Wednesday, May 13, 2015

ಹಳ್ಳೀಗಾಡಿನ ಪ್ರತಿಭೆ ಕೇಶವ ವಿಟ್ಲ

ನಮ್ಮಂತಹ ಅಬ್ಬೆಪಾರಿಗಳನ್ನೆಲ್ಲ ಗುರುವಾಗಿ ಸಲುಹಿದ ವಡ್ಡರ್ಸೆ ರಘುರಾಮ ಶೆಟ್ಟಿಯವರ 'ಕ್ಯಾಮೆರಾ' ಕಣ್ಣಿಗೆ ಬಿದ್ದ ಹಳ್ಳಿಗಾಡಿನ ಪ್ರತಿಭೆ ಕೇಶವ ವಿಟ್ಲ. ಆ ಕಾಲದ ಬಾಲಪ್ರತಿಭೆ ಇಂದು ಅಂತರರಾಷ್ಟ್ರೀಯ ಪೋಟೋಗ್ರಾಪರ್ ಗಳ ಹೆಗಲಿಗೆ ಸಮನಾಗಿ ನಿಲ್ಲುವಂತಹ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾನೆ.
ವಡ್ಡರ್ಸೆಯವರು ಯಾರ ತಲೆಗೆ ಕೈ ಇಟ್ಟಿದ್ದರೋ ಅವರ್ಯಾರೂ ಕಳೆದು ಹೋಗಿಲ್ಲ. ವೃತ್ತಿಯಲ್ಲಿ ಕಸುಬುಗಾರಿಕೆ, ಹೊಸ ಸವಾಲುಗಳನ್ನು ಹುಡುಕಿಕೊಂಡು ಹೋಗುವ ಸಾಹಸ ಮತ್ತು ಜನಪರವಾದ ಕಾಳಜಿ ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಕಾಣಬಹುದಾದ ಸಾಮಾನ್ಯ ಗುಣಗಳು. ಇವೆಲ್ಲ ಗುಣಲಕ್ಷಣಗಳು ಈ ವಿಟ್ಲ ನೆಂಬ 'ಬಾಲಕ'ನಲ್ಲಿದೆ.
ಇಂದು ಈತನ ಮಹತ್ವಾಕಾಂಕ್ಷೆಯ ಚಿತ್ರಪುಸ್ತಕ ಬಿಡುಗಡೆ. ಈ ಪುಸ್ತಕ ನಮ್ಮನ್ನು ಬೆರಗಿನ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತನ್ನ ಬಾಲಚೇಷ್ಠೆಯ ನಡುವೆಯೂ ಹತ್ತು ವರ್ಷಗಳ ಕಾಲ ನಡೆಸಿದ ತಪಸ್ಸಿನ ಫಲ ಈ ಪುಸ್ತಕ. ಇಂದು ಸಂಜೆ ನಾಲ್ಕು ಗಂಟೆಗೆ ಚಿತ್ರಕಲಾ ಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಬಿಡುಗಡೆಗೊಳಿಸಲಿದ್ದಾರೆ. ಬನ್ನಿ, ಈ ಸಾಹಸಿಯನ್ನು ಹರಸಿ ಬೆಂಬಲಿಸಿ.

Sunday, May 10, 2015

ಅಮ್ಮನ ದಿನ

   ಒಂದಿಷ್ಟು ತ್ಯಾಗದ ಗುಣ ಇಲ್ಲದ ಯಾವ ಪ್ರೀತಿಯೂ ಪರಿಪೂರ್ಣವಾದುದಲ್ಲ. ತಮ್ಮ ಅಮ್ಮ-ಅಪ್ಪನಿಗೆ ಇಂತಹ ಪ್ರೀತಿ ನೀಡಿದವರು/ನೀಡುತ್ತಿರುವವರು ಕೆಟ್ಟವರಾಗಿರಲು ಸಾಧ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಮನುಷ್ಯನನ್ನು ಅರ್ಥಮಾಡಿಕೊಳ್ಳಲು ನಾನೇ ರೂಪಿಸಿಕೊಂಡ ಈ ಸರಳ ಸೂತ್ರ ನನ್ನ ಸಂಪರ್ಕಕ್ಕೆ ಬಂದ ಬಹುಪಾಲು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು ನನಗೆ ನೆರವಾಗಿದೆ.
   ಪ್ರೀತಿ ಎಂದರೆ ನಮ್ಮಲ್ಲಿದ್ದುದನ್ನು ಕೊಡುವುದಲ್ಲ,ನಾವು ಪ್ರೀತಿಸುವವರ ಅವಶ್ಯಕತೆ ಏನಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಅದನ್ನು ಕೊಡುವುದು. ಈಗ ನನ್ನೂರಿಗೆ ಹೋದರೆ ಬಹಳ ಬದಲಾವಣೆಯಾಗಿದೆ. ಬಾಲ್ಯದಲ್ಲಿ ನಾನು ಕಂಡಿದ್ದ ಬಡತನದ ಬೇಗೆ ಕಾಣುವುದಿಲ್ಲ. ಆದರೆ ಇಡೀ ಊರು ವೃದ್ಧಾಶ್ರಮದಂತೆ ಕಾಣುತ್ತಿದೆ.
   ಊರಿನಲ್ಲಿ ನನ್ನ ಪರಿಚಯದ ನಿವೃತ್ತ ಶಿಕ್ಷಕರ ಕುಟುಂಬವೊಂದಿದೆ. ಅವರ ಮಗಳು-ಅಳಿಯ ಅಮೆರಿಕಾದಲ್ಲಿದ್ದಾರೆ.ಮಗ-ಸೊಸೆ ಇಂಗ್ಲಂಡ್ ನಲ್ಲಿದ್ದಾರೆ. ಇಬ್ಬರು ಮಕ್ಕಳನ್ನು ಎಂಜಿನಿಯರ್ ಮಾಡಲು ಈ ಶಿಕ್ಷಕ ದಂಪತಿಗಳು ಬಹಳ ಕಷ್ಟಪಟ್ಟಿದ್ದಾರೆ. ಮಕ್ಕಳು ಕೆಟ್ಟವರೇನಲ್ಲ. ತಿಂಗಳುತಿಂಗಳು ದುಡ್ಡು ಕಳುಹಿಸುತ್ತಾರೆ. ಆಗಾಗ ಸ್ಕೈಪ್ ನಲ್ಲಿಮಾತನಾಡುತ್ತಾರೆ. ಮೊಮ್ಮಕ್ಕಳನ್ನು ಟಿವಿ ಪರದೆಯಲ್ಲಿ ತೋರಿಸುತ್ತಾರೆ. 2-3 ವರ್ಷಕ್ಕೊಮ್ಮೆ ಊರಿಗೂ ಬರುತ್ತಾರೆ. ಇದನ್ನೇ ಹೆತ್ತವರನ್ನು ಪ್ರೀತಿಸುವುದು ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ ತಂದೆ-ತಾಯಿ ಬಯಸುವ ಪ್ರೀತಿ ಇದೇನಾ?
ಇಳಿವಯಸ್ಸಿಗೆ ಸಹಜವಾದ ಕಾಯಿಲೆಗಳಿಂದ ಬಳಲುತ್ತಿರುವ ಆ ತಂದೆ-ತಾಯಿಯನ್ನು ಇತ್ತೀಚೆಗೆ ನಾನು ಊರಿಗೆ ಹೋಗಿದ್ದಾಗ ಭೇಟಿ ಮಾಡಿದ್ದೆ. ನಡುಗುವಕೈಗಳಿಂದ ಅವರು ನನ್ನನ್ನು ಹಿಡಿದುಕೊಂಡು ‘ನಮ್ಮ ಮಗನನ್ನು ಎಂಜಿನಿಯರಿಂಗ್ ಮಾಡದೆ ಬಿಇಡ್ ಓದಿಸಿ ಶಿಕ್ಷಕನನ್ನಾಗಿ ಮಾಡಬೇಕಾಗಿತ್ತು. ಇಲ್ಲಿಯೇ ಎಲ್ಲೋ ಹತ್ತಿರದಲ್ಲಿರುತ್ತಿದ್ದ, ನಮ್ಮಕಷ್ಟಕ್ಕೆ ಆಗುತ್ತಿದ್ದ’ ಎಂದು ನಿಟ್ಟುಸಿರು ಬಿಟ್ಟಿದ್ದರು.
   ವೃದ್ಧಾಪ್ಯ, ಅನಾರೋಗ್ಯ,ಒಂಟಿತನ, ಅಸಹಾಯಕತೆಯಿಂದ ನಡುಗುತ್ತಿರುವ ಕೈಗಳಿಗೆ ಬೇಕಾಗಿರುವುದು ದುಡ್ಡಲ್ಲ ಆಸರೆಗಾಗಿಹಿಡಿದುಕೊಳ್ಳಲು ಒಂದು ದೃಡವಾದ ಹೆಗಲು.
   ಸಜ್ಜನರೆನಿಸಿಕೊಂಡವರೂ ಸೇರಿದಂತೆ ನಮ್ಮ ಬಹುಪಾಲು ಯುವಕ-ಯುವತಿಯರು ನಗರದಲ್ಲಿರುವ ತಮ್ಮ ಮನೆಯಲ್ಲಿ ತಂದೆತಾಯಿಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅವರ ಖಾಸಗಿತನಕ್ಕೆ ಭಂಗ ಉಂಟಾಗುತ್ತದೆ ಎನ್ನುವ ಭಯ ಅವರಿಗೆ. ಅಮ್ಮನಿಗೆ ಡಿಮಾಂಡ್ ಇದೆ, ಅಪ್ಪನಿಗೆ ಇಲ್ಲ. ಇದಕ್ಕೆ ಕಾರಣ ಅಮ್ಮನ ಮೇಲಿನ ವಿಶೇಷ ಪ್ರೀತಿ ಅಲ್ಲ. ಅಮ್ಮನಾದರೆ ಅಡುಗೆ ಮಾಡಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಈಕಾಲದಲ್ಲಿ ನಂಬಿಕಸ್ತ ಮನೆಯಾಳು ಹುಡುಕುವ ಕಷ್ಟ ತಪ್ಪಿತ್ತಲ್ಲಾ ಎನ್ನುವ ಸಮಾಧಾನ ಅವರಿಗೆ. ಆದರೆ ಅಪ್ಪನಿಗೆ ಡಿಮಾಂಡ್ ಇಲ್ಲ. ಸುಮ್ಮನೆ ಮನೆಯಲ್ಲಿ ಪಿರಿಪಿರಿ-ಕಿರಿಕಿರಿ ಎನ್ನುವ ತಾತ್ಸಾರ.
  ‘ಅಮ್ಮನ ದಿನ’ದಂದು ಇದೆಲ್ಲ ನೆನಪಾಯಿತು. ಇದೇ ನೆನಪಲ್ಲಿ ನಾನು ‘ಪೀಕೂ’ ಫಿಲ್ಮ್ ನೋಡಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ.