಸಬಹುದಿತ್ತು. ಯಾಕೆಂದರೆ ಆ ಸಂಪಾದಕರು ಮತ್ತು ಪ್ರಕಾಶಕರ ಹೆಸರು- ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ. ಗಾಂಧೀಜಿಯವರನ್ನು ಕೇವಲ ನಾಥುರಾಮ್ ಗೋಡ್ಸೆ ಕೊಂದದ್ದು ಎಂದು ಹೇಗೆ ಹೇಳುವುದು?

Sunday, January 29, 2012

ಭ್ರಷ್ಟ ರಾಜಕಾರಣದ `ಗಂಗೋತ್ರಿ' ಇನ್ನೂ ಮಲಿನ January 23, 2012

ಭಾರತದ ರಾಜಕಾರಣಕ್ಕೆ ಹಿಡಿದ ರೋಗದ ಮೂಲ ಹುಡುಕಿಕೊಂಡು ಹೊರಟರೆ ಎದುರಾಗುವುದು ದೋಷಪೂರ್ಣ ಚುನಾವಣಾ ವ್ಯವಸ್ಥೆಯ `ಗಂಗೋತ್ರಿ`. 

ಭ್ರಷ್ಟಾಚಾರವನ್ನು ಅದರ ಮೂಲದಲ್ಲಿಯೇ ಶುಚಿಗೊಳಿಸದಿದ್ದರೆ ನೂರು ಲೋಕಪಾಲರನ್ನು ನೇಮಿಸಿದರೂ ಭ್ರಷ್ಟಾಚಾರದ ರೋಗದಿಂದ ರಾಜಕಾರಣವನ್ನು ಮುಕ್ತಗೊಳಿಸುವುದು ಸಾಧ್ಯ ಇಲ್ಲ. ಇಲ್ಲಿಯೇ ಅಣ್ಣಾ ಹಜಾರೆ ತಂಡ ಎಡವಿದ್ದು. ದೆಹಲಿ ಗದ್ದುಗೆಯನ್ನೇ ಮಣಿಸುವ ಅತ್ಯುತ್ಸಾಹಕ್ಕೆ ಇಳಿಯದೆ ತಮಗೆ ಇರುವ ಮಿತಿಯಲ್ಲಿ ಹೆಚ್ಚು ಪ್ರಾಯೋಗಿಕವಾದ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಅವರು ಪ್ರಯತ್ನ ಮಾಡಬಹುದಿತ್ತು. ಅದು ಸಾಧ್ಯವಾಗದೆ ಹೋಗಿದ್ದರೆ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕಳಂಕರಹಿತ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುವ ಪಕ್ಷಾತೀತ ಚಳವಳಿಯೊಂದನ್ನು ರೂಪಿಸಬಹುದಿತ್ತು. ಆದರೆ ಅಣ್ಣಾ ಹಜಾರೆ ತಂಡ ದಾರಿತಪ್ಪಿ ಕಾಂಗ್ರೆಸ್ ಪಕ್ಷ ಉಪಾಯದಿಂದ ಒಡ್ಡಿದ ಬೋನಿಗೆ ಬಿದ್ದಿದೆ. ಈಗ ಅದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿರುವ ಇನ್ನೊಂದು ರಾಜಕೀಯೇತರ ಸಂಘಟನೆ ಅಷ್ಟೆ.

ಅಣ್ಣಾ ಹಜಾರೆ ತಂಡ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಹೊಸದಾಗಿ ಏನೂ ಮಾಡಬೇಕಾಗಿರಲಿಲ್ಲ. ಎಲ್ಲವೂ ಸಿದ್ಧವಾಗಿ ಇದೆ. 1990ರಲ್ಲಿ ನೇಮಕಗೊಂಡಿದ್ದ ಗೋಸ್ವಾಮಿ ಸಮಿತಿಯಿಂದ ಹಿಡಿದು ಇತ್ತೀಚಿನ ಎರಡನೇ ಆಡಳಿತ ಸುಧಾರಣಾ ಸಮಿತಿಯ (2008) ವರೆಗೆ ಚುನಾವಣಾ ಸುಧಾರಣೆಯ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಉದ್ದೇಶಕ್ಕಾಗಿಯೇ ನೇಮಕಗೊಂಡಿರುವ ವೋಹ್ರಾ ಸಮಿತಿ (1993) ಮತ್ತು ಇಂದ್ರಜಿತ್ ಗುಪ್ತಾ ಸಮಿತಿ (1998) ವರದಿಗಳು ಹಾಗೂ ಚುನಾವಣಾ ಆಯೋಗದ ಸುಧಾರಣಾ ಪ್ರಸ್ತಾವಗಳು (2004) ಸರ್ಕಾರದ ಮುಂದಿವೆ. ಇದರ ಜತೆಗೆ ಕಾನೂನು ಆಯೋಗದ ವರದಿ (1999) ಮತ್ತು ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆ ಪುನರ್‌ಪರಿಶೀಲನಾ ಆಯೋಗದ ವರದಿ (2001)ಗಳಲ್ಲಿಯೂ ಚುನಾವಣಾ ಸುಧಾರಣೆಯ ಪ್ರಸ್ತಾವಗಳಿವೆ.  

ಮೊದಲನೆಯದಾಗಿ ರಾಜಕೀಯದ ಅಪರಾಧೀಕರಣದ ತಡೆ. ಹತ್ತು ವರ್ಷಗಳ ಹಿಂದೆ ದೇಶದ 25 ರಾಜ್ಯಗಳಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಒಟ್ಟು 4,120 ಶಾಸಕರ ಪೈಕಿ 1555 ಶಾಸಕರು ಕೊಲೆ,ಡಕಾಯಿತಿ, ಅತ್ಯಾಚಾರ ಮೊದಲಾದ ಹೀನ ಆರೋಪಗಳನ್ನು ಹೊತ್ತಿದ್ದರು. ಕಳೆದ ಬಾರಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕಣದಲ್ಲಿ 3297 ಅಭ್ಯರ್ಥಿಗಳು ಹೀನ ಕ್ರಿಮಿನಲ್ ಆರೋಪಗಳನ್ನು ಹೊಂದಿದವರಿದ್ದರು. ಈಗಿನ ಚುನಾವಣೆಯಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿರಬಹುದು. 

ಪ್ರಸಕ್ತ ಲೋಕಸಭೆಯಲ್ಲಿ 150 ಸದಸ್ಯರು ಇಂತಹದ್ದೇ ಕ್ರಿಮಿನಲ್ ಹಿನ್ನೆಲೆ ಹೊಂದಿದವರಿದ್ದಾರೆ. ಇದನ್ನು ನಿಯಂತ್ರಿಸುವ ಪ್ರಯತ್ನದ ಫಲವೇ 1993ರಲ್ಲಿ ಆಗಿನ ಗೃಹಕಾರ್ಯದರ್ಶಿ ವೋಹ್ರಾ ನೇತೃತ್ವದ ಸಮಿತಿ ನೀಡಿದ ವರದಿ. 19 ವರ್ಷಗಳ ನಂತರವೂ ಸರ್ಕಾರ ಅದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. (ಇಂಟರ್‌ನೆಟ್‌ನಲ್ಲಿ ಲಭ್ಯ ಇದೆ). ಅದರಲ್ಲಿ ವೋಹ್ರಾ, ರಾಜಕೀಯದ ಅಪರಾಧೀಕರಣದ ಒಳ-ಹೊರಗನ್ನು ಆಳವಾಗಿ ವಿಶ್ಲೇಷಿಸಿದ್ದಾರೆ. ಈಗಿನ ನಿಯಮಾವಳಿ ಪ್ರಕಾರ ಎಂತಹ ಹೀನ ಅಪರಾಧಗಳ ಆರೋಪಗಳಿದ್ದರೂ ಅದರ ವಿರುದ್ಧದ ಮೇಲ್ಮನವಿ ಇತ್ಯರ್ಥವಾಗುವ ವರೆಗೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು 1998ರಲ್ಲಿಯೇ ಚುನಾವಣಾ ಆಯೋಗ ಶಿಫಾರಸು ಮಾಡಿತ್ತು. 2004ರಲ್ಲಿ ಅದನ್ನು ಮತ್ತೆ ದೃಢೀಕರಿಸಿತ್ತು. 
`ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ನ್ಯಾಯಾಲಯಕ್ಕೆ ಮೇಲ್ನೋಟದ ಪರಿಶೀಲನೆಯಲ್ಲಿ ದೃಢಪಟ್ಟು ಅದರ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಕೆಯಾದರೆ ಅಂತಹ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು` ಎನ್ನುವುದು ಚುನಾವಣಾಆಯೋಗದ ಮೂಲ ಶಿಫಾರಸು. ನಂತರ ಇದನ್ನು ಇನ್ನಷ್ಟು ಬಿಗಿಗೊಳಿಸಿದ ಆಯೋಗ `ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಅರ್ಹವಾದ ಅಪರಾಧದಲ್ಲಿ ಭಾಗಿಯಾದವರಿಗೆ ಅದರ ವಿರುದ್ಧ ಮೇಲ್ಮನವಿಗಳು ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬಾರದು` ಎಂದು ಹೇಳಿತ್ತು. ಈ ಶಿಫಾರಸುಗಳೇನಾದರೂ ಅನುಷ್ಠಾನಕ್ಕೆ ಬಂದಿದ್ದರೆ ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಬಾಹುಬಲದ ಅಪರಾಧಿಗಳು ಇರುತ್ತಿರಲಿಲ್ಲ. ಲೋಕಸಭೆಯಲ್ಲಿ ತಕ್ಷಣಕ್ಕೆ 150 ಸ್ಥಾನಗಳು ಖಾಲಿಯಾಗುತ್ತಿದ್ದವು.

ರಾಜಕೀಯ ಪಕ್ಷಗಳು ಅಪರಾಧಿಗಳ ಪರವಾಗಿರುವುದು ಅವರ ಗೆಲ್ಲುವ ಸಾಮರ್ಥ್ಯಕ್ಕಾಗಿಯೇ ಹೊರತು ಅವರ ಮೇಲಿನ ಪ್ರೀತಿಯಿಂದ ಅಲ್ಲ. ಒಬ್ಬ ಅಪರಾಧಿ ತಂದುಕೊಡುವ ಒಂದು ಸದಸ್ಯ ಬಲಕ್ಕಾಗಿ ಸಹಿಸಬಾರದ್ದನ್ನೆಲ್ಲ ಸಹಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳಿವೆ. ಈಗ ಎಲ್ಲರ ಕಣ್ಮಣಿಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದಲ್ಲಿಯೂ ಕ್ರಿಮಿನಲ್ ಹಿನ್ನೆಲೆಯ ಶಾಸಕರಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಇದ್ದಿದ್ದರೆ ಆ ಕ್ಷೇತ್ರಗಳಲ್ಲಿ ಲಾಲುಪ್ರಸಾದ್ ಪಕ್ಷದ್ದೋ, ಇನ್ನು ಯಾವುದೋ ಪಕ್ಷದ ಅಭ್ಯರ್ಥಿಗಳೋ ಗೆದ್ದುಬಿಡುತ್ತಿದ್ದರು. ಅಪರಾಧಿಗಳು ಚುನಾವಣಾ ಕಣ ಪ್ರವೇಶದ ವಿರುದ್ಧದ ನಿಷೇಧ ಜಾರಿಗೆ ಬಂದರೆ ಅದು ಎಲ್ಲರಿಗೂ ಅನ್ವಯವಾಗುವುದರಿಂದ  ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಬೇಕಾದ ಒತ್ತಡದಿಂದ ಪಕ್ಷಗಳು ಪಾರಾಗಬಹುದು. ಈ ದೃಷ್ಟಿಯಿಂದ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು ಒಳಗಿಂದೊಳಗೆ ಇಂತಹ ಸುಧಾರಣೆಯ ಪರವಾಗಿಯೇ ಇವೆ. 

ಎರಡನೆಯದಾಗಿ ಸ್ಪಷ್ಟ ಬಹುಮತ ಮತ್ತು ನಿರಾಕರಣಾರ್ಥಕ ಮತಗಳ ಚಲಾವಣೆಗೆ ಅವಕಾಶ ನೀಡುವ ಸುಧಾರಣೆ. ಚುನಾವಣೆಯಲ್ಲಿ ಆಯ್ಕೆಯಾಗಲು ಅಭ್ಯರ್ಥಿಗಳು ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆಯನ್ನು ಮೊದಲು  ನೀಡಿದ್ದು ಕಾನೂನು ಆಯೋಗ. `ಇದರಿಂದ ಚುನಾವಣೆಯಲ್ಲಿ ಜಾತಿಯ ಪಾತ್ರ ಕಡಿಮೆಯಾಗಬಹುದು. ಯಾವುದೇ ಕ್ಷೇತ್ರದಲ್ಲಿ ಒಂದು ಜಾತಿ ಶೇಕಡಾ 50ರಷ್ಟು ಇರುವ ಸಾಧ್ಯತೆ ಇಲ್ಲವಾದ ಕಾರಣ ಯಾವುದೇ ಪ್ರಬಲ ಜಾತಿಯ ಅಭ್ಯರ್ಥಿಗಳು ಕೂಡಾ ಎಲ್ಲ ಜಾತಿ ಮತದಾರರ ಒಲವು ಗಳಿಸಲು ಅನಿವಾರ್ಯವಾಗಿ ಪ್ರಯತ್ನಿಸಬೇಕಾಗುತ್ತದೆ` ಎಂದು ಆಯೋಗ ಹೇಳಿತ್ತು. ಈಗಿನ ವ್ಯವಸ್ಥೆಯಲ್ಲಿ ಒಬ್ಬ ಅಭ್ಯರ್ಥಿ ಶೇಕಡಾ 25ರಿಂದ 30ರಷ್ಟು ಮತ ಗಳಿಸಿದರೂ ಆಯ್ಕೆಯಾಗುವ ಸಾಧ್ಯತೆ ಇದೆ. ಉದಾಹರಣೆಗೆ ಕರ್ನಾಟಕದಂತಹ ರಾಜ್ಯದಲ್ಲಿ ಯಾವುದಾದರೂ ಎರಡು ಪ್ರಮುಖ ಜಾತಿಗಳು ಇಲ್ಲವೇ ಯಾವುದಾದರೂ ಒಂದು ಪ್ರಮುಖ ಜಾತಿ ಜತೆ ಪರಿಶಿಷ್ಟಜಾತಿ ಇಲ್ಲವೇ ಪರಿಶಿಷ್ಟ ಪಂಗಡಗಳು ಇಲ್ಲವೇ ಅಲ್ಪಸಂಖ್ಯಾತರು ಸೇರಿಕೊಂಡರೆ ಒಬ್ಬ ಅಭ್ಯರ್ಥಿಯನ್ನು ಸುಲಭದಲ್ಲಿ ಗೆಲ್ಲಿಸಲು ಸಾಧ್ಯ ಇದೆ.

ಈ ಸುಧಾರಣೆಯ ಮುಖ್ಯ ಸಮಸ್ಯೆ ಮರುಮತದಾನ. ಯಾವ ಅಭ್ಯರ್ಥಿ ಕೂಡಾ ಶೇಕಡಾ 50ಕ್ಕಿಂತ ಹೆಚ್ಚು ಮತಗಳಿಸದಿದ್ದರೆ ಅಂತಹ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕಾಗುತ್ತದೆ. ಆಗಲೂ ನಿರೀಕ್ಷಿತ ಮತಗಳು ಲಭ್ಯವಾಗದಿದ್ದರೆ ಮತ್ತೆ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಚುನಾವಣಾ ನಿರ್ವಹಣೆಯ ವೆಚ್ಚದ ಹೊರೆ ಅಧಿಕವಾಗುತ್ತದೆ  ಎನ್ನುವುದು ಕೆಲವರ ಆಕ್ಷೇಪ. ಪ್ರಾರಂಭದ ದಿನಗಳಲ್ಲಿ ಈ ರೀತಿಯ ಬಿಕ್ಕಟ್ಟು ಸೃಷ್ಟಿಯಾದರೂ ಕ್ರಮೇಣ ಹೊಸ ವ್ಯವಸ್ಥೆಯನ್ನು ಮತದಾರರೂ ಅರ್ಥಮಾಡಿಕೊಂಡು ಮತಚಲಾಯಿಸುತ್ತಾರೆ ಎನ್ನುವ ವಾದವೂ ಇದೆ.

ಇದರ ಜತೆಗೆ ನಿರಾಕರಣಾರ್ಥಕ ಮತ ಚಲಾವಣೆಗೆ ಅವಕಾಶ ನೀಡಬೇಕೆಂದು ಕೂಡಾ ಕಾನೂನು ಆಯೋಗ ಶಿಫಾರಸು ಮಾಡಿತ್ತು. ಒಂದು ಕ್ಷೇತ್ರದಲ್ಲಿನ ಯಾವ ಅಭ್ಯರ್ಥಿ ಕೂಡಾ ಅರ್ಹನಲ್ಲ ಎಂದು ಮತದಾರ ತೀರ್ಮಾನಿಸಿದರೆ `ಯಾರಿಗೂ ನನ್ನ ಮತ ಇಲ್ಲ` ಎಂದು ಹೇಳುವ ಹಕ್ಕು ಆತನಿಗೆ ಇರಬೇಕು ಎನ್ನುವುದು ಈ ಶಿಫಾರಸಿನ ಉದ್ದೇಶ. ಒಂದೊಮ್ಮೆ ಈ ರೀತಿಯ ನಿರಾಕರಣಾರ್ಥಕ ಮತಗಳ ಪ್ರಮಾಣ ಆಯ್ಕೆಯಾದ ಅಭ್ಯರ್ಥಿ ಪಡೆದ ಮತಗಳಿಗಿಂತ ಹೆಚ್ಚಿದ್ದರೆ ಆಗ ಅಲ್ಲಿ ಮರುಮತದಾನ ನಡೆಸಬೇಕಾಗುತ್ತದೆ. ಈಗಲೂ ಚುನಾವಣಾ ನಿರ್ವಹಣೆಯ ನಿಯಮ 19ರ ಪ್ರಕಾರ ಮತದಾರರು ಮತದಾನಕ್ಕೆ ತಮ್ಮ ಹೆಸರು ನೋಂದಾಯಿಸಿದ ನಂತರ ಮತಚಲಾಯಿಸಲು ನಿರಾಕರಿಸಬಹುದು. ಆದರೆ ಮತಪೆಟ್ಟಿಗೆಯ ವ್ಯವಸ್ಥೆಯಲ್ಲಿ ಈ ಗೌಪ್ಯವನ್ನು ಕಾಪಾಡಲು ಸಾಧ್ಯವಾಗದು. ಮತದಾನ ಯಂತ್ರ ಎಲ್ಲ ಕಡೆಗಳಲ್ಲಿ ಜಾರಿಗೆ ಬಂದರೆ ಮಾತ್ರ ಇದು ಸಾಧ್ಯ.

ಮೂರನೆಯದಾಗಿ ಅಭ್ಯರ್ಥಿಗಳ  ಆಸ್ತಿ ಮತ್ತು ಸಾಲ, ತೆರಿಗೆ, ಕಂದಾಯ ಬಾಕಿಯ ಕಡ್ಡಾಯ ಘೋಷಣೆ.  ಇತ್ತೀಚಿನ ಸಮೀಕ್ಷೆಯ ಪ್ರಕಾರ ರಾಜ್ಯಸಭೆಯ ಅರ್ಧದಷ್ಟು ಮತ್ತು ಲೋಕಸಭೆಯ ಮೂರನೆ ಒಂದರಷ್ಟು ಸದಸ್ಯರು ಘೋಷಿತ ಕೋಟ್ಯಧಿಪತಿಗಳು. 

ರಾಜ್ಯಸಭೆ ಮತ್ತು ಲೋಕಸಭೆಗಳ ತಲಾ ಹತ್ತು ಅತ್ಯಂತ ಶ್ರಿಮಂತ ಸದಸ್ಯರ ಘೋಷಿತ ಆಸ್ತಿಯ ಒಟ್ಟು ಮೌಲ್ಯ 1500 ಕೋಟಿ ರೂಪಾಯಿ. ಉಳಿದವರು ಬಡವರೇನಲ್ಲ. ಅವರಲ್ಲಿ ಹೆಚ್ಚಿನವರಿಗೆ ಆಸ್ತಿ ಘೋಷಿಸಿಕೊಳ್ಳಲು ಮೂಲಗಳಿಲ್ಲ, ಅದಕ್ಕೆ ಆ ಹಣಕ್ಕೆ ಕಪ್ಪು ಬಣ್ಣ. ಈ ಆಸ್ತಿ ವಿವರದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಆ ಮಾಹಿತಿಯ ಪರಿಶೀಲನೆ ನಡೆಸುವ ವ್ಯವಸ್ಥೆ ಇಲ್ಲದಿರುವುದು ಈ ಲೋಪಕ್ಕೆ  ಕಾರಣ. ಅಭ್ಯರ್ಥಿಗಳು ನೀಡುವ ಈ ವಿವರವನ್ನು ವರಮಾನ ತೆರಿಗೆ ಇಲಾಖೆ ಮತ್ತಿತರ ಕೇಂದ್ರ ಸಂಸ್ಥೆಗಳಿಂದ ಪರಿಶೀಲನೆ ಮಾಡಿಸಬೇಕು. 

ಅಷ್ಟು ಮಾತ್ರವಲ್ಲ, ತಪ್ಪು ಮಾಹಿತಿ ನೀಡುವವರಿಗೆ ನೀಡಲಾಗುವ ಆರು ತಿಂಗಳ ಜೈಲುವಾಸದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಪರ‌್ಯಾಯವಾಗಿ ದಂಡ ವಿಧಿಸುವುದನ್ನು ರದ್ದುಮಾಡಬೇಕು ಎಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ.

ನಾಲ್ಕನೆಯದಾಗಿ ಚುನಾವಣಾ ವೆಚ್ಚದ ನಿಯಂತ್ರಣ. ಈಗಿನ ವ್ಯವಸ್ಥೆಯಲ್ಲಿ ಜಾತಿ ಬೇಡ ಮತ್ತು ದುಡ್ಡು ಇಲ್ಲ ಎಂದು ಹೇಳುವವರಿಗೆ ರಾಜಕೀಯ ಪ್ರವೇಶ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇದಕ್ಕಾಗಿ ಸರ್ಕಾರವೇ ಅಭ್ಯರ್ಥಿಗಳ ವೆಚ್ಚವನ್ನು ವಹಿಸಿಕೊಂಡರೆ ಹೇಗೆ ಎಂಬ ಚರ್ಚೆ ಬಹಳ ವರ್ಷಗಳಿಂದ ನಡೆದಿದೆ. ಈ ಬಗ್ಗೆ ಅಧ್ಯಯನಕ್ಕಾಗಿಯೇ ನೇಮಕಗೊಂಡ ಇಂದ್ರಜಿತ್ ಗುಪ್ತಾ ಸಮಿತಿ 1998ರಲ್ಲಿ ವರದಿ ನೀಡಿತ್ತು. ನಗದುರೂಪದಲ್ಲಿ ಅಲ್ಲ, ಸೌಲಭ್ಯಗಳ ಮೂಲಕ ಅಭ್ಯರ್ಥಿಗಳಿಗೆ ನೆರವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಪಕ್ಷಗಳ ಕಚೇರಿಗಾಗಿ ಕಟ್ಟಡ ಮತ್ತು ದೂರವಾಣಿ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ಪ್ರಚಾರ ಅವಕಾಶ ಮತ್ತು ನಿರ್ದಿಷ್ಟ ಪ್ರಮಾಣದ ಪೆಟ್ರೋಲ್/ಡೀಸೆಲ್, ಮುದ್ರಣ ಕಾಗದ, ಧ್ವನಿವರ್ಧಕ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಪ್ರತಿ ಮತದಾರನಿಗೆ ತಲಾ ಹತ್ತು ರೂಪಾಯಿಯಂತೆ (1998ರ ಲೆಕ್ಕ) 1200 ಕೋಟಿ ರೂಪಾಯಿಗಳ ಚುನಾವಣಾ ನಿಧಿಯನ್ನು ರಚಿಸಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಸಮಾನ ಮೊತ್ತದ ಹಣ ನೀಡಬೇಕು ಎಂದು ಗುಪ್ತಾ ಸಮಿತಿ ಹೇಳಿತ್ತು. ಅದರೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಆ ವರದಿ ಮುಟ್ಟಲು ಯಾರೂ ಹೋಗಿಲ್ಲ. 

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಬಹಳಷ್ಟು ಕಡಿಮೆ ಇದೆ ಎನ್ನುವ ಅಭಿಪ್ರಾಯವನ್ನು ಎಲ್ಲ ಪಕ್ಷಗಳು ಒಪ್ಪಿಕೊಳ್ಳುತ್ತವೆ. ಆದುದರಿಂದ ಪಕ್ಷಾತೀತವಾಗಿ ಎಲ್ಲ ಅಭ್ಯರ್ಥಿಗಳು ಸುಳ್ಳು ಲೆಕ್ಕ ನೀಡುತ್ತಾರೆ. 2009ರ ಲೋಕಸಭಾ ಚುನಾವಣಾ ಕಣದಲ್ಲಿದ್ದ 6753 ಅಭ್ಯರ್ಥಿಗಳಲ್ಲಿ 6719 ಅಭ್ಯರ್ಥಿಗಳು (ಶೇಕಡಾ 99.5) `ನಾವು ಚುನಾವಣಾ ವೆಚ್ಚದ ಮಿತಿಯ ಶೇಕಡಾ 45ರಿಂದ 55ರಷ್ಟು ಮಾತ್ರ ಖರ್ಚು ಮಾಡಿದ್ದೇವೆ` ಎಂದು ಆಯೋಗಕ್ಕೆ ನೀಡಿರುವ ಲೆಕ್ಕಪತ್ರದಲ್ಲಿ ತಿಳಿಸಿದ್ದಾರೆ. ಕೇವಲ ನಾಲ್ಕು ಅಭ್ಯರ್ಥಿಗಳು ಮಾತ್ರ `ವೆಚ್ಚದ ಮಿತಿಯನ್ನು ಮೀರಿದ್ದೇವೆ` ಎಂದು ಒಪ್ಪಿಕೊಂಡಿದ್ದಾರೆ. ಕೇವಲ 30 ಅಭ್ಯರ್ಥಿಗಳು  ಮಾತ್ರ `ವೆಚ್ಚದ ಮಿತಿಯ ಶೇಕಡಾ 90ರಿಂದ 95ರಷ್ಟು ಖರ್ಚು ಮಾಡಿದ್ದೇವೆ` ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವಿಕ ನೆಲೆಯಲ್ಲಿ ಚುನಾವಣಾ ವೆಚ್ಚವನ್ನು ನಿರ್ಧರಿಸಬೇಕೆಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಇನ್ನು ಹಲವಾರು ಸುಧಾರಣಾ ಕ್ರಮಗಳಿದ್ದರೂ ಕನಿಷ್ಠ ಈ ನಾಲ್ಕು ಮುಖ್ಯ ಚುನಾವಣಾ ಸುಧಾರಣೆಗಳ ಮೂಲಕ ಭ್ರಷ್ಟಾಚಾರವನ್ನು ಗಂಗೋತ್ರಿಯಲ್ಲಿಯೇ ಶುಚಿಗೊಳಿಸಿ ರಾಜಕಾರಣದ ಆರೋಗ್ಯ ಕಾಪಾಡಲು ಸಾಧ್ಯ. ಅಣ್ಣಾ ಹಜಾರೆ ತಂಡ ಈ ಅವಕಾಶವನ್ನು ಕಳೆದುಕೊಂಡಿದೆ.