Wednesday, April 13, 2016

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ...

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದು
.1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.
ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.
ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.
‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.
ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?
ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.
ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.
ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?
1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?
ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?
ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.
ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.
ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.
‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.
ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.
ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.
ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.
ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.
ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).
ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.
ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.
ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.
ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.
ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.
3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.
ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.
ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?
ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.
ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.
ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.
ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.
ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.
ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.
ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.