Sunday, September 24, 2017

ಮಂಗಳೂರು: ಗೌರಿ ಲಂಕೇಶ್‍ಗೆ ಬಿದ್ದ ಗುಂಡು ನನಗೂ ಬೀಳಬಹುದು: ಅಮೀನ್ ಮಟ್ಟು



ಮಂಗಳೂರಿನಲ್ಲಿ ನಾನು ಇಂದು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವ್ಯಾಖ್ಯಾನಗಳು ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗುತ್ತಿವೆ.
ಆ ಭಾಷಣದ ಬಹುಚರ್ಚಿತ ಭಾಗದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ, ಕೇಳಿ. 'ಮಟ್ಟುವನ್ನು ಮಟ್ಟ ಹಾಕಿ' ಎನ್ನುವ ಕೂಗು ಕೇಳಿಬಂದದ್ದು ಇದೇ ಮೊದಲೇನಲ್ಲ. ಸಂಸದ ಪ್ರಹ್ಲಾದ ಜೋಷಿ ಸೇರಿದಂತೆ ಸಂಘ ಪರಿವಾರದ ಹಲವಾರು ನಾಯಕರು ನೀಡಿದ್ದ ಇಂತಹ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. (ಗೂಗ್ಲ್ ಸರ್ಚ್ ಮಾಡಿದರೆ ಸಿಗುತ್ತೆ)
'ಗುಂಡು ನನಗೂ ಬೀಳಬಹುದು' ಎಂಬ ಹೇಳಿಕೆ ಈಗಿನ ಕೆಟ್ಟ ಕಾಲವನ್ನು ವಿವರಿಸುತ್ತಾ ಹೇಳಿದ್ದು. ನಾನು ಸಭೆಯಲ್ಲಿದ್ದವರನ್ನು ಉದ್ದೇಶಿಸಿ ಹೇಳಿದ್ದು 'ಗುಂಡು ನನಗೂ ಬೀಳಬಹುದು ನಿಮಗೂ ಬೀಳಬಹುದು' ಎಂದು. (ವಿಡಿಯೋ ನೋಡಿ)
ಇನ್ನು ಇಂಟಲಿಜೆನ್ಸ್ ವಿಚಾರ. ನಾನೆಲ್ಲಿಯೂ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಎಂದು ಹೇಳಿಲ್ಲ. ಸಂಘ ಪರಿವಾರದೊಳಗೆ ನನ್ನಂತಹವರಿಗೆ ಹಿತೈಷಿಗಳು ಇದ್ದೇ ಇರುತ್ತಾರೆ.
ಅಂತಹವರು ಇಂತಹ ಬಹಳಷ್ಟು ಸಂಗತಿಗಳನ್ನು ಆಗಾಗ ನನ್ನ ಗಮನಕ್ಕೆ ತರುತ್ತಿರುತ್ತಾರೆ. ಇದು ನನ್ನಂತಹವರು ಇಟ್ಟುಕೊಂಡಿರುವ ಇಂಟಲಿಜೆನ್ಸ್. ಕಾರ್ಕಳದ ಆರ್ ಎಸ್ ಎಸ್ ಸಭೆಯ ಬಗ್ಗೆ ಹೇಳಿದ್ದು ಕೂಡಾ ಇದೇ ಇಂಟಲಿಜೆನ್ಸ್. ( ಇದೇ ರೀತಿ ನಮ್ಮ ನಡುವೆ ನಡೆಯುತ್ತಿರುವುದನ್ನು ಅಲ್ಲಿ ಹೋಗಿ ಹೇಳುವವರೂ ಇದ್ದಾರೆ)
ಮಟ್ಟಹಾಕುವುದೆಂದರೆ ಗುಂಡು ಹಾರಿಸುವುದೆಂದಲ್ಲ, ಸುಳ್ಳು ಸುದ್ದಿಗಳನ್ನು ಬಿತ್ತಿ ಚಾರಿತ್ರ್ಯಹನನ, ಮಾನಸಿಕ ಕಿರುಕುಳ, ಅಪಪ್ರಚಾರ ಮೊದಲಾದವುಗಳ ಮೂಲಕ ನೈತಿಕಸ್ತೈರ್ಯ ಕುಸಿಯುವಂತೆ ಮಾಡುವುದು ಕೂಡಾ ಅವರ ಪ್ರಕಾರ ಮಟ್ಟ ಹಾಕುವ ಕ್ರಮ. ಇದನ್ನು ಕೂಡಾ ನನ್ನ ಹಿತೈಷಿಗಳಾದ ಆರ್ ಎಸ್ ಎಸ್ ಗೆಳೆಯರೊಬ್ಬರು ಹೇಳಿದ್ದು.
ಪ್ರಾಣ ಬೆದರಿಕೆಗಳೇನು ಹೊಸತೇನಲ್ಲ. ಫೇಸ್ ಬುಕ್ ನ ನನ್ನ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ಸಾಕು. ಸ್ವಾಮಿ ವಿವೇಕಾನಂದರ ಬಗ್ಗೆ ಹಿಂದೆ ನನ್ನ ಅಂಕಣದಲ್ಲಿ ಬರೆದಿದ್ದಾಗ ಅದನ್ನು ಅನಗತ್ಯವಾಗಿ ವಿವಾದವನ್ನಾಗಿಸಿದ 'ಸುಳ್ಳು ಬೆಲೆ' ಯೊಬ್ಬ ತನ್ನ ಕಿಡಿಗೇಡಿ ಗೆಳೆಯರ ಜತೆ ಕಳುಹಿಸಿದ್ದ 'count your days' ಸಂದೇಶಗಳ ದಾಖಲೆ ಈಗಲೂ ನನ್ನಲ್ಲಿವೆ.