Monday, July 16, 2012

ಪಾತ್ರಧಾರಿಗಳನ್ನಷ್ಟೇ ಅಲ್ಲ, ಸೂತ್ರಧಾರರನ್ನೂ ನೋಡಿ July 16, 2012

ಕರ್ನಾಟಕದಲ್ಲಿ ಬಿಜೆಪಿ ರಾಜಕಾರಣ ತಲುಪಿರುವ ಅಧೋಗತಿಗೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಕೇಳಿದರೆ ಜನ ಪೈಪೋಟಿಯಿಂದ ಹೆಸರುಗಳನ್ನು ಪಟ್ಟಿಮಾಡಿ ಹೇಳಬಲ್ಲರು. ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ರೆಡ್ಡಿ ಸೋದರರು, ಪಕ್ಷಾಂತರಿ ಶಾಸಕರು,ಅನಂತಕುಮಾರ್, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ..... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ಇವರೆಲ್ಲ ತೆರೆಯ ಮುಂದೆ ಕಾಣುತ್ತಿರುವ ಪಾತ್ರಧಾರಿಗಳು. ಇವರ ಹೆಸರೆತ್ತಿ ಮನಸಾರೆ ಬೈದುಬಿಡಬಹುದು, ಸ್ವಲ್ಪ ಧೈರ್ಯಮಾಡಿದರೆ ಕಲ್ಲೆತ್ತಿ ಹೊಡೆಯಲೂಬಹುದು. ಅಂತಹ ಸಾಹಸ ಮಾಡುವ ಧೈರ್ಯ ಇಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಮಣ್ಣುಮುಕ್ಕಿಸಿ ಸೇಡು ತೀರಿಸಿಕೊಳ್ಳಬಹುದು. 

ಆದರೆ ನೇಪಥ್ಯದಲ್ಲಿ ಕೂತು ಈ ಪಾತ್ರಗಳನ್ನು ಆಡಿಸುತ್ತಿರುವ ಸೂತ್ರಧಾರರನ್ನು ಏನು ಮಾಡುವುದು? ಇವರು ಯಾರ ಕಣ್ಣಿಗೂ ಕಾಣುವುದಿಲ್ಲ, ಇವರ ಅಂತರಂಗದ ಪಿಸುಮಾತುಗಳು ಹೊರಗಿರುವ ಯಾರಿಗೂ ಕೇಳಿಸುತ್ತಿಲ್ಲ, ಇವರು ವಿಧಾನಸಭೆ ಪ್ರವೇಶಿಸದೆಯೂ ಅಧಿಕಾರವನ್ನು ಅನುಭವಿಸಬಲ್ಲರು, ಜಾತಿವಾದಿ ಎಂದು ಕರೆಸಿಕೊಳ್ಳದೆಯೇ ಜಾತಿಯ ರಾಜಕಾರಣ ಮಾಡಬಲ್ಲರು, ಭ್ರಷ್ಟರನ್ನು ಪೋಷಿಸುತ್ತಲೇ ಪ್ರಾಮಾಣಿಕರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡಬಲ್ಲರು.
 
ಇವರನ್ನು ಕಾಣಬೇಕಾದರೆ ಸಂಘ ಪರಿವಾರದ ಗರ್ಭಗುಡಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಪ್ರವೇಶಿಸಬೇಕು. ಸಂಘ ಪರಿವಾರದ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆಸಿಕೊಂಡರೂ ಸಂಸ್ಕೃತಿಯೇತರ ಚಟುವಟಿಕೆಗಳಿಗಾಗಿ ಅದು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿದೆ.
 
ರಾಜಕೀಯಕ್ಕಾಗಿ ಬಿಜೆಪಿ (ಮೊದಲು ಜನಸಂಘ), ಧರ್ಮಕ್ಕಾಗಿ ವಿಎಚ್‌ಪಿ, ಹಿಂದೂ ಜಾಗರಣ ಮಂಚ, ಬಜರಂಗದಳ ಇತ್ಯಾದಿ,  ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್...ಹೀಗೆ ತರಹೇವಾರಿ ಸಂಘಟನೆಗಳು. ಇದರ ಜತೆಗೆ ನೂರಾರು ಸ್ವಯಂಸೇವಾ ಸಂಸ್ಥೆಗಳು. 

ಈ ಎಲ್ಲ ಅಂಗಸಂಸ್ಥೆಗಳ ಯಜಮಾನನ ಸ್ಥಾನದಲ್ಲಿ ಕೂತಿರುವುದು ಆರ್‌ಎಸ್‌ಎಸ್, ಒಂದು ರೀತಿಯಲ್ಲಿ ಇದು ಪರಿವಾರದ ಹೈಕಮಾಂಡ್. ಪರಿವಾರಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿರ್ಧಾರಗಳು ಇತ್ಯರ್ಥವಾಗುವುದು ಇದೇ ಗರ್ಭಗುಡಿಯಲ್ಲಿ. ಇದು ತನ್ನ ಆದೇಶಗಳನ್ನು ಪತ್ರಿಕಾಗೋಷ್ಠಿ ಕರೆದು ಇಲ್ಲವೇ ಪತ್ರಿಕಾ ಹೇಳಿಕೆಗಳ ಮೂಲಕ ಜಾರಿಗೊಳಿಸುವುದಿಲ್ಲ. 

ಅದೇನಿದ್ದರೂ ಕಣ್ಸನ್ನೆ, ಕೈಸನ್ನೆಯ  ಮೂಲಕವೇ ನಡೆಯುತ್ತದೆ. ಈ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಾರ್ವಜನಿಕ ಸೇವೆ ಮತ್ತು ಸರಳ-ಶಿಸ್ತುಬದ್ಧ ಜೀವನಕ್ಕೆ ಅರ್ಪಿಸಿಕೊಂಡ ಅನೇಕ ಹಿರಿಯ ಜೀವಗಳಿದ್ದವು. ಆರ್‌ಎಸ್‌ಎಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡವರು ಕೂಡಾ ವೈಯಕ್ತಿಕವಾಗಿ ಅವರಿಗೆ ಗೌರವದಿಂದ ತಲೆಬಾಗುತ್ತಿದ್ದರು. 

ಆದರೆ ಇಂದಿನ ಆರ್‌ಎಸ್‌ಎಸ್‌ನಲ್ಲಿ ಹಳೆಯ ತಲೆಮಾರಿನ ನಾಯಕರು ಪಳೆಯುಳಿಕೆಯಂತೆ ಅಲ್ಲಲ್ಲಿ ಕಾಣುತ್ತಿದ್ದಾರೆಯೇ ಹೊರತು ಬಹುಸಂಖ್ಯಾತ ನಾಯಕರು ಬೇರೆ ದಾರಿ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್‌ಎಸ್‌ಎಸ್ ತನ್ನ ಮೂಲ ಕ್ಷೇತ್ರಗಳಾದ ಧರ್ಮ ಮತ್ತು ಸಂಸ್ಕೃತಿಯನ್ನು ಪಕ್ಕಕ್ಕಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೋರುತ್ತಿರುವ ಅತಿಯಾದ ಆಸಕ್ತಿ. 

1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ 1949ರಲ್ಲಿ ಒಪ್ಪಿಕೊಂಡ ಲಿಖಿತ ಸಂವಿಧಾನದ ಪ್ರಕಾರ ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.  `ಹಿಂದೂ `ಸಮಾಜ`ದೊಳಗಿನ ವಿಭಿನ್ನ ಗುಂಪುಗಳನ್ನು ಸಂಘಟಿಸುವುದು ಮತ್ತು ಅದನ್ನು `ಧರ್ಮ` ಮತ್ತು ಸಂಸ್ಕೃತಿಯ ಆಧಾರದಲ್ಲಿ ಪುನರುಜ್ಚೀವನಗೊಳಿಸಿ ಆ ಮೂಲಕ `ಭರತವರ್ಷ`ದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ...` ಎಂದು ಆರ್‌ಎಸ್‌ಎಸ್ ಒಪ್ಪಿಕೊಂಡಿರುವ ಸಂವಿಧಾನದ ಮೂರನೆ ಪರಿಚ್ಛೇದ ಹೇಳುತ್ತದೆ. 

`ಸಂಘಕ್ಕೆ ರಾಜಕೀಯ ಉದ್ದೇಶ ಇಲ್ಲ, ಇದು ಶುದ್ಧವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದ್ಧವಾದ ಸಂಸ್ಥೆ` ಎಂದು ಪರಿಚ್ಛೇದ 4ರಲ್ಲಿ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲಾಗಿದೆ. ಇಷ್ಟು ಹೇಳಿದ ನಂತರ ಮುಂದುವರಿಯುತ್ತಾ `...ಸಂಘದ ಸದಸ್ಯರು ರಾಜಕೀಯ ಪಕ್ಷ ಸೇರುವುದಕ್ಕೆ ಅಭ್ಯಂತರ ಇಲ್ಲ...ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್‌ಎಸ್‌ಎಸ್ ಸ್ವತಂತ್ರವಾಗಿದೆ` (ಪ್ಯಾರಾ 18 ಮತ್ತು 19) ಎಂದು ಹೇಳಿ ಆರ್‌ಎಸ್‌ಎಸ್ ತನ್ನ ಸಂವಿಧಾನದಲ್ಲಿಯೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ. ಈ ದ್ವಂದ್ವವನ್ನು ಆರ್‌ಎಸ್‌ಎಸ್ ಇತಿಹಾಸದುದ್ದಕ್ಕೂ ಅದರ ನಡವಳಿಕೆಯಲ್ಲಿ ಕಾಣಬಹುದು.

 ಸಂವಿಧಾನದಲ್ಲಿ ಅವಕಾಶ ಇರುವಂತೆ ಆರ್‌ಎಸ್‌ಎಸ್ ನೇರವಾಗಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿಲ್ಲ, ಬದಲಿಗೆ 1951ರಲ್ಲಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿತು. ಇದರ ನಂತರವೂ ಹಿಂದಿನ ಜನಸಂಘ ಇಲ್ಲವೇ ಈಗಿನ ಬಿಜೆಪಿ ತಮ್ಮ  ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅದು ಒಪ್ಪಿಕೊಳ್ಳುವುದಿಲ್ಲ.

  ಆದರೆ ವಾಜಪೇಯಿ-ಅಡ್ವಾಣಿಯವರಿಂದ ಹಿಡಿದು ಯಡಿಯೂರಪ್ಪ-ಶೆಟ್ಟರ್ ವರೆಗೆ ಎಲ್ಲರೂ ಆರ್‌ಎಸ್‌ಎಸ್‌ನಿಂದಲೇ ಬಂದವರು ಮತ್ತು ಅದಕ್ಕೆ ನಿಷ್ಠರಾಗಿರುವವರು. ಬಿಜೆಪಿಯ ಸಂಘಟನೆಯಲ್ಲಿ ಮಾತ್ರ ಆರ್‌ಎಸ್‌ಎಸ್‌ನಿಂದ ಎರವಲು ಸೇವೆಯ ರೂಪದಲ್ಲಿ ಬಂದ ಸ್ವಯಂಸೇವಕರಿರುತ್ತಾರೆ. 

ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷದಲ್ಲಿಯೂ ಆರ್‌ಎಸ್‌ಎಸ್ ಜತೆ ತನ್ನನ್ನು ಗುರುತಿಸಿಕೊಳ್ಳುವ ನಾಯಕರಿಲ್ಲ. ಇದೇ ರೀತಿ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ಯಾವ ನಾಯಕರನ್ನೂ ಕೂಡಾ ಆರ್‌ಎಸ್‌ಎಸ್ `ನಮ್ಮವನು` ಎಂದು ಒಪ್ಪಿಕೊಳ್ಳುವುದೂ ಇಲ್ಲ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದರೆ ಬೇರೆಬೇರೆ ಅಲ್ಲ, ಅದು ಒಂದೇ ನಾಣ್ಯದ ಎರಡು ಮುಖಗಳು. ಹೀಗಿರುವಾಗ ಬಿಜೆಪಿಯ ಎಲ್ಲ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳಿಗೆ ಆರ್‌ಎಸ್‌ಎಸ್ ಕೂಡಾ ಹೊಣೆ. 

ಈ ಜವಾಬ್ದಾರಿಯಿಂದ ಅದು ನುಣುಚಿಕೊಳ್ಳಲಾಗುವುದಿಲ್ಲ. ಹೊಲಸು ರಾಜಕಾರಣದ ಮೂಲಕ ಗಳಿಸುವ ರಾಜಕೀಯ ಅಧಿಕಾರ ಬೇಕು, ಆದರೆ ಅದರ ನೈತಿಕ ಹೊಣೆಗಾರಿಕೆ ಬೇಡ ಎನ್ನುವುದು ಆರ್‌ಎಸ್‌ಎಸ್‌ನ ಆತ್ಮವಂಚನೆಯ ಮುಖವನ್ನಷ್ಟೇ ಅನಾವರಣಗೊಳಿಸುತ್ತದೆ. ದೇಶದ ಎದುರು ರಾಜ್ಯದ ಜನತೆ ತಲೆತಗ್ಗಿಸಬೇಕಾಗಿ ಬಂದಿರುವ ಇಂದಿನ ನೀತಿಭ್ರಷ್ಟ ರಾಜಕಾರಣದ ಮೂಲ `ಆಪರೇಷನ್ ಕಮಲ` ಎಂಬ ಅನೈತಿಕ ರಾಜಕಾರಣದಲ್ಲಿದೆ.
 
ಶಾಖೆಗಳಲ್ಲಿ ಸೇರುವ ಸ್ವಯಂಸೇವಕರಿಗೆ ಪ್ರಾಮಾಣಿಕತೆಯ ಪಾಠ ಹೇಳುವ ಆರ್‌ಎಸ್‌ಎಸ್ ನಾಯಕರಿಂದ ಇದನ್ನು ತಡೆಯಲು ಸಾಧ್ಯ ಇರಲಿಲ್ಲವೇ? ಈ ರೀತಿಯ ಮಾರ್ಗದರ್ಶನ ನೀಡಲಿಕ್ಕಾಗಿಯೇ ಅಲ್ಲವೇ, ಸಂಘ ತನ್ನ ಪ್ರತಿನಿಧಿಯನ್ನು ಪಕ್ಷದ ಸಂಘಟನೆಗೆ ಎರವಲು ಸೇವೆ ಮೂಲಕ ಕಳುಹಿಸುವುದು. 

ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದಾಗ ಸಂಘಟನಾ ಕಾರ್ಯದರ್ಶಿ ಎಂಬ ಆ ಮಹಾನುಭಾವರು ಏನು ಮಾಡುತ್ತಿದ್ದರು? ದೇಶ ಭಕ್ತಿ ಎಂದರೆ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಮಾಡಿ, ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು ಮಾತ್ರವೇ? ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವುದು ಕೂಡಾ ದೇಶಭಕ್ತಿ ಅಲ್ಲವೇ?

ವಿಚಿತ್ರವೆಂದರೆ ಸಚ್ಚಾರಿತ್ರ್ಯ ಮತ್ತು ಮೌಲ್ಯಾಧರಿತ ರಾಜಕಾರಣದ ಬಗ್ಗೆ ಉಪನ್ಯಾಸ ನೀಡುವ ಆರ್‌ಎಸ್‌ಎಸ್ ನಾಯಕರಿಗೆ ಈಗ ಜೈಲಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡಾಗ ಯಾವ ಮುಜುಗರವೂ ಆಗಲಿಲ್ಲ.  ತಾವು ಖಾಸಗಿಯಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳಿಗೆ ಬಳ್ಳಾರಿಯ ಗಣಿಲೂಟಿಕೋರರಿಂದ  ಕೈತುಂಬಾ ದೇಣಿಗೆ ಪಡೆಯುತ್ತಿದ್ದಾಗ ಸಂಘದ ನಾಯಕರಿಗೆ ಯಾವ ಆತ್ಮಸಾಕ್ಷಿಯೂ  ಕಾಡಲಿಲ್ಲ.
 
ಯಡಿಯೂರಪ್ಪ ಒಬ್ಬ ರಾಜಕಾರಣಿ, ಅಡ್ಡಮಾರ್ಗದಿಂದ ಗಳಿಸಿದ ಹಣವನ್ನು ದೇಣಿಗೆ ಪಡೆದು ಅವರು ರಾಜಕಾರಣ ಮಾಡಿದಾಗ  ತಪ್ಪು ಎಂದು ಹೇಳಬಹುದು, ಆದರೆ ಅಸಹಜ ಎಂದು ಹೇಳಲಾಗುವುದಿಲ್ಲ. ಆದರೆ ಆರ್‌ಎಸ್‌ಎಸ್? ತನ್ನ ಆರು ಅಂಗ ಸಂಸ್ಥೆಗಳು ಮತ್ತು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದೆ ಎಂಬ ಆರೋಪವನ್ನು ಆರ್‌ಎಸ್‌ಎಸ್ ನಿರಾಕರಿಸುವ ಸ್ಥಿತಿಯಲ್ಲಿದೆಯೇ? ಇದು ಅನೈತಿಕ ಎಂದು ಅನಿಸಲಿಲ್ಲವೇ? 

ವಾಸ್ತವ ಸಂಗತಿ ಏನೆಂದರೆ ಆರ್‌ಎಸ್‌ಎಸ್‌ಗೆ ಕೂಡಾ ರಾಜಕೀಯ ಅಧಿಕಾರ ಬೇಕು ಮತ್ತು ಅದರ ಮೂಲಕ ಸುಲಭದಲ್ಲಿ ಬರುವ  ಸುಖ-ಸಂತೋಷಗಳನ್ನು ಅನುಭವಿಸಬೇಕು. 

ತನ್ನ ಮಾತಿಗೆ ಗೋಣು ಆಡಿಸುವ ನಾಯಕರನ್ನಷ್ಟೇ ಅದು ಸಹಿಸಿಕೊಳ್ಳುತ್ತದೆ, ನಿರಾಕರಿಸಿದರೆ ಅದು ವಾಜಪೇಯಿ-ಅಡ್ವಾಣಿ ಇರಲಿ, ಯಡಿಯೂರಪ್ಪ - ಸದಾನಂದಗೌಡರಿರಲಿ ಯಾರ ಗೋಣು ಮುರಿಯಲೂ ಹಿಂದೆಮುಂದೆ ನೋಡುವುದಿಲ್ಲ. ಯಡಿಯೂರಪ್ಪನವರ ಪದಚ್ಯುತಿಗೆ ಆರ್‌ಎಸ್‌ಎಸ್ ಒತ್ತಡ ಹೇರಲು ಭ್ರಷ್ಟಾಚಾರದ ಆರೋಪಗಳಷ್ಟೇ ಕಾರಣ ಅಲ್ಲ, ರಾಜ್ಯದ ಒಂದು ಪ್ರಬಲ ಕೋಮಿಗೆ ಸೇರಿದ ನಾಯಕನೊಬ್ಬ ತಮ್ಮ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅಸುರಕ್ಷತೆಯೂ ಕಾರಣ. 

ಅದೇ ರೀತಿ ಯಡಿಯೂರಪ್ಪನವರು ಸದಾನಂದಗೌಡರ ತಲೆದಂಡ ಕೇಳಿದ್ದನ್ನು ಬೆಂಬಲಿಸಲು  ಗೌಡರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎನ್ನುವ ಅಸಮಾಧಾನವೂ ಕಾರಣ. 

ಇಲ್ಲದೆ ಇದ್ದರೆ  ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದ ಜನತೆ ಪಕ್ಷಭೇಧ ಮರೆತು ಸಜ್ಜನ, ಪ್ರಾಮಾಣಿಕ ಎಂದು ಕೊಂಡಾಡುತ್ತಿದ್ದ ಮುಖ್ಯಮಂತ್ರಿಯ ಬದಲಾವಣೆಗೆ ಆರ್‌ಎಸ್‌ಎಸ್ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಗೌಡರು ಶಾಖೆಗಳಲ್ಲಿ ಹೇಳಿಕೊಟ್ಟಿದ್ದ ಪಾಠಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಬಂದರೂ ಆರ್‌ಎಸ್‌ಎಸ್ ಯಾಕೆ ಅವರ ಕೈಬಿಟ್ಟಿತು? ಉಳಿದೆಲ್ಲ ಕಳಂಕಿತ ಕಡತಗಳ ಜತೆಯಲ್ಲಿ ಆರ್‌ಎಸ್‌ಎಸ್ ನಾಯಕರ ಶಿಫಾರಸನ್ನೊಳಗೊಂಡ ಕಡತಗಳನ್ನೂ ಗೌಡರು ಪಕ್ಕಕ್ಕೆ ತೆಗೆದಿಟ್ಟರೇ? ಈಗಿನ ಆರ್‌ಎಸ್‌ಎಸ್ ಅಖಂಡ ಹಿಂದುತ್ವಕ್ಕೆ ಅರ್ಪಿಸಿಕೊಂಡ ಸಂಸ್ಥೆಯಾಗಿ ಉಳಿದಿಲ್ಲ. 

ಅಲ್ಲಿಯೂ ಜಾತಿ, ಪ್ರಾದೇಶಿಕತೆ, ಸ್ವಾರ್ಥ, ದ್ವೇಷ, ಅಸೂಯೆಗಳಿವೆ. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪನವರು ಇಳಿದದ್ದು, ಗೌಡರು ಹತ್ತಿದ್ದು, ಈಗ ಗೌಡರು ಇಳಿದು ಶೆಟ್ಟರ್ ಹತ್ತಿದ್ದು ಹೊರನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ನಡೆದಿಲ್ಲ. ಇದರ ಹಿಂದೆ ಸೂತ್ರಹಿಡಿದು ಆಡಿಸುತ್ತಿರುವವರು  ಮೈ.ಚ.ಜಯದೇವ, ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು  ದತ್ತಾತ್ರೇಯ ಹೊಸಬಾಳೆ ಎಂಬ ಆರ್‌ಎಸ್‌ಎಸ್‌ನ ಮೂವರು ಪ್ರಮುಖ ನಾಯಕರು. ಇವರಲ್ಲಿ ಅತ್ಯಂತ ವಿವಾದಾತ್ಮಕ ನಾಯಕರಾದ ಪ್ರಭಾಕರ ಭಟ್ಟರು ಈಗ ಕುಂದಾಪುರದ ಸಜ್ಜನ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿಯವರ ಸಾತ್ವಿಕ ಸಿಟ್ಟಿಗೆ ಈಡಾಗಿದ್ದಾರೆ.

ರಾಜ್ಯದಂತೆ ಕೇಂದ್ರದಲ್ಲಿಯೂ ಈ ಅಧಿಕಾರದ ಆಟ ಸಾಗಿದೆ.  ವಾಜಪೇಯಿ-ಅಡ್ವಾಣಿಯವರಂತಹ ಹಿರಿಯ ಮತ್ತು ಜನಪ್ರಿಯ ನಾಯಕರಿದ್ದಾಗ ಬಾಲ ಮುದುಡಿಕೊಂಡಿದ್ದ ಆರ್‌ಎಸ್‌ಎಸ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಡೀ ಪಕ್ಷವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದೆ. 

ಎಲ್.ಕೆ.ಅಡ್ವಾಣಿಯವರಂತಹ  ಹಿರಿಯ ನಾಯಕನ ವಿರುದ್ಧ ನಿತಿನ್ ಗಡ್ಕರಿಯವರಂತಹ ಯಃಕಶ್ಚಿತ್ ನಾಯಕನನ್ನು ಎತ್ತಿಕಟ್ಟಿದೆ. ನರೇಂದ್ರಮೋದಿಯವರನ್ನು ಮಣಿಸಲು ಹೋಗಿ ಸಾಧ್ಯವಾಗದೆ ಸದ್ಯಕ್ಕೆ ಅವರಿಗೆ ಶರಣಾಗಿದೆ. 

ಹೇಳುವವರು-ಕೇಳುವವರು ಇಲ್ಲದ ಪುಂಡುಪೋಕರಿಯಂತೆ ಬಿಜೆಪಿ ಬೆಳೆಯಲು ದುರ್ಬಲ ಹೈಕಮಾಂಡ್ ಕಾರಣ ಎಂಬ ಆರೋಪ ಪಕ್ಷದ ಒಳಗೆ ಮತ್ತು ಹೊರಗೆ ಕೇಳಿಬರುತ್ತಿದೆ. ಅದು ದುರ್ಬಲಗೊಳ್ಳಲು ಮುಖ್ಯ ಕಾರಣ- ಪರ್ಯಾಯ ಹೈಕಮಾಂಡ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದು ರಾಜಕೀಯ ರಂಗಸ್ಥಳದ ನೇಪಥ್ಯದಲ್ಲಿ  ಸೂತ್ರ ಹಿಡಿದುಕೊಂಡು ನಿಂತಿದೆ. ನಾಟಕ ಕೆಟ್ಟರೆ ಪಾತ್ರಧಾರಿಗಳಿಗೆ ಜನ ಕಲ್ಲು ಹೊಡೆಯುತ್ತಾರೆ, ಮರೆಯಲ್ಲಿ ನಿಂತ ಸೂತ್ರಧಾರರು ಸುರಕ್ಷಿತ

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ July 09, 2012


ದಿನಾಂಕ: ಜೂನ್ 2, 2008, ಸ್ಥಳ: ದೆಹಲಿಯ  `26, ತುಘಲಕ್ ಕ್ರೆಸೆಂಟ್`ನಲ್ಲಿರುವ ಲೋಕಸಭಾ ಸದಸ್ಯ ಅನಂತಕುಮಾರ್ ಮನೆ. ಕರ್ನಾಟಕದಲ್ಲಿ ಬಿಜೆಪಿಯ ವಿಜಯೋತ್ಸವದ ಕಾವು ಇನ್ನೂ ಆರಿರಲಿಲ್ಲ, ಆಗಲೇ ಭಿನ್ನಮತದ ಕಿಡಿ ಹಾರಿತ್ತು.

`ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ` ಎಂದು ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದರು,  `ಸಚಿವನನ್ನಾಗಿ ಮಾಡಿದರೆ ಸರಿ, ವಿಧಾನಸಭಾ ಅಧ್ಯಕ್ಷ ಖಂಡಿತ ಆಗಲಾರೆ` ಎಂದು ಶೆಟ್ಟರ್ ಹಟ ಹಿಡಿದು ಕೂತಿದ್ದರು.

ಅನಂತ ಕುಮಾರ್‌ಮನೆಯಲ್ಲಿ  ಆ ದಿನ ಸಂಜೆ ಶೆಟ್ಟರ್ ಹೆಚ್ಚುಕಡಿಮೆ `ಗೃಹಬಂಧನ`ದಲ್ಲಿದ್ದರು. ಅಲ್ಲಿದ್ದ ಇತರರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಥಿಂಕ್‌ಟ್ಯಾಂಕ್ ಸದಸ್ಯ ವಾಮನಾಚಾರ್ ಮತ್ತು ಸಂಸದ ಪ್ರಹ್ಲಾದ ಜೋಷಿ. ಮಧ್ಯಾಹ್ನವೇ ಎಲ್.ಕೆ.ಅಡ್ವಾಣಿ ಮನೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿತ್ತು.

ಸಂಜೆಯ ಮಾತುಕತೆಯ ಫಲಿತಾಂಶ ತಿಳಿಯಲು ಗೇಟ್ ಬಳಿ ಕಾಯುತ್ತಿದ್ದ ಪತ್ರಕರ್ತರ ಒತ್ತಾಯಕ್ಕೆ ಮಣಿದು ಹೊರ ಬಂದ ಶೆಟ್ಟರ್ ಅವರ ಕಳಾಹೀನ ಮುಖವೇ ಒಳಗೆ ನಡೆಯುತ್ತಿದ್ದುದನ್ನು ಹೇಳಿತ್ತು. `ಎಲ್ಲವೂ ಪಕ್ಷದ ಹಿರಿಯ ನಾಯಕರ ಕೈಯಲ್ಲಿದೆ, ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ` ಎಂದು ಚುಟುಕಾಗಿ ಪ್ರತಿಕ್ರಿಯಿಸಿ  ಮರುಪ್ರಶ್ನೆಗೂ ಕಿವಿಗೊಡದೆ ಅವರು ಮನೆಯೊಳಗೆ ಹೋಗಿ ಸೇರಿಕೊಂಡಿದ್ದರು.

ಮಧ್ಯರಾತ್ರಿ ಹೊತ್ತಿಗೆ ನನಗೆ ಪೋನ್‌ಗೆ ಸಿಕ್ಕ ಶೆಟ್ಟರ್ `ಪಕ್ಷದ ವರಿಷ್ಠರ ಆದೇಶಕ್ಕೆ ತಲೆಬಾಗಿದ್ದೇನೆ` ಎಂದಷ್ಟೇ ಹೇಳಿ ಮಾತು ಮುಗಿಸಲು ಪ್ರಯತ್ನಿಸಿದ್ದರು. ಇನ್ನಷ್ಟು ಕಾಡಿದಾಗ ಕಳೆದೆರಡು ವರ್ಷಗಳಲ್ಲಿ ತಮಗೆ ಆಗಿರುವ ಅನ್ಯಾಯ-ಅವಮಾನಗಳ ವಿವರಗಳನ್ನೆಲ್ಲ ಬಿಚ್ಚಿಟ್ಟಿದ್ದರು. ಯಡಿಯೂರಪ್ಪನವರು ವಿಶೇಷ ಆಸಕ್ತಿ ವಹಿಸಿ ಜೆಡಿ (ಯು)ನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಮಾತ್ರವಲ್ಲ ಮೊದಲ ಕಂತಿನಲ್ಲಿಯೇ ಅವರನ್ನು ಸಚಿವರನ್ನಾಗಿ ಮಾಡಿದ್ದು ಶೆಟ್ಟರ್ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿತ್ತು. ಹುಬ್ಬಳ್ಳಿ-ಧಾರವಾಡದ ಭಾಗದಲ್ಲಿ  ಪ್ರತಿಸ್ಪರ್ಧಿಯೊಬ್ಬನನ್ನು ಹುಟ್ಟುಹಾಕಿ ತಮ್ಮ ವರ್ಚಸ್ಸನ್ನು ಕುಂದಿಸುವ ದುರುದ್ದೇಶದಿಂದಲೇ ಹೀಗೆ  ಮಾಡಲಾಗಿದೆ ಎಂದು ಅವರು ತಿಳಿದುಕೊಂಡಿದ್ದರು. `ಅವರೇ (ಯಡಿಯೂರಪ್ಪ) ಲೀಡರ್, ನಾನಲ್ಲ.

ಅದನ್ನು ನಾನು ಮಾತ್ರವಲ್ಲ ರಾಜ್ಯದ ಮತದಾರರು ಒಪ್ಪಿಕೊಂಡಿದ್ದಾರೆ.  ಹೀಗಿದ್ದರೂ ನನ್ನ ಮೇಲೆ ಯಾಕೆ ದ್ವೇಷ ಸಾಧಿಸುತ್ತಾರೋ? ಅವರಿಗೆ ಯಾಕೆ ಇಷ್ಟೊಂದು `ಇನ್‌ಸೆಕ್ಯುರಿಟಿ`ಯೋ ಗೊತ್ತಿಲ್ಲ` ಎಂದು ಅವರು ನೋವಿನಿಂದ ಹೇಳಿದ್ದರು. ಅದರ ನಂತರ ನಡೆದುದೆಲ್ಲವೂ ಈಗ ಇತಿಹಾಸ.

ಆ ನಾಟಕೀಯ ವಿದ್ಯಮಾನ ನಡೆದು ಸರಿಯಾಗಿ ನಾಲ್ಕುವರ್ಷಗಳು ಕಳೆದಿವೆ. ಇತಿಹಾಸದ ಚಕ್ರ ಈಗ  ಸುತ್ತು ಪೂರ್ಣಗೊಳಿಸಿದೆ. ಅದೇ ಅನಂತಕುಮಾರ್ ಮನೆಯ `ರಂಗಸ್ಥಳ` ಮತ್ತು ಹೆಚ್ಚುಕಡಿಮೆ ಅದೇ ಪಾತ್ರಧಾರಿಗಳು. ಆದರೆ ನಾಟಕದ ಕತೆ ಮಾತ್ರ ಸಂಪೂರ್ಣ ತದ್ವಿರುದ್ಧ. ಶೆಟ್ಟರ್ ಅವರನ್ನು ಸಂಪುಟಕ್ಕೂ ಸೇರಿಸಬಾರದೆಂದು ರಚ್ಚೆಹಿಡಿದು ಕೂತಿದ್ದ ಯಡಿಯೂರಪ್ಪನವರು  ಅವರನ್ನು ಮುಖ್ಯಮಂತ್ರಿ ಮಾಡಲೇ ಬೇಕೆಂಬ  ಜಿದ್ದಾಜಿದ್ದಿ ನಡೆಸಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ತನ್ನ `ದೇವಪಿತ` (ಗಾಡ್‌ಫಾದರ್)ನಂತೆ ಅವತರಿಸಿರುವ ಯಡಿಯೂರಪ್ಪನವರ ಬಗ್ಗೆ ಶೆಟ್ಟರ್ ಮನಸ್ಸಲ್ಲಿ ಈಗ ಏನಿದೆ ಎನ್ನುವುದು ಗೊತ್ತಿಲ್ಲ. ಈ ಇತಿಹಾಸದ ಬೆಳಕಿನಿಂದ ವರ್ತಮಾನದ ವಿದ್ಯಮಾನಗಳನ್ನು ನೋಡಿದರೆ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ನುಡಿಯುವುದು ಬಹಳ ಕಷ್ಟದ ಕೆಲಸ ಅಲ್ಲ.

ವರ್ತಮಾನಕ್ಕೆ ಬರೋಣ. ಡಿ.ವಿ.ಸದಾನಂದ ಗೌಡರನ್ನು ಬದಲಾಯಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ  ಬಿಜೆಪಿಯೊಳಗಿನ ಬಿಕ್ಕಟ್ಟು ಶಾಶ್ವತ ಪರಿಹಾರ ಕಾಣಲಿದೆ ಎಂದು ಯಾರಾದರೂ ಹೇಳಿದರೆ ಅವರನ್ನು ಸುಳ್ಳುಗಾರರೆಂದೂ,  ಈ ಹೇಳಿಕೆಯನ್ನು ಯಾರಾದರೂ ನಂಬುತ್ತೇನೆ ಎಂದು ಹೇಳಿದರೆ ಅವರನ್ನು ಮೂರ್ಖರೆಂದೂ ಕರೆಯಬೇಕಾಗುತ್ತದೆ. ಸಮಸ್ಯೆಯನ್ನು ಬಗೆಹರಿಸಲು ಹೊರಡುವವರು ಮೊದಲು ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಡಯಾಗ್ನಿಸಿಸ್ ತಪ್ಪು ಆಗಿಬಿಟ್ಟರೆ ಚಿಕಿತ್ಸೆಯೂ ತಪ್ಪಾಗಿ ರೋಗ ಉಲ್ಬಣಗೊಳ್ಳುತ್ತದೆಯೇ ಹೊರತು ಗುಣವಾಗುವುದಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವುದು ಈ `ರಾಂಗ್ ಡಯಾಗ್ನಿಸಿಸ್`. ಆ ಪಕ್ಷದ ಸಮಸ್ಯೆ ಸದಾನಂದ ಗೌಡ, ಈಶ್ವರಪ್ಪ, ಶೆಟ್ಟರ್..ಇವರ‌್ಯಾರೂ ಅಲ್ಲ. ಅದರ ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಗಾಯಕ್ಕೆ ಔಷಧ ಹಚ್ಚದೆ ನೋವುನಿವಾರಕ ಗುಳಿಗೆ ನೀಡಿ ಮಲಗಿಸಿದ ಹಾಗೆ ಆಗುತ್ತದೆ, ಗಾಯ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಗೌಡರ ಪದಚ್ಯುತಿ, ಶೆಟ್ಟರ್ ನೇಮಕ, ಜತೆಗೊಬ್ಬ ಉಪಮುಖ್ಯಮಂತ್ರಿ, ಸಂಪುಟ ಪುನರ‌್ರಚನೆ ಮೊದಲಾದ ಯಾವುದೇ ಔಷಧಿಯಿಂದ ಬಿಜೆಪಿಯನ್ನು ಕಾಡುತ್ತಿರುವ ಭಿನ್ನಮತದ ರೋಗವನ್ನು ಕನಿಷ್ಠ ಮುಂದಿನ ಚುನಾವಣೆವರೆಗೂ ಗುಣಪಡಿಸಲು ಸಾಧ್ಯವಾಗಲಾರದು. ಇವೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ.

ನಾಲ್ಕು ವರ್ಷಗಳ ಹಿಂದೆ ಯಡಿಯೂರಪ್ಪನವರು ಒಂದು ರಾಜ್ಯ ಗೆದ್ದುಕೊಂಡು ಬಂದ ವೀರನಾಯಕನಾಗಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವ ಅವಕಾಶವನ್ನು ತಂದುಕೊಟ್ಟ ಅವರು ಪಕ್ಷದ ಪಾಲಿನ ಭಾಗ್ಯವಿಧಾತರಾಗಿದ್ದರು. ರಾಜಕೀಯ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದ ಆ ದಿನಗಳಲ್ಲಿ `ನೂರು ಶೆಟ್ಟರ್, ಸಾವಿರ ಈಶ್ವರಪ್ಪ, ಲಕ್ಷ ಅನಂತಕುಮಾರ್‌ನಂತಹವರು ಎದುರುನಿಂತರೂ ನಿಭಾಯಿಸಿಕೊಂಡುಹೋಗಬಲ್ಲೆ` ಎಂಬ ಆತ್ಮವಿಶ್ವಾಸವನ್ನು ಅವರು ಪ್ರದರ್ಶಿಸಬೇಕಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಶೆಟ್ಟರ್ ಅವರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಂಟಕವಾಗಬಲ್ಲ ಶತ್ರು ಕಾಣತೊಡಗಿದ್ದ. ವಿರೋಧ ಪಕ್ಷದ ನಾಯಕರಾಗಿ ಆತ್ಮವಿಶ್ವಾಸದಿಂದ ರಾಜಕೀಯ ಮಾಡುತ್ತಾ ಬಂದಿದ್ದ ಯಡಿಯೂರಪ್ಪನವರು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಹೊತ್ತಿಗೆ ಅಸುರಕ್ಷತೆಯ ಭಾವನೆಯಿಂದ ನರಳತೊಡಗಿದ್ದೇ ಅವರ, ಪಕ್ಷದ ಮತ್ತು ರಾಜ್ಯದ ಜನತೆಯ ಪಾಲಿನ ದುರಂತ.

ಅಂದು ಅವರನ್ನು ಕಾಡಿದ ಅಸುರಕ್ಷತೆಯ ಹಳವಂಡ ಮುಂದುವರಿಯುತ್ತಲೇ ಬಂದು ಈಗ ಸದಾನಂದ ಗೌಡರ ತಲೆದಂಡ ಕೇಳುತ್ತಿದೆ. ತಲೆಗೆ ಹತ್ತಿರುವ ಅದರ ಸವಾರಿ ಇಲ್ಲಿಗೆ ನಿಂತುಬಿಡುತ್ತದೆ ಎಂದು ಹೇಳುವ ಹಾಗಿಲ್ಲ. ಸದಾನಂದ ಗೌಡರು ರಹಸ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾದವರು, ಆ ದೃಷ್ಟಿಯಿಂದ ನೋಡಿದರೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪನವರಲ್ಲ. ಆದರೆ ಅವರ ಬೆಂಬಲ ಇಲ್ಲದೆ ಇದ್ದರೆ ಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದೂ ನಿಜ.

ಯಡಿಯೂರಪ್ಪನವರಿಗೆ ಇಂತಹದ್ದೊಂದು ನಂಬಿಕೆ ಗೌಡರ ಮೇಲೆ ಹುಟ್ಟಲು ಕಾರಣ ಇಬ್ಬರ ನಡುವಿನ ದೀರ್ಘಕಾಲದ ಒಡನಾಟ. ಈ ರೀತಿ ತಮಗೆ ವಿಧೇಯರಾಗಿದ್ದ, ಒಕ್ಕಲಿಗರೆಂದು ಕರೆಸಿಕೊಂಡರೂ ಪೂರ್ಣರೂಪದ ಒಕ್ಕಲಿಗರಲ್ಲದ, ಸೌಮ್ಯ ಸ್ವಭಾವದ ಸದಾನಂದ ಗೌಡರನ್ನೇ ಯಡಿಯೂರಪ್ಪನವರು ನಂಬಲಿಲ್ಲ ಎಂದ ಮೇಲೆ, ತಮ್ಮಂತೆಯೇ ಜಾತಿ ಬಲ ಹೊಂದಿರುವ, ಯಾರಿಗೂ ಪೂರ್ಣವಾಗಿ ವಿಧೇಯರಾಗಿ ಉಳಿಯದೆ ಇರುವ,  ಹಳೆಯ ದ್ವೇಷದ ಸೇಡು ತೀರಿಸಿಕೊಳ್ಳಲು ಅವಕಾಶ ಇರುವಂತಹ ಜಗದೀಶ್ ಶೆಟ್ಟರ್ ಅವರನ್ನು ಸಹಿಸಿಕೊಳ್ಳಬಹುದೇ?  ಇದು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವಂತಹ ಪ್ರಶ್ನೆ.
ಅಧಿಕಾರದ ಕುರ್ಚಿಯ ಮಹತ್ವವೇ ಅಂತಹದ್ದು. ಅದರ ಮೇಲೇರಿ ಕೂತವನ ತಲೆಯಲ್ಲಿ ಅಲ್ಲಿಯ ವರೆಗೆ ಇಲ್ಲದ ಆಸೆ-ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತವೆ, ಎಂತಹ ಪುಕ್ಕಲು
ಸ್ವಭಾವದವರ ಎದೆಯಲ್ಲಿಯೂ ಸ್ಥಾನದ ಬಲ ಒಂದಷ್ಟು ಧೈರ್ಯವನ್ನು ತುಂಬುತ್ತದೆ. ಇಂದಿರಾಗಾಂಧಿ ಹೇಳಿದರೆ ಪೊರಕೆ ಎತ್ತಿಕೊಂಡು ಗುಡಿಸಬಲ್ಲೆ ಎಂದು ಹೇಳಿದ್ದ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರೇ ರಾಜೀವ್‌ಗಾಂಧಿಯವರನ್ನು ಪದಚ್ಯುತಿಗೊಳಿಸಲು ಹೊರಟಿಲ್ಲವೇ ಹಾಗೆ. ಜಗದೀಶ್ ಶೆಟ್ಟರ್ ಅವರಿಗೆ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಂಡರೂ  ಸಮರ್ಥಿಸಿಕೊಳ್ಳಲು ಕಾರಣಗಳಿವೆ, ಅಂತಹ ಅವಕಾಶವೂ ಒದಗಿ ಬಂದಿದೆ. ಸಚಿವನಾಗುವ ಸಾಧ್ಯತೆ ಇದ್ದಾಗಲೂ ಯಡಿಯೂರಪ್ಪ ಬಿಡಲಿಲ್ಲ, ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗಲೂ ತಪ್ಪಿಸಿದ್ದರು. ರಾಜಕೀಯವಾಗಿ ಮುಗಿಸಿಬಿಡಬೇಕೆಂದು ಸ್ಥಳೀಯವಾಗಿ ಪ್ರತಿಸ್ಪರ್ಧಿಗಳನ್ನು ಸೃಷ್ಟಿಸಿ ಬೆಳೆಸಿದರು.

ಇವೆಲ್ಲವನ್ನೂ ಶೆಟ್ಟರ್ ಹೊಟ್ಟೆಯಲ್ಲಿ ಹಾಕಿಕೊಂಡು ಯಡಿಯೂರಪ್ಪನವರ ಆಜ್ಞಾನುವರ್ತಿಯಾಗಿ ಸರ್ಕಾರವನ್ನು ನಡೆಸಿಕೊಂಡು ಹೋದರೆ ಪಕ್ಷಕ್ಕೆ ನೆಮ್ಮದಿ, ಅನಿಶ್ಚಿತ ರಾಜಕಾರಣದಿಂದ ಬೇಸತ್ತುಹೋದ ರಾಜ್ಯದ ಜನತೆಗೂ ಶಾಂತಿ. ಶೆಟ್ಟರ್ ಅಷ್ಟೊಂದು ವಿಶಾಲ ಹೃದಯಿಗಳಾಗದೆ ಮುಯ್ಯಿ ತೀರಿಸಿಕೊಳ್ಳಲು ಹೊರಟರೆ ಅದಕ್ಕೂ ಅವಕಾಶ ಇದೆ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜರ್ಝರಿತರಾಗಿರುವ ಈಗಿನ ಯಡಿಯೂರಪ್ಪ, ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿಯೇ ಕೂತು ದೆಹಲಿಯಲ್ಲಿದ್ದ ಶೆಟ್ಟರ್ ಅವರನ್ನು ಮಣಿಸಿದ ಯಡಿಯೂರಪ್ಪ ಅಲ್ಲ. ಕೈ ತಪ್ಪಿಹೋಗಿರುವ ಅಧಿಕಾರ, ಮೈ ತುಂಬಾ ಹರಡಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು ಮತ್ತು ಹೆಚ್ಚುತ್ತಿರುವ ರಾಜಕೀಯ ಶತ್ರುಗಳಿಂದಾಗಿ ಅವರೊಬ್ಬ ದುರ್ಬಲ ನಾಯಕ. ಶತ್ರು ದುರ್ಬಲನಾಗಿದ್ದಾಗ ಕ್ಷಮಿಸುವವರು ಕಡಿಮೆ.

ಚುನಾವಣೆಗೆ ಹನ್ನೊಂದು ತಿಂಗಳು ಇರುವಾಗ ಮುಖ್ಯಮಂತ್ರಿಯಾದವರ ಕಣ್ಣು ಸಹಜವಾಗಿ ಚುನಾವಣೆಯ ನಂತರದ ಐದು ವರ್ಷಗಳ ಮೇಲಿರುತ್ತದೆ. ಒದಗಿಬಂದಿರುವ ಅವಕಾಶವನ್ನು ಕಳೆದುಕೊಳ್ಳುವಷ್ಟು ಶೆಟ್ಟರ್ ದಡ್ಡರಿರಲಾರರು. ರಾಜಕೀಯವಾಗಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಅನುಕೂಲತೆಗಳು ಶೆಟ್ಟರ್ ಅವರಿಗಿದೆ. ಅವರು ಬಿಜೆಪಿಯ ಶಕ್ತಿಕೇಂದ್ರವಾದ ಉತ್ತರ ಕರ್ನಾಟಕದಿಂದ ಬಂದವರು, ಲಿಂಗಾಯತರಲ್ಲಿ ಹೆಚ್ಚು ಶ್ರಿಮಂತರಾಗಿರುವ ಬಣಜಿಗ ಪಂಗಡಕ್ಕೆ ಸೇರಿದವರು, ಕಾನೂನು ಕಲಿತು ಒಂದಷ್ಟು ವರ್ಷ ವಕೀಲಿ ವೃತ್ತಿ ಮಾಡಿದವರು, ಯಡಿಯೂರಪ್ಪನವರಿಗೆ ಹೋಲಿಸಿದರೆ ಇನ್ನೂ ಯುವಕರು, ಇಷ್ಟು ಮಾತ್ರವಲ್ಲ ಸಂಘಪರಿವಾರದ ಜತೆ ಪ್ರಾರಂಭದಿಂದಲೂ ಗುರುತಿಸಿಕೊಂಡು ಬಂದ ಕುಟುಂಬದ ಸದಸ್ಯರಾಗಿರುವ ಕಾರಣ ಅವರ ಪಕ್ಷನಿಷ್ಠೆ ಪ್ರಶ್ನಾತೀತವಾದುದು. ಈ ಯಾವ ಅನುಕೂಲತೆಗಳೂ ಯಡಿಯೂರಪ್ಪನವರಿಗೆ ಇರಲಿಲ್ಲ. 

ಬಿ.ಎಸ್.ಯಡಿಯೂರಪ್ಪನವರ ದೊಡ್ಡ ರಾಜಕೀಯ ಬಲ-ಜಾತಿ. ಮುಖ್ಯಮಂತ್ರಿಗಳಾದ ನಂತರ ತಮ್ಮ ಸ್ಥಾನಕ್ಕೆ ಅಪಾಯ ಎದುರಾದಾಗೆಲ್ಲ ಅವರು ಲಿಂಗಾಯತ ಮಠಗಳ ಮೂಲಕ ಬಳಸಿಕೊಂಡಿದ್ದು ಜಾತಿಗಳನ್ನು. ಜಾತಿ ಎನ್ನುವುದು ಬೆಂಕಿ ಇದ್ದ ಹಾಗೆ, ಅದರ ಜತೆಗೆ ಆಟವಾಡಲು ಗೊತ್ತಿರಬೇಕು ಇಲ್ಲದೆ ಇದ್ದರೆ ಅದೇ ಬೆಂಕಿ ಸುಟ್ಟು ಹಾಕುತ್ತದೆ. ಬಿಹಾರದಲ್ಲಿ ಲಾಲುಪ್ರಸಾದ್ ಇದೇ ಜಾತಿ ಕಾರ್ಡ್ ಬಳಸಿ ಹದಿನಾರು ವರ್ಷಗಳ ಕಾಲ ಆ ರಾಜ್ಯವನ್ನು ಆಳಿದರು. ನಿತೀಶ್‌ಕುಮಾರ್ ಬಂದು ಅದೇ ಜಾತಿಕಾರ್ಡಿನ ಮಗ್ಗುಲು ಬದಲಿಸಿ ಆಡಿದ ಆಟಕ್ಕೆ ಲಾಲು ಮಣ್ಣುಮುಕ್ಕಿದರು. ಜಗದೀಶ್ ಶೆಟ್ಟರ್ ಅವರ ಮುಂದೆ ಯಡಿಯೂರಪ್ಪನವರು ಆಡುತ್ತಾ ಬಂದ ಜಾತಿಯ ಆಟದ ಮಾದರಿ ಇದೆ. ಅದನ್ನೇ ಇಟ್ಟುಕೊಂಡು ಆಡುವುದು ಅವರಿಗೂ ಕಷ್ಟವೇನಲ್ಲ. ಯಡಿಯೂರಪ್ಪನವರಷ್ಟು ಜಾತಿ-ಮಠಗಳ ಮೋಹಿಯಲ್ಲದೆ ಇದ್ದರೂ ಶೆಟ್ಟರ್ ನಾಳೆಯಿಂದ ರಾಜ್ಯದ ಪ್ರಮುಖ ಮಠಗಳಿಗೆ ಹೋಗಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದ ಕೂಡಲೇ ಯಡಿಯೂರಪ್ಪನವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಖಂಡಿತ. ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಅನಂತಕುಮಾರ್ ಮತ್ತು ದೇವೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಬಿಟ್ಟರೆ ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ July 02, 2012

ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾರ್ಥಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.  

ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ. 

ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ `ನೀವೇನು ಸಾಚಾನಾ?` ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು. 

ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು `ಕಪ್ಪುಕುರಿ`ಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ `ಕಪ್ಪುಕುರಿ`ಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?

ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ `ಸಮೂಹ`ವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.

ಮುಖ್ಯವಾಗಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.

ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ` ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
 
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಿಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.

ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
 
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಋಣಭಾರದಲ್ಲಿರುವಂತೆ ಮಾಡಿದೆ.
 
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.

 ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ,ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ. 

ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕರ್ನಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. 

ಪತ್ರಿಕಾಮಂಡಳಿಯ ಏರ್‌ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ `ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ` ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
 
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
 
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್‌ಗಳು ವರದಿ ಮಾಡಲು ಸಾಧ್ಯವಾಗಬಹುದು.

ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. 

ಶಿಕ್ಷಣ, ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್‌ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು. 

ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿರ್ಧಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ `ಆಪರೇಷನ್ ಕಮಲ`ದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
 
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ. 

ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಿಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
 
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಿಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು. 

25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್‌ನಲ್ಲಿಯೇ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
 
ಕ್ಯಾಂಟೀನ್‌ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಿರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.  

ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸರ್ಕಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ. 

ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಿಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀರ್ಮಾನಕ್ಕೆ ಬರಲು ಆತನಿಗೆ ಸಾಧ್ಯವಾಗಬೇಕು.

ಕೊನೆಯದಾಗಿ ಪತ್ರಕರ್ತ ಬೆನ್ನಿಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್‌ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ. 

ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಿರ್ಧಾರವಾಗುವುದು. ಆಧುನಿಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ. 

ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀರ್ಮಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ. 

ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ. 

ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
 
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾರ್ಮಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು. 

ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.