Saturday, September 16, 2017

ಪತ್ರಕರ್ತ ನಟೇಶ್ ಬಾಬು ಗೌರಿ ನಿಂದಕರನ್ನು ಉದ್ದೇಶಿಸಿ ಬರೆದದ್ದು

ಮನಸ್ಸು ಮಾಡಿದ್ದರೆ ಸಾಮಾನ್ಯ ಗೃಹಿಣಿಯಂತೆ ಮನೆಯ ನಾಲ್ಕುಗೋಡೆಗಳ ನಡುವೆ ಉಳಿದುಬಿಡಬಹುದಿತ್ತು. ಟಿ.ವಿ ಸೀರಿಯಲ್ ನಾಳೆ ಏನಾಗುತ್ತೋ ಎಂದು ಚರ್ಚಿಸುತ್ತಾ, ಬೆಳಗಿನ ತಿಂಡಿಗೆ ಪದಾರ್ಥಗಳನ್ನು ಹೊಂದಿಸುತ್ತಾ ಕಳೆದು ಹೋಗಬಹುದಿತ್ತು. ಇಲ್ಲವೇ, ಯಾವುದೋ ಪತ್ರಿಕೆ ಅಥವಾ ಟಿ.ವಿ ಚಾನೆಲ್ ನಲ್ಲಿ ಲಕ್ಷಗಟ್ಟಲೇ ಸಂಬಳ, ಹೆಸರು ಗಳಿಸುತ್ತಾ, ತಮಗೆ ಆಗದವರನ್ನು ದೂಷಿಸುತ್ತಾ ಜೀವನ ಕಳೆಯಬಹುದಿತ್ತು. ಹೀಗೆ ಬದುಕಿದ್ದ ಪಕ್ಷದಲ್ಲಿ ಆಕೆಗೆ ಅಕಾಲಿಕ ಸಾವು ತಪ್ಪುತ್ತಿತ್ತು. ಆದರೆ, ಇಂಥ ಬದುಕನ್ನು ಗೌರಿಯಂಥ ದಿಟ್ಟೆ ಹೇಗೆ ಒಪ್ಪುತ್ತಾಳೆ? ಗೌರಿ ಆಯ್ಕೆ ಮಾಡಿಕೊಂಡದ್ದು ಮುಳ್ಳಿನ ಹಾದಿ. ತನ್ನ ಅಪ್ಪ ನಂಬಿದ್ದ ವಿಚಾರ, ಹೋರಾಟಗಳನ್ನು ಮುಂದುವರಿಸಲು ಬದುಕನ್ನು ಮೀಸಲಿಟ್ಟಳು. ಪತ್ರಿಕೆಯನ್ನು ಕೋಮುವಿರೋಧಿಗಳು, ಜಾತಿವಾದಿಗಳು, ದುಷ್ಟರನ್ನು ಹಣಿಯಲು ಅಸ್ತ್ರ ಮಾಡಿಕೊಂಡರು. ಯಾರೋ ಒಬ್ಬ ದಲಿತ, ಅಲ್ಪಸಂಖ್ಯಾತ, ದುರ್ಬಲನ ನೋವುಗಳಿಗೆ ದನಿಯಾದರು. ಶೋಷಿತರಿಗೆ ಶಕ್ತಿ ತುಂಬಿದಳು. ಸುತ್ತಾಟಗಳಿಗಂತೂ ಕೊನೆಯೇ ಇಲ್ಲ. ಅಲ್ಲೊಂದು ಪ್ರತಿಭಟನೆ, ಇಲ್ಲೊಂದು ಶಾಂತಿ ಸಭೆ, ಮತ್ತೆಲ್ಲೊ ಜಾಗೃತಿ ಜಾಥಾ ಹೀಗೆ ನೂರೊಂದು ಕೆಲಸಗಳು. ಕೋಮುವಾದ ಮತ್ತು ಮೌಢ್ಯದ ವಿರುದ್ಧ ಸಿಡಿದೆದ್ದಾಗ ಸಾವಿರಾರು ಶತ್ರುಗಳು ಎದ್ದು ನಿಂತರು. 

ಸೈದ್ಧಾಂತಿಕವಾಗಿ ಉತ್ತರ ನೀಡಲಾಗದ ಹೇಡಿಗಳು ಗೌರಿಯ ಸಿಗರೇಟು ಸೇವನೆಯನ್ನು ಗೇಲಿ ಮಾಡಿದರು. ಬದುಕಿರುವ ತನಕ ಕತ್ತಿ ಮಸೆಯುತ್ತಿದ್ದ ಕೋಮುವಾದಿಗಳಿಗೆ ಆಕೆಯ ಸಾವು ಒಳಗೊಳಗೆ ಖುಷಿ ತಂದಿದೆ. ಆದರೆ, ಸಭ್ಯರಂತೆ ಈಗ ನೀತಿ ಪಾಠ ಹೇಳಲು ನಿಂತಿದ್ದಾರೆ. ಸಾವನ್ನು ಯಾರೂ ಸಂಭ್ರಮಿಸಬಾರದು. ಆದರೆ, ಆ ವಿವೇಕ ಹೊಂದಿದವರು ಹೇಗೆ ದಾರಿ ತಪ್ಪುವರು? ಅನಂತಮೂರ್ತಿ ಸತ್ತಾಗ ಸಂಭ್ರಮಿಸಿದ್ದ ಮನಸ್ಸುಗಳೇ ಗೌರಿ ಹತ್ಯೆಯಲ್ಲೂ ಸಂಭ್ರಮಿಸಿವೆ. ಪೊಲೀಸರು ಮತ್ತು ಕಾನೂನಿನ ಭಯದಿಂದ ಕೆಲವರು ತಮ್ಮ ವಾಂತಿಯನ್ನು ಹೊಟ್ಟೆಯೊಳಗೇ ಹಿಡಿದಿಟ್ಟುಕೊಂಡಿದ್ದಾರೆ! ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸೊಂಟದ ಕೆಳಗಿನ ಭಾಷೆ ಬಳಸುವ "ಸಂಸ್ಕೃತಿ' ರಕ್ಷಕರು, ಅವಕಾಶ ಸಿಕ್ಕಿದರೆ ಯಾವುದೇ ಸಾಹಸಕ್ಕೂ ಸೈ. ಆಕೆ ಇಂದು ನಮ್ಮ ನಡುವೆ ಇಲ್ಲ. ಆದರೆ, ಆಕೆ ಹೊತ್ತಿಸಿದ ದೀಪದ ಬೆಳಕು ಇನ್ನೂ ಇದೆ. ನಾಳೆಯೂ ಇರುತ್ತದೆ. ಗೌರಿ ಎನ್ನುವುದು ಒಬ್ಬ ವ್ಯಕ್ತಿಯಾಗಿ ಅಲ್ಲ, ಒಂದು ರೂಪಕವಾಗಿ ನಮ್ಮೊಂದಿಗೆ ಮುಂದುವರಿಯುತ್ತದೆ. ಮತ್ತು ಮುಂದುವರಿಯಬೇಕು.

ನಾನು ಕಂಡ ಗೌರಿ ಇಲ್ಲಿದ್ದಾಳೆ. ನಿಮಗೆ ಬೇರೆ ರೀತಿ ಕಂಡರೆ ನಾನು ಏನು ಮಾಡಲು ಸಾಧ್ಯ?

No comments:

Post a Comment