Thursday, September 8, 2016

ಕಾವೇರಿ: ರಾಜ್ಯಕ್ಕೆ ಲಾಭ-ನಷ್ಟ ಎಷ್ಟು? (ಫೆಬ್ರುವರಿ 2007)

ಕಾವೇರಿ ನದಿನೀರು ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಬರೆಯಬೇಕೆಂದು ನನ್ನ ಕೈ ತುರಿಸುತ್ತಿರುವುದು ನಿಜ, ವೃತ್ತಿಯನ್ನು ಮತ್ತು ದೆಹಲಿಯನ್ನು ಮಿಸ್ ಮಾಡುತ್ತಿರುವುದು ಕೂಡಾ ನಿಜ. ನಾನು 2000ನೇ ವರ್ಷದಲ್ಲಿ ದೆಹಲಿಗೆ ಹೋದವನು, ಅದಕ್ಕಿಂತ ಮೊದಲೇ ಅಲ್ಲಿ ಕನ್ನಡಪ್ರಭದ ವರದಿಗಾರರಾದ ಡಿ.ಉಮಾಪತಿ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರರಾದ ಬಿ.ಎಸ್. ಅರುಣ್ ಇದ್ದರು, ನಂತರ ವಿಜಯಕರ್ನಾಟಕದ ವರದಿಗಾರರಾಗಿ ಅಶೋಕ್ ರಾಮ್ ನಮ್ಮನ್ನು ಸೇರಿಕೊಂಡರು. ಕಾವೇರಿ ಮತ್ತು ಕೃಷ್ಣಾ ನ್ಯಾಯಮಂಡಳಿಯ ಬೈಠಕ್ ಗಳನ್ನು ನಮ್ಮ ವಕೀಲರೂ ತಪ್ಪಿಸಿಕೊಂಡರೂ ನಾವು ಮಾತ್ರ ತಪ್ಪದೇ ನಿಯಮಿತವಾಗಿ ಹಾಜರಾಗಿ ವಿದ್ಯಾರ್ಥಿಗಳಂತೆ ನೋಟ್ಸ್ ಮಾಡಿಕೊಳ್ಳುತ್ತಿದ್ದೆವು. 

ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿನ ಅಕ್ರಿಡಿಷನ್ ಇಲ್ಲದ ನಾವು ಸಂದರ್ಶಕರ ಪಾಸ್ ನಲ್ಲಿ ಒಳಗೆ ಹೋಗಿ ಗಂಟೆಗಟ್ಟಲೆ ನಿಂತುಕೊಂಡೇ ನ್ಯಾಯಮೂರ್ತಿಗಳ ಕಣ್ಣಿಗೆ ಬೀಳದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆವು. ಗೊಂದಲ ಮೂಡಿದರೆ ಅದನ್ನು ಬಗೆಹರಿಸಲು ನೀರಾವರಿ ವಿವಾದದ ವಿಷಯದಲ್ಲಿ ‘ಸರ್ವಜ್ಞ’ ರೆನಿಸಿರುವ ನಮ್ಮೆಲ್ಲರ ಗೆಳೆಯರಾಗಿರುವ ಮೋಹನ್ ಕಾತರಕಿ ಇದ್ದರು. ನಮ್ಮ ನಡುವೆ ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳದ ಸಣ್ಣ ವೃತ್ತಿಸಂಬಂಧಿ ಪೈಪೋಟಿ ಕೂಡಾ ಇತ್ತು, ಅದನ್ನು ಮೀರಿದ ಸ್ನೇಹವೂ ಇತ್ತು. ಈಗಲೂ ದೆಹಲಿಯಲ್ಲಿರುವ ಕನ್ನಡದ ಪತ್ರಕರ್ತರು ಸೆನ್ಸಿಬಲ್ ಆಗಿ ವರದಿ ಮಾಡುತ್ತಿರುವುದನ್ನು ಕೂಡಾ ಗಮನಿಸಬಹುದು.
ನೆಲ,ಜಲ,ಭಾಷೆಗೆ ಸಂಬಂಧಿಸಿದ ವಿವಾದ ಎದ್ದಾಗೆಲ್ಲ ನಮ್ಮದು ಒಂದೇ ಪಕ್ಷ, ಅದು ಕರ್ನಾಟಕ ಪಕ್ಷ ಎಂದು ನಾವು ತಮಾಷೆಮಾಡಿಕೊಳ್ಳುತ್ತಿದ್ದೆವು. ಅಂದಮಾತ್ರಕ್ಕೆ ಕಹಿಸತ್ಯವನ್ನು ಹೇಳಲು ನಾವು ಹಿಂಜರಿಯುತ್ತಿರಲಿಲ್ಲ. ಬಹಳಷ್ಟು ಸಲ ಅದು ಸರ್ಕಾರಕ್ಕೆ, ಸಚಿವರುಗಳಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ ನಾವು ಹುಸಿ ರಾಜ್ಯಪ್ರೇಮದಲ್ಲಿ ತೇಲಿಹೋಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಎಂದೂ ಮಾಡಿರಲಿಲ್ಲ. ಆದರೆ ರಾಜ್ಯದ ಹಿತಾಸಕ್ತಿಯ ವಿರುದ್ಧ ನಾವಿಲ್ಲ ಎನ್ನುವುದನ್ನು ನಮ್ಮ ಬರವಣಿಗೆಯ ಮೂಲಕ ಆಗಲೇ ಸಾಬೀತುಪಡಿಸಿದ್ದ ಕಾರಣದಿಂದಾಗಿ ಕಹಿಸತ್ಯ ಬರೆದಾಗಲೂ ಜನ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದರು.
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ಐತೀರ್ಪು ನೀಡಿದಾಗಲೂ ರಾಜ್ಯದಲ್ಲಿ ಬಂದ್ ಗೆ ಕರೆನೀಡಲಾಗಿತ್ತು. ನನಗೆ ಸರಿಯಾಗಿ ನೆನಪಿದೆ, ಅದು ಫೆಬ್ರವರಿ 12, 2007. ಅದೇ ದಿನಕ್ಕೆಂದು ನಾನು ವಿಶೇಷ ವರದಿ ತಯಾರಿಸಿದ್ದೆ. ‘ಕಾವೇರಿ: ರಾಜ್ಯಕ್ಕೆ ಲಾಭ, ನಷ್ಟ ಎಷ್ಟು?’ ಎನ್ನುವುದು ಅದರ ತಲೆಬರಹವಾಗಿತ್ತು. ಐತೀರ್ಪಿನಿಂದಾಗಿ ರಾಜ್ಯಕ್ಕೆ ಘನಘೋರ ಅನ್ಯಾಯವಾಗಿದೆ ಎಂಬ ಪ್ರಚಾರ ನಡೆಯುತ್ತಿದ್ದ ಕಾಲ ಅದು. ಅದರಿಂದ ಕರ್ನಾಟಕಕ್ಕೆ ಲಾಭವೂ ಇದೆ ಎನ್ನುವುದನ್ನು ನಾನುಬರೆದಿದ್ದೆ. ಸ್ವಲ್ಪ ರಿಸ್ಕಿ ವರದಿ ಅದು. ಮೊದಲಪುಟದಲ್ಲಿ ಪ್ರಕಟವಾಗಬೇಕಾಗಿದ್ದ ಆ ವರದಿಯನ್ನು ಸುದ್ದಿಸಂಪಾದಕರು ಸ್ವಲ್ಪ ಅಂಜಿಕೆಯಿಂದ ಒಳಪುಟದಲ್ಲಿ ಪ್ರಕಟಿಸಿದರು. ಆದರೆ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನಾನು ಮರೆಯಲಾರದಂತಹದ್ದು. ಒಬ್ಬ ಓದುಗ ಕೂಡಾ ಬರೆದುದು ತಪ್ಪು, ಬರೆಯಬಾರದಿತ್ತು ಎಂದುನನಗೆ ಹೇಳಲಿಲ್ಲ.
ಅದರ ನಂತರ 2007ರಲ್ಲಿಯೇ ಆಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ದರಾಮಯ್ಯ ಮತ್ತಿತರರು ಕರ್ನಾಟಕದ ಎಲ್ಲ ಅಕಾಡೆಮಿಗಳನ್ನು ಒಗ್ಗೂಡಿಸಿ ರಿ ಕಾವೇರಿ ವಿವಾದ ಬಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ವಿಷಯ ಮಂಡನೆಗೆ ಕಿರಿಯನಾದ ನನ್ನನ್ನು ಆಹ್ಹಾನಿಸಿದ್ದರು. ಪ್ರತಿಕ್ರಿಯಿಸಲು ಹಿರಿಯರಾದ ನೀರಾವರಿ ತಜ್ಞ ಧುರೀಣ ನಂಜೇಗೌಡರು, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಶಾಸಕ ಎಸ್. ಸುರೇಶ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಸಭಾಂಗಣ ಹಸಿರುಶಾಲುಗಳಿಂದ ತುಂಬಿತ್ತು. ನಾನು ಎಂದಿನ ನೇರಾನೇರ ಶೈಲಿಯಲ್ಲಿ ಮಾತನಾಡಿ ತಪ್ಪು-ಒಪ್ಪುಗಳನ್ನು ಮುಂದಿಟ್ಟೆ. ಯಾರೂ ಕಲ್ಲು ಒಗೆಯಲಿಲ್ಲ, ಕೆಳಗಿಳಿಯುತ್ತಿದ್ದಂತೆ ಕೈಕುಲುಕಿದರು, ಅಪ್ಪಿಕೊಂಡರು. ( ನನ್ನ ಮಾತುಗಳು ಮುಗಿಯುತ್ತಿದ್ದಂತೆಯೇ ನನ್ನ ಮೊಬೈಲ್ ಗೆ ‘Well done” ಎನ್ನುವ ಮೆಸೆಜ್ ಬಂದಿತ್ತು. ಯಾರೆಂದುನೋಡಿದರೆ ನಮ್ಮ ಸಂಪಾದಕರಾದ ಕೆ.ಎನ್.ಶಾಂತಕುಮಾರ್. ಅವರ ಹಿಂದಿನ ಸಾಲಲ್ಲಿ ಪ್ರೇಕ್ಷಕರಾಗಿ ಬಂದು ನಮ್ಮೆಲ್ಲರ ಮಾತುಗಳನ್ನು ಕೇಳಿದ್ದರು)
ಬೆಂಗಳೂರಿಗೆ ಹಿಂದಿರುಗಿದ ನಂತರ ಮಂಡ್ಯದ ಎಚ್.ಕೆ.ಎಲ್ .ಕೇಶವಮೂರ್ತಿ ಮತ್ತು ಗೆಳೆಯರು ಕಾವೇರಿ ವಿವಾದದ ಬಗ್ಗೆಯೇ ಮಾತನಾಡಲು ಮಂಡ್ಯಕ್ಕೆ ಆಹ್ಹಾನಿಸಿದರು. ಅದು ಕಾವೇರಿ ಐತೀರ್ಪಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದ ಕಾಲ. ನಾನು ಅಲ್ಲಿಯೂ ಹೆಚ್ಚು ಜನಪ್ರಿಯವಲ್ಲದ ಸತ್ಯದ ಮಾತುಗಳನ್ನಾಡಿದೆ. ಹಿರಿಯರಾದ ಜಿ.ಮಾದೇಗೌಡರು ವಾದಕ್ಕೆ ನಿಂತರು. ಅವರ ಹಿರಿತನಕ್ಕೆ ಗೌರವಕೊಡುತ್ತಲೇ ನನ್ನ ಮಾತುಗಳನ್ನು ಸಮರ್ಥಿಸಿಕೊಂಡೆ. ಸಭಾಂಗಣದಲ್ಲಿದ್ದವರ್ಯಾರು ನನ್ನಮೇಲೇರಿ ಬರಲಿಲ್ಲ.
ಇಂತಹ ಪ್ರಸಂಗಗಳನ್ನು ಉಲ್ಲೇಖಿಸುತ್ತಲೇ ಹೋಗಬಹುದು. ಹೇಳಲು ಕಾರಣ ಇಷ್ಟೆ: ಕರ್ನಾಟಕದ ಜನ ಬುದ್ದಿವಂತರು. ಭಾವುಕರಾದರೂ ಪ್ರಜ್ಞಾವಂತರು. ಹೇಳಬೇಕಾದುದನ್ನು ಹೇಳಬೇಕಾದವರು, ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಖಂಡಿತ ಕೇಳುತ್ತಾರೆ. ಈ ಗುಣವಿಶೇಷದಿಂದಾಗಿಯೇ ನನ್ನಂತಹ ಸಾಮಾನ್ಯ ವರದಿಗಾರನೊಬ್ಬನ ಮಾತನ್ನು ಕೂಡಾ ಕೇಳಿದ್ದರು. 
ಕಳೆದ ಕೆಲವು ದಿನಗಳಿಂದ ಮತ್ತೆ ಎದ್ದಿರುವ ಕಾವೇರಿ ವಿವಾದದ ಬಗ್ಗೆ ಪತ್ರಿಕೆ ಮತ್ತು ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ವರದಿ, ಚರ್ಚೆ, ವಿಶ್ಲೇಷಣೆಗಳನ್ನು ಓದಿದಾಗ, ನೋಡಿದಾಗ ಇದನ್ನೆಲ್ಲ ಬರೆಯಬೇಕೆನಿಸಿತು. ಈಗಲೂ ಎಲ್ಲ ಮಾಧ್ಯಮಗಳು, ಎಲ್ಲ ಪತ್ರಕರ್ತರೂ ರೋಚಕತೆಗೆ ಮಾರುಹೋಗಿದ್ದಾರೆ ಎಂದು ನನಗನಿಸುವುದಿಲ್ಲ. ಆದರೆ ಮಂತ್ರಕ್ಕಿಂತ ಉಗುಳು ಹೆಚ್ಚಾಗಿದೆ.

Monday, September 5, 2016

ನನ್ನ ಪ್ರೇಮ ಟೀಚರ್ ಬಗ್ಗೆ...

ಶಿಕ್ಷಕರ ದಿನಾಚರಣೆಯ ದಿನ ಗೆಳೆಯರೆಲ್ಲರೂ ಸಾಲುಗಟ್ಟಿ ತಮ್ಮ ಗುರುಗಳನ್ನು ನೆನಪುಮಾಡಿಕೊಳ್ಳುತ್ತಿರುವಾಗ ನನ್ನದೂ ಒಂದು ಇರ್ಲಿ ಅಂತ...ನನ್ನ ಪ್ರೇಮ ಟೀಚರ್ ಬಗ್ಗೆ....
ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಓದಿದ್ದು ಮುಂಬೈನ ಮುನ್ಸಿಪಾಲಿಟಿ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಲ್ಲಿನ ಕೋಟೆ ಪ್ರದೇಶದ ಬಜಾರ್ ಸ್ಟ್ರೀಟ್ ನಲ್ಲಿ ನಾನು ಮೂರನೆ ತರಗತಿ ಓದುತ್ತಿದ್ದಾಗ ನಮಗೊಬ್ಬರು ಕ್ಲಾಸ್ ಟೀಚರ್ ಇದ್ದರು. ಅವರ ಹೆಸರು ಪ್ರೇಮ. ಅವರ ಪ್ರೇಮಮಯಿ ವ್ಯಕ್ತಿತ್ವಕ್ಕೆ ಹೆಸರು ಅನ್ವರ್ಥದಂತಿತ್ತು. ಅವರು ಒಂದು ದಿನ ಕರೆದು ಅಂತರ್ ಶಾಲೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಜ್ಞಾಪಿಸಿದರು. ಕ್ಲಾಸಿನಲ್ಲಿ ಅತ್ಯಂತ ಪೋಕರಿ ಹುಡುಗನಾಗಿದ್ದ ನನ್ನ ಬಗ್ಗೆ ಆಗಲೇ ಹಲವಾರು ಬಾರಿ ತಂದೆಗೆ ದೂರು ನೀಡಿದ್ದ ಟೀಚರ್ ಈ ಸ್ಪರ್ಧೆಗೆ ನನ್ನನ್ನೇ ಯಾಕೆ ಆಯ್ಕೆ ಮಾಡಿದರೆಂದು ಆಗಿನ ನನ್ನ ಬಾಲಮನಸ್ಸಿಗೆ ಅರ್ಥವಾಗಿರಲಿಲ್ಲ. ತುಂಟ ಹುಡುಗರ ಬಗ್ಗೆ ಗುರುಗಳಿಗೇಕೆ ಇಷ್ಟೊಂದು ಪ್ರೀತಿ ಎನ್ನುವುದು ಹತ್ತನೆ ತರಗತಿ ವರೆಗೂ ನನಗೆ ಗೊತ್ತಿರಲಿಲ್ಲ.

ಟೀಚರ್ ಹೇಳಿದಾಗ ನಾನು ಒಪ್ಪಿಕೊಂಡರೂ ದಿನದ ಕ್ಲಾಸ್ ಮುಗಿದ ನಂತರ ಪ್ರಾಕ್ಟೀಸ್ ಗಾಗಿ ಒಂದು ಗಂಟೆ ನಿಲ್ಲಬೇಕಾಗುತ್ತದೆ ಎಂದಾಗ ಕೂಡಲೇ ನಾನು ಒಲ್ಲೆ ಎಂದೆ. ಯಾಕೆ? ಎಂದು ಕೇಳಿದರು. “ಶಾಲೆ ಬಿಡುವಾಗ ಹಸಿವಾಗುತ್ತದೆ, ಮನೆಗೆ ಹೋಗಿ ಊಟ ಮಾಡಬೇಕು” ಎಂದೆ.. ನಮ್ಮ ತರಗತಿ ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಒಂದುಗಂಟೆ ವರೆಗೆ ನಡೆಯುತ್ತಿತ್ತು. ಅದಕ್ಕೆ ಪರಿಹಾರವನ್ನು ಅವರು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು.
ಸರಿಯಾಗಿ ಕೇಳಿಸಿಕೊಳ್ಳಿ, ಸುಮಾರು 50 ವರ್ಷಗಳ ಹಿಂದೆ ಮುಂಬೈನಲ್ಲಿ ಸರ್ಕಾರದ ‘ಕ್ಷೀರಭಾಗ್ಯ’ ಯೋಜನೆ ಇತ್ತು. ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಒಂದು ಬಾಟಲಿ ಹಾಲು ಮತ್ತು ನೆಲಗಡಲೆ ಬೀಜದ ಒಂದು ಪೊಟ್ಟಣ ಕೊಡುತ್ತಿದ್ದರು. ಆ ಹಾಲಿನ ಕೆನೆ ಎಷ್ಟೊಂದು ದಪ್ಪ ಇರುತ್ತಿತ್ತೆಂದರೆ ಮೇಲಿನ ಮುಚ್ಚಳ ತೆಗೆದು ಬಾಟಲಿ ತಲೆಕೆಳಗೆ ಮಾಡಿದರೂ ಹಾಲು ಕೆಳಗೆ ಬೀಳುತ್ತಿರಲಿಲ್ಲ. ಎಲ್ಲ ಮಕ್ಕಳಂತೆ ಹಾಲು ನನಗೆ ಇಷ್ಟ ಇಲ್ಲದಿದ್ದರೂ ನೆಲಗಡಲೆ ಪೊಟ್ಟಣಕ್ಕಾಗಿ ನಿತ್ಯನಾನು ಜಗಳವಾಡುತ್ತಿದ್ದೆ. ಮುಂಬೈನ ಕೆಂಪು ಸಿಪ್ಪೆಯ ವಸಾಯ್ ಬಾಳೆ ಹಣ್ಣು ಬಗ್ಗೆ ಕೂಡಾ ನನಗೆ ಅಷ್ಟೇ ಪ್ರೀತಿ. ಈ ಆಸೆಯಿಂದಾಗಿ ಪ್ರೇಮ ಟೀಚರ್ ತನ್ನ ಚಪಾತಿ ಜತೆ ತರುತ್ತಿದ್ದ ಬಾಳೆಹಣ್ಣನ್ನು ಆಗಾಗ ನಾನು ಕದಿಯುತ್ತಿದ್ದೆ. ಅದನ್ನು ಗಮನಿಸದಂತೆ ಇದ್ದ ಪ್ರೇಮ ಟೀಚರ್ ಒಂದರ ಬದಲಿಗೆ ಎರಡು ಬಾಳೆ ಹಣ್ಣು ತರಲು ಶುರುಮಾಡಿದ್ದರು. ಅದರಲ್ಲಿ ನಾನು ಒಂದು ಕದಿಯುತ್ತಿದ್ದೆ. ಅವರು ಗೊತ್ತಿಲ್ಲದಂತೆ ಇರುತ್ತಿದ್ದರು.
ಭಾಷಣ ಸ್ಪರ್ಧೆಗೆ ಒಲ್ಲೆ ಎಂದಾಗ ತಕ್ಷಣ ಪ್ರೇಮ ಟೀಚರ್ ಡಬ್ಬಲ್ ಆಮಿಷ ಒಡ್ಡಿದರು. ‘ನಿನಗೆ ಒಂದು ನೆಲಗಡಲೆ ಬೀಜದ ಪೊಟ್ಟಣ ಮತ್ತು ವಸಾಯಿ ಬಾಳೆ ಹಣ್ಣು ಕೊಡ್ತೇನೆ, ಬರ್ತಿಯಾ? ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಅವರೇ ಭಾಷಣ ಬರೆದು ಕೊಟ್ಟರು. ಅದು ‘ನಾನು ನೋಡಿದ ಜಾದುಗಾರನ ಆಟ’ ಎಂಬ ವಿಷಯ. ಆ ಕಾಲದಲ್ಲಿ ಮುಂಬೈನ ಬೀದಿಬೀದಿಗಳಲ್ಲಿ ಇದು ನಡೆಯುತ್ತಿತ್ತು. ಎರಡು ಗಳಗಳ ನಡುವಿನ ಹಗ್ಗದಲ್ಲಿ ಸಣ್ಣಹುಡುಗಿನಡೆದಾಡಿಕೊಂಡು ಹೋಗುವುದು, ಬುಟ್ಟಿಯೊಳಗಿನ ಹಾವು ಮಾಯ ಮಾಡುವುದು..ಇತ್ಯಾದಿ. ಇದನ್ನೆಲ್ಲ ಸೇರಿಸಿ ಭಾಷಣ ಬರೆದುಕೊಟ್ಟರು.
ಮೊದಲು ಭಾಷಣವನ್ನು ಬಾಯಿಪಾಠ ಮಾಡಿಸಿ, ನಂತರ ಸ್ಟಾಪ್ ರೂಮಿನ ಆಳೆತ್ತರದ ಕನ್ನಡಿ ಮುಂದೆ ನಿಲ್ಲಿಸಿ ಭಾಷಣ ಮಾಡುವಂತೆ ಹೇಳುತ್ತಿದ್ದರು. ಕನ್ನಡಿ ಎದುರು ಭಾಷಣಮಾಡಿದರೆ ಸಭಾ ಕಂಪನ ಓಡಿಹೋಗುತ್ತದೆ ಎಂದು ನನಗೆ ಆಗಲೇ ಗೊತ್ತಾಗಿದ್ದು. ಕೆಲವು ದಿನಗಳ ಪ್ರಾಕ್ಟೀಸ್ ನಂತರ ಭಾಷಣ ಸ್ಪರ್ಧೆ ನಡೆಯಲಿರುವ ವಡಾಲದಲ್ಲಿನ ಶಾಲೆಗೆ ಪ್ರೇಮ ಟೀಚರ್ ಅವರೇ ಮನೆಬಳಿ ಬಂದು ಕರೆದುಕೊಂಡು ಹೋದರು. ರೈಲಿನಲ್ಲಿ ಪ್ರಯಾಣಿಸುವಾಗಲೂ ಅವರು ನನ್ನನ್ನು ಭಾಷಣ ಉರುಹೊಡೆಸುತ್ತಿದ್ದರು. 
ಆ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂತು. ಅದು ಹತ್ತುರೂಪಾಯಿಗಳ ನಗದು. ಆ ಲಕೋಟೆಯನ್ನು ಕಿಸೆಗೆ ಹಾಕಿ ಮತ್ತೆ ನನ್ನನ್ನು ಮನೆಬಳಿಬಿಟ್ಟುಹೋದರು. ಹೋಗುವಾಗ ಹತ್ತಿರ ಕರೆದು ಬರಸೆಳೆದು ಅಪ್ಪಿ ಹಣೆಗೆ ಮುತ್ತಿಟ್ಟರು. ಕೆಲವು ದಿನಗಳ ಹಿಂದೆ ನನ್ನ ತುಂಟಾಟಕ್ಕಾಗಿ ಮನೆಗೆ ದೂರು ನೀಡಿದ್ದ ಈ ಟೀಚರ್ ಯಾಕೆ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ತಿಳಿಯದೆ ನಾನು ಗಲಿಬಿಲಿಗೊಂಡಿದ್ದೆ.
ಮುಂಬೈ ತೊರೆದುಬಂದ 25 ವರ್ಷಗಳ ನಂತರ ಮುಂಗಾರು ಪತ್ರಿಕೆಯ ವರದಿಗಾಗಿ ಮತ್ತೆ ಅಲ್ಲಿಗೆ ಹೋಗಿದ್ದಾಗ ಆ ಟೀಚರ್ ಗಾಗಿ ಹುಡುಕಾಡಿ ಬಹಳ ಅಲೆದಾಡಿದ್ದೆ. ಮುನ್ಸಿಪಾಲಿಟಿ ಶಾಲೆ ಮುಚ್ಚಿತ್ತು. ಅವರ ಬಗ್ಗೆ ತಿಳಿಸುವವರು ಯಾರೂ ಇರಲಿಲ್ಲ. ನನಗೆ ಟೀಚರ್ ಆಗಿದ್ದಾಗಲೇ ಐವತ್ತರ ಆಜುಬಾಜಿನಲ್ಲಿದ್ದ ಅವರು ಜೀವಂತವಾಗಿರುವ ಸಾಧ್ಯತೆಯೇ ಇಲ್ಲವಾದರೂ ಈಗಲೂ ಮುಂಬೈನ ಬಜಾರ್ ಸ್ಟ್ರೀಟ್ ನಲ್ಲಿ ಓಡಾಡುವಾಗ ನನ್ನಕಣ್ಣುಗಳು ಪ್ರೇಮ ಟೀಚರ್ ಅವರನ್ನು ಅರಸುತ್ತಿರುತ್ತವೆ. ಯಾರಾದರೂ ಈಗಲೂ ‘ದೇವತೆ’ ಅಂದಾಕ್ಷಣ ಚಿನ್ನದ ಬಾರ್ಡರ್ ನ ಬಿಳಿ ಸೀರೆ ಉಟ್ಟ, ಕನ್ನಡಕ ಹಾಕಿಕೊಂಡ ಕುಳ್ಳಗಿನ ನನ್ನ ಪ್ರೇಮ ಟೀಚರ್ ನೆನಪಾಗಿ ನನಗರಿವಿಲ್ಲದಂತೆ ತಲೆ ಬಾಗುತ್ತದೆ. ಕಣ್ಣು ತೇವವಾಗುತ್ತದೆ.