Sunday, July 12, 2015

ಶಾಹು ಮಹಾರಾಜನ ಸನ್ನಿಧಿಯಲ್ಲಿ....

ಬುದ್ಧನ ನಂತರ, ಸಾರ್ವಜನಿಕ ಸ್ಥಳದಲ್ಲಿ ಕೂತು ಅಸ್ಪೃಶ್ಯರ ಕೈತುತ್ತು ಉಂಡ ಭಾರತದ ಏಕೈಕ ಹಿಂದೂ ರಾಜ ಶಾಹು ಛತ್ರಪತಿ ಮಹಾರಾಜ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಾರಂಭಿಸಿದ ಮೊದಲ ಪತ್ರಿಕೆ ‘ಮೂಕನಾಯಕ’ ಪ್ರಕಟಣೆಗೆ ಮತ್ತು ಅವರು ಹಣದ ಕೊರತೆಯಿಂದಾಗಿ ಇಂಗ್ಲಂಡ್ ನಲ್ಲಿ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಿದವರು ಶಾಹು ಮಹಾರಾಜ. ಜ್ಯೋತಿಬಾ ಪುಲೆ ಅವರ ಸತ್ಯಶೋಧಕ ಮಂಡಳಿಯ ಚಳುವಳಿಯನ್ನು ಬೆಂಬಲಿಸಿದ ಮತ್ತು ‘ಕೇಸರಿ’ ಬಾಲಗಂಗಾಧರ ತಿಲಕರನ್ನೂ ಸೇರಿಸಿಕೊಂಡು ಪುರೋಹಿತಷಾಹಿ ವಿರುದ್ಧ ಸಮರವನ್ನೇ ಸಾರಿದವರು ಈ ಶಾಹು ಮಹಾರಾಜ. ಛತ್ರಪತಿ ಶಿವಾಜಿಯ ಸಂತತಿಗೆ ಸೇರಿದ ಇವರು ರಾಜ್ಯಭಾರ ಮಾಡಿದ ಕೊಲ್ಹಾಪುರದ ಅರಮನೆಗೆ ಇತ್ತೀಚೆಗೆ ಗೆಳೆಯರ ಜತೆ ಭೇಟಿ ನೀಡಿದಾಗ ಇತಿಹಾಸದ ಪುಟಗಳೆಲ್ಲ ಕಣ್ಣೆದುರು ಪಟಪಟನೆ ಹಾದುಹೋಯಿತು.

. “ ಅಂಬೇಡ್ಕರ್ ರೂಪದಲ್ಲಿ ವಿಮೋಚನಕಾರ ನಿಮ್ಮ ಮುಂದೆ ಬಂದಿದ್ದಾನೆ. ನಿಮ್ಮ ಬಂಧನದ ಸರಪಳಿಗಳನ್ನು ಈತ ಕಿತ್ತುಹಾಕಲಿದ್ದಾನೆ. ಇಷ್ಟು ಮಾತ್ರವಲ್ಲ ಈತ ಮುಂದೊಂದು ದಿನ ಅಖಿಲ ಭಾರತ ಮಟ್ಟದ ಖ್ಯಾತಿ ಮತ್ತು ಪ್ರಭಾವವನ್ನು ಗಳಿಸಲಿರುವ ನಾಯಕನಾಗಲಿದ್ದಾನೆ ಎಂದು ನನ್ನ ಅಂತರಾತ್ಮ ಪಿಸುಗುಟ್ಟುತ್ತಿದೆ..’ಎಂದು 1920ರಲ್ಲಿ ಮಾಗಾಂವ್ ನಲ್ಲಿ ನಡೆದ ಅಸ್ಪೃಶ್ಯರ ಸಮಾವೇಶದಲ್ಲಿ ಶಾಹುಮಹಾರಾಜರು ಭವಿಷ್ಯ ನುಡಿದಿದ್ದರು. ವಿಷಾದದ ಸಂಗತಿಯೆಂದರೆ ಅತ್ಯಂತ ಕೆಟ್ಟನಿರ್ವಹಣೆಗೆ ಒಳಪಟ್ಟು ಪಾಳುಬಿದ್ದಂತಿರುವ ಅರಮನೆಯೊಳಗಿನ ವಸ್ತುಸಂಗ್ರಹಾಲಯದಲ್ಲಿ ಶಾಹು ಮಹಾರಾಜ ಮತ್ತು ಅಂಬೇಡ್ಕರ್ ನಡುವಿನ ಬಾಂಧವ್ಯವನ್ನು ನೆನಪು ಮಾಡಿಕೊಡುವ ಯಾವ ಕುರುಹುಗಳೂ ಕಣ್ಣಿಗೆ ಬೀಳಲಿಲ್ಲ

No comments:

Post a Comment