Wednesday, June 8, 2016

ಮುಂಗಾರು ಪತ್ರಿಕೆ: ವಿಧಾನಸಭೆಯೇ ಬರಲಿದೆ ಜಿಲ್ಲೆಗೆ..

ಇದು ೩೮ನೇ ಸ್ವಾತಂತ್ರ್ಯೋತ್ಸವದಂದು ಮುಂಗಾರು ಪತ್ರಿಕೆಗೆ ನಾನು ಮಾಡಿದ್ದ ನೀರುಸಾಬರ ಸಂದರ್ಶನ. ಪ್ರವಾದಿಯಂತೆ ಅಂದು ಅವರು ವ್ಯಕ್ತಪಡಿಸಿದ್ದ ಅನೇಕ ಅಭಿಪ್ರಾಯಗಳುಇಂದು ನಿಜವಾಗಿದೆ.
ಮಾತುಕತೆ ಮುಗಿದ ನಂತರ ನನ್ನೂರಿನ ಬಗ್ಗೆ ವಿಚಾರಿಸಿದ್ದರು. ನಾನು ನಮ್ಮೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಭಾವುಕವಾಗಿಯೇ ವಿವರಿಸಿದ್ದೆ. ತಕ್ಷಣ ಅವರು PHE ಎಂಜನಿಯರ್ ಅವರನ್ನು ಕರೆಸಿ ನಮ್ಮೂರಿಗೊಂದು ಬೋರ್ ವೆಲ್ ಹಾಕಲು.ಆದೇಶಿಸಿದ್ದರು. ಅದು ನಮ್ಮೂರಿನ ಮೊದಲ ಬೋರ್ ವೆಲ್. ಈಗ ಅದು ಬತ್ತಿಹೋಗಿದೆ, ಆದರೆ ಅವರ ನೆನಪು ಮಾತ್ರ ಎಂದೂ ಬತ್ತಿ ಹೋಗದು.
ಅವರು ನಿಧನರಾದಾಗ 'ಅಲ್ಲಾ ನೀಡಿದ ವಿಚಿತ್ರ ಪವಾಡ' ಎಂಬ ದೀರ್ಘವಾದ Obituary ಬರೆದಿದ್ದೆ. ಹುಡುಕಿದರೆ ಸಿಗಬಹುದು.
ಅಂದ ಹಾಗೆ ಈ ಫೊಟೋದಲ್ಲಿರುವ ಸಂದರ್ಶಕ ನಾನೇ. ಇದಕ್ಕೆ ಸಾಕ್ಷಿ ಕೇಶವ ವಿಟ್ಲ, ಅವನೇ ಫೋಟೋ ತೆಗೆದದ್ದು.

Monday, June 6, 2016

ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ ‘ಹಿಂದುತ್ವದ ಪ್ರಯೋಗಶಾಲೆ’; ಖಂಡಿತ ಆಗುತ್ತಿರಲಿಲ್ಲ

ಮುಂಗಾರು ಪತ್ರಿಕೆಯಲ್ಲಿ ನಾನು ಮಾಡಿದ್ದ ವರದಿಯೊಂದನ್ನು ಉಲ್ಲೇಖಿಸಿ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಮೂಡಿರುವ ಗೊಂದಲ ನಿವಾರಣೆಗೆ ಈ ಪ್ರಯತ್ನ. ಭಿನ್ನಾಭಿಪ್ರಾಯಕ್ಕೆ ಸ್ವಾಗತ.
ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸಮಾಡಬೇಕಾದ ಪರಿಸ್ಥಿತಿ ಇದೆ.. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ‘’ನಾನು ಒಳಗಿದ್ದೇ ಹೋರಾಡುತ್ತೇನೆ, ಇವರನ್ನೆಲ್ಲ ಬಯಲುಮಾಡುತ್ತೇನೆ, ಇದನ್ನು ಬದಲಾಯಿಸಿಯೇ ತೀರುತ್ತೇನೆ ಎಂದು ಹೊರಟವರ ಹೋರಾಟ ತಕ್ಷಣದ ಫಲ ನೀಡಲಾರದು. ಆ ಹೋರಾಟದ ಹಾದಿ ಹಿಡಿದರೆ ಪತ್ರಕರ್ತನಾಗಿ ತಾನು ಮಾಡಬಯಸಿದ್ದನ್ನು ಕೂಡಾ ಮಾಡಲಾಗದೆ ಕೊರಗುತ್ತಾ ಇರಬೇಕು- ಇದು ನನ್ನ ಖಚಿತ ಅಭಿಪ್ರಾಯ.
‘ಏನ್ಸಾರ್, ನೀವೂ ಹೀಗೆ ಹೇಳಿದರೆ ಹೇಗೆ? ಎಂದು ನನ್ನ ಯುವಪತ್ರಕರ್ತ ಮಿತ್ರರು ನನ್ನನ್ನು ದಬಾಯಿಸಬಹುದು. ಉದ್ಯಮಿಗಳ ಹಿಡಿತದಿಂದ ಮಾಧ್ಯಮ ಕ್ಷೇತ್ರವನ್ನು ಬಿಡುಗಡೆಗೊಳಿಸುವುದು ಸುದೀರ್ಘವಾದ ಹೋರಾಟ. ಅದು ನನ್ನ ತಲೆಮಾರಿನಲ್ಲಿ ಮುಗಿಯುವ ಭರವಸೆ ನನಗಿಲ್ಲವಾದರೂ ಈ ಹೋರಾಟ ವ್ಯರ್ಥ ಎಂದು ನಾನು ಹೇಳಲಾರೆ. ಈ ಹೋರಾಟ ಮುಂದುವರಿಯಬೇಕು. ನ್ಯಾಯಾಲಯದ ಒಂದು ತೀರ್ಪು, ಜ್ಞಾನೋದಯದ ಫಲವಾಗಿ ಶಾಸಕಾಂಗ ಕೈಗೊಳ್ಳುವ ಒಂದು ಜನಪರ ತೀರ್ಮಾನ ಎಲ್ಲವನ್ನೂ ಬದಲಾಯಿಸಿಬಿಡಬಹುದೇನೋ? ಆ ಭರವಸೆ ನಮ್ಮಲಿರಲಿ.
ಆದರೆ ಆ ದಿನ ಬರುವ ವರೆಗೆ ನಾನು ಪೆನ್ ಕೈಗೆತ್ತಿಕೊಳ್ಳುವುದಿಲ್ಲ ಕೀಪ್ಯಾಡ್ ಮುಟ್ಟುವುದೇ ಇಲ್ಲ ಎಂದು ಪತ್ರಕರ್ತರು ತೀರ್ಮಾನ ಕೈಗೊಂಡರೆ ಅದು ಮೂರ್ಖತನವಾಗುತ್ತದೆ. ನಮ್ಮಂತಹವರೆಲ್ಲ ಐಕಾನ್ ಎಂದು ಸ್ವೀಕರಿಸಿರುವ ಪಿ.ಸಾಯಿನಾಥ್ ‘ Everybody loves a good drought’ ಪುಸ್ತಕದ ಲೇಖನಗಳನ್ನು ಬರೆದಿರುವುದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಎನ್ನುವುದನ್ನು ಮರೆಯಬಾರದು. ಸಾಯಿನಾಥ್ ತನ್ನದೊಂದು ಆಸಕ್ತಿಯ ಕ್ಷೇತ್ರವನ್ನು ಹುಡುಕಿಕೊಳ್ಳದೆ ಮೊದಲು ಟೈಮ್ಸ್ ಆಫ್ ಇಂಡಿಯಾದೊಳಗೆ ಸಂಪಾದಕೀಯ ವಿಭಾಗದ ತಲೆಮೇಲೆ ಕೂತಿರುವ ಜಾಹಿರಾತು ವಿಭಾಗದವರ ವಿರುದ್ಧವೇ ಬರೆಯುತ್ತೇನೆ, ಇಲ್ಲದೆ ಇದ್ದರೆ ಅದರ ಮಾಲೀಕರಾದ ಜೈನ್ ಬಳಗದ ಉದ್ಯಮದ ಬಗ್ಗೆಯೇ ತನಿಖಾ ವರದಿ ಮಾಡುತ್ತೇನೆ ಎಂದು ಹೊರಟಿದ್ದರೆ ನಮಗೊಬ್ಬ ಸಾಯಿನಾಥ್ ಸಿಗುತ್ತಿರಲಿಲ್ಲ. 
ಸಾಯಿನಾಥ್ ಕೆಲಸ ಮಾಡಿದ ಪತ್ರಿಕೆಗಳಲ್ಲೆಲ್ಲಾ ಇಂತಹ ಬಿಕ್ಕಟ್ಟುಗಳಿದ್ದವು. ಕಾಸಿಗಾಗಿ ಸುದ್ದಿ ಹಗರಣದ ಬಗ್ಗೆ ಅವರು ಬರೆದದ್ದು ಇತ್ತೀಚಿನ ವರ್ಷಗಳಲ್ಲಿ. ಅಲ್ಲಿಯ ವರೆಗೆ ಸುದ್ದಿಯ ಛದ್ಮವೇಷದಲ್ಲಿ ಪ್ರಕಟಗೊಳ್ಳುತ್ತಿರುವ ಜಾಹೀರಾತು ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಆದರೆ ಅವರ ಆದ್ಯತೆ ಬೇರೆ ಇತ್ತು. ಈ ವಿವೇಚನೆ ಒಬ್ಬ ಪತ್ರಕರ್ತನಿಗೆ ಇರಬೇಕೆಂದು ನನ್ನ ಅಭಿಪ್ರಾಯ. ಇದನ್ನು ಪ್ರಾಯೋಗಿಗ ನೋಟ ಎನ್ನುತ್ತಿರೋ? ವ್ಯವಸ್ಥೆಯ ಜತೆ ರಾಜೀ ಎನ್ನುತ್ತಿರೋ ಇದು ನಿಮಗೆ ಬಿಟ್ಟದ್ದು.
ನಾನು ಪ್ರಜಾವಾಣಿಯಲ್ಲಿದ್ದಾಗ ಹೊಸಬರ ನೇಮಕದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಹೆಚ್ಚಿನವರಿಗೆ ವರದಿಗಾರರಾಗಬೇಕೆಂಬ ಅದರಲ್ಲೂ ರಾಜಕೀಯ ವರದಿಗಾರರಾಗುವ ಆಸೆ. ಯಾರೊಬ್ಬರೂ ‘’ನನಗೆ ಸಾಯಿನಾಥ್ ರೀತಿಯ ಪತ್ರಕರ್ತನಾಗಬೇಕೆಂಬ ಉದ್ದೇಶ ಎಂದು ಹೇಳಿದ್ದನ್ನು ಕೇಳಿರಲಿಲ್ಲ. ಇದು ನಮ್ಮ ಸಮಸ್ಯೆ.
ಆರು ವರ್ಷಗಳ ಹಿಂದೆ ನಾನು ತೀರಾ ಅನಾರೋಗ್ಯದಿಂದ ಚೇತರಿಸಿಕೊಂಡು ಕಚೇರಿಗೆ ಬಂದಾಗ ನಮ್ಮ ಸಂಪಾದಕರು ರಾಜ್ಯದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶದ ಪರಿಹಾರ ಕಾರ್ಯದ ಬಗ್ಗೆ ಹೋಗಿ ವರದಿಮಾಡಿ ಎಂದರು. ಆಗಿನ್ನೂ ನಾನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ, ಯಾರಾದರೂ ಕಿರಿಯರು ತಾವು ಹೋಗ್ತೇವೆ ಎಂದು ಕೈ ಎತ್ತಬಹುದೇ ಎಂದು ಕಾದೆ. ಯಾರೂ ಕಾಣಲಿಲ್ಲ. ಈಗ ಪತ್ರಿಕೋದ್ಯಮದ ಬಗ್ಗೆ ತಮ್ಮ ಅಂಕಣಗಳಲ್ಲಿ ಪಾಠ ಮಾಡುವ ನನ್ನ ಹಿರಿಯ ಸಹದ್ಯೋಗಿಗಳು ಕೂಡಾ ಬಾಯಿ ಬಿಟ್ಟಿರಲಿಲ್ಲ.
ಅದರ ನಂತರ ಅಸ್ಸಾಂ ಗಲಭೆಪೀಡಿತ ಪ್ರದೇಶಕ್ಕೆ ಹೋದೆ, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಕಾಲದಲ್ಲಿ ಒಂದು ತಿಂಗಳು ಸುತ್ತಿದೆ,ರಾಜ್ಯದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಸುಮಾರು 5000 ಕಿ.ಮೀ. ಸುತ್ತಿದೆ. ನನ್ನ ಢಂಗುರ ಬಾರಿಸಲು ಇದನ್ನು ಹೇಳುತ್ತಿಲ್ಲ. ನಾನು ಈ ವರದಿಮಾಡಲು ಹೋಗದೆ ಪ್ರಜಾವಾಣಿ ಮಾಲೀಕರು ಯಾವುದೋ ಡಿನೋಟಿಪೀಕೆಷನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆಯೇ ವರದಿಮಾಡುತ್ತೇನೆಂದು ಪಟ್ಟು ಹಿಡಿದು ಕೂತಿದ್ದಲ್ಲಿ ನನಗೆ ಈ ವರದಿಗಳನ್ನು ಮಾಡಲು ಅವಕಾಶ ಸಿಗುತ್ತಿತ್ತೇ? 
ಅಂದಹಾಗೆ ಇಂತಹ ಆರೋಪ-ಅನುಮಾನಗಳು ಗಾಳಿಯಲ್ಲಿ ಸುಳಿದಾಡುತ್ತಿರುವಾಗಲೇ ನಾನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕಟುಟೀಕೆಗಳ ಸರಮಾಲೆಯ ಅಂಕಣಗಳನ್ನು ಬರೆದೆ. ಸಂಪಾದಕರು ಅದರ ಒಂದು ಸಾಲು ಬದಲಿಸದೆ, ಸಣ್ಣ ಆಕ್ಷೇಪದ ಗೊಣಗಾಟವನ್ನೂ ಮಾಡದೆ ನನಗೆ ಸ್ವಾತಂತ್ರ್ಯ ಕೊಟ್ಟಿದ್ದರು.
ನಾನು ಪ್ರಾಯೋಗಿಕವಾಗಿ ನೋಡಲು ಹೋಗಿ ವ್ಯವಸ್ಥೆಯ ಜತೆ ರಾಜಿಮಾಡಿಕೊಂಡೆ ಎಂದು ಹೇಳುತ್ತಿರಾ? ತೀರ್ಮಾನ ನಿಮಗೆ ಬಿಟ್ಟದ್ದು. ನನ್ನ ತೀರ್ಮಾನದ ಹಿಂದೆ ನಾನು ಪ್ರಾರಂಭದಲ್ಲಿಯೇ ಕಲಿತ ಪಾಠ ಮತ್ತು ಕಟು ವಾಸ್ತವದ ಅರಿವು ಇತ್ತು ಎಂದಷ್ಟೇ ನಾನು ಹೇಳಬಲ್ಲೆ. 
ಮುಂಗಾರು ಪತ್ರಿಕೆಗೆ ಹೊಟೇಲ್ ಉದ್ಯಮಿ ರಾಂಪಣ್ಣ ಕೂಡಾ ಒಬ್ಬ ನಿರ್ದೇಶಕರಾಗಿದ್ದರು. ಅವರ ಮನೆಯಲ್ಲಿ ನಡೆದ ಭೂತದ ಕೋಲದ ಪೋಟೊ ಮುಂಗಾರು ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂದು ಅವರ ಬಯಕೆಯಾಗಿತ್ತು. ಇದಕ್ಕಾಗಿ ಆಗಿನ ನಮ್ಮ ಸಂಪಾದಕೀಯ ಬಳಗದಲ್ಲಿ ಒಂದು ದೊಡ್ಡ ‘ಸೈದ್ಧಾಂತಿಕ ಯುದ್ಧ’ವೇ ನಡೆದಿತ್ತು. ತಿರುಗಿನೋಡಿದಾಗ ಆ ಯುದ್ಧದಲ್ಲಿ ಪಾಲ್ಗೊಂಡವರಿಗೂ ಅಂದಿನ ಜಗಳ ಬಾಲಿಷ ಅನಿಸಬಹುದು. ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ ‘ಹಿಂದುತ್ವದ ಪ್ರಯೋಗಶಾಲೆ’; ಖಂಡಿತ ಆಗುತ್ತಿರಲಿಲ್ಲ ಎನ್ನುವುದು ನನ್ನ ನಂಬಿಕೆ. ವೃತ್ತಿಯ ಪ್ರಾರಂಭದ ದಿನಗಳಲ್ಲಿ ನಾನು ಬೆರಗುಕಣ್ಣುಗಳಿಂದ ನೋಡುತ್ತಿದ್ದ, ಗುರುವೆಂದು ಈಗಲೂ ತಿಳಿದುಕೊಂಡಿರುವ ಎನ್.ಎಸ್. ಶಂಕರ್ ಅವರ ಅಭಿಪ್ರಾಯ ಬೇರೆ ಇರಬಹುದೇನೋ? ಅದನ್ನು ತಿಳಿದುಕೊಳ್ಳುವ ಆಸೆ ನನಗೂ ಇದೆ.
ಇದನ್ನೆಲ್ಲ ಬರೆಯುತ್ತಲೇ ಹೋಗಬಹುದು, ಮತ್ತೊಮ್ಮೆ ಈ ಬಗ್ಗೆ ಮಾತಾಡೋಣ. ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡು ಮುನ್ನಡೆಯುವ. ಬೀದಿಗಳಲ್ಲಿ ಹುಚ್ಚು ನಾಯಿಗಳು ಬೊಗಳುತ್ತಲೇ ಇರಲಿ.

Sunday, June 5, 2016

ಮುಂಗಾರು ಪತ್ರಿಕೆ: (17-08-1986)

ಇದು ನಾನು ಸುಮಾರು ಮೂರುದಶಕಗಳ ಹಿಂದೆ ಮುಂಗಾರು ಪತ್ರಿಕೆಗೆ ಮಾಡಿದ ವರದಿ. ಹಳೆಯ ಕಡತಗಳನ್ನು ಕೆದಕಿದಾಗ ಸಿಕ್ಕ ವರದಿ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.

ಈ ವರದಿ ನೋಡಿ ಕೆಂಡಾಮಂಡಲವಾದ ವಡ್ಡರ್ಸೆಯವರು ನನಗೆ ನೋಟೀಸ್ ನೀಡಿದ್ದು ಮಾತ್ರವಲ್ಲ ಕೆಲವು ದಿನ ಮಾತನಾಡಿರಲಿಲ್ಲ.

ಕಾರಣ ಇಷ್ಟೆ: ಮುಂಗಾರು ಪತ್ರಿಕೆಗೆ ದುಡ್ಡು ಹಾಕಿದವರಲ್ಲಿ ಕೆಲವರು ಅಬಕಾರಿ ಕಂಟ್ರಾಕ್ಟರ್ ಗಳಿದ್ದರು. ಪತ್ರಿಕೆ ನಡೆಸಲಿಕ್ಕಾಗದೆ ಆಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ವಡ್ಡರ್ಸೆಯವರ ಮೇಲೆ ಆ ಕಂಟ್ರಾಕ್ಟರ್ ಗಳು ಈ ವರದಿ ನೋಡಿ ಕೋಪ ಮಾಡಿಕೊಂಡಿದ್ದರು. ಪತ್ರಿಕೆಯ ನೆರವಿಗೆ ಬರ್ತಿಲ್ಲ ಎನ್ನುವ ಕಾರಣಕ್ಕೆ ಹೀಗೆಲ್ಲ ಬರೆಸಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ಇನ್ನೊಂದೆಡೆ 'ನಮ್ಮವ' ನೊಬ್ಬ ನಮ್ಮ ವಿರುದ್ದವೇ ಬರೆದನಲ್ಲಾ ಎಂದು ಆ ಅಬಕಾರಿ ಕಂಟ್ರಾಕ್ಟರ್ ಗಳು ನನ್ನ ವಿರುದ್ಧ ಗರಂ ಆಗಿದ್ದರು. ನಡುವೆ ಸಿಕ್ಕ ನಾನು ಪಟ್ಚ.
ನಿಜಸಂಗತಿ ಏನೆಂದರೆ ಆಗ ನಮಗಿದ್ದ ಸಂಪಾದಕೀಯ ಸ್ವಾತಂತ್ರ್ಯ ದಲ್ಲಿ ಎಷ್ಟೋ ತನಿಖಾ ವರದಿಗಳು ಕೂಡಾ ವಡ್ಡರ್ಸೆಯವರ ಗಮನಕ್ಕೆ ಬರದೆ ಅಚ್ಚಾಗುತ್ತಿತ್ತು. ಇದು ಆ ರೀತಿ ಪ್ರಕಟವಾದ ವರದಿ.
ಆ ಕಾಲದಲ್ಲಿ ನನಗೂ ಕೋಪ ಬಂದಿತ್ತು. ಆದರೆ ಈಗ? ನಾವು ಸ್ವಲ್ಪ ಕಣ್ಣು ತೆರೆದು ಪ್ರಾಯೋಗಿಕವಾಗಿ ಯೋಚಿಸಿ ವಡ್ಡರ್ಸೆಯವರನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಅನಿಸುತ್ತಿದೆ.

ಇದೇ ರೀತಿ ಇಂಧೂದರ,ಎನ್.ಎಸ್. ಶಂಕರ್, ಕೆ.ರಾಮಯ್ಯ,ಪುಟ್ಟಸ್ವಾಮಿ ಮೊದಲಾದ ಪ್ರಾರಂಭಿಕ ಮುಂಗಾರು ಬಂಡಾಯಗಾರರಿಗೂ ಅನಿಸುತ್ತಿರಬಹುದೇ?