Tuesday, January 19, 2016

ಹಸಿವು ವೈಯಕ್ತಿಕವಾದುದು, ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು.

ಹಸಿವಿಗಿಂತ ಅವಮಾನದ ನೋವು ಭೀಕರವಾದುದು. ಹಸಿವು-ಅವಮಾನಗಳನ್ನೇ ಉಂಡು ಬೆಳೆದ ಹಿರಿಯ ಜೀವಗಳು ಅವುಗಳನ್ನು ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಇದರಿಂದಾಗಿ ಸುಲಭದಲ್ಲಿ ಜೀವ ಬಿಟ್ಟುಕೊಡುವುದಿಲ್ಲ. ಇಲ್ಲದೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಹೆಣಗಳು ಸಾಲುಸಾಲು ಬೀಳಬೇಕಿತ್ತು, ರೈತರದ್ದಲ್ಲ. ಹುಟ್ಟಿನಿಂದಲೇ ಹಸಿವು ಮತ್ತು ಅವಮಾನವನ್ನು ಸಹಿಸಿಕೊಂಡು ಬಂದ ದಲಿತರು ರೈತರ ಹಾಗೆ ದುರ್ಬಲ ಮನಸ್ಸಿನವರಾಗಿದ್ದಿದ್ದರೆ ನಾವೆಲ್ಲ ನಿತ್ಯ ದಲಿತರ ಆತ್ಮಹತ್ಯೆಯ ಲೆಕ್ಕ ಹಾಕಿಕೊಂಡು ಕೂರಬೇಕಿತ್ತು.
ಹಸಿವು ವೈಯಕ್ತಿಕವಾದುದು, ಅದನ್ನು ಸಹಿಸಿಕೊಳ್ಳಬಹುದು. ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು. ಒಮ್ಮೊಮ್ಮೆ ಮುಖಮುಚ್ಚಿಕೊಳ್ಳಲು ಜಾಗವೇ ಸಿಗುವುದಿಲ್ಲ. ಹೊಸಪೀಳಿಗೆಯ ರೋಹಿತ ವೇಮುಲನಂತಹ ಸೂಕ್ಷ್ಮವಾದ ಹೂಮನಸ್ಸಿನ ಜೀವಗಳು ಬಹುಬೇಗ ಅವಮಾನದಿಂದ ಬಾಡಿಹೋಗುತ್ತವೆ, ಒಮ್ಮೊಮ್ಮೆ ಉದುರಿಹೋಗಿ ನಮ್ಮನ್ನೆಲ್ಲ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ ಅಣಕಿಸುತ್ತಿರುತ್ತವೆ.
ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.