Saturday, March 4, 2017

ಭಾರತದಲ್ಲಿ ದೇಶದ್ರೋಹ, ದೇಶಪ್ರೇಮ

ಭಾರತದಲ್ಲಿರಲು ಭಯವಾಗುತ್ತಿದೆ ಎಂದು ನಾನು ಹೇಳಿರುವುದು ನಿಜ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೇಶಾದ್ಯಂತ ನಡೆಯುತ್ತಿರುವ ದಾಳಿಯ ಅನುಭವ ವೈಯಕ್ತಿಕವಾಗಿ ನನಗೂ ಆಗುತ್ತಿದೆ. ನಿನ್ನೆ ಅಂಬೇಡ್ಕರ್ ವಾದಿ ಡಾ.ಕೀರ್ವಾಲೆಯವರ ಹತ್ಯೆ ನಡೆದಿದೆ, ಪಿಣರಾಯ್ ತಲೆಕಡಿಯಬೇಕೆಂದು ಇನ್ನೊಬ್ಬ ತಲೆಕೆಟ್ಟವನು ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಗಳು ಹುಚ್ಚುನಾಯಿಗಳಂತೆ ಅಭಿಪ್ರಾಯ ವಿರೋಧಿಗಳ ಮೇಲೆ ಮುಗಿಬೀಳುತ್ತಿದ್ದಾರೆ.
ಪಿಣಾರಾಯ್ ವಿಜಯನ್ ಭೇಟಿಯ ಪರವಾಗಿ ನಾನು ಸ್ಟೇಟಸ್ ಹಾಕಿದರೆ ನನ್ನನು ಗುಂಡಿಕ್ಕಿ ಸಾಯಿಸಬೇಕು ಎಂದು ಒಬ್ಬ ಬೆದರಿಕೆ ಹಾಕುತ್ತಾನೆ, ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಆ್ಯಸಿಡ್ ಹಾಕಿ ಎಂದು ಹೇಳುತ್ತಾನೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೊರಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ.ಹರಣ ಮಾಡಲಾಗುತ್ತಿದೆ ಎಂದು ನನ್ನ ವಿರುದ್ದವೇ ಅಪಪ್ರಚಾರ ಮಾಡಲಾಗುತ್ತದೆ, ವಿಧಾನಸೌಧದಲ್ಲಿ ಕೂತು ಅಧಿಕಾರದ ದುರುಪಯೋಗ ಮಾಡುತ್ತಿದ್ದಾನೆ ಎಂದು ಆರೋಪ ಮಾಡುತ್ತಾರೆ. ನನ್ನ ಪ್ರತಿಯೊಂದು ಮಾತನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ನನ್ನವರನ್ನೇ ಎತ್ತಿ ಕಟ್ಟುವ ಷಡ್ಯಂತ್ರ ಹೆಣೆಯಲಾಗುತ್ತಿದೆ.
ಇವೆಲ್ಲ ಒಂದು ರೀತಿಯಲ್ಲಿ ನನ್ನನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವುದು ನಿಜ. ಈ ಭಯ ವೈಯಕ್ತಿಕ ಸಾವಿನದಲ್ಲ, ಸಾವನ್ನು ಹೊಸ್ತಿಲಲ್ಲಿ ಕೂರಿಸಿ ಬದುಕುತ್ತಿರುವವನು ನಾನು. ಇದು ಭಯಭೀತ ಸಮಾಜವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ. ದುರ್ಜನರ ಆರ್ಭಟವನ್ನು ಮತ್ತು ಸಜ್ಜನರ ಮೌನವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ.
ಈ ಹಿನ್ನೆಲೆಯಲ್ಲಿ ನಾನು ಪಾವಗಡದಲ್ಲಿ ಮಾತನಾಡುತ್ತಾ 'ಇಂತಹ ಭಾರತದಲ್ಲಿರಲು ನನಗೆ ಭಯವಾಗುತ್ತಿದೆ' ಎಂದು ಹೇಳಿದ್ದೆ. ಈ ಮಾತನ್ನು ಮೊನ್ನೆ ಮಂಗಳೂರಿನಲ್ಲಿಯೂ ಹೇಳಿದ್ದೇನೆ. ಇದರ ಜತೆ '' ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಾವು ಮುಂದಾಗಬೇಕು. ಇದು ನಮ್ಮ ದೇಶ, ಇಲ್ಲಿ ಚಾರ್ವಾಕರಿಗೂ ಚಿಂತಕರ ಚಾವಡಿಯಲ್ಲಿ ಜಾಗ ಇತ್ತು, ಅವರ ತಲೆ ಕಡಿಯಬೇಕು ಎಂದು ಯಾರೂ ಹೇಳಿರಲಿಲ್ಲ. ಭಯಮುಕ್ತವಾದ ಮತ್ತು ಅಭಿಪ್ರಾಯಭೇದಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ಇರುವ ಭಾರತವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಯಾಕೆಂದರೆ ನಮಗಿರುವುದು ಒಂದೇ ಭಾರತ'' ಎಂದು ನಾನು ಪಾವಗಡವೂ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಭಾಷಣ ಮಾಡಿದ್ದೆ.
ಇತ್ತೀಚಿನ.ದಿನಗಳಲ್ಲಿ ನನ್ನ ಭಾಷಣ-ಬರವಣಿಗೆಗಳ ಕೆಲವು ಭಾಗಗಳನ್ನಷ್ಟೇ ಆಯ್ದು ವಿವಾದವನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಈ ಮಾತುಗಳನ್ನು ಹೇಳಬೇಕಾಯಿತು.
ನನ್ನ ಪ್ರಕಾರ 'ಭ್ರಷ್ಟಾಚಾರ, ಕೋಮುವಾದ ಮತ್ತು ಜಾತಿವಾದ ಎನ್ನುವುದು ದೇಶದ್ರೋಹ. ಪ್ರಾಮಾಣಿಕತೆ, ಜಾತ್ಯತೀತತೆ ಮತ್ತು ಜಾತಿನಾಶ ಎನ್ನುವುದು ದೇಶಪ್ರೇಮ

Thursday, March 2, 2017

ಉತ್ತರ ಪ್ರದೇಶ ಚುನಾವಣೆ 2017

ಉತ್ತರಪ್ರದೇಶದ ಚುನಾವಣೆ ಕೊನೆಯ ಚರಣದಲ್ಲಿದೆ. 2002ರಿಂದ 2012ರ ವರೆಗೆ (2002,2007 ಮತ್ತು 2012ರ ವಿಧಾನಸಭಾ ಚುನಾವಣೆ, 2004 ಮತ್ತು 2009ರ ಲೋಕಸಭಾ ಚುನಾವಣೆ) ಉತ್ತರಪ್ರದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಗಳ ಪ್ರತ್ಯಕ್ಷದರ್ಶಿ ವರದಿಯನ್ನು ನಾನು ‘ಪ್ರಜಾವಾಣಿ’ಗಾಗಿ ಮಾಡಿದ್ದೆ. 
ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು 25 ದಿನ ಒಂದು ದಿನವೂ ತಪ್ಪಿಸಿಕೊಳ್ಳದೆ ಸಮೀಕ್ಷಾ ವರದಿ ಮಾಡಿದ್ದೆ. ಹದಿನಾಲ್ಕು ವರ್ಷಗಳ ಕಾಲ ನಾನು ಬರೆದ ಅಂಕಣಗಳಲ್ಲಿ ಯಾವುದಾದರೂ ಒಂದು ರಾಜ್ಯದ ಬಗ್ಗೆ ಅತೀಹೆಚ್ಚು ಬರೆದಿದ್ದರೆ ಆ ರಾಜ್ಯ ಉತ್ತರಪ್ರದೇಶ. ಅಂಕಣಗಳು ಮತ್ತು ಸಮೀಕ್ಷಾ ವರದಿಗಳ ಲೆಕ್ಕ ಹಾಕಿದರೆ ಡಬ್ಬಲ್ ಸೆಂಚುರಿಗೆ ಹತ್ತಿರ ಹೋಗಬಹುದು.
ಕಾನ್ಪುರದ ಬೀಗ... ಆಗ್ರಾದ ತಾಜಮಹಲ್... ಮೊರದಾಬಾದ್ ನ 'ಪೀತಲ್ ನಗರಿ'... ಮೇರಠ್ ನ ಕಬ್ಬು-ಬೆಲ್ಲ... ಅಯೋಧ್ಯೆಯ ಡೇರೆಯಲ್ಲಿ ಕೂತಿದ್ದ ರಾಮ... ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಮಮಂದಿರದ ಇಟ್ಟಿಗೆಗಳ ರಾಶಿ... ಗಾಜಿಪುರದ ಬಾಹುಬಲಿಗಳು...ಪಿಲಿಬಿಟ್ ನಲ್ಲಿ ಹರಿಪ್ರಸಾದ್ ಚೌರಾಸಿಯಾ ಊದುವ ಕೊಳಲು ತಯಾರಿಸುತ್ತಿರುವ ಬಡ ಮುಸ್ಲಿಮ್ ಕುಶಲಕರ್ಮಿಗಳು....ಈಟಾವಾದ ಅಂತರರಾಷ್ಟ್ರೀಯ ಮಟ್ಟದ ಹಾಕಿ ಮೈದಾನ... ಗೋರಖ್ ಪುರದ ಸೊಳ್ಳೆಗಳು, ಮಿರ್ಜಾಪುರವನ್ನು ಕಾಡುತ್ತಿರುವ ಪೂಲನ್ ದೇವಿ “ಭೂತ”.. ಕಾಶಿಯ ಮೂಕ ವಿಶ್ವನಾಥ... ನಾರುತ್ತಿರುವ ಗಂಗೆಯಲ್ಲಿ ದೋಣಿ ಓಡಿಸುತ್ತಿದ್ದ ಪಪ್ಪು ಬೋಟ್ ಮೆನ್... ರಾಹುಲ್ ಸಾಂಕೃತಾಯನ ಹುಟ್ಟಿದ ಅಜಮ್ ಘಡ್ ನಲ್ಲಿ ಅಬುಸಲೇಂ ಕಟೌಟ್, ಲಖನೌದಲ್ಲಿ ಸುತ್ತುತ್ತಿದ್ದ ಮುಸ್ಲಿಮರ ‘ಅಟಲ್ ರಥ’
ಸುತ್ತಾಡಿದ ಊರು, ಮಾತನಾಡಿಸಿದ ಜನ, ಊಟ-ತಿಂಡಿ,ಬಸ್, ಕಾರು, ರೈಲು, ಚಾಲಕರು, ರೂಮ್ ಬಾಯ್ ಗಳು, ಅನುಭವಿಸಿದ ಖುಷಿ, ಭಯ, ಒತ್ತಡ ಎಲ್ಲವನ್ನೂ ಇಂದು ಕೂತು ನೆನಪುಮಾಡಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ.
ದೇಶದ ರಾಜಕಾರಣ ಎತ್ತುವ ಮುಖ್ಯ ಪ್ರಶ್ನೆಗಳಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಉತ್ತರ ಇದೆ ಎಂದು ನಾನು ನಂಬಿದವನು. ಈ ಹಿನ್ನೆಲೆಯಲ್ಲಿ ಕನ್ನಡದ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಕಳೆದ ಕೆಲವು ದಿನಗಳಿಂದ ನಾನು ಹುಡುಕುತ್ತಿದ್ದ ಉತ್ತರಪ್ರದೇಶ ಕಾಣದೆ ಇದ್ದಾಗ ಹಳೆಯ ರಿಪೋರ್ಟಿಂಗ್ ಡೈರಿ ತೆರೆದು ಪುಟ ತಿರುಗಿಸಿದೆ. ನೆನಪುಗಳು ನುಗ್ಗಿಬಂತು.

Sunday, February 26, 2017

ಇದ್ಯಾವ ಮಾಧ್ಯಮ ಧರ್ಮ

ನಾನು ಫೇಸ್ ಬುಕ್ ನಲ್ಲಿ ಬರೆದುದನ್ನು ಹೇಗೆ ತಿರುಚಲಾಗುತ್ತಿದೆ ಎನ್ನುವುದಕ್ಕೆ 'ವಿಶ್ವವಾಣಿ' ಯ ಈ ವರದಿ ಸಾಕ್ಷಿ. ನರೇಂದ್ರ ಮೋದಿ ರಾಜೀನಾಮೆ ಕೊಡಬೇಕೆಂದು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ.('ವಿವಾದಾತ್ಮಕ ಸ್ಟೇಟಸ್ 'ಬಾಕ್ಸ್ ಮತ್ತು ನನ್ನ FB ಸ್ಟೇಟಸ್ ನೋಡಿ)
ಇದು ಯಾವ ಮಾಧ್ಯಮಧರ್ಮ ವಿಶ್ವೇಶ್ವರ ಭಟ್ರೆ?