Sunday, September 14, 2014

ಫೇಸ್ ಬುಕ್ ಬಳಸುವವರಿಗಾಗಿ..

ಪ್ರೀತಿಯ ಗೆಳೆಯರೇ,
ಫೇಸ್ ಬುಕ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಸಿ-ಬಿಸಿ ಚರ್ಚೆಗಳಿಂದ ನಾನು ಕಲಿತಿರುವ ಕೆಲವು ಪಾಠಗಳು ಇಲ್ಲಿವೆ. ಇದರಿಂದ ನನಗಿಂತ ಹಿರಿಯರಲ್ಲದೆ ಇದ್ದರೂ ಕಿರಿಯರಾದರೂ ಒಂದಿಷ್ಟು ಕಲಿಯಬಹುದೆಂಬ ನಿರೀಕ್ಷೆಯಲ್ಲಿ ದಾಖಲಿಸುತ್ತಿದ್ದೇನೆ.
1. ಫೇಸ್ ಬುಕ್ ಎಂದರೆ ಗೋಡೆ ಬರಹ ಇದ್ದ ಹಾಗೆ . ಜವಾಬ್ದಾರಿ ವಹಿಸಿಕೊಳ್ಳುವವರು ಯಾರೂ ಇಲ್ಲ. ಯಾರೂ ಎಲ್ಲಿಯಾದರೂ ಕದ್ದುಮುಚ್ಚಿ ಬರೆದುಬಿಡಬಹುದು. ತನ್ನ ಹೆಸರು ಬರೆಯದೆ ಇಲ್ಲವೆ ದುರ್ಬುದ್ದಿಯವರಾಗಿದ್ದರೆ ಬೇರೆಯವರ ಮೇಲೆ ಅನುಮಾನ ಮೂಡಿಸುವ ರೀತಿಯ ಸುಳ್ಳು ಹೆಸರನ್ನು ದಾಖಲಿಸಿ ಇಂತಹ ಬರಹಗಳನ್ನು ಬರೆಯಬಹುದು. ಆದ್ದರಿಂದ ಬರೆದವರ ಖಾತೆಯ ಮೂಲಕ್ಕೆ ಹೋಗಿ ಆತನ ಹಿಂದಿನ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ನಂತರ ಆ ಬರಹದ ಬಗ್ಗೆ ಪ್ರತಿಕ್ರಿಯಿಸುವ ತೀರ್ಮಾನ ಕೈಗೊಳ್ಳುವುದು ಸೂಕ್ತ.

2.ಅವಸರದ ಪ್ರತಿಕ್ರಿಯೆ ಯಾವಾಗಲೂ ಅವಸರದ ವಾಹನಚಾಲನೆಯಂತೆ ಅಪಾಯಕಾರಿ, ಅಪಘಾತವಾಗುವ ಸಾಧ್ಯತೆಗಳೇ ಹೆಚ್ಚು. ನಂತರ ನೊಂದುಕೊಳ್ಳುವುದಕ್ಕಿಂತ ತನ್ನ ಬರಹ ಯಾರನ್ನು ಗುರಿಯಾಗಿಟ್ಟುಕೊಂಡಿದೆಯೋ ಅವರ ಸ್ಥಾನದಲ್ಲಿ ನಿಂತು ಯೋಚಿಸಿ ಬರೆಯುವುದು ಒಳಿತು. ಶತ್ರುಗಳು ಇರುವುದೇ ನಮ್ಮಿಂದ ನೋವು ತಿನ್ನುವುದಕ್ಕೆ, ಅವರನ್ನು ಬಿಟ್ಟಾಕಿ. ಆದರೆ ಮಿತ್ರರ ಮನಸ್ಸಿಗೆ ನೋವುಂಟು ಮಾಡಬಾರದು. ಸ್ನೇಹ ಅಮೂಲ್ಯವಾದುದು, ದಿನದಿಂದ ದಿನಕ್ಕೆ ನಿಜವಾದ ಸ್ನೇಹಿತರು ದುಬಾರಿಯಾಗುತ್ತಿದ್ದಾರೆ ಗೊತ್ತಿರಲಿ.
3. ಬಳಸುವ ಭಾಷೆಯ ಬಗ್ಗೆ ಎರಡು ಬಾರಿ ಯೋಚನೆ ಮಾಡಬೇಕು. ಜಾತಿ-ಧರ್ಮ, ಹೆಣ್ಣು-ಗಂಡು ಮೊದಲಾದ ಭಾವುಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನಷ್ಟು ಎಚ್ಚರ ವಹಿಸಬೇಕು. ತಕ್ಷಣದ ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ. ಬಾಣ ಕೈಯಿಂದ ಜಾರಿಹೋದ ನಂತರ ಅದು ನೇರವಾಗಿ ಗುರಿಯಿಟ್ಟವರ ಎದೆಯಲ್ಲಿ ನೆಟ್ಟುಬಿಡುತ್ತದೆ. ಎಲ್ಲರೂ ಅದನ್ನು ಕ್ಷಮಿಸುವಷ್ಟು ಉದಾರಿಯಾಗಿರುವುದಿಲ್ಲ.
4. ಟ್ಯಾಗ್ ಮಾಡಿದ ಬರಹಕ್ಕೆ ಇಲ್ಲವೇ ಯಾರದೋ ಪ್ರತಿಕ್ರಿಯೆ ರೂಪದ ಸ್ಟೇಟಸ್ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರವಹಿಸುವುದು ಒಳ್ಳೆಯದು. ಮೂಲಬರಹವನ್ನು ಹುಡುಕಿ ಓದಿತಿಳಿದುಕೊಂಡು ಪ್ರತಿಕ್ರಿಯಿಸುವುದು ಜಾಣತನ. ಇಲ್ಲದೆ ಹೋದರೆ ಯಾರಿಗೋ ಬಿಡಬೇಕಾದ ಬಾಣ ಅನ್ಯಾಯವಾಗಿ ಇನ್ಯಾರಿಗೋ ತಗಲಿ ಘಾಸಿಯಾಗುವ ಸಂಭವ ಹೆಚ್ಚು.
5. ಇದೇ ರೀತಿ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ಕೊಡುವಾಗ ಜಾಗರೂಕರಾಗಿಬೇಕು. ಒಮ್ಮೊಮ್ಮೆ ಪ್ರತಿಕ್ರಿಯಿಸುವವರು ಪೂರ್ವಗ್ರಹ ಪೀಡಿತರಾಗಿ ಮೂಲಬರಹದಲ್ಲಿನ ವಿಚಾರಗಳನ್ನು ನಿರ್ಲಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಮೂಲ ಬರಹಗಾರರ ಮೇಲೆ ಆರೋಪಿಸಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದರಿಂದಾಗಿ ಮೂಲಬರಹಗಾರ ಪ್ರತಿಕ್ರಿಯಿಸಿದ ತನ್ನ ಗೆಳೆಯರನ್ನೇ ತಪ್ಪಾಗಿ ತಿಳಿದುಕೊಳ್ಳುವ ಅಪಾಯ ಇದೆ.
6.ದಯವಿಟ್ಟು ಫೇಸ್ ಬುಕ್ ನಲ್ಲಿ ಸಕ್ರಿಯವಾಗಿರುವವರು ಮಾತ್ರ ವಿವಾದಗಳಿಗೆ ಪ್ರತಿಕ್ರಿಯಿಸಿ. ಅಪರೂಪಕ್ಕೊಮ್ಮೆ ಫೇಸ್ ಬುಕ್ ತೆರೆಯುವವರು ಅಲ್ಲಿರುವ ಯಾವುದೇ ಸ್ಟೇಟಸ್ ಗೆ ಪ್ರತಿಕ್ರಿಯಿಸಿದರೆ ಅನಾಹುತ ಖಂಡಿತ. ಅದರಿಂದ ದೂರ ಇರಿ. ಸಾಧ್ಯವಾದರೆ ಅವರಿಗೆ ನೇರವಾಗಿ ಮೇಲ್ ಮಾಡಿ ಬಿಡಿ ಇಲ್ಲವೆ ಮಾತನಾಡಿ .
7.ಭಾಷಣಗಳ ಬಗ್ಗೆ ಪ್ರಕಟವಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕು. ಪತ್ರಕರ್ತರು ಸರ್ವಜ್ಞರಲ್ಲ ಅವರೂ ತಪ್ಪು ಮಾಡುತ್ತಾರೆ. ಕೆಲವು ಕಿಡಿಗೇಡಿಗಳು ದುರುದ್ದೇಶದಿಂದಲೇ ತಪ್ಪು ಮಾಡಿರುತ್ತಾರೆ. ಇಷ್ಟು ಮಾತ್ರ ಅಲ್ಲ, ಭಾಷಣಕಾರನ ಧ್ವನಿಯ ಏರಿಳಿತ, ನೀಡುವ ಒತ್ತು ಎಲ್ಲವನ್ನೂ ಬರಹ ರೂಪದಲ್ಲಿ ವರದಿ ಮಾಡಲಾಗುವುದಿಲ್ಲ. ವರದಿಯಾಗಿರುವ ಒಂದು ವಾಕ್ಯದ ಪೂರ್ವದಲ್ಲಿ ಇಲ್ಲವೆ ಕೊನೆಯಲ್ಲಿ ಇನ್ನೆರಡು ವಾಕ್ಯಗಳು ಇದ್ದಿರಬಹುದು. ಅದನ್ನು ವರದಿಗಾರ ಸದುದ್ದೇಶ ಇಲ್ಲವೆ ದುರುದ್ದೇಶದಿಂದ ಕೈಬಿಟ್ಟಿರಬಹುದು. ಇದರಿಂದ ಭಾಷಣಕಾರನ ಮೂಲ ಆಶಯ ವರದಿಯಲ್ಲಿ ವ್ಯಕ್ತವಾಗದೆ ಹೋಗಬಹುದು.
ಭಾಷಣಗಳಿಗೆ ಪ್ರತಿಕ್ರಿಯಿಸಲೇ ಬೇಕೆಂದಿದ್ದರೆ ಅಡಿಯೋ ಕ್ಲಿಪ್ಪಿಂಗ್ಸ್ ತರಿಸಿಕೊಂಡು ಕೇಳುವುದು ಇಲ್ಲವೆ ಸಭೆಯಲ್ಲಿ ಹಾಜರಿದ್ದ ಗೆಳೆಯರ ಜತೆ ತಿಳಿದುಕೊಳ್ಳುವುದು ಕ್ಷೇಮ.
- ಸದ್ಯಕ್ಕೆ ಕಲಿತದ್ದರಲ್ಲಿ ನೆನಪಿದ್ದ ಪಾಠಗಳಿಷ್ಟು, ಬದುಕು ನಿರಂತರವಾಗಿ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ನಾನು ಕಲಿತಾಗಲೆಲ್ಲ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ಇವೆಲ್ಲವೂ ನಿಮಗೆ ಗೊತ್ತಿರುವ ಪಾಠಗಳೇ ಆಗಿವೆ. ನೆನೆಪಿಸುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಮಸ್ಕಾರ