Thursday, January 15, 2015

ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...

ಸ್ವಾಮಿ ವಿವೇಕಾನಂದರ ಬಗ್ಗೆ ನಾನು ಬರೆದಿದ್ದ ಹಳೆಯ ಅಂಕಣವನ್ನು ಸ್ನೇಹಿತರೊಬ್ಬರು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ವಿಕೃತ ಮನಸ್ಸಿನವರು ಕೆಟ್ಟ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಾರೆ. ನನ್ನ ಅನೇಕ ಸ್ನೇಹಿತರು ಅವರ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಕೊಡಬೇಕೆಂದು ಸೂಚಿಸಿದ್ದಾರೆ. ಪ್ರತಿಕ್ರಿಯಿಸಿದ ಇಬ್ಬರಿಗೆ ಎಚ್ಚರಿಕೆ ಕೊಟ್ಟು ಮೆಸೆಜ್ ಹಾಕಿದ್ದೆ. ಮಲ್ಲು ಬಿರಾದಾರ್ ಮತ್ತು ಆಂಜನೇಯ ರೆಡ್ಡಿ ಇಬ್ಬರೂ ತಮ್ಮ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ. ಅವರು ಎಲ್ಲಿ ಬರೆದಿದ್ದಾರೋ ಅಲ್ಲಿಯೇ ಕ್ಷಮೆ ಕೇಳಬೇಕೆಂದು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದಾರೆ. ಅವರಿಬ್ಬರ ಪ್ರತಿಕ್ರಿಯೆಗಳ ಸ್ಕ್ರೀನ್ ಶಾಟ್ ಗಳು ನನ್ನ ಬಳಿ ಇವೆ. ಸೈಬರ್ ಪೊಲೀಸರಿಗೆ ದೂರು ಕೊಡುವ ಬಗ್ಗೆ ನಾಳೆ ನಿರ್ಧರಿಸುತ್ತೇನೆ. ಇಂತಹ ಕೀಟಳೆಗಳೆಲ್ಲ ನಿಲುಮೆ ಎಂಬ ಗ್ರೂಪ್ ನಲ್ಲಿ ನಡೆಯುತ್ತಿದೆ. ಈ ಬಗ್ಗೆ ಅನೇಕರು ದೂರಿದ್ದಾರೆ. ಅದರ ವಿರುದ್ಧವೂ ದೂರು ನೀಡಬೇಕೆಂದಿದ್ದೇನೆ. ಸ್ನೇಹಿತರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ. ನಿಲುಮೆ ಗ್ರೂಪ್ ನಲ್ಲಿ ಯಾರ ಬಗ್ಗೆಯಾದರೂ ಈ ರೀತಿಯ ನಿಂದೆ, ಅವಹೇಳನ, ಚಾರಿತ್ರ್ಯ ಹನನ ನಡೆದಿದ್ದರೆ ಅದನ್ನು ದಯವಿಟ್ಟು ನನ್ನ ಗಮನಕ್ಕೆ ತನ್ನಿ.
-----------------------------------------------------------------------------------------------------------------------------

ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...
ಫೇಸ್ ಬುಕ್ ನಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ, ಅವಹೇಳನ ಮಾಡಿದವರ ವಿರುದ್ಧ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದೇನೆ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ದಿನದಿಂದ ಕೆಲವು ಕಿಡಿಗೇಡಿಗಳು ಈ ರೀತಿಯ ನಿಂದನೆಯ ಮೂಲಕ ಮಾನಸಿಕವಾಗಿ ನನ್ನನ್ನು ಹಿಂಸಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ಸೊಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವವರೆಲ್ಲರೂ ಗಮನಿಸಿರಬಹುದು.
ವಿವೇಕಾನಂದ ಅಂಕಣದ ವಿವಾದದ ಸಮಯದಲ್ಲಿ ನನಗೆ ಪ್ರಾಣ ಬೆದರಿಕೆಯೊಡ್ಡುವ, ನಿಂದಿಸುವ ನೂರಾರು ಕರೆಗಳು, ಮೆಸೆಜ್ ಗಳು ಬಂದಿದ್ದರೂ ನಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದಷ್ಟು ನಂಬರ್ ಗಳನ್ನು ನೀಡಿ ಅವರಿಗೆ ಬುದ್ದಿ ಹೇಳಿ ಎಂದಷ್ಟೇ ತಿಳಿಸಿದ್ದೆ. ಆಗ ನಾನು ಕೆಲಸ ಮಾಡುತ್ತಿದ್ದ ಪ್ರಜಾವಾಣಿಯ ಸಂಪಾದಕರು ಮತ್ತು ಗೆಳೆಯರು ಪೊಲೀಸರಿಗೆ ದೂರು ಕೊಡಿ ಎಂದು ಹೇಳಿದರೂ ನಾನು ಸುಮ್ಮನಿದ್ದೆ.
ಆದರೆ ದಿನದಿಂದ ದಿನಕ್ಕೆ ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆಯೇನೋ ಎಂದು ನನಗನಿಸತೊಡಗಿದೆ. ನಿಲುಮೆ ಗುಂಪಿನ ರಾಕೇಶ್ ಶೆಟ್ಟಿ ಜತೆ ಎಷ್ಟೋ ಬಾರಿ ನಾನು ಚರ್ಚೆ ನಡೆಸಿದ್ದಿದೆ. ಅವರೆಂದೂ ವೈಯಕ್ತಿಕವಾಗಿ ನನ್ನನ್ನು ನಿಂದಿಸುವ ಕೆಲಸ ಮಾಡಿಲ್ಲ. ಆದರೆ ಉಳಿದೆಲ್ಲ ನಿಂದಕರಿಗೆ ಗುಂಪಿನ ಬಾಗಿಲು ತೆರೆದಿಟ್ಟು ಬಿಟ್ಟಿದ್ದರು. ಇದನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಎಡ್ಮಿನ್ ಆಗಿರುವವರು ಇದನ್ನು ನಿಯಂತ್ರಿಸಬೇಕಿತ್ತಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವಹೇಳನ ಮಾಡುವ (ಪೋಟೊಗಳ ಮಾರ್ಪಿಂಗ್ ಮಾಡಿ), ಬಿಜೆಪಿ-ಸಂಘ ಪರಿವಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ನನ್ನಂತಹವರನ್ನು ನಿಂದಿಸುವ, ಮಹಿಳೆಯರು, ಹಿರಿಯರು ಎಂಬ ಭೇದ ಇಲ್ಲದೆ ತಮಗಾಗದ ಸಾಹಿತಿಗಳು, ಚಿಂತಕರನ್ನು ಅವಹೇಳನ ಮಾಡುವ ಕೆಲಸವನ್ನು ಈ ಗುಂಪಿನ ಗೆಳೆಯರು ಧಾರಾಳವಾಗಿ ನಡೆಸಿಕೊಂಡು ಬಂದಿದ್ದಾರೆ.
ನಮ್ಮ ಉಳಿದೆಲ್ಲ ಮಾಧ್ಯಮಗಳು (ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ) ತಾವು ಹೂಡಿರುವ ದೊಡ್ಡ ಬಂಡವಾಳದ ಕಾರಣದಿಂದಾಗಿ ಅನಿವಾರ್ಯವಾಗಿ ವ್ಯಾಪಾರಿ ಸಂಸ್ಥೆಗಳಾಗುತ್ತಿರುವ ಇಂದಿನ ದಿನಮಾನದಲ್ಲಿ ಓದುಗನೇ ಪತ್ರಕರ್ತನಾಗಲು ಅವಕಾಶ ಇರುವ ಸೊಷಿಯಲ್ ಮೀಡಿಯಾದ ಬಗ್ಗೆ ನನಗೆ ಅಪಾರವಾದ ನಿರೀಕ್ಷೆ ಮತ್ತು ಭರವಸೆ ಇದೆ. ಆದರೆ ಕೆಲವೇ ಕಿಡಿಗೇಡಿಗಳ ಹಾವಳಿಯಿಂದಾಗಿ ಸೊಷಿಯಲ್ ಮೀಡಿಯಾ ಕೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕ ನನ್ನನ್ನು ಮಾತ್ರವಲ್ಲ ನನ್ನ ಅನೇಕ ಸ್ನೇಹಿತರನ್ನು ಇತ್ತೀಚೆಗೆ ಕಾಡುತ್ತಿರುವುದು ನಿಜ. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮಾಧ್ಯಮವನ್ನೂ ಕಳೆದುಕೊಳ್ಳಲಿರುವ ಮುಂದಿನ ಜನಾಂಗ ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ. 
ನಾನು ತಪ್ಪಿಸಿಕೊಂಡು ಬೇರೆ ಯಾರಿಂದಲೋ ಪೊಲೀಸರಿಗೆ ದೂರು ನೀಡುವ ಕೆಲಸ ಮಾಡಿಸಬಹುದಿತ್ತು. ಅಧಿಕಾರಕ್ಕೆ ಸಮೀಪ ಇರುವುದನ್ನು ಬಳಸಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ನನ್ನ ಹೆಸರು ಬರದಂತೆ ನೋಡಿಕೊಂಡು ಕೆಲಸ ಮಾಡಿಸಿಕೊಳ್ಳಬಹುದಿತ್ತು. ನನಗೆ ಬುದ್ದಿ ತಿಳಿದಂದಿನಿಂದ ಇಂತಹ ಅಡ್ಡ ಕಸುಬಿ ಕೆಲಸವನ್ನು ನಾನು ಮಾಡಿಲ್ಲ. ಯಾರೋ ಅಮಾಯಕರನ್ನು ಛೂ ಬಿಟ್ಟು ಮರೆಯಲ್ಲಿ ನಿಂತು ಚಂದ ನೋಡುವ ಹೇಡಿ ಕೆಲಸವನ್ನು ನಾನೆಂದೂ ಮಾಡಿಲ್ಲ. ಸಾಧ್ಯವಾದಷ್ಟು ನೇರವಾಗಿ,ನಿಷ್ಠುರವಾಗಿ ನಡೆದುಕೊಳ್ಳುತ್ತಾ ಬಂದಿದ್ದೇನೆ. ಆದ್ದರಿಂದ ಸರಿ-ತಪ್ಪುಗಳಿಗೆ ನಾನೇ ತಲೆ ಕೊಡಲು ನಿರ್ಧರಿಸಿ ದೂರು ಕೊಟ್ಟೆ. ಇದು ನನ್ನ ಜೀವನದ ಮೊದಲ ಪೊಲೀಸ್ ದೂರು.
ಇದರಿಂದ ಏನನ್ನೋ ಸಾಧಿಸಿದೆನೆಂಬ ಹೆಮ್ಮೆಯಾಗಲಿ, ಸರಿಯಾಗಿ ಪಾಠ ಕಲಿಸಿದೆ ಎಂಬ ವಿಕೃತ ಸಂತೋಷವಾಗಲಿ ನನಗಾಗಿಲ್ಲ. ನಿಜಕ್ಕೂ ನನಗೆ ಸಂಕಟವಾಗುತ್ತಿದೆ. ನಾನು ಹೆಚ್ಚುಕಡಿಮೆ 30 ವರ್ಷ ಸಕ್ರಿಯ ಪತ್ರಕರ್ತನಾಗಿದ್ದೆ. ಮುಖ್ಯವಾಗಿ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಆಗಲೂ ನಾನು ಸಂಘ ಪರಿವಾರದ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಧಾರವಾಡದ ನನ್ನ ಮನೆಯಲ್ಲಿ ಎಬಿವಿಪಿ ಹುಡುಗರ ಜತೆ ಸುದೀರ್ಘ ಚರ್ಚಾಕೂಟಗಳೇ ನಡೆಯುತ್ತಿದ್ದವು. ಆ ಗೌರವವನ್ನು ನಾನು ಮಾತ್ರವಲ್ಲ ಆ ಹುಡುಗರೂ ಈಗಲೂ ಉಳಿಸಿಕೊಂಡಿದ್ದಾರೆ. ನಾನೆಂದು ನನ್ನ ವರದಿಗಳಲ್ಲಿ ಅವರ ಬಗ್ಗೆ ಪೂರ್ವಗ್ರಹದಿಂದ ವರ್ತಿಸಿರಲಿಲ್ಲ. ನನ್ನ ವರದಿಗಳಲ್ಲಿ ಪೂರ್ವಗ್ರಹಪೀಡಿತ ನಾಗಿದ್ದೆ ಎಂದು ಆ ಎರಡು ಜಿಲ್ಲೆಗಳ ಸಂಘ ಪರಿವಾರದ ನಾಯಕರು ಈಗಲೂ ದೂರಲಾರರು ಎಂಬ ನಂಬಿಕೆ ನನಗಿದೆ.
ಆರ್ ಎಸ್ ಎಸ್ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳದಿದ್ದರೂ ಆ ಸಂಘಟನೆಯ ಹಿರಿಯ ನಾಯಕರ ಬಗ್ಗೆ ನನಗೆ ಗೌರವ ಇದೆ. ಆದರೆ ಇತ್ತೀಚೆಗೆ ಆರ್ ಎಸ್ ಎಸ್ ಎಂದುಹೇಳಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ನಡವಳಿಕೆ ಕಂಡಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಇಂತಹ ನಡವಳಿಕೆಯಿಂದಾಗಿ ವಸ್ತುನಿಷ್ಠವಾದ ಮುಕ್ತ ಮನಸ್ಸಿನ ಚರ್ಚೆಗಿದ್ದ ಅವಕಾಶವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿದ್ದಾಗ ಅದೇ ಮಟ್ಟದಲ್ಲಿ ಜಗಳವಾಡುವ ಪ್ರಯತ್ನ ಮಾಡಬೇಕಲ್ಲವೇ, ಕನಿಷ್ಠ ಭಾಷೆಯ ಬಳಕೆ ಬಗ್ಗೆ ಎಚ್ಚರ ಇರಬೇಕಲ್ಲವೇ? ‘ತಲೆ ಹಿಡುಕ’, ‘ಮುಠ್ಠಾಳ’, ‘ಚಪ್ಪಲಿ ಸವೆದುಹೋಗುವಷ್ಟು ಹೊಡೆಯಬೇಕು’, ‘ಮುಖಕ್ಕೆ ಉಗಿಯಿರಿ’ ‘ಆ್ಯಸಿಡ್ ಹಾಕಿ’ ...ಇವೆಲ್ಲ ಏನು ಭಾಷೆ ಸ್ವಾಮಿ? ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಪ್ರತಿಕ್ರಿಯೆಗಳಲ್ಲ. ನಿಲುಮೆ ಗುಂಪಿನ ಗೆಳೆಯರು ಇತ್ತೀಚೆಗೆ ನಿರಂತರವಾಗಿ ಇಂತಹ ಭಾಷೆ ಬಳಕೆ ಮಾಡಿ ತಮಗಾಗದವರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸಾಧ್ಯ ಇದ್ದ ರಾಕೇಶ್ ಶೆಟ್ಟಿ, ಸಾತ್ವಿಕ್ ಅಂತಹವರು ಇದನ್ನು ಗಮನಿಸಿಯೂ ಸುಮ್ಮನಿದ್ದದ್ದು ಇನ್ನೂ ದೊಡ್ಡ ಅಪರಾಧ. ಅವರ ಜಾಣ ಮೌನದಿಂದ ಪ್ರೇರಣೆ ಪಡೆದು, ಅರೆಬರೆ ಓದಿದ ಬಿಸಿ ರಕ್ತದ ಹುಡುಗರು ಇನ್ನಷ್ಟು ಉತ್ಸಾಹದಿಂದ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇದನ್ನು ಕೆಲವರಿಗೆ ನೇರವಾಗಿ ಮೆಸೆಜ್ ಹಾಕಿ ನಿಲ್ಲಿಸಿ ಎಂದು ಹೇಳಿದ್ದೆ. ಕೆಲವರು ನಿಲ್ಲಿಸಿದ್ದಾರೆ, ಇನ್ನು ಹಲವಾರು ಮತ್ತೆ ಪ್ರಾರಂಭಿಸಿದ್ದಾರೆ. ಇದರ ಜತೆ ಹೊಸಬರ ಪ್ರವೇಶ ಧಾರಾಳವಾಗಿ ಆಗುತ್ತಿದೆ. ಇಂತಹದ್ದೊಂದು ಅನಾರೋಗ್ಯಕರವಾದ ಬೆಳವಣಿಗೆಯನ್ನು ತಡೆಯಲು ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿಗಳು ನನ್ನ ಮುಂದಿರಲಿಲ್ಲ. ಯಾರ ಬಗ್ಗೆ ದೂರು ಕೊಟ್ಟಿದ್ದೆನೋ ಅವರ ಬಗ್ಗೆ ನನಗೆ ಖಂಡಿತ ದ್ವೇಷ ಇಲ್ಲ, ಪ್ರೀತಿ ಅಲ್ಲದೆ ಇದ್ದರೂ ಅನುಕಂಪ ಇದೆ. ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು. ಕಾನೂನಿನ ಕ್ರಮಗಳನ್ನು ಎದುರಿಸಲು ಅವರಿಗೆ ನೆರವು ಬೇಕಿದ್ದರೆ ಅದನ್ನು ಒದಗಿಸಲು ನನ್ನ ಮಿತಿಯೊಳಗೆ ನಾನು ಸಿದ್ದನಿದ್ದೇನೆ.