Friday, October 9, 2015

ಪ್ರತಿಕ್ರಿಯೆ

ಸನ್ಮಾನ್ಯ ಶಾಸಕರಾದ ಸಿ.ಟಿ.ರವಿಯವರು ನನ್ನನ್ನು ಗೋಭಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವದು ಕೇಳಿ ಸಂತೋಷವಾಯಿತು. ಅವರು ತಮ್ಮ ಪರಿವಾರವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಪ್ರಭಾವ ಬೀರಿ ರಾಷ್ಟ್ರಮಟ್ಟದಲ್ಲಿ ಗೋಭಕ್ಷಣಾ ಆಯೋಗ ರಚಿಸಿ ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕಮಾಡಬೇಕೆಂದು ವಿನಯಪೂರ್ವಕವಾಗಿ ಕೋರುತ್ತೇನೆ. ಇದೇ ವೇಳೆ ರಾಷ್ಟ್ರಮಟ್ಟದಲ್ಕಿ 'ನರಭಕ್ಷಣಾ ಬೆಂಬಲಿಗರ ಆಯೋಗ ' ರಚಿಸಿ ಅದಕ್ಕೆ ಸದ್ಯ ನಿರುದ್ಯೋಗಿಯಾಗಿರುವ ಸಿ.ಟಿ.ರವಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸುತ್ತೇನೆ.

Thursday, October 8, 2015

ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ

ಚೇತನಾ ತೀರ್ಥಹಳ್ಳಿ ಅವರ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಅವರು ಅಲ್ಲಲ್ಲಿ ಮತ್ತೆ ಮತ್ತೆ ನನ್ನನ್ನು ಕುಟುಕಿದ್ದಾಗ ನಾನು ಖಾರವಾಗಿ ಪ್ರತಿಕ್ರಿಯಿಸಿದ್ದೆ ಕೂಡಾ. ಇತ್ತೀಚೆಗೆ ನಮ್ಮವರು ನಡೆಸಿದ ಪ್ರತಿಭಟನೆಯಲ್ಲಿ ಅವರ ಮುಖ ಕಾಣಿಸಿಕೊಂಡಾಗ ಅದನ್ನು ಪ್ರಶ್ನಿಸಿದ್ದು ಕೂಡಾ ಹೌದು. ಅದಕ್ಕೆ ಅವರು ದೀರ್ಘವಾದ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ. ಇಷ್ಟು ಮಾತ್ರಕ್ಕೆ ಅವರ ಜತೆಗಿನ ಭಿನ್ನಾಭಿಪ್ರಾಯಗಳೆಲ್ಲವೂ ಕೊನೆಗೊಂಡಿದೆ ಎಂದು ಹೇಳಲಾರೆ.ಆದರೆ ಈ ಹೆಣ್ಣಿನ ಮೇಲೆ ಕೆಲವು ಹುಚ್ಚುನಾಯಿಗಳ ಬುದ್ದಿಯವರು ಅಶ್ಲೀಲ,ಅವಾಚ್ಯ ಶಬ್ದಗಳಿಂದ ನಡೆಸುತ್ತಿರುವ ದಾಳಿಯನ್ನು ನೋಡಿದಾಗ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಮೀರಿ ನನ್ನ ಮನಸ್ಸು ಸಿಟ್ಟಾಗುತ್ತಿದೆ, ಮರುಗುತ್ತಿದೆ. ಇಂತಹದ್ದೊಂದು ಸ್ಪಂದನ ನಮ್ಮಲ್ಲಿ ಹುಟ್ಟಿಕೊಳ್ಳದಿದ್ದರೆ ನಾವು ಮನುಷ್ಯರಾಗುವುದಿಲ್ಲ, ಅವರಂತೆ ಅಮಾನುಷರಾಗುತ್ತೇವೆ.
ತಮ್ಮ ಮಾನ, ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ಚೇತನಾ ತೀರ್ಥಹಳ್ಳಿಯವರು ನಡೆಸುವ ಹೋರಾಟವನ್ನು ನಾವೆಲ್ಲರೂ ಬೆಂಬಲಿಸುವ, ನಾನೂ ಬೆಂಬಲಿಸುತ್ತೇನೆ.
ಇದೇ ವೇಳೆ ನನ್ನ ಸ್ನೇಹಿತರಲ್ಲಿ ಸವಿನಯ ವಿನಂತಿ. ನಾವು ಅವರಾಗುವುದು ಬೇಡ. ಎಲ್ಲವನ್ನು ಪ್ರೇಮಪೂರ್ಣ ಜ್ಞಾನದ ಮೂಲಕವೇ ಗೆದ್ದ ಬುದ್ದ, ವಿರೋಧಿಗಳನ್ನು ತರ್ಕಬದ್ಧ ಪಾಂಡಿತ್ಯದಿಂದ ಗೆದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇದೇ ದಾರಿಯಲ್ಲಿ ನಡೆದು ನಮ್ಮ ಮುನ್ನಡೆಗೆ ದಾರಿ ತೋರಿದ ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ. ನಮ್ಮ ಸಿಟ್ಟನ್ನು ಹೊರಗೆ ಕಾರಿ ಬೆಂಕಿ ಮಾಡುವುದು ಬೇಡ. ಅದನ್ನು ನಮ್ಮೊಳಗೆ ಮಾಗಲು ಬಿಟ್ಟು ನಮ್ಮ ಶಕ್ತಿಯನ್ನಾಗಿ ಮಾಡಿಕೊಳ್ಳುವ, ಬೆಳಕನ್ನಾಗಿ ಮಾಡುವ.

ನಂಬಿ, ಇತಿಹಾಸ ಕೂಡಾ ನಮ್ಮದೇ ಭವಿಷ್ಯ ಕೂಡಾ ನಮ್ಮದೇ. ಈ ವಕ್ರಬುದ್ದಿಗೇಡಿಗಳು, ಸುಳ್ಳುಬೆಲೆಗೇಡಿಗಳೆಲ್ಲ ಇತಿಹಾಸದ ಚಾಪೆಯಡಿ ಸಿಕ್ಕಿ ನಾಶವಾಗುವ ಹುಳುಗಳು ಅಷ್ಟೇ.

Wednesday, October 7, 2015

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿ¬ಯ¬ವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್.¬ಯಡಿ¬ಯೂರಪ್ಪ¬ನವರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ಕಾಯಿದೆ 1964’ಕ್ಕೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯ ಸರ್ಕಾರ ತಯಾರಿಸಿದೆ. ಇದಕ್ಕೆ ಗೋವಿನ ಬಗೆಗಿನ ಭಕ್ತಿ ಮತ್ತು ಕಾಳಜಿಯಷ್ಟೇ ಕಾರಣ ಎಂದು ಸರ್ಕಾರದಲ್ಲಿರುವ ನಿಜವಾದ ಗೋಭಕ್ತರ್ಯಾರೂ ಗೋವಿನ ಮೇಲೆ ಆಣೆ ಮಾಡಿ ಹೇಳಲಾರರು.
ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿ¬ಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು, (ಎಷ್ಟೋ ರೈತರ ಮನೆಯೊಳಗೆ ದನದ ಕೊಟ್ಟಿಗೆ ಇದೆ) ಮತ್ತು ಆ ಮೂಕ ಪ್ರಾಣಿಯೊಡನೆ ನಿತ್ಯ ‘ಮಾತನಾಡುತ್ತಾ’ ಅದರ ಕಷ್ಟ-ಸುಖ ವಿಚಾರಿ¬ಸು¬ತ್ತಿರುವವರು ಕೇವಲ ರೈತರು. ವಿಚಿತ್ರವೆಂದರೆ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಸುಗಳ ಪ್ರಾಣ ಉಳಿಸುವ ಬಗ್ಗೆ ಮಾತನಾಡು¬ತ್ತಿದ್ದಾರೆ. ಈ ಕೆಲಸಕ್ಕೆ ಹೊರಟಿರುವ ರಾಜ¬ಕಾರಣಿಗಳು, ಸ್ವಾಮೀಜಿಗಳು, ಹಿಂದೂ ಧರ್ಮದ ಉದ್ಧಾರದ ಗುತ್ತಿಗೆ ಪಡೆದು¬ಕೊಂಡಿರುವ ಸಮಾಜ ಸುಧಾರಕರಲ್ಲಿ ಯಾರೂ ಹಸು ಸಾಕಿದವರಲ್ಲ, ಅದರ ಸೆಗಣಿ ಎತ್ತಿದ¬ವರಲ್ಲ, ಗಂಜಳ ಬಾಚಿದವರಲ್ಲ, ಹುಲ್ಲು ಹಾಕಿದ¬ವರಲ್ಲ. ಇವರಲ್ಲಿ ಹೆಚ್ಚಿನವರು ಪ್ಯಾಕೆಟ್ ಹಾಲು ಕುಡಿದು ಗೋವಿನ ಚಿತ್ರಕ್ಕೆ ಪೂಜೆ ಮಾಡುವ¬ವರು. ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತೊಡಗಿದಾಗೆಲ್ಲ ಇವರಿಗೆ ಗೋವಿನ ಬಗ್ಗೆ ಭಕ್ತಿ ಕೆರಳುತ್ತದೆ, ಕಾಳಜಿ ಉಕ್ಕಿ ಹರಿಯುತ್ತದೆ.
ಗೋಹತ್ಯೆ ನಿಷೇಧದ ಪರವಾಗಿ ವಕಾಲತ್ತು ವಹಿಸುತ್ತಿರುವವರೆಲ್ಲರೂ ಕೊಡುತ್ತಿರುವ ಕಾರಣ ಅದರ ಬಗ್ಗೆ ಹಿಂದೂಗಳಲ್ಲಿರುವ ಪೂಜ್ಯ¬ಭಾವನೆ. ಗೋವು ನಿಜಕ್ಕೂ ಹಿಂದೂಗಳ ಪಾಲಿಗೆ ಪೂಜನೀಯವೇ? ಹೌದು ಎಂದಾದರೆ ಅದು ಎಂದಿನಿಂದ ಹುಟ್ಟಿಕೊಂಡದ್ದು? ಹಿಂದೂ ಧರ್ಮ ಹುಟ್ಟಿಕೊಂಡ ದಿನದಿಂದಲೇ ಗೋವು ಪೂಜನೀಯ¬ವಾಗಿತ್ತೇ ಇಲ್ಲವೇ, ಯಾವುದೋ ಕಾಲ¬ಘಟ್ಟದಲ್ಲಿ ದಿಢೀರನೇ ಗೋವು ಪಾವಿತ್ರ್ಯದ ಪಟ್ಟ ಏರಿತೇ? ಈ ಪ್ರಶ್ನೆಗಳಿಗೆ ವೇದಗಳಲ್ಲಿಯೇ ಸ್ಪಷ್ಟವಾದ ಮತ್ತು ಯಾರೂ ನಿರಾಕರಿಸಲಾಗದಂತಹ ಉತ್ತರಗಳಿವೆ. ಆದರೆ ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಮಾತನಾಡುವಾಗೆಲ್ಲ ವೇದ-ಉಪನಿಷತ್‌ಗಳನ್ನು ಉಲ್ಲೇಖಿಸುವ ಪಂಡಿತರು ಗೋವಿನ ಪಾವಿತ್ರ್ಯದ ಬಗೆಗಿನ ಚರ್ಚೆ ಎದುರಾದಾಗ ಮಾತ್ರ ಧರ್ಮ¬ಶಾಸ್ತ್ರಗಳನ್ನು ತಪ್ಪಿಯೂ ಪ್ರಸ್ತಾಪಿಸುವುದಿಲ್ಲ.
ಹಿಂದೂ ಧರ್ಮದ ‘ಸಂವಿಧಾನ’ ಎಂದೇ ಹೇಳಲಾಗುತ್ತಿರುವ ನಾಲ್ಕು ವೇದಗಳು ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನ¬ಕ್ರಮ, ಆಹಾರ ಪದ್ಧತಿಗಳ ವಿವರಗಳ¬ನ್ನೊಳ¬ಗೊಂಡ ಸಮಗ್ರರೂಪದ ದಾಖಲೆ. ಅವುಗಳ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರು ಸೇರಿದಂತೆ ಆ ಕಾಲದ ಹಿಂದೂಗಳೆಲ್ಲರೂ ಮಾಂಸಾಹಾರಿ¬ಗಳಾಗಿದ್ದರು. ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿ¬ಗಳನ್ನು ಬಲಿ¬ಕೊಡುವುದು ಮತ್ತು ಅದರ ನಂತರ ಅವುಗಳ ಮಾಂಸ ತಿನ್ನುವುದು ಸಾಮಾನ್ಯ¬ವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಸೂಪ್?) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ.
ಈ ಬಗ್ಗೆ ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ತೈತ್ತರೀಯ ಉಪನಿಷತ್, ಮನುಸ್ಮೃತಿ ಮಹಾಭಾರತ, ರಾಮಾಯಣಗಳಲ್ಲಿವೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ (‘ಹಿಂದೂಸ್ ಏಟ್ ಬೀಫ್’ ಕೃತಿ) ಅವರಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರು ವೇದಗಳ¬ಕಾಲದಲ್ಲಿನ ಗೋಮಾಂಸ ಭಕ್ಷಣೆ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ.ವಿ.ಕಾಣೆ ತಾವು ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮ¬ಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ.ದ್ವಿಜೇಂದ್ರ¬ನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಲ್ಲಿ ವೇದ ಮತ್ತು ವೇದ ಪೂರ್ವ ಕಾಲದಲ್ಲಿ ಗೋಮಾಂಸ ಭಕ್ಷಣೆ ಹೇಗೆ ಸಾಮಾನ್ಯ ಆಹಾರ ಪದ್ಧತಿಯಾಗಿತ್ತು ಎಂಬು¬ದನ್ನು ಆಧಾರಸಹಿತ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ಪ್ರಿಯರಾಗಿರುವ ಸಾಹಿತಿ ಎಸ್.ಎಲ್.¬ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಇದನ್ನೇ ಬರೆದುದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಧುರ್ಯೋ¬ಧನನು ರಾಯಭಾರಕ್ಕೆ ಕಳುಹಿಸುವ ಸೋಮದತ್ತನೆಂಬ ಪುರೋಹಿತರು ಮಧ್ಯಾಹ್ನದ ಭೋಜನಕ್ಕೆ ಕೋಣನ ಮಾಂಸ ತಿನ್ನುವ ಚಿತ್ರ ‘ಪರ್ವ’ದಲ್ಲಿದೆ).
ವೇದಕಾಲದಲ್ಲಿ ಮಾಂಸಾಹಾರಿಗಳಾಗಿದ್ದ ಹಿಂದೂಗಳು ಸಸ್ಯಾಹಾರಿಗಳಾಗಿದ್ದು ಮತ್ತು ಇದ್ದಕ್ಕಿದ್ದಂತೆಯೇ ಗೋವುಗಳು ಪವಿತ್ರಸ್ಥಾನ ಪಡೆದು ಪೂಜನೀಯವಾಗಿದ್ದು ಬೌದ್ಧ ಧರ್ಮದ ಸ್ಥಾಪನೆಯ ನಂತರ ಎನ್ನುವುದು ಚಾರಿತ್ರಿಕವಾದ ಸತ್ಯ. ಆದರೆ ಬಹಳ ಮಂದಿ ತಿಳಿದುಕೊಂಡಂತೆ ಬುದ್ಧ ಶಾಕಾಹಾರಿಯಾಗಿರಲಿಲ್ಲ, ಆತ ಮತ್ತು ಆತನ ಅನುಯಾಯಿಗಳು ಮಾಂಸ (ಅದೂ ಹಂದಿ) ತಿನ್ನುತ್ತಿದ್ದರು. ಅಹಿಂಸಾವಾದಿಯಾಗಿದ್ದ ಬುದ್ಧ ರೈತನ ಸಂಗಾತಿಯಾದ ಗೋವುಗಳ ಹತ್ಯೆಯನ್ನು ವಿರೋಧಿಸಿದ್ದ. ಬೌದ್ಧ ಧರ್ಮದ ಉದಯದಿಂದ ಭೀತಿಗೊಳಗಾದ ಹಿಂದೂ¬ಧರ್ಮ ಅದನ್ನು ಎದುರಿಸಲೆಂದೇ ಶಾಕಾಹಾರಿ¬ಯಾಗಿದ್ದು ಮತ್ತು ಗೋವನ್ನು ಪೂಜನೀಯವಾಗಿ ಮಾಡಿದ್ದು.
ಇಂತಹ ಗೋವು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ‘ಕಾಮಧೇನು’ವಾಯಿತು. ಆಶ್ಚರ್ಯಕರ ಸಂಗತಿ ಎಂದರೆ ಈ ರಾಜಕೀಯ ಪ್ರಾರಂಭಿಸಿದ್ದೇ ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾ¬ದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ನಿಯಂತ್ರಿತ ಗೋಹತ್ಯೆ ನಿಷೇಧ ಹೇರಿದ್ದರು.
ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಹಿಂದೂ ನಾಯಕರು ಒತ್ತಡ ಹೇರಿದ್ದರು. ಆದರೆ ಅಂಬೇಡ್ಕರ್ ಮಾತ್ರವಲ್ಲ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರೂ ಇದಕ್ಕೆ ವಿರುದ್ಧವಾಗಿದ್ದರು. ಈ ಕಾರಣದಿಂದಾಗಿಯೇ ಬಹಳ ಎಚ್ಚರಿಕೆಯಿಂದ 48ನೇ ಪರಿಚ್ಛೇದವನ್ನು ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ ನಿರ್ದೇ¬ಶನ ತತ್ವದಲ್ಲಿ ಸೇರಿಸಲಾಯಿತು. ‘ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿ-ಪಡಿಸಬೇಕು. ಜಾನುವಾರಗಳ ತಳಿ ಸುಧಾರಣೆಗೆ ಕ್ರಮಕೈಗೊಳ್ಳುವುದರ ಜತೆಗೆ ಪ್ರಯೋಜನಕಾರಿ ಜಾನುವಾರುಗಳು ಮುಖ್ಯವಾಗಿ ಹಾಲು ನೀಡು¬ವಂತಹ ಹಸು-ಎಮ್ಮೆಗಳ ಹತ್ಯೆಗೆ ನಿಷೇಧ ಹೇರಬಹುದು’ ಎಂದು 48ನೇ ಪರಿಚ್ಛೇದ ಹೇಳಿದೆ. ಇದರಂತೆ ಪಶ್ಚಿಮ ಬಂಗಾಳ, ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ನಿಯಂತ್ರಿತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.
ಕರ್ನಾಟಕದಲ್ಲಿ 1964ರಿಂದಲೂ ಗೋ¬ರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಇದರ ಪ್ರಕಾರ ಸಂಬಂಧಿತ ಅಧಿಕಾರಿಗಳಿಂದ ಲಿಖಿತ ದೃಢೀಕರಣ¬ಪತ್ರ ಪಡೆದ ನಂತರವಷ್ಟೇ ಗೋವುಗಳ ಹತ್ಯೆ¬ಮಾಡಬಹುದಾಗಿದೆ. ಈ ರೀತಿ ಹತ್ಯೆ ಮಾಡ¬ಬಹುದಾದ ಗೋವುಗಳಿಗೆ ಕನಿಷ್ಠ ಹನ್ನೆರಡು ವರ್ಷ ವಯಸ್ಸಾಗಿರಬೇಕು, ಅವುಗಳು ಹಾಲು ನೀಡುವ ಇಲ್ಲವೇ ಕರು ಹಾಕುವ ಸಾಮರ್ಥ್ಯ¬ವನ್ನು ಕಳೆದುಕೊಂಡಿರಬೇಕು ಹಾಗೂ ಗಾಯ¬ಗೊಂಡು ನಿರುಪಯುಕ್ತವಾಗಿರಬೇಕು. ಉಳಿದೆಲ್ಲ ಕಾಯಿದೆಗಳಂತೆ ಇದರ ಉಲ್ಲಂಘನೆ ಕೂಡಾ ನಡೆಯುತ್ತಿರುವುದು ನಿಜ. ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುವುದರಿಂದ ಕಾಯಿದೆಯ ಪಾಲನೆ ಕಡಿಮೆ.
ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಒತ್ತಾಯ ಸ್ವತಂತ್ರ ಭಾರತ¬ದಲ್ಲಿ ಜೋರಾಗಿ ಕೇಳಿಬಂದದ್ದು 1979ರಲ್ಲಿ ವಿನೋಬಾ ಭಾವೆ ಆಮರಣ ಉಪವಾಸ ಪ್ರಾರಂಭಿಸಿದಾಗ. ಇದಕ್ಕೆ ಮಣಿದ ಜನತಾ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೇ ರಾಜ್ಯ¬ಸರ್ಕಾರ¬ಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ತಿಳಿಸಿದ್ದರು. ಅಲ್ಲಿಂದೀಚೆಗೆ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. 1990ರಲ್ಲಿ ಬಿಜೆಪಿ ಸದಸ್ಯ ಜಿ.ಎಂ.ಲೋಧಾ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್ ನಾಯಕ ವಸಂತ ಸಾಠೆ ಅವರೇ ಬೆಂಬಲಿಸಿ ಅಚ್ಚರಿಸಿ ಹುಟ್ಟಿಸಿದ್ದರು.
ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದ¬ವನ್ನು ಇತ್ತೀಚೆಗೆ ಕೆದಕಿದ್ದು ಎಐಸಿಸಿಯ ಈಗಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಮಧ್ಯ¬ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸುವಂತೆ ‘ದಿಗ್ಗಿರಾಜಾ’ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನೇ ಬಳಸಿಕೊಂಡ ಎನ್‌ಡಿಎ ಸರ್ಕಾರ 2003ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಯಿತು. ಆದರೆ ಮಿತ್ರ¬ಪಕ್ಷ¬ಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದ ಕಾರಣದಿಂದಾಗಿ ಆ ಪ್ರಯತ್ನ ಸಫಲವಾಗಲಿಲ್ಲ.
ಗೋಹತ್ಯೆ ನಿಷೇಧವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನರಷ್ಟೇ ವಿರೋಧಿಸುತ್ತಾರೆಂಬ ತಪ್ಪು ಕಲ್ಪನೆಯೊಂದಿದೆ. ದನದ ಮಾಂಸವನ್ನು ನಿತ್ಯದ ಆಹಾರವಾಗಿ ಬಳಸುತ್ತಿರುವವರಲ್ಲಿ ಶೂದ್ರ ಮತ್ತು ದಲಿತರ ಸಂಖ್ಯೆ ಕೂಡಾ ಗಣನೀಯವಾಗಿದೆ. ಹೀಗಿದ್ದರೂ ಗೋಹತ್ಯೆಯ ನಿಷೇಧವನ್ನು ಕೇವಲ ಆಹಾರದ ದೃಷ್ಟಿ¬ಯಿಂದಷ್ಟೇ ವಿರೋಧಿಸಬೇಕಾಗಿಲ್ಲ. ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿಹೆಚ್ಚಿನ ಜಾನುವಾರು ಸಂಪತ್ತು ಹೊಂದಿರುವ ದೇಶ ಭಾರತ. ವಿಶ್ವದ ಒಟ್ಟು ಹಸುಗಳಲ್ಲಿ ನಾಲ್ಕನೆ ಒಂದರಷ್ಟು ನಮ್ಮ ದೇಶದಲ್ಲೇ ಇವೆ. ಇಲ್ಲಿರುವ ಸುಮಾರು 20 ಕೋಟಿ ಜಾನುವಾರುಗಳಲ್ಲಿ ಹಸುಗಳು ಆರು ಕೋಟಿ, ಎಮ್ಮೆಗಳು ಎಂಟು ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಶೇಕಡಾ 60ರಷ್ಟು ಜಾನುವಾರುಗಳಿಗೆ ಬೇಕಾದಷ್ಟು ಮಾತ್ರ ಆಹಾರ ಲಭ್ಯ ಇದೆ. ಗೋಮಾಳಗಳೆಲ್ಲ ಒತ್ತುವರಿಗೊಳಗಾಗಿ ಕಣ್ಮರೆಯಾಗುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಈವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ವರದಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಕೃಷಿಕ್ಷೇತ್ರದಲ್ಲಿನ ಕಷ್ಟ-ನಷ್ಟ ತಾಳಲಾರದೆ ರೈತರು ಈಗಲೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹವರ ಕುತ್ತಿಗೆಗೆ ಹಾಲು ಬತ್ತಿದ, ಕರು ಹಾಕದ, ರೋಗಿಷ್ಠ ಬಡಕಲು ಹಸುಗಳನ್ನು ಕಟ್ಟಿಹಾಕಿದರೆ ರೈತರ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಅಷ್ಟೇ.
ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಲು ಹೊರಟಿರುವ ಸರ್ಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದೂ ಇಂತಹ ‘ತಪ್ಪು’ ಮಾಡುತ್ತಿರುವುದಕ್ಕೆ ಕಾರಣ ಆಡಳಿತಪಕ್ಷ¬ದೊಳಗಿನ ಗುಪ್ತ ಅಜೆಂಡಾ. ಈಗಿರುವ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳಲ್ಲಿ ಗೋಹತ್ಯೆಯ ಪತ್ತೆಗಾಗಿ ಕಲ್ಪಿಸಿರುವ ಅವಕಾಶ ಹಾಗೂ ಅಪರಾಧಕ್ಕಾಗಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವೇ ಸರ್ಕಾರದ ದುರುದ್ದೇಶಕ್ಕೆ ಸಾಕ್ಷಿ.
ಈ ತಿದ್ದುಪಡಿ ಜಾರಿಗೆ ಬಂದರೆ ಮುಸ್ಲಿಮರನ್ನು ಒಳಗೊಂಡಂತೆ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಇನ್ನೂ ಸುಲಭದ ಕೆಲಸ. ಅವರ ಮನೆಮುಂದೆ ಸತ್ತದನದ ತಲೆ ಎಸೆದರಾಯಿತು. ಒಂದು ವರ್ಷದ ಜೈಲು ಇಲ್ಲವೇ 50,000 ರೂಪಾಯಿ ದಂಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಮಂದಿಯ ಕೈ ಕಡಿಯಲು ಸಾಧ್ಯ?
(2010 ಫೆಬ್ರವರಿ 15ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಅಂಕಣ)